ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಬಿಗ್ ಬಾಸ್ ಸ್ಫರ್ಧಿ, ಭುಗಿಲೆದ್ದ ಆಕ್ರೋಶ
ಅಭಿವ್ಯಕ್ತಿ ಮನುಷ್ಯನ ಮೂಲಭೂತ ಗುಣ. ಮಾನವನ ಹಕ್ಕುಗಳಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯವೇ ಅಡಿಪಾಯ. ಅದೇ ಮಾನವನ ಅಸ್ತಿತ್ವದ ಬೇರು. ಆದರೆ ಈಗೀಗ .. ಅಭಿವ್ಯಕ್ತಿ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವುದು, ಧಾರ್ಮಿಕ ವ್ಯಕ್ತಿತ್ವಗಳ ಅವಹೇಳನವನ್ನು ಮಾಡುವುದು ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ದಿನ ಬೆಳಗಾದರೆ ಹಲವಾರು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವಿವಾದಕ್ಕೆ ಎಡೆ ಮಾಡಿಕೊಡುತ್ತಿವೆ.
ಇದಕ್ಕೆ ಸದ್ಯ ಕೇರಳದಲ್ಲಿ ''ಬಿಗ್ ಬಾಸ್'' ಸ್ಫರ್ಧಿ ಮಾಡಿರುವ ಕೆಲಸ ಮತ್ತೊಂದು ಕೈಗನ್ನಡಿ. ಹೌದು..''ಬಿಗ್ ಬಾಸ್'' ಎಂಬ ಸಂತೆಯಿಂದ ಇಲ್ಲಿಯವರೆಗೆ ಹಲವಾರು ಜನ ಹೊರಗಡೆ ಬಂದಿದ್ದಾರೆ. ಆದರೆ ಹೀಗೆ ಬಂದ ಹಲವರಲ್ಲಿ ಬಹುತೇಕರು ತಮ್ಮ ಬದುಕು ರೂಪಿಸಿಕೊಳ್ಳುವುದತ್ತ ಗಮನ ಕೊಡದೇ ಕೇವಲ ವಿವಾದಗಳಿಂದನೇ ಚಾಲ್ತಿಯಲ್ಲಿರುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದಾರೆ. ಆ ಭಾಷೆ.. ಈ ಭಾಷೆ ಅಂತಲ್ಲ. ಎಲ್ಲಾ ಭಾಷೆಯಲ್ಲಿ ಬಹುತೇಕ ಸ್ಫರ್ಧಿಗಳ ಹಣೆಬರಹ ಇದೆ.

ಇದಕ್ಕೆ ಪುರಾವೆ ಎನ್ನುವಂತೆ ಮಲಯಾಳಂನ ''ಬಿಗ್ ಬಾಸ್'' ಸೀಸನ್ 6ರಲ್ಲಿ ಕಾಣಿಸಿಕೊಂಡಿದ್ದ ''ಜಾಸ್ಮಿನ್ ಜಾಫರ್'' ಸದ್ಯ ಕೇರಳಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು, ಜಾಸ್ಮಿನ್ ಜಾಫರ್.. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್. ''ಬಿಗ್ ಬಾಸ್'' ಸ್ಫರ್ಧಿ ಎಂಬ ವಿಚಾರ ಹೊರತು ಪಡಿಸಿದರೆ ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಜಾಸ್ಮಿನ್ ತಮ್ಮ ಈ ಚಾನೆಲ್ ಮೂಲಕ ತಮ್ಮ ದಿನನಿತ್ಯದ ಜೀವನ ಶೈಲಿಯ ಚಿತ್ರಣವನ್ನು ತೆರೆದಿಡುತ್ತಾರೆ. ಸೌಂದರ್ಯದ ರಹಸ್ಯವನ್ನು ಕೂಡ ಹೇಳುತ್ತಾರೆ. 1.5 ಮಿಲಿಯನ್ ಜನ ಇವರನ್ನು ಯೂಟ್ಯೂಬ್ನಲ್ಲಿ ಫಾಲೋ ಮಾಡುತ್ತಾರೆ.
