ಮತ್ತೆ ಕಲರ್ಸ್ ಮನೆಗೆ ಬಂದ ಕರ್ನಾಟಕ ಕ್ರಶ್ ಲಾಯರ್ ಜಗದೀಶ್; ಫ್ಯಾನ್ಸ್ ಖುಷ್
ಬಿಗ್ಬಾಸ್ ಸೀಸನ್ 11 ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಮನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದೆ. ವೈಲ್ಡ್ ಕಾರ್ಡ್ ಎಂಟ್ರಿ ಕೂಡ ಆಗಿದೆ. ಕಳೆದ ವಾರ ದಿಢೀರನೇ ಲಾಯರ್ ಜಗದೀಶ್ ಹಾಗೂ ರಂಜಿತ್ ಬಿಗ್ಬಾಸ್ ಮನೆಯಿಂದ ಹೊರ ಬಂದಿದ್ದರು. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು.
ಶೋ ಶುರುವಾದ ಎರಡೇ ವಾರದಲ್ಲಿ ಲಾಯರ್ ಜಗದೀಶ್ ವೀಕ್ಷಕರ ಮನ ಗೆದ್ದಿದ್ದರು. ತಮ್ಮ ನೇರಾನೇರ ಮಾತುಗಳಿಂದ ಗಮನ ಸೆಳೆದಿದ್ದರು. ಬಿಗ್ಬಾಸ್ಗೂ ಬೈದು ಸುದ್ದಿ ಆಗಿದ್ದರು. ಬಳಿಕ ಕ್ಷಮೆ ಕೇಳಿದ್ದರು. ಇನ್ನು ಹಂಸ ಜೊತೆಗೆ ಫ್ಲರ್ಟ್ ಮಾಡುವುದರಿಂದ ಎಲ್ಲರ ಹುಬ್ಬೇರಿಸಿದ್ದರು. ಆದರೆ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ಮಾತನಾಡಿದ್ದಾರೆ ಎನ್ನುವ ಕಾರಣಕ್ಕೆ ಜಗದೀಶ್ ಅವರು ಮನೆಯಿಂದ ಹೊರ ಬರಬೇಕಾದ ಶಿಕ್ಷೆ ಎದುರಿಸಿದರು.

ಜಗದೀಶ್ ಅವರನ್ನು ತಳ್ಳಿದ ಕಾರಣಕ್ಕೆ ರಂಜಿತ್ ಕೂಡ ಬಿಗ್ಬಾಸ್ ಮನೆಯಿಂದ ಗೇಟ್ ಪಾಸ್ ಪಡೆದಿದ್ದರು. ಹೀಗೆ ದಿಢೀರನೇ ಬಿಗ್ಬಾಸ್ ಮನೆಯಿಂದ ಇಬ್ಬರೂ ಸ್ಪರ್ಧಿಗಳು ಹೊರ ಬಂದು ಅಚ್ಚರಿ ಮೂಡಿಸಿದ್ದರು. ಸೀಸನ್ ಮೊದಲ ವಾರದಲ್ಲೇ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದರು. ಬಳಿಕ ದಸರಾ ವೀಕೆಂಡ್ ಎನ್ನುವ ಕಾರಣಕ್ಕೆ 2ನೇ ವಾರ ಎಲಿಮಿನೇಷನ್ ಇರಲಿಲ್ಲ. 3ನೇ ವಾರದ ನಡುವೆಯೇ ಇಬ್ಬರೂ ಮನೆಯಿಂದ ಹೊರ ಬಂದಿದ್ದರು.
ಬಿಗ್ಬಾಸ್ ಮನೆಯಿಂದ ಲಾಯರ್ ಜಗದೀಶ್ ಹೊರಗೆ ಬಂದಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಅವರು ಇಲ್ಲದೇ ಶೋ ನೋಡಲ್ಲ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಭಾನುವಾರದ ಎಪಿಸೋಡ್ನಲ್ಲಿ ಜಗದೀಶ್ ವೀಡಿಯೋ ಬೈಟ್ ಅನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಗಿತ್ತು. ಈ ವೇಳೆ ಜಗದೀಶ್ ಮತ್ತೆ ದೊಡ್ಮನೆ ಒಳಗೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಲು ಬಯಸಿದ್ದರು.
