ಡ್ರೋನ್ ಪ್ರತಾಪ್ ವಿಚಾರದಲ್ಲಿ ಈಶಾನಿ ಪಶ್ಚಾತಾಪ ; ಮರೆತು ಬಿಡಿ, ಕ್ಷಮಿಸಿ ಬಿಡಿ
ಟಿಕೆಟ್ ಟು ಫಿನಾಲೆ ಟಾಸ್ಕ್ ನಲ್ಲಿ ನಿರೀಕ್ಷೆಗೂ ಮೀರಿ ಆಟವಾಡಿ ಬಿಗ್ ಬಾಸ್ ನ ರನ್ನರ್ ಅಪ್ ಆಗಿ ಹೊರ ಹೊಮ್ಮಿದ ಡ್ರೋನ್ ಪ್ರತಾಪ್, ಸದ್ಯಕ್ಕೆ ಗಿಚ್ಚಿ ಗಿಲಿ ಗಿಲಿಯ ಮೂಲಕ ಮತ್ತೊಮ್ಮೆ ನಿಮ್ಮ ಹೃದಯ ಗೆಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇನ್ನೂ ಕೇವಲ ಪ್ರತಾಪ್ ಅಷ್ಟೇ ಅಲ್ಲ ಈ ಕಾರ್ಯಕ್ರಮದಲ್ಲಿ ಈಶಾನಿ ಕೂಡ ಇದ್ದಾರೆ. ತುಕಾಲಿ ಸಂತು ಕೂಡ ನಗಿಸುವ ಪ್ರಯತ್ನವನ್ನ ಮಾಡಲಿದ್ದಾರೆ.
ಡ್ರೋನ್ ಪ್ರತಾಪ್ ಅವರನ್ನ ಹಾಗೇ ಕರೆಯಬಾರದಿತ್ತು
ಬಿಗ್ ಬಾಸ್ ಮನೆಗೆ ಉಳಿದ ಸ್ಫರ್ಧಿಗಳ ಜೊತೆ ರೀ ಎಂಟ್ರಿ ಕೊಟ್ಟಿದ್ದ ಈಶಾನಿ, ಕಾಗೆ ಕಕ್ಕ ಉದಾಹರಣೆಯನ್ನು ತೆಗೆದುಕೊಂಡು ಡ್ರೋನ್ ಪ್ರತಾಪ್ ಅವರನ್ನ ನಿಂದಿಸಿದ್ದರು. ಪ್ರತಾಪ್ ಅವರನ್ನು ಕಾಗೆಗೆ ಹೋಲಿಸಿ, ಡ್ರೋನ್ ಪ್ರತಾಪ್ ಅವರ ಅಸಂಖ್ಯಾತ ಅಭಿಮಾನಿಗಳನ್ನ ಕೆರಳಿಸಿದ್ದರು. ಆ ನಂತರ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದರು ಈಶಾನಿ. ಈಗ ಕೆಟ್ಟ ಮೇಲೆ ಬುದ್ದಿ ಬಂತು ಅನ್ನುವಂತೆ ಈಶಾನಿ ಮತ್ತೆ ಆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಡ್ರೋನ್ ಪ್ರತಾಪ್ ಅವರನ್ನ ಕಾಗೆ ಅಂತ ಕರೆಯಬಾರದಿತ್ತು ಎಂದಿದ್ದಾರೆ.

