Bigg Boss 10 Finale: ಈ ಬಾರಿಯ ಬಿಗ್ ಬಾಸ್ ಸೀಸನ್ ಹತ್ತರ ವಿವಾದಗಳು ಇಲ್ಲಿವೆ
ಈ ಬಾರಿಯ ಬಿಗ್ ಬಾಸ್ ಕನ್ನಡ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಬಿಗ್ ಬಾಸ್ ಇಲ್ಲಿಯವರೆಗಿನ ಸೀಸನ್ಗಳಲ್ಲಿ ನಡೆಯದ ಎಷ್ಟೋ ಘಟನೆಗಳು ಈ ಸೀಸನ್ನಲ್ಲಿ ನಡೆದಿದೆ. ಬಿಗ್ ಬಾಸ್ ಸೀಸನ್ ಹತ್ತು ಟಾಸ್ಕ್ , ಮನರಂಜನೆಗಿಂತ ಹೆಚ್ಚಾಗಿ ವಿವಾದಗಳಿಂದಲೇ ಚರ್ಚೆಯಾಗಿದ್ದು ಈ ಸೀಸನ್ನ ವಿಶೇಷ. ವರ್ತೂರ್ ಸಂತೋಷ್ ಬಂಧನ, ತನಿಷಾ ಕುಪ್ಪಂಡ ಅವರ ಮೇಲೆ ಎಫ್ಐಆರ್, ಡ್ರೋನ್ ಪ್ರತಾಪ್ ಆತ್ಮಹತ್ಯೆ ಪ್ರಯತ್ನ ವದಂತಿ ಸೇರಿ ಹಲವು ವಿವಾದಗಳಿದ್ದು ಫಿನಾಲೆಗೂ ಮುನ್ನ ಅವುಗಳನ್ನು ಒಮ್ಮೆ ನೋಡೋಣ.
ವರ್ತೂರ್ ಸಂತೋಷ್ ಹುಲಿ ಉಗುರು ಪೆಂಡೆಂಟ್ ವಿವಾದ
ಹಳ್ಳಿಕಾರ್ ಒಡೆಯ ಎಂದು ಕರೆಯಲಾಗುವ ರೈತ ವರ್ತೂರು ಸಂತೋಷ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಿದ್ದರು. ಬಿಗ್ ಬಾಸ್ ಕಾರ್ಯಕ್ರಮ ಪ್ರವೇಶಿಸುವಾಗ ಮತ್ತು ದೊಡ್ಮನೆಯಲ್ಲಿ ಅವರು ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಸಕತ್ ವಿವಾದ ಸೃಷ್ಠಿಸಿತ್ತು. ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿ ಅವರನ್ನು ಬಿಗ್ ಬಾಸ್ ಸೆಟ್ನಿಂದಲೇ ಬಂಧಿಸಲಾಗಿತ್ತು. ಬಳಿಕ ಅವರು ಜಾಮೀನು ಪಡೆದು ಮನೆಗೆ ವಾಪಸ್ ಆದರು. ಇದರ ಪ್ರಭಾವ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರ ಮೇಲೂ ಬಿದ್ದಿತ್ತು.

ತನಿಶಾ ಕುಪ್ಪಂಡ ವಿರುದ್ಧ ಎಫ್ಐಆರ್
ಭೋವಿ ಸಮುದಾಯದ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಬಿಗ್ ಬಾಸ್ ಸ್ಪರ್ಧಿ ತನಿಶಾ ಕುಪ್ಪಂಡ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಖಿಲ ಕರ್ನಾಟಕ ಭೋವಿ ಸಮುದಾಯ ಸಂಘಟನೆಯ ರಾಜ್ಯಾಧ್ಯಕ್ಷೆ ಪಿ ಪದ್ಮಾ ನೀಡಿದ ದೂರಿನ ಮೇರೆಗೆ ಬೆಂಗಳೂರು ಹೊರವಲಯದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಾಗಿತ್ತು.
ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆ ಪ್ರವೇಶ
ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದು, ವಿವಾದ ಮತ್ತು ಟೀಕೆಗಳನ್ನು ಹುಟ್ಟುಹಾಕಿತ್ತು. ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ಕಳವಳ ವ್ಯಕ್ತಪಡಿಸಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ದೂರು ಸಲ್ಲಿಸಿತ್ತು. ಶಾಸಕರು ತಮ್ಮ ಕ್ಷೇತ್ರದ ಜವಾಬ್ದಾರಿಯನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಪ್ರೇಕ್ಷಕರು ಕೂಡ ಜವಾಬ್ದಾರಿಯುತ ಸ್ಥಾನದಲ್ಲಿರುವ ಒಬ್ಬ ಶಾಸಕ ಒಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಕ್ಕೆ ಆಕ್ಷೇಪಿಸಿದ್ದರು.

