ನಿರ್ಮಾಪಕನ ಜೊತೆ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಸ್ಫರ್ಧಿ ...!
ಪ್ರೀತಿಯೇ ಸರ್ವಸ್ವವಲ್ಲ. ಆದರೆ ಬದುಕಿನ ಈ ಬಹುಮುಖ್ಯ ಅಧ್ಯಾಯವನ್ನು ಅಷ್ಟೇ ಜತನದಿಂದ, ಅದಕ್ಕಿರುವ ಆಳ- ಅರ್ಥವನ್ನೊಮ್ಮೆ ಮನಗಂಡ, ಆಲೋಚಿಸಿ, ಅಭ್ಯಸಿಸಿ ಆಯ್ದುಕೊಳ್ಳುವ ಪ್ರವೃತ್ತಿ ಪ್ರೀತಿಗೆ ಹೊಸ ಅರ್ಥವನ್ನು ತುಂಬಿದೆ. ಅದು ಕೇವಲ ಭಾವೋದ್ವೇಗದ ಭ್ರಮಾಲೋಕವಾಗಿ ಉಳಿದಿಲ್ಲ. ವಾಸ್ತವದ ಭೂತಗನ್ನಡಿಯಲ್ಲಿಟ್ಟು ಪರೀಕ್ಷಿಸಿ, ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಜಮಾನಾ ಈಗಿನದು. ಇನ್ನು ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೇಳಬೇಕು.
ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಇದಕ್ಕೆ ಸುಭಾಶ್ರೀ ರಾಯಗುರು ಸದ್ಯದ ಉದಾಹರಣೆ. ಹೌದು, ಸುಭಾಶ್ರೀ ರಾಯಗುರು.. ಒಡಿಶಾದಿಂದ ಬಂದು ಪಕ್ಕದ ಆಂಧ್ರಪ್ರದೇಶದಲ್ಲಿ ಬಿಡಾರ ಹೂಡಿರುವ ಚೆಲುವೆ.

ಕಲ್ಯಾಣ್ ರಾಮ್ ಅಭಿನಯದ 'ಅಮಿಗೋಸ್' ಸೇರಿ ಕೆಲ ಚಿತ್ರಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡಿರುವ ಸುಭಾಶ್ರೀ ತೆಲುಗಿನಲ್ಲಿ ಬಿಗ್ ಬಾಸ್ನ ಸೀಸನ್ 7ರಲ್ಲಿ ಭಾಗವಹಿಸಿದ್ದರು. ಆ ಮನೆಯಲ್ಲಿ ಮತ್ತೊಬ್ಬ ಸ್ಫರ್ಧಿ ಅಮರ್ ದೀಪ್ ಜೊತೆ ಜಗಳ ಮಾಡಿಕೊಂಡು ಹೆಸರುವಾಸಿಯಾದರು.ಐದನೇ ಸ್ಫರ್ಧಿಯಾಗಿ ಮನೆಯಿಂದ ಹೊರ ಬಂದರು.
ಇನ್ನು ಲಾಯರ್ ಮತ್ತು ಡ್ಯಾನ್ಸರ್ ಕೂಡ ಆಗಿರುವ ಸುಭಾಶ್ರೀ ನಿರೂಪಕಿ ಕೂಡ ಹೌದು. 3000ಕ್ಕೂ ಅಧಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಸುಭಾಶ್ರೀ ಮಾಡಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನೆಲ್ನ್ನು ಕೂಡ ಹೊಂದಿರುವ ಸುಭಾಶ್ರೀ ಅಲ್ಲಿ ಬಗೆ ಬಗೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರ ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಸುಬ್ಬು ಎಂದು ಕರೆಯುತ್ತಾರೆ. ಇಂಥಾ ಸುಭಾಶ್ರೀ ಸದ್ಯ ಸದ್ದಿಲ್ಲದೇ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಅದು ನಿರ್ಮಾಪಕನ ಜೊತೆ ಎನ್ನುವುದು ವಿಶೇಷ.
ಹೌದು, ಅಜಯ್ ಮೈಸೂರು ಅಲಿಯಾಸ್ ಎಜೆ ಮೈಸೂರು, ಸುಭಾಶ್ರೀ ಅವರ ಹೃದಯ ಗೆದ್ದಿರುವ ಹುಡುಗ. ''ಕಮ್ಮ ರಾಜ್ಯಮ್ಲೋ ಕಡಪ ರೆಡ್ಲು'' ಮತ್ತು ''ಟೆನ್ತ್ ಕ್ಲಾಸ್ ಡೈರೀಸ್'' ನಂತಹ ಚಿತ್ರಗಳಲ್ಲಿ ಅಭಿನಯಿಸಿರುವ ಅಜಯ್ ಮೈಸೂರು ತೆಲುಗು ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಕೂಡ ಗುರುತಿಸಿಕೊಂಡಿದ್ದಾರೆ.
