BBK 11: ಟ್ಯಾಕ್ಸ್ ಕಳೆದು ಹನುಮಂತಗೆ ಸಿಗುವ ಹಣ ಎಷ್ಟು? ಈಗ್ಲೇ ಬಹುಮಾನದ ಹಣ ಸಿಗಲ್ವಾ?
ಬಿಗ್ಬಾಸ್ ಕನ್ನಡ ಸೀಸನ್ 11 ಯಶಸ್ವಿಯಾಗಿ ಮುಗಿದಿದೆ. ಹನುಮಂತ ವಿನ್ನರ್ ಆಗಿ ಟ್ರೋಫಿ ಎತ್ತಿ ಹಿಡಿದಿದ್ದಾನೆ. ಇದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಬರೋಬ್ಬರಿ 5,23,89,313 ಮತಗಳು ವಿನ್ನರ್ಗೆ ಸಿಕ್ಕಿದೆ. 2,53,01,251 ಮತಗಳನ್ನು ಪಡೆದ ತ್ರಿವಿಕ್ರಮ್ 2ನೇ ಸ್ಥಾನಕ್ಕೆ ತೃಪ್ತಿ ಪಡುವಂತಾಗಿದೆ.
ಫಿನಾಲೆ ಹಂತಕ್ಕೆ ಏರಿದ 6 ಜನ ಸ್ಪರ್ಧಿಗಳಿಗೆ ನಗದು ಬಹುಮಾನ ಕೂಡ ಸಿಕ್ಕಿದೆ. ಅದರಲ್ಲೂ ಟ್ರೋಫಿ ಎತ್ತಿ ಹಿಡಿದ ಹನುಮಂತನಿಗೆ ಕಾನ್ಫಿಡೆಂಟ್ ಗ್ರೂಪ್ ಕಡೆಯಿಂದ ಬರೋಬ್ಬರಿ 50 ಲಕ್ಷ ರೂಪಾಯಿ ಬಹುಮಾನ ಸಿಗುತ್ತಿದೆ. ಈ ಬಾರಿ ಬಿಗ್ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳಲ್ಲಿ ಹನುಮಂತ ಒಂದು ಲೆಕ್ಕದಲ್ಲಿ ಅಜಾತಶತ್ರು ಎನಿಸಿಕೊಂಡುಬಿಟ್ಟಿದ್ದರು. ವೀಕ್ಷಕರಿಗೆ ಹಾಗೆ ಅನ್ನಿಸಿದ್ದು ನಿಜ. ಸಾಮಾನ್ಯವಾಗಿ ಒಬ್ಬೊಬ್ಬ ಸ್ಪರ್ಧಿಯನ್ನು ಒಬ್ಬೊಬ್ಬರು ಇಷ್ಟಪಡುತ್ತಾರೆ. ಗೆಲ್ಲಬೇಕು ಎಂದು ಬಯಸುತ್ತಾರೆ. ಆದರೆ ಹನುಮಂತ ಗೆಲ್ಲಬೇಕು ಎನ್ನುವುದು ಬಹುತೇಕರ ಬಯಕೆ ಆಗಿತ್ತು.

ಮುಗ್ಧ, ತನ್ನ ನ್ಯಾಯೋಚಿತ ಆಟದಿಂದ ಹನುಮಂತ ಎಲ್ಲರ ಮನಗೆದ್ದಿದ್ದರು. ಬಿಗ್ಬಾಸ್ ವೇದಿಕೆಗೆ ಏರಿದರೂ ತನ್ನನ್ನು ತಾನು ಬದಲಿಸಿಕೊಳ್ಳಲಿಲ್ಲ. ಗ್ರ್ಯಾಂಡ್ ಫಿನಾಲೆಗೂ ಕೂಡ ಲುಂಗಿ ಪಂಚೆಯಲ್ಲೇ ಬಂದಿದ್ದರು. ಹನುಮಂತನಿಗೆ ಸಿಕ್ಕ ಮತಗಳನ್ನು ನೋಡಿ ಬಿಗ್ಬಾಸ್ ಆಯೋಜಕರು ಶಾಕ್ ಆದಂತೆ ಕಾಣುತ್ತಿದೆ. ಹಾಗಾಗಿ ಮುಲಾಜಿಲ್ಲದೇ ಚಿಲ್ಲೂರ ಬಡ್ನಿ ಹೈದನನ್ನು ವಿಜೇತ ಎಂದು ಘೋಷಿಸಲಾಗಿದೆ. ಇದನ್ನು ವೀಕ್ಷಕರು ಕೂಡ ಸ್ವಾಗತಿಸಿದ್ದಾರೆ.
