ಬಿಗ್ಬಾಸ್ ಕನ್ನಡ 10ರ ವಿನ್ನರ್ ಈಗ ನಿರೂಪಕ; ಇದೇ ಮೊದಲ ಬಾರಿಗೆ ರಿಯಾಲಿಟಿ ಶೋಗೆ ಆಂಕರ್
ಕಾರ್ತಿಕ್ ಮಹೇಶ್ 'ಬಿಗ್ ಬಾಸ್ ಕನ್ನಡ ಸೀಸನ್ 10'ರ ನಿರೂಪಕರಾಗಿ ಮೋಡಿ ಮಾಡಿದ್ದ ಮಹೇಶ್ ಕಾರ್ತಿಕ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಧಾರಾವಾಹಿ, ಸಿನಿಮಾ ಹಾಗೂ ಬಿಗ್ಬಾಸ್ ಅಂತಹ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಕಾರ್ತಿಕ್ ಇದೀಗ ಇದೇ ಮೊದಲ ಬಾರಿಗೆ ನಿರೂಪಕನಾಗಿ ನಿಮ್ಮನ್ನು ರಂಜಿಸಲಿದ್ದಾರೆ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗಲಿರುವ ಹೊಚ್ಚ ಹೊಸ ರಿಯಾಲಿಟಿ ಶೋ 'ಸುವರ್ಣ ಸೆಲೆಬ್ರಿಟಿ ಲೀಗ್'ನ ಸಾರಥ್ಯವನ್ನು ಇವರು ವಹಿಸಿಕೊಳ್ಳಲಿದ್ದಾರೆ.
ಅಂದ ಹಾಗೇ ಬಿಗ್ ಬಾಸ್ಗಿಂತಲೂ ಮೊದಲು ಕಾರ್ತಿಕ್ ಕೊನೆಯ ಬಾರಿ ನಟಿಸಿದ್ದು 'ಅಂತರಪಟ' ಧಾರಾವಾಹಿಯಲ್ಲಿ. 'ಅಂತರಪಟ' ಧಾರಾವಾಹಿಯಲ್ಲಿ ನಾಯಕಿಯ ಗೆಳೆಯ ಆಗಿ ನಟಿಸಿದ್ದ ಕಾರ್ತಿಕ್ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದು ಬಿಗ್ ಬಾಸ್ ಸ್ಪರ್ಧಿಯಾದ ಬಳಿಕ. ತಮ್ಮ ನಡೆ, ನುಡಿಯ ಜೊತೆಗೆ ಕೊಟ್ಟಿರುವಂತಹ ಟಾಸ್ಕ್ಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಇವರು ಪ್ರಸ್ತುತ ಸೀಸನ್ನ ವಿನ್ನರ್ ಆಗಿ ಹೊರ ಹೊಮ್ಮಿದ್ದರು.

'ಅಕ್ಕ', 'ಮಹಾಕಾಳಿ', 'ದೇವಯಾನಿ', 'ಇಂತಿ ನಿಮ್ಮ ಆಶಾ', 'ಪುಟ್ಟಕ್ಕನ ಮಕ್ಕಳು', 'ರಾಜಿ' ಧಾರಾವಾಹಿಗಳಲ್ಲಿ ಅಭಿನಯಿಸಿರುವ ಕಾರ್ತಿಕ್ ನಟಿಸಿರುವ ಹೆಚ್ಚಿನ ಧಾರಾವಾಹಿಗಳಲ್ಲಿ ಪೋಷಕ ಪಾತ್ರಕ್ಕೆ ಜೀವ ತುಂಬಿದ್ದೇ ಹೆಚ್ಚಾದರೂ, ನಟನೆಯ ಮೂಲಕ ಮೋಡಿ ಮಾಡಿರುವ ಹುಡುಗ. ಮೈಸೂರು ಮೂಲದ ಕಾರ್ತಿಕ್ಗೆ ಸಣ್ಣ ವಯಸ್ಸಿನಿಂದಲೂ ನಟನಾಗಿ ಕಾಣಿಸಿಕೊಳ್ಳುವ ಮಹಾದಾಸೆ.
ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿರುವ ಕಾರ್ತಿಕ್ ಅವರು ಕಿರುತೆರೆಗೆ ಪಾದಾರ್ಪಣೆ ಮಾಡಿದ್ದು 'ಖುಷಿ' ಧಾರಾವಾಹಿಯ ಮೂಲಕ. ಒಂದಷ್ಟು ಆಡಿಶನ್ಗಳನ್ನು ನೀಡಿದ ಬಳಿಕ 'ಖುಷಿ' ಧಾರಾವಾಹಿಗೆ ಆಯ್ಕೆಯಾಗಿದ್ದರು ಕಾರ್ತಿಕ್ ಮಹೇಶ್. ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಕಾರ್ತಿಕ್ ಮಹೇಶ್ ಸಾಗರ್ ಪುರಾಣಿಕ್ ನಿರ್ದೇಶನದ 'ಡೊಳ್ಳು' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.
'ಡೊಳ್ಳು' ಸಿನಿಮಾದ ಪಾತ್ರಕ್ಕಾಗಿ ಸ್ವತಃ ಡೊಳ್ಳು ಬಡಿಯುವುದನ್ನು ಕರಗತ ಮಾಡಿಕೊಂಡಿದ್ದರು ಕಾರ್ತಿಕ್ ಮಹೇಶ್. ಮೊದಲ ಸಿನಿಮಾದ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಕೂಡಾ ಇವರು ಪಡೆದುಕೊಂಡಿದ್ದರು. ಇದೀಗ ಇದೇ ಮೊದಲ ಬಾರಿಗೆ ನಿರೂಪಕನಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿರುವ ಕಾರ್ತಿಕ್ ಮಹೇಶ್ ಹೊಸ ಅವತಾರದ ಮೂಲಕ ಪ್ರೇಕ್ಷಕರ ಮನದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುತ್ತಾರಾ ಎಂಬುದು ಪ್ರಶ್ನೆಯಾಗಿದೆ.

ಇನ್ನು 'ಸುವರ್ಣ ಸೆಲೆಬ್ರಿಟಿ ಲೀಗ್' ರಿಯಾಲಿಟಿ ಶೋ ಇದೇ ಸೆಪ್ಟೆಂಬರ್ 15 ರಂದು ಶುರುವಾಗಲಿದೆ. ಕಳೆದ ಒಂದು ತಿಂಗಳಿನಿಂದ ಈ ರಿಯಾಲಿಟಿ ಶೋವಿನ ಪ್ರೋಮೋ ಹರಿದಾಡುತ್ತಿದ್ದು, ಸಾಕಷ್ಟು ಕುತೂಹಲವನ್ನು ವೀಕ್ಷಕರಲ್ಲಿ ಮೂಡಿಸಿದೆ. ವಿನಯ್ ಗೌಡ ಹಾಗೂ ಚಂದು ಗೌಡ ಎರಡು ತಂಡವನ್ನು ಲೀಡ್ ಮಾಡಲಿದ್ದಾರೆ.
ತನಿಷಾ ಕುಪ್ಪಂಡ, ನಮ್ರತಾ ಗೌಡ, ಬುಲೆಟ್ ರಕ್ಷಕ್, ಪ್ರಿಯಾಂಕಾ ಶಿವಣ್ಣ, ಆಸೆ ಧಾರಾವಾಹಿ ನಟಿ ಪ್ರಿಯಾಂಕಾ ಡಿ ಎಸ್, ಆಸೆ ಧಾರಾವಾಹಿ ನಟ ನಿನಾದ್ ಹರಿತ್ಸ, ಗೌರಿಶಂಕರ ಧಾರಾವಾಹಿಯ ಅಭಿಜ್ಞಾ ಭಟ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಸ್ಪರ್ಧಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











