BBK12: ಬಿಗ್ಬಾಸ್ ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ; ಗಿಲ್ಲಿಗೆ ಅನ್ಯಾಯ ಎಂದು ಫ್ಯಾನ್ಸ್ ಆಕ್ರೋಶ
ಬಿಗ್ಬಾಸ್ ಮನೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅತಿಥಿಯಾಗಿ ಹೋಗಿದ್ದಾರೆ. ಸ್ಪರ್ಧೀಗಳ ಜೊತೆ ಕೆಲ ಸಮಯ ಕಳೆದಿದ್ದಾರೆ. ಶೀಘ್ರದಲ್ಲೇ ಅದಕ್ಕೆ ಸಂಬಂಧಿಸಿದ ಎಪಿಸೋಡ್ ಪ್ರಸಾರವಾಗಲಿದೆ. ಆದರೆ ಈ ನಡುವೆ ಗಿಲ್ಲಿಗೆ ಮತ್ತೆ ಅನ್ಯಾಯವಾಗಿದೆ ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ಈಗ ಟಾಕ್ ಆಫ್ ದಿ ಟೌನ್ ಆಗಿದೆ.
ಗಿಲ್ಲಿ ಜನಪ್ರಿಯತೆ ಫ್ಯಾನ್ ಫಾಲೋಯಿಂಗ್ ಎಷ್ಟಿದೆ ಎಂದು ಬಿಡಿಸಿ ಹೇಳುವುದು ಬೇಕಿಲ್ಲ. ಆತನ ಪ್ರತಿ ಜೋಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ಬಾರಿ ಬಿಗ್ಬಾಸ್ ಟ್ರೋಫಿ ಗೆಲ್ಲೋದು ಗಿಲ್ಲಿ ಎಂದು ಚರ್ಚೆ ನಡೀತಿದೆ. ಮಾಜಿ ಸ್ಪರ್ಧಿಗಳು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಬಿಗ್ಬಾಸ್ಗೂ ಮುನ್ನ ಕೆಲ ಶೋಗಳಲ್ಲಿ ಗಿಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಶಿವಣ್ಣ, ರವಿಚಂದ್ರನ್ ಕೂಡ ಆತನ ಕಾಮಿಡಿಗೆ ಫಿದಾ ಆಗಿದ್ದರು.

'ಪ್ಯಾರ್' ಎಂಬ ಚಿತ್ರದಲ್ಲಿ ರವಿಚಂದ್ರನ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಇದೇ ಚಿತ್ರದಲ್ಲಿ ಬಿಗ್ಬಾಸ್ ಸ್ಪರ್ಧಿ ರಾಶಿಕಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಈಗ ರವಿಚಂದ್ರನ್ ಬಿಗ್ಬಾಸ್ ಮನೆ ಒಳಗೆ ಹೋಗಿದ್ದಾರೆ. ಚಿತ್ರದ ನಾಯಕ ಭರತ್ ಕೂಡ ಸಾಥ್ ಕೊಟ್ಟಿದ್ದಾರೆ. ಅಲ್ಲೇ ಚಿತ್ರದ ಆಡಿಯೋ ಲಾಂಚ್ ಮಾಡುವುದಾಗಿ ರವಿಚಂದ್ರನ್ ಹೇಳಿದ್ದಾರೆ. ಇದನ್ನು ನೋಡಿ ರಾಶಿಕಾಗೆ ಒಂದು ನ್ಯಾಯ, ಗಿಲ್ಲಿಗೆ ಒಂದು ನ್ಯಾಯ ಯಾಕೆ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
ಇತ್ತೀಚೆಗೆ ಗಿಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ 'ಡೆವಿಲ್' ಸಿನಿಮಾ ಬಿಡುಗಡೆ ಆಗಿತ್ತು. ಆದರೆ ಈ ಬಗ್ಗೆ ಬಿಗ್ಬಾಸ್ ಮನೆಯಲ್ಲಿ ಪ್ರಸ್ತಾಪ ಆಗಲಿಲ್ಲ. ಕಳೆದ ಬಾರಿ ಉಗ್ರಂ ಮಂಜು ಮನೆಯೊಳಗೆ ಇದ್ದಾಗ 'ಮ್ಯಾಕ್ಸ್' ಚಿತ್ರ ತೆರೆಗೆ ಬಂದಿತ್ತು. ಆ ಚಿತ್ರದಲ್ಲಿ ಮಂಜು ನಟಿಸಿದ್ದರು ಎನ್ನುವ ಕಾರಣಕ್ಕೆ ಟ್ರೈಲರ್ ಪ್ರದರ್ಶಿಸಿ ಶುಭ ಕೋರಿದ್ದರು. ಇತ್ತೀಚೆಗೆ 'ಡೆವಿಲ್' ಚಿತ್ರದ ಟ್ರೈಲರ್ ಬಿಡುಗಡೆಯಾದಾಗ ಇದೇ ಚರ್ಚೆ ನಡೆದಿತ್ತು.
