ಕಷ್ಟಾನೋ-ಸುಖಾನೋ ಗಂಡನ ಜೊತೆ ಇರು, ಮಲ್ಲಮ್ಮನ ಬುದ್ದಿಮಾತಿಗೆ ಹೇಳಿದ್ದೇನು ಖ್ಯಾತ ನಿರೂಪಕಿ ಜಾಹ್ನವಿ
ಮದುವೆ ಒಂದು ಸಾಂಸ್ಥಿಕ ವ್ಯವಸ್ಥೆ ಎನ್ನುವ ಮಾತು ಹಿಂದೆ ಪ್ರಚಲಿತದಲ್ಲಿತ್ತು. ಆದರೆ ಈಗ ಬದಲಾದ ಸಾಮಾಜಿಕ.. ಆರ್ಥಿಕ.. ಶೈಕ್ಷಣಿಕ.. ವಿಚಾರಗಳು ಮದುವೆಯ ಪರಿಕಲ್ಪನೆ ಮತ್ತು ರೂಪುರೇಷೆಯನ್ನು ಬದಲಿಸಿವೆ. ಮದುವೆ ಈಗ ವ್ಯವಸ್ಥೆಯಾಗಿ ಉಳಿದಿಲ್ಲ. ಎರಡು ಮನಸುಗಳ ಬೆಸುಗೆಯಾಗದ ಮದುವೆ ಈಗ ಕೇವಲ ತೋರಿಕೆಯ ಸಂಪ್ರದಾಯವಾಗಿದೆ. ತೋರ್ಪಡಿಕೆಯ ಆಚರಣೆಯಾಗಿದೆ. ಬದಲಾದ ಈ ಕಾಲದಲ್ಲಿ.. ಹಲವರು ಸ್ವಾವಲಂಗಿಯಾಗುತ್ತಿದ್ದಾರೆ.
ಇವತ್ತು.. ಯಾರು.. ಯಾರ ಅಧೀನದಲ್ಲಿರಲು ಇಷ್ಟ ಪಡುವುದಿಲ್ಲ. ಹೆಣ್ಣಿಗಾಗಲಿ.. ಗಂಡಿಗಾಗಲಿ.. ಯಾರು ಯಾರಿಗೂ ಅನಿವಾರ್ಯವಲ್ಲ ಎಂಬ ಮನೋಭಾವ ಹೆಚ್ಚಾಗಿದೆ. ಮದುವೆ ಎಂಬ ವ್ಯವಸ್ಥೆ ನಶಿಸಿ ಹೋಗಲು ಇವೆಲ್ಲವೂ ಕಾರಣ ಎನ್ನುವ ಅಭಿಪ್ರಾಯ ಆಗಾಗ ವ್ಯಕ್ತವಾಗುತ್ತಲೆ ಇರುತ್ತದೆ.

ಇದಕ್ಕೆ ಪೂರಕವಾಗಿ ಈಗೀಗ ವಿಚ್ಛೇದನದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿಯಂತೂ ಡಿವೋರ್ಸ್ ಎನ್ನುವುದು ಮಾಮೂಲಿಯಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಜನ ಇಲ್ಲಿಯವರೆಗೆ ವಿಚ್ಛೇದನ ಪಡೆದಿದ್ದಾರೆ. ಆ ಪೈಕಿ ಜಾಹ್ನವಿ ಕೂಡ ಒಬ್ಬರು.
ಹೌದು, ಜಾಹ್ನವಿ.. ಕನ್ನಡ ಸುದ್ದಿ ಲೋಕದ ಖ್ಯಾತ ಸುದ್ದಿ ವಾಚಕಿ. ತಮ್ಮ ಮಾತು ಮತ್ತು ತಮ್ಮ ಜ್ಞಾನದಿಂದಲೇ, ಅತ್ಯಲ್ಪ ಅವಧಿಯಲ್ಲಿಯೇ ಮಾಧ್ಯಮದಲ್ಲಿ ಹೆಸರು ಸಂಪಾದಿಸಿದ ಜಾಹ್ನವಿ ಸದ್ಯ ಚಿತ್ರರಂಗದತ್ತ ಗಮನ ವಹಿಸಿದ್ದಾರೆ. ''ಅಧಿಪತ್ರ'' ಚಿತ್ರದ ಮೂಲಕ ಈಗಾಗಲೇ ತಮ್ಮ ಅದೃಷ್ಟ ಪರೀಕ್ಷೆಯನ್ನು ಕೂಡ ಮಾಡಿಕೊಂಡಿದ್ದಾರೆ.
