Bhavya Gowda: 'ಕರ್ಣ' ಪ್ರೇಮಿಯಾಗಿ ಗ್ರ್ಯಾಂಡ ಎಂಟ್ರಿ ಕೊಡಲಿರೋ ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ
'ಕನ್ನಡತಿ' ಧಾರಾವಾಹಿಯ ಹರ್ಷ ಆಗಿ ಕಿರುತೆರೆಯಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಕಿರಣ್ ರಾಜ್ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ. 'ಕನ್ನಡತಿ' ಧಾರಾವಾಹಿಯ ನಂತರ ಸ್ಯಾಂಡಲ್ವುಡ್ನಲ್ಲಿ ಬ್ಯುಸಿಯಾದ ಕಿರಣ್ ರಾಜ್ ಇದೀಗ ಹೊಚ್ಚ ಹೊಸ ಧಾರಾವಾಹಿಯಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಸುದ್ದಿ ಈಗಾಗಲೇ ಎಲ್ಲರಿಗೂ ತಲುಪಿದೆ. ಜೀ ಕನ್ನಡ ವಾಹಿನಿಯ 'ಕರ್ಣ' ಧಾರಾವಾಹಿಯಲ್ಲಿ ಕಿರಣ್ ರಾಜ್ ನಟಿಸಲಿದ್ದು, ಧಾರಾವಾಹಿಯ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.
ಇದೀಗ ಕನ್ನಡ ಧಾರಾವಾಹಿಯ 'ಕರ್ಣ' ಪಾತ್ರಕ್ಕೆ ಎರಡು ನಾಯಕ ನಟಿಯರು ಎಂಬ ವಿಚಾರ ತಿಳಿಯುತ್ತಿದ್ದಂತೆ ಆ ಎರಡು ಪಾತ್ರಗಳಿಗೆ ಯಾರು ನಟಿಸಲು ಬರುತ್ತಾರೆ ಎಂಬ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಸಹಜವಾಗಿ ಮೂಡಿತ್ತು. ಈಗಷ್ಟೇ ಬಿಗ್ ಬಾಸ್ ಮುಗಿದಿರುವುದರಿಂದ, ಬಿಗ್ ಬಾಸ್ ಖ್ಯಾತಿಯ ಮೋಕ್ಷಿತಾ ಪೈ, ಭವ್ಯಾ ಗೌಡ ಹಾಗೂ ಕಿರಣ್ ರಾಜ್ ಅವರೊಂದಿಗೆ ಈ ಮೊದಲು ನಾಯಕ ನಟಿಯಾಗಿ ನಟಿಸಿ ಬಹಳ ಮೆಚ್ಚುಗೆ ಪಡೆದಿದ್ದ ರಂಜಿನಿ ರಾಘವನ್ ಇವರಲ್ಲಿ ಯಾರೂ ಎಂದು ಪ್ರೇಕ್ಷಕರು ಈಗಾಗಲೇ ಊಹಿಸಲು ಆರಂಭಿಸಿದ್ದರು.

ಪ್ರೇಕ್ಷಕರೇ ಕುತೂಹಲದಿಂದ ಒಂದಷ್ಟು ಚರ್ಚೆ ಮಾಡಲು ಆರಂಭಿಸಿದ್ದರಿಂದ ಇದು ಒಂದು ರೀತಿಯ ಟ್ರೆಂಡ್ ಆಗಿತ್ತು. ಇದೀಗ ಈ ಕುರಿತ ಚರ್ಚೆಗಳಿಗೆ ಕಂಪ್ಲೀಟ್ ಫುಲ್ ಸ್ಟಾಪ್ ಇಡುವ ಸಮಯ ಬಂದಿದೆ. 'ಗೀತಾ' ಧಾರಾವಾಹಿಯ ಮೂಲಕ ವೀಕ್ಷಕರ ಮನ ಸೆಳೆದಿದ್ದ ಭವ್ಯಾ ಗೌಡ ಅವರು ಕರ್ಣನ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.
ಈ ಬಗ್ಗೆ ಕಿರುತೆರೆ ಪ್ರೇಕ್ಷಕರಿಗಂತೂ ಬಹಳ ಸಂತೋಷವಿದ್ದಂತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೀತಾ' ಧಾರಾವಾಹಿ ನಂತರ ಭವ್ಯಾ ಗೌಡ ಅವರಿಗೆ ಬಹಳಷ್ಟು ದೊಡ್ಡ ಅಭಿಮಾನಿ ಬಳಗ ಇರುವುದರಿಂದ ಬಿಗ್ ಬಾಸ್ನಲ್ಲೂ ನಟಿ ಭವ್ಯಾ ಗೌಡ ಹೆಚ್ಚಿನ ಖ್ಯಾತಿ ಗಳಿಸಲು ಸಾಧ್ಯವಾಯಿತು. ಬಹಳ ಸ್ಟ್ರಾಂಗ್ ಅಭ್ಯರ್ಥಿ ಎಂದೇ ಹೆಸರಾಗಿದ್ದ ನಟಿ ಭವ್ಯಾ ಗೌಡ ಬಿಗ್ ಬಾಸ್ ಸೀಸನ್ 11 ರ ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದರು.