ಇಂಥಾ ಜಾಸ್ಮಿನ್ ಜಾಫರ್ ಸದ್ಯ ತಮ್ಮ ರೀಲ್ಸ್ ಹುಚ್ಚಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ಧಾರೆ.ಕೇರಳದ ''ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನ''ದ ಪವಿತ್ರ ಕೊಳದಲ್ಲಿ
ಕಾಲು ತೊಳೆದುಕೊಂಡಿದ್ದಾರೆ. ಹಿಂದುಯೇತರರಿಗೆ ಸಂಪೂರ್ಣವಾಗಿ ನಿಷಿದ್ಧ ವಲಯವಾದ ಈ ಸ್ಥಳಕ್ಕೆ ತೆರಳುವುದಲ್ಲದೇ ಕಾಲನ್ನು ಕೂಡ ಜಾಸ್ಮಿನ್ ತೊಳೆದ ಕಾರಣ ಸದ್ಯ ಆಕ್ರೋಶ ಭುಗಿಲೇದ್ದಿದೆ. ಕೊಳದ ಪಾವಿತ್ರ್ಯದ ಉಲ್ಲಂಘನೆ ಮತ್ತು ದೇವಾಲಯದ ನಿರ್ಬಂಧಿತ ವಲಯಗಳಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯನ್ನು ನಿಷೇಧಿಸುವ ಹೈಕೋರ್ಟ್ ಆದೇಶದ ಉಲ್ಲಂಘನೆಯನ್ನು ಕೂಡ ಜಾಸ್ಮಿನ್ ಮಾಡಿದ್ದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಒ.ಬಿ. ಅರುಣ್ ಕುಮಾರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇನ್ನು ಜಾಸ್ಮಿನ್ ಪವಿತ್ರ ಕೊಳದಲ್ಲಿ ಕಾಳು ತೊಳೆದಿದ್ದು ಇಂದು ನಿನ್ನೆಯಲ್ಲ. ಬದಲಿಗೆ ಆರು ದಿನಗಳ ಹಿಂದೆ ಆಗಸ್ಟ್ 20 ರಂದು ಜಾಸ್ಮಿನ್ ಜಾಫರ್ ಗುರುವಾಯುರು ದೇವಸ್ಥಾನಕ್ಕೆ ಭೇಟಿ ನೀಡಿ ಪವಿತ್ರ ಕೆರೆಯಲ್ಲಿ ಕಾಲುಗಳನ್ನು ತೊಳೆದಿದ್ದರು. ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ.. ಇದು ಅರಿವಿಗೆ ಬಾರದ ಹಿನ್ನೆಲೆ ಕಳೆದ ಆರು ದಿನಗಳಿಂದ ಇದೇ ಕೊಳದ ನೀರಿನಿಂದ ದೇವರ ಕಾರ್ಯಗಳನ್ನು ಮತ್ತು ಪೂಜಾ ಕಾರ್ಯಗಳನ್ನು ಮಾಡಲಾಗಿದೆ. ಹೀಗಾಗಿ ದೇವಸ್ಥಾನ ಅಪವಿತ್ರಗೊಂಡಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಒಬಿ ಅರುಣ್ ಕುಮಾರ್ ಹೇಳಿದ್ದು, ದೇವಸ್ಥಾನದ ಪ್ರಧಾನ ಅರ್ಚಕರ ಮಾರ್ಗದರ್ಶನದಂತೆ ಸದ್ಯ ಗುರುವಾಯೂರು ದೇವಾಲಯದ ಶುದ್ಧೀಕರಣ ಕಾರ್ಯಗಳು ನಡೆಯುತ್ತಿವೆ.
ಇಂದು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನದವರೆಗೆ ಭಕ್ತರಿಗೆ ದೇವಸ್ಥಾನದ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಅಪವಿತ್ರಗೊಂಡ ದೇವಸ್ಥಾನದಲ್ಲಿ ಕಳೆದ 6 ದಿನಗಳಿಂದ ಮಾಡಿದ ಪೂಜಾ ಕಾರ್ಯಗಳಿಗೆ ಫಲವಿಲ್ಲ ಎಂದು ಅರ್ಚಕರು ಹೇಳಿದ್ದಾರೆ. ಹೀಗಾಗಿ ಕಳೆದ 6 ದಿನಗಳ ಪೂಜಾ ಕಾರ್ಯಗಳು ಮತ್ತೆ ನಡೆಯಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ತಮ್ಮ ವಿರುದ್ಧ ಆಕ್ರೋಶ ಭುಗಿಲೆದ್ದ ಬೆನ್ನಲ್ಲೇ ವಿಡಿಯೋ ಡಿಲೀಟ್ ಮಾಡಿರುವ ಜಾಸ್ಮಿನ್, ನನ್ನ ಅಜ್ಞಾನವೇ ಇದಕ್ಕೆಲ್ಲಾ ಕಾರಣ ನನಗೆ ಯಾರನ್ನೂ ನೋಯಿಸುವ ಅಥವಾ ವಿವಾದವನ್ನು ಸೃಷ್ಟಿಸುವ ಉದ್ದೇಶ
ಇರಲಿಲ್ಲ ಎಂದು ಹೇಳಿದ್ದಾರೆ. ನನ್ನ ಈ ಕೆಲಸದಿಂದ ಹಲವರಿಗೆ ದುಃಖ ಆಗಿದೆ ಎನ್ನುವುದು ನನಗೆ ಅರ್ಥವಾಗಿದೆ ದಯವಿಟ್ಟು ಈ ಅಚಾತುರ್ಯಕ್ಕೆ ಕ್ಷಮಿಸಿ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿಯನ್ನು ಮಾಡಿವೆ. ಸದ್ಯ ಜಾಸ್ಮಿನ್ ವಿಡಿಯೋವನ್ನು ಡಿಲೀಟ್ ಮಾಡಿದ್ದರು ಕೂಡ ಈ ವಿಡಿಯೋ ವೈರಲ್ ಆಗಿದೆ. ಹಲವರ ಕೆಂಗಣ್ಣಿಗೆ ಗುರಿಯಾಗಿದೆ.


Click it and Unblock the Notifications











