BBK 11: ಬಿಗ್ಬಾಸ್ ಮನೆಯಲ್ಲಿ ದರ್ಶನ್ ಹಾಡು ಯಾಕೆ ಹಾಕಲ್ಲ? ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಮಾಡಿದ್ದೇನು?
ಬಿಗ್ಬಾಸ್ ಮನೆಯಲ್ಲಿ ಆಗಾಗ್ಗೆ ಕನ್ನಡ ಸಿನಿಮಾಗಳು ಹಾಡುಗಳು ಪ್ಲೇ ಆಗುತ್ತದೆ. ಗ್ರ್ಯಾಂಡ್ ಪ್ರೀಮಿಯರ್ ವೇಳೆ ಸ್ಪರ್ಧಿಗಳು ವೇದಿಕೆ ಏರಿದಾಗ ವಿವಿಧ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಸ್ವತಃ ಸುದೀಪ್ ಎಂಟ್ರಿಗೆ ಡ್ಯಾನ್ಸಿಂಗ್ ನಂಬರ್ ಪ್ಲೇ ಆಗುತ್ತದೆ. ಇನ್ನು ಮನೆಯೊಳಗೆ ಕೇಳವುದೇ ಬೇಡ.
ಬೆಳಗ್ಗೆ ಸ್ಪರ್ಧಿಗಳು ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳು ಹಾಡುಗಳನ್ನು ಹಾಕಲಾಗುತ್ತದೆ. ಬೆಳಗ್ಗೆ ಬೊಂಬಾಟ್ ಸಾಂಗ್ಗೆ ಸ್ಪರ್ಧಿಗಳೆಲ್ಲಾ ಡ್ಯಾನ್ಸ್ ಮಾಡುವುದರೊಂದಿದೆ ದಿನ ಶುರುವಾಗುತ್ತದೆ. ಇನ್ನು ಕೆಲವೊಮ್ಮೆ ನಿದ್ದೆ ಮಾಡುವವರನ್ನು ಎಬ್ಬಿಸಲು ಹಾಡುಗಳು ಸದ್ದು ಮಾಡುತ್ತದೆ. ಹಬ್ಬ ಹರಿದಿನಗಳಲ್ಲಿ ಸ್ಪರ್ಧಿಗಳು ಮನರಂಜನೆ ಕಾರ್ಯಕ್ರಮದಲ್ಲಿ ಕೂಡ ಹಾಡುಗಳ ಕಾರುಬಾರು ಇರುತ್ತದೆ.

ಸುದೀಪ್ ಸೇರಿದಂತೆ ಎಲ್ಲಾ ನಟರ ಸಿನಿಮಾ ಹಾಡುಗಳು ಬಿಗ್ಬಾಸ್ ಮನೆಯಲ್ಲಿ ಪ್ಲೇ ಆಗುತ್ತದೆ. ಆದರೆ ಕೆಲ ವರ್ಷಗಳಿಂದ ನಟ ದರ್ಶನ್ ಅಭಿನಯದ ಸಿನಿಮಾ ಹಾಡುಗಳನ್ನು ಹಾಕುತ್ತಿಲ್ಲ. ಒಂದು ರೀತಿ ದಾಸನ ಸಿನಿಮಾ ಹಾಡುಗಳನ್ನು ಶೋನಲ್ಲಿ ಬ್ಯಾನ್ ಮಾಡಿದಂತೆ ಕಾಣುತ್ತದೆ. ಈ ಬಗ್ಗೆ ದರ್ಶನ್ ಅಭಿಮಾನಿಗಳು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಸುದೀಪ್ ಅವರಲ್ಲಿ ಕೂಡ ಪ್ರಶ್ನಿಸಿದ್ದಾರೆ. ಆದರೆ ಉತ್ತರ ಮಾತ್ರ ಸಿಗಲಿಲ್ಲ.
ಈ ಬಾರಿ ಬಿಗ್ಬಾಸ್ ಮನೆಗೆ ಮೂರ್ನಾಲ್ಕು ಜನ ದರ್ಶನ್ ಅಭಿಮಾನಿಗಳು ಸ್ಪರ್ಧಿಗಳಾಗಿ ಹೋಗಿದ್ದಾರೆ. ಇದೀಗ ವೈಲ್ಡ್ಕಾರ್ಡ್ ಎಂಟ್ರಿ ಕೊಟ್ಟಿರುವ ರಜತ್ ಕೂಡ ದರ್ಶನ್ ಅಭಿಮಾನಿ. ಇತ್ತೀಚೆಗೆ ಮನೆಯೊಳಗೆ ರಜತ್ ದರ್ಶನ್ ಸಿನಿಮಾ ಹಾಡು ಹಾಡಿದ್ದಾರೆ. 'ಕರಿಯ' ಚಿತ್ರದ 'ಕೆಂಚಾಲೋ ಮಂಚಾಲೋ' ಹಾಡನ್ನು ಹಾಡಿ ಕುಣಿದಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.