ಇಂತಹ ಅಜಯ್ ಮೈಸೂರು ಜೊತೆ ಸುಭಾಶ್ರೀ ಕೆಲ ತಿಂಗಳ ಹಿಂದೆ ''ಮೆಜೆಸ್ಟಿ ಇನ್ ಲವ್'' ಎಂಬ ಹಾಡನ್ನು ಮಾಡಿದ್ದರು. ನಿನ್ನೆ ಬಿಡುಗಡೆಯಾದ ಈ ಹಾಡಿಗೆ ಕನ್ನಡದ ಡೈಲಾಗ್ ಕಿಂಗ್ ಸಾಯಿಕುಮಾರ್ ತಮ್ಮ ಧ್ವನಿಯನ್ನು ನೀಡಿರುವುದು ವಿಶೇಷ. ಅಜಯ್ ಮೈಸೂರು ನಿರ್ಮಾಣ ಮಾಡಿರುವ ಈ ಹಾಡನ್ನು ಸಂದೀಪ್ ರಾಜ್ ನಿರ್ದೇಶಿಸಿದ್ದಾರೆ.
ಇದೇ ಹಾಡಿನ ಚಿತ್ರೀಕರಣದ ಸಮಯದಲ್ಲಿ ಸುಭಾಶ್ರೀ ಮತ್ತು ಅಜಯ್ ಮೈಸೂರು ನಡುವೆ ಸ್ನೇಹ ಚಿಗುರಿದೆ. ಹೀಗೆ ಶುರುವಾದ ಇವರ ಸ್ನೇಹ ಆ ನಂತರ ಪ್ರೀತಿಗೆ ತಿರುಗಿತು. ಈಗ ಮದುವೆಯ ಹಂತಕ್ಕೆ ಬಂದು ನಿಂತಿದ್ದು ನಿನ್ನೆ ಸುಭಾಶ್ರೀ ಮತ್ತು ಅಜಯ್ ಮೈಸೂರು ನಿಶ್ಚಿತಾರ್ಥ ಸಮಾರಂಭ ನೆರವೇರಿದೆ.
ಸದ್ಯ ಸುಭಾಶ್ರೀ ಮತ್ತು ಅಜಯ್ ಮೈಸೂರು ಅವರಿಗೆ ಅನೇಕರು ಶುಭಾಶಯವನ್ನು ಕೋರುತ್ತಿದ್ದಾರೆ. ನಿನ್ನೆ ತಮ್ಮ ಕುಟುಂಬ ವರ್ಗ ಮತ್ತು ಆಪ್ತರ ಸಮ್ಮುಖದಲ್ಲಿ ಸುಭಾಶ್ರೀ ಮತ್ತು ಅಜಯ್ ಮೈಸೂರು ಉಂಗುರ ಬದಲಿಸಿಕೊಂಡಿದ್ದು ಇಬ್ಬರ ಮದುವೆ ಶೀಘ್ರದಲ್ಲಿಯೇ ನಡೆಯಲಿದೆ.
ಇನ್ನುಳಿದಂತೆ ಕಳೆದ ವರ್ಷ ಅಕ್ಟೋಬರ್ನಲ್ಲಿ ನಾಗಾರ್ಜುನ ಸಾಗರದ ಬಸ್ ನಿಲ್ದಾಣದಲ್ಲಿ ಸುಭಾಶ್ರೀ ಕಾರು ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ಬೈಕ್ನಲ್ಲಿ ಬರುತ್ತಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಸುಭಾಶ್ರೀಗೆ ಯಾವುದೇ ಗಾಯವಾಗಿರಲಿಲ್ಲ. ಆದರೆ ಅಪಘಾತದಲ್ಲಿ ಆಕೆ ಪ್ರಯಾಣಿಸುತ್ತಿದ್ದ ಕಾರು ಸಂಪೂರ್ಣ ಜಖಂಗೊಂಡಿತ್ತು. ಬೈಕ್ ನಲ್ಲಿ ತೆರಳುತ್ತಿದ್ದವರು ಮದ್ಯ ಸೇವಿಸಿದ್ದರಿಂದ ಅಪಘಾತ ಸಂಭವಿಸಿದೆ ಎಂದು ವರದಿಯಾಗಿತ್ತು. ಸುಭಾಶ್ರೀ ಅವರ ಕಾರು ಅಪಘಾತಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.


Click it and Unblock the Notifications