ನಟ ಸುದೀಪ್ ಅವರ ತಾಯಿ ಅಗಲಿಕೆ ಸುದ್ದಿ ಕೇಳಿ ಸುದ್ದಿಗೋಷ್ಠಿ ರದ್ದುಪಡಿಸಿದ್ದರು. ಆದರೂ ಕೆಲ ವಾಹಿನಿಗಳ ಸಂದರ್ಶನದಲ್ಲಿ ಜಗದೀಶ್ ಮಾತನಾಡಿದ್ದಾರೆ. ರಂಜಿತ್ ಜೊತೆ ಒಟ್ಟಿಗೆ ಕೂತು ಮಾತನಾಡಿವುದು ಇದೆ. ಇದಲ್ಲದರ ನಡುವೆ ಇದೀಗ 'ಕಲರ್ಸ್ ಕನ್ನಡ' ವಾಹಿನಿಯ 'ಸವಿರುಚಿ' ಕಾರ್ಯಕ್ರಮದಲ್ಲಿ ಜಗದೀಶ್ ಭಾಗಿ ಆಗಿದ್ದಾರೆ. ಅದರ ಪ್ರೋಮೊ ಹೊರಬಿದ್ದಿದೆ.
ಬಿಗ್ಬಾಸ್ ಮನೆಯಲ್ಲಿ ಜಗದೀಶ್ ಅವರನ್ನು ವೀಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಜಗ್ಗು ಇಲ್ಲದೇ ಮನರಂಜನೆ ಇಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಜಗದೀಶ್ ಮಾಡಿದ ತಪ್ಪಿಗೆ ಸುದೀಪ್ ಸರ್ ಕ್ಲಾಸ್ ತಗೊಂಡಿದ್ದು ಆಯಿತು, ಮತ್ತೆ ಅವರನ್ನು ವಾಪಸ್ ಕರೆಸಿ ಎಂದು ಮನವಿ ಮಾಡುತ್ತಿದ್ದಾರೆ. ಜಗದೀಶ್ ಮನೆಗೆ ವಾಪಸ್ ಬರದ ಹೊರತು ನಾವು ಶೋ ನೋಡಲ್ಲ ಎನ್ನುವವರು ಇದ್ದಾರೆ. ಮತ್ತೆ ಕರೆಸುವಂತೆ ಮನವಿ ಮಾಡುತ್ತಿದ್ದಾರೆ.
ಜಗದೀಶ್ ಹಾಗೂ ರಂಜಿತ್ ಬಿಗ್ಬಾಸ್ ಮನೆಯಿಂದ ಹೊರ ಬಂದ ಬಳಿಕ ಗಾಯಕ ಹನುಮಂತ ದೊಡ್ಮನೆ ಒಳಗೆ ಹೋಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶಿಸಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ತಮ್ಮ ಹಾಸ್ಯಪ್ರಜ್ಞೆಯಿಂದ ಗಮನ ಸೆಳೆಯುತ್ತಿದ್ದಾರೆ.
'ಸವಿರುಚಿ' ಕಾರ್ಯಕ್ರಮದಲ್ಲಿ ಕೂಡ ಬಿಗ್ಬಾಸ್ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ. ಹಂಸಾ ಬಗ್ಗೆ ನಿರೂಪಕಿ ಜಾನ್ವಿ ಕೇಳಿದ ಪ್ರಶ್ನೆಗಳಿಗೆ ಜಗದೀಶ್ ಉತ್ತರಿಸಿದ್ದಾರೆ. ಸದ್ಯ ಪ್ರೋಮೋ ಸಖತ್ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಕಾರ್ಯಕ್ತಮ ಪ್ರಸಾರವಾಗಲಿದೆ. ಇದೆಲ್ಲದರ ನಡುವೆ ಜಗದೀಶ್ ಮತ್ತೆ ದೊಡ್ಮನೆ ಒಳಗೆ ಹೋಗ್ತಾರಾ? ಎಂದು ಕಾದು ನೋಡಬೇಕಿದೆ.


Click it and Unblock the Notifications











