ಬಿಗ್ಬಾಸ್ನಲ್ಲಿ ಪಕ್ಷಪಾತವಿದೆ, ಶೋ ಪಾರದರ್ಶಕವಲ್ಲ: ಮಾಜಿ ಸ್ಪರ್ಧಿ
ಭಾರತದ ಟಾಪ್ ರಿಯಾಲಿಟಿ ಶೋಗಳಲ್ಲಿ ಒಂದು 'ಬಿಗ್ಬಾಸ್'. ಭಾರತದ ಹಲವು ಭಾಷೆಗಳಲ್ಲಿ ಈ ಶೋ ಪ್ರಸಾರವಾಗುತ್ತಿದೆ ಮತ್ತು ಉತ್ತಮ ಟಿಆರ್ಪಿಯನ್ನೇ ಗಳಿಸುತ್ತಿದೆ.
ಆದರೆ ಬಿಗ್ಬಾಸ್ ಶೋ ಆರಂಭವಾದಾಗಿನಿಂದಲೂ ಈ ಶೋ ಬಗ್ಗೆ ಅನುಮಾನವಂತೂ ಇದ್ದೇ ಇದೆ. ದಿನವೆಲ್ಲ ನಡೆಯುವ ಕಾರ್ಯವನ್ನು ಎಡಿಟ್ ಮಾಡಿ ಒಂದು ಗಂಟೆಯಲ್ಲಿ ಪ್ರಸಾರ ಮಾಡಿ ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ಮೂಡಿಸುವ ಕಾರ್ಯಕ್ರಮವಿದು.
ಹಾಗಾಗಿ ಆಯೋಜಕರು ತಮಗೆ ಬೇಕಾದವರ ಬಗ್ಗೆ ಬೇಕಾದ ರೀತಿಯಲ್ಲಿ ಅಭಿಪ್ರಾಯ ಮೂಡಿಸುವ ಸಾಧ್ಯತೆ ಇದೆ. ಕೆಲವು ಬಾರಿ ಕೆಲವು ಸ್ಪರ್ಧಿಗಳ ಪರವಾಗಿ ಆಯೋಜಕರು ನಿಂತಿದ್ದಾರೆ. ಕೆಲವರ ಪರವಾಗಿ ಮೃದುವಾಗಿ ವರ್ತಿಸಿ, ಕೆಲವರ ವಿರುದ್ಧ ಹಾರ್ಷ್ ಆಗಿ ವರ್ತಿಸುತ್ತಾರೆ. ಒಳ್ಳೆಯ ಸ್ಪರ್ಧಿಗಳನ್ನು ಸಹ ಸೋಲಿಸುತ್ತಾರೆ ಎಂಬೆಲ್ಲ ಮಾತುಗಳು ಆಗಾಗ್ಗೆ ಹರಿದಾಡುತ್ತಲೇ ಇರುತ್ತವೆ. ಇದೀಗ ಬಿಗ್ಬಾಸ್ ಮಾಜಿ ಸ್ಪರ್ಧಿಯೊಬ್ಬ ಇದೇ ರೀತಿ ಮಾತಾಡಿದ್ದಾರೆ.

ಹಿಂದಿ ಬಿಗ್ಬಾಸ್ 16 ಪ್ರಸ್ತುತ ನಡೆಯುತ್ತಿದ್ದು, ಮಾಮೂಲಿನಂತೆ ಸಲ್ಮಾನ್ ಖಾನ್ ಈ ಶೋ ಅನ್ನು ನಡೆಸಿಕೊಡುತ್ತಿದ್ದಾರೆ. ಶೋ ಪ್ರಾರಂಭವಾಗಿ 90 ದಿನಗಳಾಗಿವೆ. ಫಿನಾಲೆಗೆ ಹತ್ತಿರವಿದ್ದಾಗ ಶೋನ ಸ್ಪರ್ಧಿ ವಿಕಾಸ್ ಮನಕ್ತಲ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ವಿಕಾಸ್, 69ನೇ ದಿನ ಶೋಗೆ ಜಾಯಿನ್ ಆಗಿದ್ದರು, 90ನೇ ದಿನ ಎಲಿಮಿನೇಟ್ ಆಗಿದ್ದಾರೆ.
ಮನೆಯಿಂದ ಹೊರಗೆ ಬಂದಿರುವ ವಿಕಾಸ್, ಮಾಧ್ಯಮಗಳ ಬಳಿ ಮಾತನಾಡಿದ್ದು, ಬಿಗ್ಬಾಸ್ ಶೋನಲ್ಲಿ ಪಕ್ಷಪಾತವಿದೆ ಎಂದಿದ್ದಾರೆ. ''ಪ್ರತಿ ವರ್ಷವೂ ಬಿಗ್ಬಾಸ್ ಶೋ ಬಗ್ಗೆ ಈ ರೀತಿಯ ಅನುಮಾನಗಳು ಸಾಮಾನ್ಯ. ಈ ಬಾರಿಯಂತೂ ಸಾಮಾನ್ಯ ಜನರೂ ಸಹ ಈ ಬಗ್ಗೆ ಮಾತನಾಡುತ್ತಿದ್ದಾರೆ. ಬಿಗ್ಬಾಸ್ನಲ್ಲಿ ಪಕ್ಷಪಾತವಿದೆ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಬಿಗ್ಬಾಸ್ ಆಡಿಸುವ ರೀತಿ ನೋಡಿದರೆ ಇದು ನಿಜ ಎನಿಸುತ್ತದೆ. ಅದನ್ನೆಲ್ಲ ನಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅದು ಅವರದ್ದೇ ಶೋ, ಅವರದ್ದೇ ವೇದಿಕೆ ಅವರಿಗೆ ಇಷ್ಟಬಂದಂತೆ ಆಡಿಸುತ್ತಾರೆ, ಇಷ್ಟ ಬಂದವರನ್ನು ಗೆಲ್ಲಿಸುತ್ತಾರೆ'' ಎಂದಿದ್ದಾರೆ.
ಮುಂದುದವರೆದು, ''ಆದರೆ ಶೋ ನವರಿಗೆ ಒಂದು ಗಡಿ, ನಿಯಮಗಳನ್ನಂತೂ ಮಾಡಿಕೊಳ್ಳಬೇಕಾಗುತ್ತದೆ. ನೀವು ಇಷ್ಟೋಂದು ಪಕ್ಷಪಾತಿಗಳಾದರೆ ಜನರಿಗೆ ಶೋ ಬಗ್ಗೆ ಇರುವ ಗೌರವ ಇನ್ನೂ ಕೆಳಗೆ ಕುಸಿದು ಹೋಗುತ್ತದೆ. ಈಗಾಗಲೇ ಅದು ಸಾಕಷ್ಟು ಕುಸಿದಿದೆ'' ಎಂದಿದ್ದಾರೆ.


Click it and Unblock the Notifications











