Bigg Boss Kannada 11 ; ಅಂತೆ-ಕಂತೆಗೆಲ್ಲ ಸಿಕ್ಕಿತು ಉತ್ತರ, ಮಹಾಭಾರತಕ್ಕೆ ಕೃಷ್ಣ, ಬಿಗ್ ಬಾಸ್ಗೆ ಕಿಚ್ಚ....!
ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದವರು ಕಿಚ್ಚ ಸುದೀಪ್. ಅದರಲ್ಲಿಯೂ ಕಳೆದ ಬಾರಿಯ ಸೀಸನ್ ಕಿರುತೆರೆ ಇತಿಹಾಸದಲ್ಲಿಯೇ ದಾಖಲೆ ಬರೆದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಇನ್ನೂ ಈ ಕಾರ್ಯಕ್ರಮವನ್ನು ಪ್ರಸಾರ ಮಾಡುವ ವಾಹಿನಿ ಬದಲಾದರೂ, ಈ ಕಾರ್ಯಕ್ರಮದ ನಿರೂಪಕರು ಮಾತ್ರ ಬದಲಾಗಲಿಲ್ಲ. ಭಾರತದ ಇತರೆ ಭಾಷೆಯಲ್ಲಿ ಕೂಡ ಹೋಸ್ಟ್ಗಳು ಬದಲಾದರೂ ಕೂಡ, ಬಿಗ್ ಬಾಸ್ ನಿರೂಪಣೆಯಿಂದ ಸುದೀಪ್ ದಣಿಯಲಿಲ್ಲ. ಯಥಾಪ್ರಕಾರವಾಗಿ ಶೋ ಮುಂದುವರೆಸಿಕೊಂಡೇ ಬಂದರು ಸುದೀಪ್.

ಇನ್ನೂ, ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ಮಾಡುವುದು ಸುಲಭ ಅಲ್ಲ. ಯಾಕೆಂದರೆ ಎಲ್ಲಿಯೇ ಇದ್ದರೂ, ಯಾವುದೇ ಚಿತ್ರದ ಚಿತ್ರೀಕರಣದಲ್ಲಿದ್ದರೂ ಕೂಡ ಬಿಗ್ ಬಾಸ್ ಸಲುವಾಗಿ ಓಡೋಡಿ ಬರಬೇಕು. ನಿದ್ರೆಯನ್ನು ಮರೆಯಬೇಕು. ಜ್ವರ ಇದ್ದರೂ ಕೂಡ ಕಾರ್ಯಕ್ರಮ ನಡೆಸಿಕೊಡಬೇಕು. ಇವೆಲ್ಲವೂ ಸುದೀಪ್ ಅವರ ಅನುಭವಕ್ಕೆ ಬಂದಿವೆ. ಒಮ್ಮೊಮ್ಮೆ ಸಂದರ್ಭ ಸನ್ನಿವೇಶಗಳಿಂದ ಸುದೀಪ್ ಹೈರಾಣಾಗಿದ್ದು ಇದೆ. ಖುದ್ದು ಸುದೀಪ್ ಅವರೇ ಈ ಹಿಂದೆ ಈ ಮಾತುಗಳನ್ನು ಹೇಳಿದ್ದಾರೆ. ಆದರೂ ಈ ಬಾಧೆಗಳನ್ನೆಲ್ಲ ಕಿರುತೆರೆಯಲ್ಲಿ ತೋರಿಸಿಕೊಳ್ಳದೇ, ಅಚ್ಚು ಕಟ್ಟಾಗಿ ಕಾರ್ಯಕ್ರಮ ನಿಭಾಯಿಸಿಕೊಂಡು ಬಿಗ್ ಬಾಸ್ ಭಾರವನ್ನು ತಮ್ಮ ಹೆಗಲ ಮೇಲೆ ಹತ್ತು ವರ್ಷಗಳ ಕಾಲ ಹೊತ್ತು ಸುದೀಪ್ ನಡೆದಿದ್ದಾರೆ.