ಡ್ರೋನ್ ಪ್ರತಾಪ್ ಆತ್ಮಹತ್ಯೆ ಪ್ರಯತ್ನ ವಂದತಿ
ಈಗ ಫೈನಲಿಸ್ಟ್ ಆಗಿರುವ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಸುದ್ದಿ ಆಗಿತ್ತು. ಅದಕ್ಕೆ ಕಾರಣ ಅವರು ಆಸ್ಪತ್ರೆಗೆ ದಾಖಲಾಗಿದ್ದು. ಆದರೆ, ಅವರು ಊಟ ಬಿಟ್ಟ ಕಾರಣ ಅವರಿಗೆ ಫುಡ್ ಪಾಯ್ಸನ್ ಆಗಿತ್ತು ಎಂದು ಬಿಗ್ ಬಾಸ್ ತಂಡ ಮತ್ತು ವೈದ್ಯರು ಸ್ಪಷ್ಟನೆ ನೀಡಿದ್ದರು.
ವಿನಯ್- ಸಂಗೀತಾ ಬಳೆ ವಿವಾದ
ಇನ್ನು, ಬಿಗ್ ಬಾಸ್ ಮನೆಯಲ್ಲಿ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಾಗಿದ್ದು ಬಳೆ ವಿಷಯ. ಹಳ್ಳಿಯ ಟಾಸ್ಕ್ ಆಡುವಾಗ ವಿನಯ್ ಗೌಡ ಕಾರ್ತಿಕ್ಗೆ 'ಬಳೆ ಹಾಕ್ಕೊಂಡೊರ್ ತರ ಆಡಬೇಡ, ಗಂಡ್ಸಿನ ತರ ಆಡು' ಎಂದಿದ್ದರು. ಇದಕ್ಕೆ ಸಂಗೀತಾ ತಮ್ಮ ಬಳೆ ಹಾಕಿದ ಕೈ ತೋರಿಸಿ ಸಕತ್ ಆಗಿ ತಿರುಗೇಟ್ ನೀಡಿದ್ದರು. ಇದು ಹೊರಗಡೆ ಕೂಡ ಚರ್ಚೆಯಾಗಿತ್ತು, ಸುದೀಪ್ ಇದನ್ನು ಖಂಡಿಸಿದ್ದರು.
ರಕ್ಷಕ್ ಮತ್ತು ಸುದೀಪ್ ವಿವಾದ
ಬಿಗ್ ಬಾಸ್ ನಿಂದ ಎಲಿಮೆನೇಟ್ ಆದ ಮೇಲೆ ರಕ್ಷಕ್ ಬುಲೆಟ್ ನೀಡಿದ್ದ ಹಲವು ಸಂದರ್ಶನಗಳು ವಿವಾದಕ್ಕೆ ಒಳಗಾದವು. ಬಿಗ್ ಬಾಸ್ ಮತ್ತು ಕಿಚ್ಚ ಸುದೀಪ್ ಬಗ್ಗೆ ಏನೇನೋ ಮಾತಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ವೀಕೆಂಡ್ ಸಂಚಿಕೆಯಲ್ಲಿ ಸುದೀಪ್ ಕೂಡ ಇದನ್ನು ಪ್ರಸ್ತಾಪಿಸಿದ್ದರು.


Click it and Unblock the Notifications