ಬಿಗ್ ಬಾಸ್ನಲ್ಲಿ ಭವ್ಯಾ ಗೌಡ ಅವರಿಗೆ ಅಷ್ಟೇ ಅಲ್ಲದೆ ಅವರ ಅಕ್ಕನಿಗೂ ಹೊಸ ರೀತಿಯಲ್ಲಿ ಫ್ಯಾನ್ ಫಾಲೋಯಿಂಗ್ ಶುರುವಾಗಿತ್ತು. ಇದರ ಜೊತೆಗೆ ನಟ ತ್ರಿವಿಕ್ರಮ್ ಹಾಗೂ ಭವ್ಯಾ ಅವರ ಜೋಡಿ ಪ್ರೇಕ್ಷಕರ ಫೇವರೆಟ್ ಆಗಿತ್ತು. ಇದೀಗ 'ಕರ್ಣ' ಧಾರಾವಾಹಿ ಮೂಲಕ ಮತ್ತೆ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಭವ್ಯಾ ಗೌಡ ಯಾವೆಲ್ಲ ರೀತಿಯಲ್ಲಿ ಜನಮನ ಗೆಲ್ಲುತ್ತಾರೆ ಎಂಬುದನ್ನು ನೋಡಬೇಕಿದೆ. ಜೊತೆಗೆ ಇನ್ನೊಬ್ಬ ನಾಯಕ ನಟಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.
ಒಟ್ಟಿನಲ್ಲಿ ಅತ್ಯಂತ ಶ್ರೀಘ್ರದಲ್ಲಿ ಆರಂಭವಾಗುವ 'ಕರ್ಣ' ಧಾರಾವಾಹಿ ಬಗ್ಗೆ ಈಗಾಗಲೇ ಬಹಳಷ್ಟು ಕುತೂಹಲ ಮೂಡಿರುವುದಂತೂ ನಿಜ!

ಧಾರಾವಾಹಿ ಪ್ರೊಮೊದಲ್ಲಿ, ಕರ್ಣ ಎಂಬ ಮೃದು ಮನಸ್ಸಿನ ಹುಡುಗನಿಗೆ ಎಲ್ಲರೂ ಇದ್ದು ಯಾರೂ ಇರದಂತಹ ಸ್ಥಿತಿ ಎನ್ನುವಂತೆ ತೋರಿಸಲಾಗಿದೆ. ವೃತ್ತಿಯಲ್ಲಿ ಡಾಕ್ಟರ್ ಆಗಿರುವ ಕಾರಣ ಮನೆಯಲ್ಲಿ ಮಾತ್ರ ಮನೆಗೆಲಸದವನಿಗಿಂತಲೂ ಕಡೆ ಎನ್ನುವಂತೆ ತೋರಿಸಲಾಗಿದೆ. ಅವನನ್ನು ಅವನ ಇಡೀ ಕುಟುಂಬ ದೂರ ಇಟ್ಟರೂ, ಕಟುವಾಗಿ ಮಾತನಾಡಿದರೂ, ಕೆಟ್ಟದಾಗಿ ನಡೆಸಿಕೊಂಡರೂ, ಅವನ ಅಜ್ಜಿಗೆ ಮಾತ್ರ ಅವನೇ ಅಚ್ಚುಮೆಚ್ಚು. ಆದರೆ ತನ್ನದೇ ಮನೆಯಲ್ಲಿ ಕರ್ಣ ಈ ರೀತಿ ಹೊರಗಿನವನಂತೆ ಇರಲು ಕಾರಣ ಏನು? ಎಂಬುವುದೇ ಕಥಾ ಹಂದರ. ಹಿಂದಿಯ ಜೀ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಜಾ ಬೇಟ' ಧಾರಾವಾಹಿಯ ರಿಮೇಕ್ ಇದಾಗಿದ್ದು ಕನ್ನಡ ಪ್ರೇಕ್ಷಕರು ಈ ಧಾರಾವಾಹಿಯನ್ನು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











