BBK 11: ಗೋಲ್ಡ್ ಸುರೇಶ್ಗೆ ವರ್ತೂರು ಸಂತೋಷ್ ಚಾಲೆಂಜ್ ಮಾಡಿದ್ದೇಕೆ?
ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ ವರ್ತೂರು ಸಂತೋಷ್ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಹುಲಿ ಉಗುರಿನ ಲಾಕೆಟ್ ಕಾರಣಕ್ಕೆ ಬಿಗ್ಬಾಸ್ ಮನೆಯಲ್ಲಿ ಇದ್ದಾಗಲೇ ಜೈಲು ವಾಸವನ್ನು ಅನುಭವಿಸುವಂತಾಗಿತ್ತು. ಹೊಸ ಸೀಸನ್ನಲ್ಲಿ ಸಂತೋಷ್ ರೀತಿಯಲ್ಲೇ ಮೈ ತುಂಬಾ ಚಿನ್ನಾಭರಣ ತೊಟ್ಟು ಗೋಲ್ಡ್ ಸುರೇಶ್ ಎಂಟ್ರಿ ಕೊಟ್ಟಿದ್ದಾರೆ.
ವರ್ತೂರು ಮೂಲದ ಸಂತೋಷ್ ಹಳ್ಳಿಕಾರ್ ಒಡೆಯ ಎಂದೇ ಕರೆದುಕೊಳ್ಳುತ್ತಾರೆ. ರೈತ ಕುಟುಂಬದ ಸಂತೋಷ್ ಬಿಗ್ಬಾಸ್ ಮನೆಗೆ ಬಂದು ಜನಪ್ರಿಯರಾಗಿದ್ದರು. ಭಾರೀ ಬೆಲೆಯ ಚಿನ್ನಾಭರಣ ಧರಿಸಿ ಮಿಂಚಿದ್ದರು. ಥೇಟ್ ಆತನನ್ನು ಹೋಲುವ ರೈತ ಕುಟುಂಬದ ಗೋಲ್ಡ್ ಸುರೇಶ್ ಈ ಬಾರಿ ಬಿಗ್ಬಾಸ್ ಮನೆ ಸೇರಿದ್ದಾರೆ. ಉತ್ತರ ಕರ್ನಾಟಕದ ಕುಗ್ರಾಮದ ಹುಡುಗ ಸುರೇಶ್ ಬೆಂಗಳೂರಿಗೆ ಓಡಿ ಬಂದು ಈಗ ಉದ್ಯಮಿ ಆಗಿ ಗುರ್ತಿಸಿಕೊಂಡಿದ್ದಾರೆ.

ತನ್ನ ಪರಿಶ್ರಮದಿಂದಲೇ ಕೋಟಿ ಕೋಟಿ ಹಣ ಸಂಪಾದನೆ ಮಾಡಿರುವುದಾಗಿ ಗೋಲ್ಡ್ ಸುರೇಶ್ ಹೇಳಿಕೊಂಡಿದ್ದಾರೆ. ಸುಮಾರು 2 ಕೋಟಿ ರೂ. ಮೌಲ್ಯದ 3 ಕೆಜಿ ಚಿನ್ನಭಾರಣವನ್ನು ಧರಿಸಿ ಗೋಲ್ಡ್ ಸುರೇಶ್ ಸಭೆ ಸಮಾರಂಭಗಳಲ್ಲಿ ಮಿಂಚುತ್ತಾರೆ. ಇನ್ನು ದುಬಾರಿ ಕಾರುಗಳು ಅವರ ಬಳಿಯಿವೆ. ಚಿನ್ನಾಭರಣ, ಕಾರುಗಳನ್ನು ಪ್ರದರ್ಶಿಸಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಿರುತ್ತಾರೆ. ಬಿಗ್ಬಾಸ್ ಮನೆ ಪ್ರವೇಶಿಸುತ್ತಿದ್ದಂತೆ ಆತನ ಬಗ್ಗೆ ಹೆಚ್ಚು ಜನ ಹುಡುಕಾಟ ನಡೆಸಿದರು. ಆತ ಯಾರು? ಹಿನ್ನೆಲೆ ಏನು? ಇಷ್ಟು ಹಣ ಸಂಪಾದಿಸಿದ್ದು ಹೇಗೆ? ಎಂದು ತಿಳಿಯುವ ಪ್ರಯತ್ನ ಮಾಡಿದ್ದರು.