ಆದರೆ.. ಆ ನಂತರ ಇವರಿಗೆ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ''ಯುವ ಸರ್ಕಾರ'' ಎಂಬ ಚಿತ್ರ ಒಂದರಲ್ಲಿ ಜಾಹ್ನವಿ ಅಭಿನಯಿಸಿದ್ದಾರೆ. ಈ ಚಿತ್ರ ಅದ್ಯಾವ ಕಾಲಕ್ಕೆ ಬಿಡುಗಡೆಯಾಗುತ್ತೆ ಎನ್ನುವುದು ಸದ್ಯ ಗೊತ್ತಿಲ್ಲವಾದರೂ ಜಾಹ್ನವಿ ಅವರ ವ್ಯೆಯಕ್ತಿಕ ಜೀವನದ ಕುರಿತು ಹಲವರಲ್ಲಿ ಮೊದಲಿಂದ ಕುತೂಹಲ ಇದೆ.
ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹತ್ತು ಹಲವು ಸಂದರ್ಶನಗಳಲ್ಲಿ ಜಾಹ್ನವಿ ಅವರಿಗೆ ಅವರ ಮದುವೆ- ವಿಚ್ಚೇದನದ ಕುರಿತು ಪ್ರಶ್ನೆ ಕೇಳಲಾಗಿದೆ. ಹೀಗೆ ಪದೇ ಪದೇ ಕೇಳಲಾದ ಪ್ರಶ್ನೆಗಳಿಗೆ ಜಾಹ್ನವಿ ಕೂಡ ಚೂರು ಬೇಸರ ಮಾಡಿಕೊಳ್ಳದೇ ಉತ್ತರವನ್ನು ಕೊಟ್ಟಿದ್ದಾರೆ.

ಬಹುಶಃ ಇಂತಹ ಪ್ರಶ್ನೆಗಳಿಂದ ಮತ್ತೆ ಅದಕ್ಕೆ ನೀಡುವ ಉತ್ತರದಿಂದ ತಮಗೆ ಪ್ರಚಾರ ಸಿಗುತ್ತೆ ಎನ್ನುವ ಪರಿಜ್ಞಾನ, ಜಾಹ್ನವಿ ಅವರಿಗೆ ಪದೇ ಪದೇ ತಮ್ಮ ಸಾಂಸಾರಿಕ ವಿಚಾರವನ್ನು ಪ್ರಸ್ತಾಪ ಮಾಡುವಂತೆ ಮಾಡುತ್ತಿದೆಯಾ ಗೊತ್ತಿಲ್ಲ.? ಆದರೆ.. ಸದ್ಯ ತಮ್ಮ ವಿಚ್ಚೇದನದ ವಿಷಯವನ್ನೇ ಜಾಹ್ನವಿ ''ಬಿಗ್ ಬಾಸ್'' ನಲ್ಲಿ ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳುವ ಸಾಧ್ಯತೆಯಂತೂ ಕಂಡು ಬರುತ್ತಿದೆ.
ಇದಕ್ಕೆ ಪುರಾವೆ ಎನ್ನುವಂತೆ ಸುದೀಪ್ ಎದುರು ವೇದಿಕೆ ಹತ್ತಿದ ಮೊದಲ ದಿನದಂದೇ ತಮ್ಮ ಮದುವೆ- ಡಿವೋರ್ಸ್ ಕುರಿತು ಮಾತನಾಡಿದ್ದ ಜಾಹ್ನವಿ, ಈಗ ಮತ್ತೊಮ್ಮೆ ತಮ್ಮ ವ್ಯೆಯಕ್ತಿಕ ವಿಚಾರವನ್ನು ಎಲ್ಲರೆದುರು ಹಂಚಿಕೊಂಡಿದ್ದಾರೆ.
ಹೌದು, ''ಬಿಗ್ ಬಾಸ್'' ಮನೆಯ ಜಿಮ್ ಏರಿಯಾದಲ್ಲಿ ಮಲ್ಲಮ್ಮ ಜೊತೆ ಜಾಹ್ನವಿ ಮತ್ತು ಕಾಕ್ರೋಚ್ ಸುಧಿ ಮಾತನಾಡುತ್ತಿದ್ದರು. ಇದೇ ಸಮಯದಲ್ಲಿ ಮಲ್ಲಮ್ಮ ಅವರನ್ನು ಹೊಗಳಲು ಜಾಹ್ನವಿ ಶುರು ಮಾಡಿದರು. ವಯಸ್ಸು-ಸಾಧನೆ- ಸ್ಫೂರ್ತಿ ಎಂದೆಲ್ಲಾ ಮಾತನಾಡಿದರು. ಮಲ್ಲಮ್ಮ ಅವರಿಗೆ ಅವರ ಗತಕಾಲದ ದಿನಗಳನ್ನು ನೆನಪಿಸಿ ಕಣ್ಣೀರನ್ನು ಹಾಕಿಸಿದರು.