'ಡೆವಿಲ್' ಚಿತ್ರದ ಟ್ರೈಲರ್ ಪ್ರದರ್ಶಿಸಿ ಚಿತ್ರತಂಡ ಹಾಗೂ ಗಿಲ್ಲಿಗೆ ಬಿಗ್ಬಾಸ್ ಕಡೆಯಿಂದ ಶುಭ ಕೋರಬಹುದಲ್ವಾ? ಎಂದು ಕೆಲವರು ಕೇಳಿದ್ದರು. ದರ್ಶನ್ ನಟನೆಯ ಸಿನಿಮಾ ಎನ್ನುವ ಕಾರಣಕ್ಕೆ ಈ ಭೇಧಭಾವ ಮಾಡುವುದು ಸರಿಯಲ್ಲ ಎಂದಿದ್ದರು. ಸುದೀಪ್ ಹಾಗೂ ದರ್ಶನ್ ನಡುವಿನ ಸ್ನೇಹ ಮುರಿದ ಬಳಿಕ ಎಲ್ಲವೂ ಬದಲಾಗಿತ್ತು. ಬಿಗ್ಬಾಸ್ ಮನೆಯಲ್ಲಿ ದರ್ಶನ್ ಅಭಿನಯದ ಯಾವುದೇ ಸಿನಿಮಾ ಹಾಡುವ ಕೇಳಿಸಲ್ಲ. ಅದು ಎಲ್ಲರಿಗೂ ಗೊತ್ತಿದೆ. ಆದರೆ 'ಡೆವಿಲ್' ಟ್ರೈಲರ್ ಪ್ರದರ್ಶಿಸಿದ್ದರೆ ಗಿಲ್ಲಿಗೂ ಖುಷಿ ಆಗುತ್ತಿತ್ತು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
ಉಗ್ರಂ ಮಂಜು ಕಥೆ ಬಿಟ್ಹಾಕಿ ಈಗ ರಾಶಿಕಾ ನಟನೆಯ 'ಪ್ಯಾರ್' ಸಿನಿಮಾ ಪ್ರಚಾರವೇ ಬಿಗ್ಬಾಸ್ ಮನೆಯಲ್ಲಿ ನಡೀತಿದೆ. ಚಿತ್ರತಂಡದವರೇ ಮನೆ ಒಳಗೆ ಹೋಗಲು ಅವಕಾಶ ಸಿಕ್ಕಿದೆ. ಆದರೆ ಗಿಲ್ಲಿ ವಿಚಾರದಲ್ಲಿ 'ಡೆವಿಲ್' ಚಿತ್ರದ ಪ್ರಸ್ತಾಪ ಯಾಕೆ ಮಾಡಲಿಲ್ಲ ಎಂದು ಚರ್ಚೆ ಶುರುವಾಗಿದೆ.
ಬಿಗ್ಬಾಸ್ ಸೀಸನ್ 12 ಈಗ 80 ದಿನ ಪೂರೈಸಿದೆ. ಫಿನಾಲೆಗೆ 4 ವಾರಗಳು ಬಾಕಿಯಿದೆ. ಇಬ್ಬರು ಅತಿಥಿಗಳು ಸೇರಿ ಒಟ್ಟಯ 13 ಮಂದಿ(ಸೀಕ್ರೆಟ್ ರೂಮ್ನಲ್ಲಿರುವ ಇಬ್ಬರು ಸೇರಿ) ಮನೆ ಒಳಗೆ ಇದ್ದಾರೆ. ಕಳೆದ ವಾರ ಎಲಿಮಿನೇಷನ್ನಿಂದ ಎಲ್ಲರೂ ಬಚಾವಾಗಿದ್ದರು. ಆದರೆ ಈ ವಾರ ಡಬಲ್ ಎಲಿಮಿನೇಷನ್ ನಡೆಯುವ ಸಾಧ್ಯತೆಯಿದೆ.
ಸೀಸನ್ ಕೊನೆ ಕೊನೆಗೆ ಫ್ಯಾಮಿಲಿ ರೌಂಡ್ ಕೂಡ ನಡೆಯಬೇಕಿದೆ. ರಜತ್ ಹಾಗೂ ಚೈತ್ರಾ ಯಾವಾಗ ಮನೆಯಿಂದ ನಿರ್ಗಮಿಸುತ್ತಾರೆ ಎನ್ನುವ ಪ್ರಶ್ನೆ ಕೂಡ ವೀಕ್ಷಕರನ್ನು ಕಾಡುತ್ತಿದ್ದು ಶೋ ಕುತೂಹಲ ಮೂಡಿಸಿದೆ.


Click it and Unblock the Notifications