ನಾನು ಕಾಗೆ ಅಂತ ಕರೆದಿದ್ದು ತಪ್ಪಿತ್ತು. ಅದನ್ನು ನಾನು ಬಳಸಬಾರದಿತ್ತು. ನಾನಿನ್ನೂ ಕನ್ನಡ ಕಲಿಯುತ್ತಿದ್ದೇನೆ. ನಾನು ಬೇರೆ ಏನೋ ಹೇಳಬೇಕಿತ್ತು. ಅದು ಈ ಥರ ಬಂದಿತ್ತು. ಈ ಕುರಿತಂತೆ ನಾನು ಸುದೀಪ್ ಸರ್ ಬಳಿ ಕ್ಷಮೆ ಕೇಳಿದ್ದೇನೆ. ಪ್ರತಾಪ್ ಮತ್ತು ವೀಕ್ಷಕರಲ್ಲೂ ಕ್ಷಮೆ ಕೇಳಿದ್ದೇನೆ. ಅಂತಹ ಪದಗಳನ್ನು ಯೂಸ್ ಮಾಡಬಾರದಿತ್ತು ಎಂದು ಈಶಾನಿ ಪಶ್ಚಾತಾಪ ಪಟ್ಟಿದ್ದಾರೆ.
ಇನ್ನೂ ಪ್ರತಾಪ್ ಮೇಲೆ ನನಗೆ ಬೇಸರ ಏನೂ ಇಲ್ಲ. ಅವರ ಜೊತೆಗೆ ಖುಷಿಯಾಗಿಯೇ ಇದ್ದೇನೆ, ಮಾತಾಡ್ತಿನಿ. ಶೋನಲ್ಲಿ ನಾವಿಬ್ಬರೂ ಅಷ್ಟೊಂದು ಮಾತಾಡ್ತಾ ಇರಲಿಲ್ಲ. ನನಗೆ ಕೋಪ ಅಂತ ಏನೂ ಇಲ್ಲ. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ನಾವು ಕೂಡ ಆಟಿಟ್ಯೂಡ್ ತೋರಿಸಬೇಕಲ್ವಾ? ಅದರಿಂದ ನಾನು ಕೂಡ ಶೋ ಕೊಟ್ಟಿದ್ದೇನೆ ಅಷ್ಟೇ" ಎಂದು ಕೂಡ ಈಶಾನಿ ಹೇಳಿದ್ದಾರೆ.

ಕನ್ನಡಿಗರಿಗೆ ಧನ್ಯವಾದ ಹೇಳಿದ ಈಶಾನಿ
ಇನ್ನೂ ತಮ್ಮ ಕನ್ನಡ ಪ್ರೇಮಕ್ಕೂ ಕೈಗನ್ನಡಿ ಹಿಡಿಯುವ ಪ್ರಯತ್ನ ಮಾಡಿರುವ ಈಶಾನಿ, ನಾನು ಬೇಕು ಅಂತಲೇ ಎಲ್ಲರ ಜೊತೆಗೆ ಕನ್ನಡದಲ್ಲೇ ಮಾತನಾಡಲು ಬಯಸುತ್ತೇನೆ. ಕನ್ನಡದ ಜನರು ನನಗೆ ತುಂಬ ಸಪೋರ್ಟ್ ಮಾಡುತ್ತಿದ್ದಾರೆ. ನಾನು ಬೇರೆ ಬೇರೆ ದೇಶಗಳಲ್ಲಿ ಇದ್ದಾಗ ಇಷ್ಟೊಂದು ಪ್ರೀತಿ ಎಲ್ಲಿಯೂ ಸಿಕ್ಕಿರಲಿಲ್ಲ. ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ. ನಾನಿನ್ನೂ ಕನ್ನಡ ಕಲಿಯುತ್ತಿದ್ದೇನೆ. ನನ್ನ ಕನ್ನಡ ವಿಭಿನ್ನವಾಗಿದೆ ಅಂತ ಕೂಡ ನನಗೆ ಗೊತ್ತಿದೆ. ನಾನು ಬೆಂಗಳೂರಿಗೆ ಬಂದು 2 ವರ್ಷ ಆಗಿದೆ. ಅಷ್ಟರಲ್ಲಿ ಇಷ್ಟೊಂದು ಕನ್ನಡ ಕಲಿತಿದ್ದೇನೆ ನಿಮ್ಮ ಆಶೀರ್ವಾದ ನನ್ನ ಮೇಲೆ ಸದಾ ಕಾಲ ಹೀಗೆ ಇರಲಿ ಅಂದಿದ್ದಾರೆ.


Click it and Unblock the Notifications