ಆದರೆ ಇದೇ ಸಮಯದಲ್ಲಿ ಜಾಹ್ನವಿ ಅವರ ವ್ಯೆಯಕ್ತಿಕ ಜೀವನ ಕೂಡ ಚರ್ಚೆಗೆ ಬಂತು. ಆಗ ಕಷ್ಟಾನೋ ಸುಖಾನೋ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಿತ್ತು ಎಂದು ಮಲ್ಲಮ್ಮ ಬುದ್ದಿವಾದ ಹೇಳಿದರು. ಇದಕ್ಕೆ
ನಾನು ಜೊತೆಯಲ್ಲಿ ಇದ್ದಾಗಲೇ ಅವರಿಗೆ ಬೇರೆ ಮದುವೆ ಆಗಿ ಮಗು ಇತ್ತು. ಅದಕ್ಕೆ ನಾನು ಬಿಟ್ಟಿದ್ದು. ಸುಮ್ಮನೆ ಏನಲ್ಲ ಎಂದು ಹೇಳಿದರು. ಎಲ್ಲರೂ ತಪ್ಪು ಮಾಡಿರುತ್ತಾರೆ, ಆದರೆ ಮದುವೆಯಾದ್ಮೇಲೆ ಬೇರೆಯವರಿಗೆ ಗಂಡ, ಹೆಂಡ್ತಿ ಸ್ಥಾನ ಕೊಡಬಾರದು. ಗಂಡನ ಸ್ಥಾನ ಗಂಡನಿಗೆ ಕೊಡಬೇಕು, ಹೆಂಡ್ತಿ ಸ್ಥಾನ ಬೇರೆ ಯಾರಿಗೂ ಕೊಡಬಾರದು, ಆ ಸ್ಥಾನ ಬೇರೆಯವರಿಗೆ ಹೋದಾಗ ಅದು ಅರ್ಥ ಕಳೆದುಕೊಳ್ಳುತ್ತದೆ ಎಂದು ಕೂಡ ಹೇಳಿದರು.
ಆಗ ಸುಮ್ಮನೆ ಕೂರದ ಕಾಕ್ರೋಚ್ ಸುಧಿ, ಎಣ್ಣೆಯ ವಿಚಾರ ಪ್ರಸ್ತಾಪ ಮಾಡಿದರು. ಅದು ಕೂಡ ಒಂದು ಕಾರಣ ಎಂದು ಜಾಹ್ನವಿ ಹೇಳಿದರು. ಜಾಹ್ನವಿ ಇಷ್ಟೆಲ್ಲಾ ಹೇಳಿದರೂ ಕೂಡ ಹಾಗೆ ಮಾಡಿಕೊಳ್ಳಬಾರದಮ್ಮ. ಒಂದ್ಸಲ ಮದುವೆಯಾದ್ಮೇಲೆ ಎಷ್ಟೇ ಕಷ್ಟವಾದರೂ ಅವರ ಜೊತೆಗೇ ಬದುಕಬೇಕು ಎಂದು ಮಲ್ಲಮ್ಮ ಮತ್ತೆ ಹೇಳಿದರು. ಆಗ ತುಂಬಾ ಸಹಿಸಿಕೊಂಡು ಬರ್ತೀವಲ್ಲ... ಅದು ಆಗಲ್ಲ. ಸುಮ್ಮನೆ ನನಗೆ ಹೇಳೋಕೆ ಇಷ್ಟವಿಲ್ಲ. ಎಲ್ಲಾ ದೈವ ಇಚ್ಛೆ ಅಷ್ಟೇ ಎಂದು ಹೇಳಿ ಸುಮ್ಮನಾದರು ಜಾಹ್ನವಿ.
ಹೀಗೆ ಮತ್ತೊಮ್ಮೆ ತಮ್ಮ ಡಿವೋರ್ಸ್ ಕುರಿತು ಜಾಹ್ನವಿ ಮಾತನಾಡಿದ್ದಾರೆ. ಸದ್ಯ ಜಾಹ್ನವಿ ಅವರ ಈ ಮಾತುಗಳ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ವಿಚ್ಛೇದನದ ವಿಚಾರವನ್ನು ಜಾಹ್ನವಿ ಪದೇ ಪದೇ ಪ್ರಸ್ತಾಪ ಮಾಡುತ್ತಿರುವುದಾದರೂ ಯಾಕೆ ಎನ್ನುವ ಪ್ರಶ್ನೆ ಕೂಡ ಹಲವರನ್ನು ಕಾಡುತ್ತಿದೆ. ಮುಂಬರುವ ದಿನಗಳಲ್ಲಿ ತಮ್ಮ ವ್ಯೆಯಕ್ತಿಕ ಜೀವನದ ಕುರಿತು ಇನ್ನಷ್ಟು ವಿಚಾರಗಳನ್ನು ಬಿಗ್ ಬಾಸ್ನಲ್ಲಿ ಬಾಯಿ ಬಿಟ್ಟರೂ ಕೂಡ ಆಶ್ಚರ್ಯ ಇಲ್ಲ ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ.


Click it and Unblock the Notifications