ಕೊನೆಗೂ ನಮ್ಮ ನೆಚ್ಚಿನ ನಟನ ಸಿನಿಮಾ ಹಾಡು ಬಿಗ್ಬಾಸ್ ಮನೆಯಲ್ಲಿ ಕೇಳಿಸ್ತಲ್ಲ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ರಜತ್ ಹಾಡು ಹಾಡಿರುವ ವೀಡಿಯೋ ತುಣುಕನ್ನು ವೈರಲ್ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೇ ಈಗ ಟ್ರೆಂಡ್ ಕ್ರಿಯೇಟ್ ಮಾಡಿದೆ. ರಜತ್ಗೆ ಜೈಕಾರ ಹಾಕುತ್ತಿದ್ದಾರೆ.
ಬಿಗ್ಬಾಸ್ ಶೋ ಆರಂಭವಾದಾಗ ಎಲ್ಲಾ ನಟರ ಹಾಡುಗಳು ಮನೆಯೊಳಗೆ ಪ್ಲೇ ಆಗುತಿತ್ತು. ದರ್ಶನ್ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಸ್ವತ ಸುದೀಪ್ ಸಹ ದರ್ಶನ್ ಹೆಸರು ಪ್ರಸ್ತಾಪಿಸಿ ವೇದಿಕೆಗೆ ಬಂದ ಅತಿಥಿಗಳ ಜೊತೆ ಮಾತನಾಡುತ್ತಿದ್ದರು. ಒಂದ್ಕಾಲದಲ್ಲಿ ದರ್ಶನ್- ಸುದೀಪ್ ಆತ್ಮೀಯ ಸ್ನೇಹಿತರಾಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರ ಸ್ನೇಹ ಮುರಿದುಬಿತ್ತು. ಆ ಬಳಿಕ ಬಿಗ್ಬಾಸ್ ಮನೆಯೊಳಗೆ ದರ್ಶನ್ ಹಾಡುಗಳಿಗೆ ಒಂದರ್ಥದಲ್ಲಿ ನಿರ್ಬಂಧ ಹೇರಿದಂತೆ ಆಗಿತ್ತು.
ಹೇಳಿ ಕೇಳಿ ಸುದೀಪ್ ನಿರೂಪಣೆಯ ಶೋ ಬಿಗ್ಬಾಸ್. ಒಂದರ್ಥದಲ್ಲಿ ಶೋಗೆ ಫೇಸ್ ಆಗಿರುವುದು ಕಿಚ್ಚ. ಹೀಗಿರುವಾಗ ದರ್ಶನ್- ಸುದೀಪ್ ಭಿನ್ನಾಭಿಪ್ರಾಯ ಗೊತ್ತಿದ್ದೂ ಶೋನಲ್ಲಿ ದರ್ಶನ್ ಹಾಡು ಪ್ಲೇ ಮಾಡಬಾರದು ಎಂದು ಆಯೋಜಕರು ನಿರ್ಧರಿಸಿದಂತಿದೆ. ಆದರೆ ರಜತ್ ಅದಕ್ಕೆ ಬ್ರೇಕ್ ಹಾಕಿ. 'ಕೆಂಚಾಲೋ ಮಂಚಾಲೋ' ಹಾಡು ಕೇಳುವಂತೆ ಮಾಡಿದ್ದಾರೆ.
ಬಿಗ್ಬಾಸ್ ಮನೆ ಈ ವಾರ ಒಂದು ಸಾಮ್ರಾಜ್ಯದ ರೀತಿ ಬದಲಾಗಿದೆ. ಉಗ್ರಂ ಮಂಜು ಆ ಸಾಮ್ರಾಜ್ಯದ ರಾಜನಾಗಿದ್ದಾರೆ. ಆಸ್ಥಾನದಲ್ಲಿ ರಾಜನ ಆಣತಿಯಂತೆ ಸಂಗೀತ ಕಛೇರಿಯೂ ನಡೆದಿದೆ. ಈ ವೇಳೆ ರಜತ್ ಒಂದಷ್ಟು ಸೂಪರ್ ಹಿಟ್ ಗೀತೆಗಳನ್ನು ಹಾಡಿದ್ದಾರೆ. ಅದೇ ರೀತಿ 'ಕೆಂಚಾಲೋ ಮಂಚಾಲೋ' ಹಾಡು ಹಾಡಿದ್ದಾರೆ. ಅದೇ ಹಾಡನ್ನು ಮತ್ತೊಮ್ಮೆ ಹಾಡಿ ಡ್ಯಾನ್ಸ್ ಮಾಡುವಂತೆ ಮಂಜು ಹೇಳಿದ್ದು ರಜತ್ ಅದನ್ನು ಮಾಡಿ ತೋರಿಸಿದ್ದಾರೆ.
ದರ್ಶನ್ ಅಭಿಮಾನಿಗಳಂತೂ 'ಕರಿಯ' ಚಿತ್ರದ ಹಾಡು ಬಿಗ್ಬಾಸ್ ಮನೆಯಲ್ಲಿ ಮೊಳಗಿದ್ದು ಕೇಳಿ ಖುಷಿಯಾಗಿದ್ದಾರೆ. ಈ ಮೂಲಕ ದರ್ಶನ್ ಅಭಿಮಾನಿಗಳ ಮನಸ್ಸನ್ನು ರಜತ್ ಗೆದ್ದಿದ್ದಾರೆ.


Click it and Unblock the Notifications











