BBK12: ನಾನೇ ಬಿಗ್ಬಾಸ್ ಟ್ರೋಫಿ ಗೆಲ್ಲಬೇಕಿತ್ತು, ನನ್ನ ಬಿಟ್ರೆ ಯಾರು ಗೆಲ್ಲಲು ಯೋಗ್ಯರಲ್ಲ- ಮಾಳು
'ನಾ ಡ್ರೈವರಾ..' ಎಂದು ಹಾಡು ಹಾಡಿ ಮೋಡಿ ಮಾಡಿದ್ದ ಉತ್ತರ ಕರ್ನಾಟಕದ ಪ್ರತಿಭೆ ಮಾಳು ನಿಪನಾಳ ಬಿಗ್ಬಾಸ್ ಮನೆಗೆ ಹೋಗಿದ್ದರು. ಇದೀಗ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. 91 ದಿನಗಳ ಬಿಗ್ಬಾಸ್ ಜರ್ನಿ ಮುಗಿಸಿ ಬಂದಿರುವ ಮಾಳು ಬೇಸರ ವ್ಯಕ್ತಪಡಿಸಿದ್ದಾರೆ. ಮನೆಯೊಳಗೆ ಇರುವ ಯಾರೂ ಟ್ರೋಫಿ ಗೆಲ್ಲಲು ಅರ್ಹರಲ್ಲ ಎನ್ನುವಂತೆ ಮಾತನಾಡುತ್ತಿದ್ದಾರೆ.
ಮಾಳು ನಿಪನಾಳ ಬಿಗ್ಬಾಸ್ ಮನೆಗೆ ಹೋಗುತ್ತಾರೆ ಎನ್ನುವ ವಿಚಾರ ಸಾಕಷ್ಟು ಜನರಿಗೆ ಖುಷಿತಂದಿತ್ತು. ಅಂತೂ ಇಂತೂ ಅರ್ಹ ವ್ಯಕ್ತಿಗೆ ಅವಕಾಶ ಸಿಕ್ಕಿದೆ ಎಂದು ಕೆಲವರು ಭಾವಿಸಿದ್ದರು. ಆದರೆ ಕೆಲವೇ ದಿನಗಳಲ್ಲಿ ಎಲ್ಲರ ನಿರೀಕ್ಷೆ ಹುಸಿಯಾಗಿತ್ತು. ಮಾಳು ವೀಕ್ಷಕರ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು. ಅಭಿಮಾನಿಗಳ ಬಲದಿಂದ ಇಷ್ಟು ದಿನ ಮನೆಯೊಳಗೆ ಉಳಿದುಕೊಂಡಿದ್ದರು, ಅದು ಬಿಟ್ಟರೆ ಅಷ್ಟೇನು ಉತ್ತಮವಾಗಿ ಆಟ ಆಡಲಿಲ್ಲ ಎನ್ನುವುದು ಕೆಲವರ ವಾದ.

ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಮಾಳು ಕೆಲ ಸಂದರ್ಶನಗಳಲ್ಲಿ ಭಾಗಿ ಆಗಿದ್ದಾರೆ. ಟಿವಿ9 ವಾಹಿನಿ ಸಂದರ್ಶನದಲ್ಲಿ
ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅವರ ಮಾತುಗಳು ಕೆಲವರ ಬೇಸರಕ್ಕೆ ಕಾರಣವಾಗಿದೆ. ತನ್ನನ್ನು ಬಿಟ್ಟರೆ ಬಿಗ್ಬಾಸ್ ಟ್ರೋಫಿ ಗೆಲ್ಲುವ ಯೋಗ್ಯತೆ ಯಾರಿಗೂ ಇಲ್ಲ ಎನ್ನುವಂತೆ ಮಾಳು ಮಾತನಾಡಿರುವುದು ವೈರಲ್ ಆಗ್ತಿದೆ.
"ಗಿಲ್ಲಿ ಕಾಮಿಡಿ ಮಾಡುವುದು ಬಿಟ್ಟರೆ ಯಾವುದೇ ಟಾಸ್ಕ್ ಮಾಡಲಿಲ್ಲ. ನಾನು ನೋಡಿದಂತೆ ಯಾವುದೇ ಫಿಸಿಕಲ್ ಟಾಸ್ಕ್ ಚೆನ್ನಾಗಿ ಆಡಲಿಲ್ಲ. ಗಿಲ್ಲಿ ಅಲ್ಲ, ಯಾರು ಗೆದ್ದರೂ ಅದು ನನಗೆ ಸರಿ ಅನ್ನಿಸಲ್ಲ. ನನ್ನ ಪ್ರಕಾರ, ಜನ ನೋಡಿದ ಪ್ರಕಾರ ಯಾರೂ ಗೆದ್ದರೂ ನಾನು ಒಪ್ಪಿಕೊಳ್ಳಲ್ಲ. ನನಗೆ ಬೇಸರವಾಗುತ್ತದೆ. ನನ್ನ ಪ್ರಕಾರ ನಾನು ಇನ್ನು ಸ್ವಲ್ಪ ದಿನ ಬಿಗ್ಬಾಸ್ ಮನೆಯಲ್ಲಿ ಉಳಿಯಬೇಕಿತ್ತು" ಎಂದು ಮಾಳು ಹೇಳಿದ್ದಾರೆ.
