ಚಂದನ್- ನಿವೇದಿತಾ ಹಾಗೂ ರಕ್ಷಿತ್- ರಶ್ಮಿಕಾ ಉದಾಹರಣೆ ಕೊಟ್ಟ ಪತ್ರ ಹಂಚಿಕೊಂಡ ಕಾವ್ಯಾ
ಗಿಲ್ಲಿ ಹಾಗಾ ಕಾವ್ಯಾ ಸ್ನೇಹದ ಬಗ್ಗೆ ಬಿಡಿಸಿ ಹೇಳುವುದು ಬೇಡ. ಬಿಗ್ಬಾಸ್ ಮನೆಯಲ್ಲಿ ಇಬ್ಬರೂ ಬಹಳ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಇಬ್ಬರೂ ಮದುವೆ ಆಗಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಮಾತ್ರ, ಮದುವೆ ಆಗೊದೆಲ್ಲ ದೂರದ ಮಾತು ಎಂದು ಇಬ್ಬರೂ ಹೇಳ್ತಾ ಬರ್ತಿದ್ದಾರೆ. ಆದರೂ ಕೆಲವರು ಒಪ್ಪಲು ಸಿದ್ಧರಿಲ್ಲ.
'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನಲ್ಲಿ ಗಿಲ್ಲಿ, ಕಾವ್ಯಾ ಇಬ್ಬರೂ ಭಾಗವಹಿಸಿದ್ದರು. ಅಲ್ಲೇ ಪರಿಚಯ ಶುರುವಾಗಿತ್ತು. ಬಳಿಕ ಬಿಗ್ಬಾಸ್ ಮನೆಗೆ ಜಂಟಿ ಸ್ಪರ್ಧಿಗಳಾಗಿ ಹೋಗಿದ್ದರು. ಅಲ್ಲಿಂದ ಇಬ್ಬರ ಸ್ನೇಹ ಗಟ್ಟಿಯಾಗಿತ್ತು. ಕಾವು ಕಾವು ಎಂದು ಗಿಲ್ಲಿ ಹಿಂದೆ ಹೋಗುತ್ತಿದ್ದರು. ಆಕೆಯನ್ನು ರೇಗಿಸುತ್ತಿದ್ದರು. ಇಬ್ಬರ ಟಾಮ್ & ಜೆರ್ರಿ ಜಗಳ ವೀಕ್ಷಕರಿಗೆ ಇಷ್ಟವಾಗಿತ್ತು. ಇಬ್ಬರೂ ಫಿನಾಲೆವರೆಗೂ ಬಂದರು. ಇಬ್ಬರೂ ಮದುವೆ ಆಗಬೇಕು ಎನ್ನುವುದು ಕೆಲವರ ಅಭಿಪ್ರಾಯ. ಇದೇ ವಿಚಾರಕ್ಕೆ ಸಂಬಂಧಿಸಿ ಕಾವ್ಯಾ ಒಂದು ಪತ್ರ ಹಂಚಿಕೊಂಡಿದ್ದಾರೆ.

ಕಾವ್ಯಾ ಬಗ್ಗೆ ಅಭಿಮಾನಿಯೊಬ್ಬರು ಪತ್ರ ಬರೆದಿದ್ದಾರೆ. ಅದನ್ನು ಆಕೆ ಇನ್ಸ್ಟಾ ಸ್ಟೋರಿಯಲ್ಲಿ ಹಾಕಿದ್ದಾರೆ. "ಪತ್ರ ಓದಿ ಕಣ್ಣು ತುಂಬಿ ಬಂತು" ಎಂದು ಬರೆದುಕೊಂಡಿದ್ದಾರೆ. ಗಿಲ್ಲಿ ಜೊತೆ ಕಾವ್ಯಾ ಮದುವೆ ಆಗಬೇಕು ಎನ್ನುವ ಬಗ್ಗೆ ಕೊನೆಯಲ್ಲಿ ಅಭಿಮಾನಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. "ಅಭಿಪ್ರಾಯ ಜನಗಳದ್ದಾಗಿರಬಹುದು ನಿರ್ಧಾರ ನಿಮ್ಮದೇ ಆಗಿರಲಿ" ಎಂದು ಬರೆದಿರುವುದು ಈಗ ವೈರಲ್ ಆಗುತ್ತಿದೆ.
