BBK 11: ಕಿಚ್ಚನ ಹೆಸರು ಪ್ರಸ್ತಾಪಿಸಿದ ಭಟ್ರು; ಅಸಲಿ ವಿಷಯ ಗೊತ್ತಾಗುತ್ತಾ?
ಸುದೀಪ್ ಅನುಪಸ್ಥಿತಿಯಲ್ಲಿ ಈ ವಾರ ಬಿಗ್ಬಾಸ್ ಕನ್ನಡ ಪಂಚಾಯ್ತಿ ಶುರುವಾಗಿದೆ. ನಿರ್ದೇಶಕ ಯೋಗರಾಜ್ ಭಟ್ ವಾರಾಂತ್ಯದಲ್ಲಿ ವಿಶೇಷ ಅತಿಥಿಯಾಗಿ ದೊಡ್ಮನೆ ಒಳಗೆ ಪ್ರವೇಶಿಸಿದ್ದಾರೆ. ತಮ್ಮ ಮಾತಿನ ಮೂಲಕ ಮೋಡಿ ಮಾಡಿದ್ದಾರೆ. ಸುದೀಪ್ ಬಗ್ಗೆ ಭಟ್ರು ವಿಷಯ ಪ್ರಸ್ತಾಪಿಸಿದ್ದಾರೆ.
ಕಳೆದ ಭಾನುವಾರ(ಅಕ್ಟೋಬರ್ 20) ನಟ ಸುದೀಪ್ ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಆ ನೋವಿನಿಂದ ಇನ್ನು ಕಿಚ್ಚ ಹೊರ ಬಂದಿಲ್ಲ. ಅದೇ ಕಾರಣಕ್ಕೆ ಈ ವೀಕೆಂಡ್ ಬಿಗ್ಬಾಸ್ ಶೋ ನಿರೂಪಣೆಗೆ ಹೋಗಲಿಲ್ಲ. ಅದನ್ನು ನಿಭಾಯಿಸಲು ಯೋಗರಾಜ್ ಭಟ್ರನ್ನು ಆಯೋಜಕರು ಮನೆ ಒಳಗೆ ಕಳುಹಿಸಿದ್ದಾರೆ.

ಬಿಗ್ಬಾಸ್ ಮನೆಯಿಂದ ಹೊರಗಡೆ ನಡೆಯುವ ಸಂಗತಿಗಳ ಬಗ್ಗೆ ಸ್ಪರ್ಧಿಗಳಿಗೆ ಯಾವುದೇ ಮಾಹಿತಿ ಇರುವುದಿಲ್ಲ. ಫೋನ್, ಮೊಬೈಲ್, ನ್ಯೂಸ್ ಪೇಪರ್ ಯಾವುದಕ್ಕೂ ಅವಕಾಶವಿಲ್ಲ. ಹೊರಗಿನ ಪ್ರಪಂಚದಿಂದ ಸಂಪರ್ಕ ಕಡಿತವಾಗಿರುತ್ತದೆ. ಹಾಗಾಗಿ ಸುದೀಪ್ ಅವರ ತಾಯಿ ಸರೋಜಮ್ಮ ಕೊನೆಯುಸಿರೆಳೆದ ವಿಚಾರ ಕೂಡ ಮನೆಮಂದಿಗೆ ಗೊತ್ತಿಲ್ಲ. ಈ ವಿಚಾರವನ್ನು ಯೋಗರಾಜ್ ಭಟ್ ಮನೆಒಳಗೆ ಹೇಳುತ್ತಾರಾ? ಇಲ್ವಾ? ಎನ್ನುವ ಕುತೂಹಲ ಮುಂದುವರೆದಿದೆ.
ವೀಕೆಂಡ್ನಲ್ಲಿ ಸುದೀಪ್ ಬಿಗ್ಬಾಸ್ ಮನೆ ವೇದಿಕೆಗೆ ಹೋಗುತ್ತಾರೆ. ಮನೆ ಒಳಗಿನ ಟಿವಿ ಮೂಲಕ ಮನೆ ಮಂದಿ ಜೊತೆ ಮಾತನಾಡುತ್ತಾರೆ. ಸ್ಪರ್ಧಿಗಳ ಸರಿ, ತಪ್ಪುಗಳು ತುಲನೆ ಮಾಡುತ್ತಾರೆ. ಚೆನ್ನಾಗಿ ಆಡಿದವರಿಗೆ ಚಪ್ಪಾಳೆ, ತಪ್ಪು ಮಾಡಿದವರಿಗೆ ಮಾತಿ ಪೆಟ್ಟು ಬೀಳುತ್ತದೆ. ಕಳೆದ ವಾರ ತಮ್ಮ ತಾಯಿಯ ಆರೋಗ್ಯಸ್ಥಿತಿ ಗಂಭೀರವಾಗಿ ಇದ್ದರೂ ಸುದೀಪ್ ವೇದಿಕೆ ಏರಿದ್ದರು.
ತಾಯಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೂ ಕರ್ತವ್ಯ ಮರೆಯಬಾರದು ಎಂದು ತಮ್ಮ ಜವಾಬ್ದಾರಿ ನಿಭಾಯಿಸಿದ್ದರು. ಕಿಚ್ಚ ವೇದಿಕೆಯಲ್ಲಿ ಇದ್ದಾಗಲೇ ತಾಯಿಯ ಅಗಲಿಕೆ ಸುದ್ದಿ ಅವರಿಗೆ ತಲುಪಿತು ಎನ್ನಲಾಗುತ್ತದೆ. ಆದರೂ ನಿರೂಪಣೆ ಮುಂದುವರೆಸಿದ್ದರು. ಮುಖ್ಯವಾಗಿ ಕಳೆದ ವಾರ ಮನೆ ಮಂದಿಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಜಗದೀಶ್ ಹಾಗೂ ರಂಜಿತ್ ವಾರದ ನಡುವೆಯೇ ಮನೆಯಿಂದ ಹೊರಬಂದ ವಿಚಾರದ ಬಗ್ಗೆ ಚರ್ಚೆ ಆಗಿತ್ತು.
ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಜಗದೀಶ್ ಮನೆಯಿಂದ ಹೊರಬರಬೇಕಾ ಶಿಕ್ಷೆ ಎದುರಿಸಿದರು. ಇನ್ನು ಜಗದೀಶ್ ಅವರನ್ನು ತಳ್ಳಿದ ಕಾರಣಕ್ಕೆ ರಂಜಿತ್ ಸಹ ಹೊರ ಬಂದರು. ಇಬ್ಬರಿಗೂ ಆರಂಭದಲ್ಲೇ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಇನ್ನು ಜಗದೀಶ್ ಅವರು ಪ್ರವೋಕ್ ಆಗುವಂತೆ ಮಾತನಾಡಿದ ಹಂಸಾ, ಚೈತ್ರಾಗೂ ಸುದೀಪ್ ಖಡಕ್ ಕೌಂಟರ್ ಕೊಟ್ಟರು.
ಮನೆ ಒಳಗೆ ಇರುವ ಹೆಣ್ಣುಮಕ್ಕಳ ಬಗ್ಗೆ ಜಗದೀಶ್ ಕೆಟ್ಟದಾಗಿ ಮಾತನಾಡಿದರೂ ಎಂದು ಹೇಳುತ್ತಿದ್ದಾರೆ. ಜಗದೀಶ್ ಕುರಿತು ನೀವು ಆಡಿದ ಒಂದು ಮಾತು ಕೂಡ ತಾಯಿ ಅಂದ್ರೆ ಹೆಣ್ಣಿಗೆ ಮಾಡಿದ ಅವಮಾನ ಅಲ್ಲವೇ ಎಂದು ಕಿಚ್ಚ ಬಹಳ ಖಾರವಾಗಿಯೇ ಹೇಳಿದ್ದರು. ಅಂದಹಾಗೆ ಸುದೀಪ್ ಅವರ ತಾಯಿ ನಿಧನದ ವಿಚಾರ ಸ್ಪರ್ಧಿಗಳಿಗೆ ಗೊತ್ತಿಲ್ಲ. ಯೋಗರಾಜ್ ಭಟ್ ಬಂದು ಎಲ್ಲರಿಗೂ ಬುದ್ಧಿವಾದ ಹೇಳಿದ್ದಾರೆ.
ವೀಕ್ಷಕರು ನಿಮ್ಮನ್ನು ಯಾವ ರೀತಿ ನೋಡುತ್ತಿದ್ದಾರೆ? ನೀವು ಯಾವ ರೀತಿ ಆಡುತ್ತಿದ್ದೀರಾ ಗೊತ್ತಾ? ಬದಲಾಗದಿದ್ದರೆ ಕಷ್ಟ ಎಂದು ತಿಳಿಸಿದ್ದಾರೆ. ಇದೇ ವೇಳೆ "ಇವತ್ತು ಸುದೀಪ್ ಸರ್ ಬಂದಿಲ್ಲ. ಅದಕ್ಕೆ ನಾನು ಬಂದಿದ್ದೀನಿ. ಅವರು ಯಾಕೆ ಬಂದಿಲ್ಲ ಎನ್ನುವುದನ್ನು ನಂತರ ಹೇಳ್ತೀನಿ" ಎಂದು ಭಟ್ರು ಹೇಳಿದ್ದಾರೆ. ಆಗ ಕೂಡ ಸುದೀಪ್ ಅವರು ಯಾಕೆ ಬರಲಿಲ್ಲ? ಎಂದು ಮನೆ ಮಂದಿ ಕೇಳಿಲ್ಲ. ನಾಳಿನ ಎಪಿಸೋಡ್ನಲ್ಲಿ ಆ ವಿಚಾರವನ್ನ ಭಟ್ರು ಮನೆಮಂದಿಗೆ ಹೇಳ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