ಕೆಲವರು ವರ್ತೂರು ಸಂತೋಷ್ ಜೊತೆಗೆ ಗೋಲ್ಡ್ ಸುರೇಶ್ ಅವರನ್ನು ಹೋಲಿಸಿ ನೋಡುತ್ತಿದ್ದಾರೆ. ಸದ್ಯ ಬಿಗ್ಬಾಸ್ ಮನೆಯಲ್ಲಿರುವ ಗೋಲ್ಡ್ ಸುರೇಶ್ ಬಗ್ಗೆ ಬಿಗ್ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್ ಮಾತನಾಡಿದ್ದಾರೆ. ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ವರ್ತೂರು ಸಂತೋಷ್ ಮಾತನಾಡಿ ನನಗೆ ಗೋಲ್ಡ್ ಸುರೇಶ್ ಯಾರು ಎನ್ನುವುದು ಗೊತ್ತಿಲ್ಲ. ಬಿಗ್ಬಾಸ್ ಮನೆಗೆ ಬಂದಮೇಲೆ ಆತನ ಬಗ್ಗೆ ಗೊತ್ತಾಗಿದ್ದು. ಬೆಕ್ಕು, ಹುಲಿ ನೋಡಲು ಒಂದೇ ತರ ಇರುತ್ತದೆ. ಹಾಗಂತ ನನ್ನನ್ನು ನಾನು ಹುಲಿ ಎನ್ನುತ್ತಿಲ್ಲ. ಈ ಕಾಲದಲ್ಲಿ ಚಿನ್ನ ಎನ್ನುವುದು ಹೇಗೆ ಅಂದ್ರೆ 3 ಸಾವಿರ ರೂಪಾಯಿ ಚಿನ್ನ ಹಾಕಿರುವವನು ಎಳನೀರು ಹಿಡ್ಕೊಂಡು ವೀಡಿಯೋ ಮಾಡ್ತಿದ್ದಾನೆ. ಹಾಗಾದ್ರೆ ಕೋಟ್ಯಂತರ ರೂಪಾಯಿ ಚಿನ್ನಾಭರಣ ಹಾಕಿಕೊಂಡನ ಮರ್ಯಾದೆ ಏನಾಯ್ತು? ಹಾಗಾಗಿ ಗೊತ್ತಿಲ್ಲದವರ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದಾರೆ.
ನನ್ನ ಬಗ್ಗೆ ಗೋಲ್ಡ್ ಸುರೇಶ್ ಒಂದು ಮಾತು ಆಡಿದ್ದಾರೆ. ಅವರು ಹೊರಗಡೆ ಬಂದಾಗ ನಾನು ನೇರವಾಗಿ ಉತ್ತರ ಕೊಡುತ್ತೇನೆ. ಮುಂದೆ ಇದ್ದು ಮಾತನಾಡುವುದು ಕಿಲಾಡಿತನ, ಅವರಿಲ್ಲದೇದಿದ್ದಾಗ ಮಾತನಾಡುವುದು ಹೇಡಿತನ. ಆತನ ಬಗ್ಗೆ ಮೊದಲಿಗೆ ಯಾರಿಗೂ ಗೊತ್ತಿರಲಿಲ್ಲ. ಆದರೆ ಬಿಗ್ಬಾಸ್ ಮನೆಗೆ ಹೋದ ಬಳಿಕ ಸಾಕಷ್ಟು ಸಂದರ್ಶನದ ವೀಡಿಯೋಗಳು ಹೊರಬಂದವು. ಗೋಲ್ಡ್ ಸುರೇಶ್ ಮನೆಯಿಂದ ಹೊರ ಬಂದಮೇಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತೀನಿ. ಒಂದು ಮುಖ್ಯವಾದ ವಿಚಾರದ ಬಗ್ಗೆ ಮಾತನಾಡಬೇಕು ಎಂದು ಸಂತೋಷ್ ಹೇಳಿದ್ದಾರೆ.
ಗೋಲ್ಡ್ ಸುರೇಶ್ ಸಂದರ್ಶನವೊಂದರಲ್ಲಿ ನನ್ನ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಅದಕ್ಕೆ ನಾನು ಉತ್ತರ ಕೊಡಬೇಕಿದೆ. ಜನರ ನಮ್ಮಿಬ್ಬರನ್ನು ಹೋಲಿಸುತ್ತಿದ್ದಾರೆ. ಅದಕ್ಕೆ ಬೆಲೆ ಕೊಡ್ತೀನಿ. ನಮ್ಮದು ಹ್ಯಾಪಿ ಬಿಗ್ಬಾಸ್ ಸೀಸನ್ ಆಗಿತ್ತು. ನಾವು ಯಾರು ಕೂಡ ಈ ರೀತಿ ಒಬ್ಬರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳಲಿಲ್ಲ. ನಾನು 17 ಜನರು ಗೋಲ್ಡ್ ಎಂದು ಹೇಳ್ತೀನಿ. ನಾನು ಯಾವುದೇ ವಿಚಾರವನ್ನು ಸಿಂಪಥಿಗಾಗಿ ಬಳಸಿಕೊಳ್ಳಲಿಲ್ಲ. ಈಗ ಸ್ಕ್ರಿಪ್ಟೆಡ್ ಆಗಿ ಆಡುತ್ತಿರುವುದು ಗೊತ್ತಾಗುತ್ತಿದೆ. ನುಗ್ಗೆ ಮರ ಬಹಳ ಬೇಗ ಬೆಳೆಯುತ್ತೆ, ಅಷ್ಟೇ ಬೇಗ ಹೋಗುತ್ತೆ, ಆಲದ ಮರದ ರೀತಿ ಬೆಳೆಯಬೇಕು ಎಂದು ವರ್ತೂರು ಸಂತೋಷ್ ಹೇಳಿದ್ದು ವೀಡಿಯೋ ವೈರಲ್ ಆಗ್ತಿದೆ.


Click it and Unblock the Notifications