ಪ್ರತಿಬಾರಿ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ಮುಗಿದ ಬಳಿಕ ವಿಜೇತರ ಆಯ್ಕೆ ಬಗ್ಗೆ ಕೊಂಚ ಅಪಸ್ವರ ಕೇಳಿಬರುತ್ತಿತ್ತು. ಇವರಿಗಿಂತ ಅವರು ಗೆಲ್ಲಬೇಕಿತ್ತು ಎಂದು ಕೆಲವರು ಹೇಳುತ್ತಿದ್ದರು. ಆದರೆ ಈ ಬಾರಿ ಆ ರೀತಿ ಆಗಲಿಲ್ಲ. ಹನುಮಂತನನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ. ಸದ್ಯ ಸ್ಪರ್ಧಿಗಳಿಗೆ ಸಿಕ್ಕ ಬಹುಮಾನದ ಹಣದ ಬಗ್ಗೆ ಭಾರೀ ಚರ್ಚೆ ನಡೀತಿದೆ.
6ನೇ ಸ್ಥಾನ ಪಡೆದ ಭವ್ಯಾ ಗೌಡಗೆ 3.50 ಲಕ್ಷ ರೂಪಾಯಿ ನಗದು ಬಹುಮಾನ ಸಿಕ್ಕಿತ್ತು. ಉಗ್ರಂ ಮಂಜುಗೆ ಕೂಡ 3.50 ಲಕ್ಷ ರೂಪಾಯಿ ಲಭಿಸಿದೆ. 4ನೇ ಸ್ಥಾನ ಪಡೆದ ಮೋಕ್ಷಿತಾ 7 ಲಕ್ಷ ರೂ. ಸಿಕ್ಕಿದೆ. ಸೆಕೆಂಡ್ ರನ್ನರ್ ಅಪ್ ರಜತ್ಗೆ 10 ಲಕ್ಷ ರೂ. ಹಾಗೂ ರನ್ನರ್ ಅಪ್ ತ್ರಿವಿಕ್ರಮ್ಗೆ 15 ಲಕ್ಷ ರೂ. ಲಭಿಸಿದೆ. ಸ್ಪರ್ಧಿಗಳು ಗೆದ್ದ ಅಷ್ಟೂ ಹಣ ನೇರವಾಗಿ ಅವರಿಗೆ ಸಿಗಲ್ಲ. ಅದರಲ್ಲಿ ಮನರಂಜನೆ ತೆರಿಗೆ ಕಳೆದು ಉಳಿದ ಹಣ ಮಾತ್ರ ಸಿಗುತ್ತದೆ.
ಹನುಮಂತ ಲಮಾಣಿ 50 ಲಕ್ಷ ರೂ. ನಗದು ಬಹುಮಾನ ಗೆದ್ದಿದ್ದಾರೆ. ಅದರಲ್ಲಿ ಶೇ. 30ರಷ್ಟು ತೆರಿಗೆ ಕಟ್ ಆಗುತ್ತದೆ. ಅಂದರೆ 50 ಲಕ್ಷದಲ್ಲಿ 14ರಿಂದ 14 ಲಕ್ಷ ಕಳೆದು ಅವರ ಕೈಗೆ 32 ರಿಂದ 34 ಲಕ್ಷ ರೂಪಾಯಿ ಸಿಗಲಿದೆ. ಈ ಕೂಡಲೇ ಹಣ ಅವರ ಕೈ ಸೇರುವುದಿಲ್ಲ. ಅದಕ್ಕೆ 2 ತಿಂಗಳ ಸಮಯ ಬೇಕಾಗಬಹುದು ಎನ್ನಲಾಗ್ತಿದೆ.
ಇನ್ನು ತಮಗೆ ಬಂದ ಬಹುಮಾನದ ಹಣವನ್ನು ವೇದಿಕೆಯಲ್ಲೇ ಉಗ್ರಂ ಮಂಜು ದಾನ ಮಾಡಲು ಮುಂದಾಗಿದ್ದರು. ಆದರೆ ನಿರೂಪಕ ಸುದೀಪ್ ಬುದ್ಧಿ ಹೇಳಿದರು. 2 ಲಕ್ಷ ರೂ. ಸಹಾಯ ಮಾಡುವುದಾಗಿ ಮಂಜು ಹೇಳಿದಾಗ ಆ 2 ಲಕ್ಷ ನಾನು ಸಹಾಯ ಮಾಡುತ್ತೀನಿ. ನೀನು ಗೆದ್ದ ಹಣವನ್ನು ನಿಮ್ಮ ಮನೆಗೆ ಕೊಡು. ನಿಮ್ಮ ಅಪ್ಪನ ಕೈಗೆ ಕೊಡು ಎಂದು ತಿಳಿ ಹೇಳಿದರು. ಆ ಮೂಲಕ ಸುದೀಪ್ ಮತ್ತೊಮ್ಮೆ ಎಲ್ಲರ ಮನಸ್ಸು ಗೆದ್ದರು.


Click it and Unblock the Notifications