ದೊಡ್ಡಮಟ್ಟದಲ್ಲಿ ಮಾಳು ಅವರಿಗೆ ಜನ ವೋಟ್ ಮಾಡುತ್ತಿದ್ದರು. ಅದೇ ಕಾರಣಕ್ಕೆ ಇಷ್ಟು ದಿನ ದೊಡ್ಮನೆಯೊಳಗೆ ಇದ್ದರು. ಈ ಬಗ್ಗೆ ಮಾತನಾಡಿರುವ ಮಾಳು "ನಾನು ತಪ್ಪು ಮಾಡಿದ್ದೀನೋ ಸರಿ ಮಾಡಿದ್ದೀನೋ ಬೇರೆ ಮಾತು. ಜನರ ಪ್ರೀತಿ, ವೋಟಿಂಗ್, ನನಗಾಗಿ ಗೋಳಾಡುವುದು ನೋಡಿದ್ರೆ ಅಲ್ಲಿರುವ ಯಾರೊಬ್ಬರು ವಿನ್ ಆಗುತ್ತಾರೆ ಎನ್ನುವುದನ್ನು ಇಷ್ಟಪಡಲ್ಲ. ಯಾರು ಗೆದ್ರೂ ಒಪ್ಪಲ್ಲ" ಎಂದಿದ್ದಾರೆ.
ನಾನು ಮನೆಯೊಳಗೆ ಮಾತನಾಡುತ್ತಿರಲಿಲ್ಲ ಎನ್ನುವ ಮಾತನ್ನು ಒಪ್ಪಲ್ಲ. ಎಷ್ಟು ಬೇಕೋ ಅಷ್ಟು ಮಾತನಾಡ್ತಿದ್ದೆ. ಯಾರು ಕೇಳಿದ್ರೆ ಉತ್ತರಿಸುತ್ತಿದ್ದೆ. ನಾನು ಗೂಂಡಾಗಿರಿ ಮಾಡೋಕೆ ಹೊಡೆದಾಡೋಕೆ ಬಿಗ್ಬಾಸ್ ಮನೆಗೆ ಹೋಗ್ಲಿಲ್ಲ. ನನ್ನ ವ್ಯಕ್ತಿತ್ವ ತೋರಿಸಲು ಹೋಗಿದ್ದೆ. ನಾನು ಅಥವಾ ಸೂರಜ್ ಇನ್ನು ಅಲ್ಲೇ ಉಳಿದುಕೊಳ್ಳಬೇಕು. ಸ್ಪಂದನಾ ಉಳಿದುಕೊಂಡಿದ್ದನ್ನು ಒಪ್ಪೋಕೆ ಸಾಧ್ಯವಿಲ್ಲ. ಆಕೆ ಫಿಸಿಕಲ್ ಟಾಸ್ಕ್ ಆಡೋಕೆ ಆಗಲ್ಲ ಎಂದು ಮಾಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾನು ಫಿನಾಲೆವರೆಗೂ ಉಳಿದಿಕೊಂಡಿದ್ದರೆ ಮೊದಲ ಸ್ಥಾನದಲ್ಲಿ ನಾನೇ ಇರ್ತಿದ್ದೆ. ರಘು ಸರ್ 2ನೇ ಸ್ಥಾನ. ಬಳಿಕ ಗಿಲ್ಲಿ.. ಉಳಿದವರೆಲ್ಲಾ ಕೊನೆಯಲ್ಲಿ ಇರ್ತಿದ್ರು ಅಂತ ನಾನು ಅಂದುಕೊಂಡಿದ್ದೀನಿ. ನಾನು ಇಷ್ಟು ಆಟ ಆಡಬೇಕಿತ್ತು. ಅದು ಸಾಧ್ಯವಾಗದ್ದಕ್ಕೆ ಬೇಸರವಿದೆ. ಗುಂಪಾಗಿ ಅಲ್ಲ ವೈಯಕ್ತಿಕವಾಗಿ ನನ್ನ ಆಟ ತೋರಿಸಬೇಕು ಎಂದುಕೊಂಡಿದ್ದೆ ಅದಕ್ಕೆ ಅವಾಕಾಶ ಸಿಗಲಿಲ್ಲ ಎಂದು ಮಾಳು ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಪ್ರಕಾರ ನಾನೇ ಗೆಲ್ಲಬೇಕಿತ್ತು. ನನಗೆ ವೋಟ್ ಹೆಚ್ಚು ಬೀಳ್ತಿತ್ತು. ನನಗೆ ಹೆಚ್ಚು ಟ್ಯಾಲೆಂಟ್ ಇತ್ತು. ಆದರೆ ಯಾಕೆ ಎಲಿಮಿನೇಟ್ ಆಗಿಬಿಟ್ಟೆ ಗೊತ್ತಿಲ್ಲ. ನಾನು, ರಕ್ಷಿತಾ ಬಡಕುಟುಂಬದವರು. ಹಾಗಾಗಿ ಪ್ರೀತಿ ಮಮಕಾರ ಅವರಿಗೆ ಮಾತ್ರ ಅರ್ಥವಾಗುತ್ತದೆ. ಆಕೆ ಒಳ್ಳೆ ಮನಸ್ಸು ಇರುವವರನ್ನು ಹಚ್ಚಿಕೊಳ್ಳುತ್ತಿದ್ದಳು. ಆಕೆಯಿಂದ ನನಗೆ ತಾಯಿ ಪ್ರೀತಿ, ತಂಗಿ ಪ್ರೀತಿ ಸಿಕ್ತು ಎಂದು ಮಾಳು ಹೇಳಿದ್ದಾರೆ.


Click it and Unblock the Notifications