ನಾನು ಗಿಲ್ಲಿಯನ್ನು ಮದುವೆ ಆಗುವುದಿಲ್ಲ ಎಂದು ಕಾವ್ಯಾ ನೇರವಾಗಿ ಹೇಳುತ್ತಿಲ್ಲ. ಆ ಪ್ರಶ್ನೆ ಎದುರಾದಾಗಲೆಲ್ಲಾ ತೇಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಕೆಲವರು ಕಾಮೆಂಟ್ ಮಾಡಿ ನೇರವಾಗಿ ಹೇಳಿಬಿಡಿ ಎನ್ನುವುದು ಇದೆ. ಸದ್ಯ ಆ ಪತ್ರದಲ್ಲಿ ಕೊನೆಯ ಸಾಲುಗಳನ್ನು ನೋಡಿ ಒಳ್ಳೆ ಸಂದೇಶ ಕೊಟ್ಟಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಪತ್ರದ ಕೊನೆಯಲ್ಲಿ ಒಂದು ಮಾತು ಎಂದು ಬರೆದು "ಅಭಿಪ್ರಾಯ ಜನಗಳದ್ದಾಗಿರಬಹುದು ನಿರ್ಧಾರ ನಿಮ್ಮದೇ ಆಗಿರಲಿ. ಕಾರಣ ಜೊತೆಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದವರನ್ನು ನೋಡಿದ್ದೇವೆ. ಅರಮನೆಯ ಸಂಭ್ರಮದಲ್ಲಿ ಜೊತೆಯಾಗಿ ಕೋರ್ಟ್ನಲ್ಲಿ ದೂರಾವಾದದ್ದು ನೋಡಿದ್ದೇವೆ. ಜೊತೆಯಾಗಿ, ದೂರವಾಗಿ 'ನ್ಯಾಷನಲ್ ಕ್ರಶ್', ಆಗಿದ್ದನ್ನು ನೋಡಿದ್ದೇವೆ. ಜನ ನಿಮ್ಮನ್ನು ಮನರಂಜನೆ ನೀಡುವವರೆಗೂ ಮಾತ್ರ ನೋಡಲು ಇಚ್ಛಿಸುತ್ತಾರೆ. ಸಮಯ ಸರಿದಂತೆ, ಸಾಧನೆ ನಿಲ್ಲದಂತೆ, ಬೆಳೆಯುತ್ತಿರು ನೀ ಸರಿಸಮವಿಲ್ಲದಂತೆ. ಸಾಗುತ್ತಿರಲಿ ಸಂಭ್ರಮದ ಮೆರವಣಿಗೆ ಸರಿಸಾಟಿಯಿಲ್ಲದಂತೆ" ಎಂದು ಬಣ್ಣಿಸಿದ್ದಾರೆ.
ಬಿಗ್ಬಾಸ್ ಮುಗಿದ ಮೇಲೆ ಕೂಡ ನಮ್ಮಿಬ್ಬರ ಸ್ನೇಹ ಮುಂದುವರೆಯುತ್ತದೆ ಎಂದು ಗಿಲ್ಲಿ, ಕಾವ್ಯಾ ಹೇಳುತ್ತಾ ಬರ್ತಿದ್ದಾರೆ. ಆಕೆ ಕೊಟ್ಟಿರುವ ಬ್ರೇಸ್ಲೈಟ್ ನನ್ನ ಕೈಯಲ್ಲೇ ಇರುತ್ತದೆ ಎಂದು ಗಿಲ್ಲಿ ಹೇಳಿದ್ದಾರೆ. ಗಿಲ್ಲಿ ಸಿನಿಮಾ ಮಾಡಿದ್ರೆ ನಾಯಕಿಯಾಗಿ ನಟಿಸುತ್ತೇನೆ ಎಂದು ಕಾವ್ಯಾ ಪ್ರತಿಕ್ರಿಯಿಸಿದ್ದಾರೆ. ನಮ್ಮೂರಿನಲ್ಲಿ ನಡೆಯುವ ಸಿಡಿ ಹಬ್ಬಕ್ಕೆ ಕಾವ್ಯಾ ಅವರನ್ನು ಆಹ್ವಾನಿಸುತ್ತೀನಿ ಎಂದು ಗಿಲ್ಲಿ ಹೇಳಿದ್ದಾರೆ.
112 ದಿನ ಬಿಗ್ಬಾಸ್ ಜರ್ನಿಯನ್ನು ಪೂರೈಸಿ ಕಾವ್ಯಾ, ಗಿಲ್ಲಿ ಫಿನಾಲೆ ತಲುಪಿದ್ದರು. ಗಿಲ್ಲಿ ವಿನ್ನರ್ ಆಗಿ ಟ್ರೋಫಿ ಎತ್ತಿ ಹಿಡಿದರು. ಕಾವ್ಯಾ 3ನೇ ರನ್ನರ್ ಅಪ್ ಎನಿಸಿಕೊಂಡರು. ನಾನು 2ನೇ ಸ್ಥಾನದಲ್ಲಿ ಇರಬೇಕಿತ್ತು ಎಂದು ಆಕೆ ಮಾಧ್ಯಮಗಳ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ನಾನು ನೋಡಿದಂತೆ ರಕ್ಷಿತಾ 2ನೇ ಸ್ಥಾನಕ್ಕೆ ಅರ್ಹಳಲ್ಲ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾವ್ಯಾ ಈಗಾಗಲೇ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ. ಗಿಲ್ಲಿ ಸಿನಿಮಾ ನಿರ್ದೇಶನ ಮಾಡಲು ಕನಸು ಕಾಣುತ್ತಿದ್ದಾರೆ. ಎರಡ್ಮೂರು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.


Click it and Unblock the Notifications