ಆದರೂ, ಅದ್ಯಾಕೋ ಈ ಬಾರಿ ಕನ್ನಡದಲ್ಲಿ ಬಿಗ್ ಬಾಸ್ ಬದಲಾಗುತ್ತಾರೆ ಎಂದು ಪುಕಾರು ಹಬ್ಬಿಸಿದರು. ಇದಕ್ಕೆ ಪೂರಕವಾಗಿ ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ ಬಂದ ಹಿನ್ನೆಲೆ ಹರಿದಾಡುತ್ತಿರುವ ಈ ಸುದ್ದಿ ನಿಜವೆಂದೇ ಅನೇಕರು ಅಂದುಕೊಂಡರು. ಸುದೀಪ್ ಬದಲು ಈ ಬಾರಿ ರಿಷಬ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಾರೆ ಎಂದು ಮಾತನಾಡಿಕೊಂಡರು. ಕೆಲವರು ರಮೇಶ್ ಅರವಿಂದ್ ಅವರು ಕೂಡ ಬಿಗ್ ಬಾಸ್ ಜವಾಬ್ಧಾರಿ ವಹಿಸಿಕೊಂಡರು ವಹಿಸಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕಿದರು. ಆದರೆ, ಹೀಗೆ ತೇಲಿ ಬಿಡಲಾದ ಈ ಸುದ್ದಿ ತಿಂಗಳ ಮುಂಚೆಯೇ ಕಾರ್ಯಕ್ರಮದತ್ತ ಜನರನ್ನು ಸೆಳೆಯುವ ಉದ್ದೇಶದಿಂದ ಅನ್ನುವುದು ಈಗ ಸ್ಪಷ್ಟವಾಗಿದೆ. ಬಿಗ್ ಬಾಸ್ ಕನ್ನಡದ ಹನ್ನೊಂದನೇ ಸೀಸನ್ನ ಸಾರಥ್ಯವನ್ನು ಸುದೀಪ್ ಅವರೇ ವಹಿಸಿಕೊಂಡಿರುವುದು ದೃಢವಾಗಿದೆ. ಕಾರ್ಯಕ್ರಮದ ಪ್ರೋಮೋ ಕೂಡ ಬಿಡುಗಡೆಯಾಗಿದೆ.
ಸಹಜವಾಗಿ ಕಾರ್ಯಕ್ರಮದ ಸಾರಥಿಯನ್ನು ನೋಡಿದ ಸುದೀಪಿಯನ್ಸ್ ಸಂಭ್ರಮ ಹೆಚ್ಚಾಗಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಅಭಿಪ್ರಾಯಗಳು ಈ ಪ್ರೋಮೋಗೆ ವ್ಯಕ್ತವಾಗಿವೆ. ಒಬ್ಬರು 'ಮಹಾಭಾರತದಲ್ಲಿ ಕೃಷ್ಣ ಹೇಗೋ, ಹಾಗೆಯೇ ಬಿಗ್ ಬಾಸ್ ಗೆ ಕಿಚ್ಚ' ಎಂದರೆ, ಮತ್ತೊಬ್ಬರು 'ನಾವು ಬಿಗ್ ಬಾಸ್ ನೋಡುವುದೇ ಸುದೀಪ್ ಅವರಿಗೋಸ್ಕರ' ಎಂದಿದ್ದಾರೆ. 'ಹಲವರು ಸುದೀಪ್ ಅವರನ್ನು ನೋಡಿ ಮನಸಿಗೆ ಈಗ ಸಮಾಧಾನವಾಯಿತು ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಸೆಪ್ಟೆಂಬರ್ 29ರಿಂದ ಬಿಗ್ ಬಾಸ್ನ ಹನ್ನೊಂದನೇ ಸೀಸನ್ ಆರಂಭವಾಗಲಿದೆ. ಸಹಜವಾಗಿ ಸುದೀಪ್ ಅವರಿಗೆ ಕೂಡ ಈ ಬಾರಿಯ ಸೀಸನ್ ಸ್ಪೆಷಲ್. ಯಾಕೆಂದರೆ ಹತ್ತು ವರ್ಷ ಈ ಕಾರ್ಯಕ್ರಮದ ಜೊತೆ ಪ್ರಯಾಣ ಮಾಡಿರುವ ಸುದೀಪ್ ಈ ಬಾರಿ ಮತ್ತೊಮ್ಮೆ ಪ್ರಯಾಣಕ್ಕೆ ಹೊಸ ಹುರುಪಿನಿಂದ ಅಣಿಯಾಗಿದ್ದಾರೆ. ಇದಕ್ಕೆ ತಕ್ಕಂತೆ ಪ್ರೋಮೋದಲ್ಲಿ ಸುದೀಪ್ ಇದು ಹೊಸ ಅಧ್ಯಾಯ ಎಂದು ಹೇಳಿದ್ದಾರೆ.
ಉಳಿದಂತೆ ಈ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಪ್ರಶ್ನೆಗೆ ನಿಖರವಾದ ಉತ್ತರ ಸೆಪ್ಟೆಂಬರ್ 29ರಂದೇ ಸಿಗಲಿದೆ. ಬೃಂದಾವನ' ಖ್ಯಾತಿಯ ವರುಣ್ ಆರಾಧ್ಯ.. ಯೂಟ್ಯೂಬರ್ ವರ್ಷಾ ಕಾವೇರಿ.. ತುಕಾಲಿ ಸಂತು ಅವರ ಪತ್ನಿ ಮಾನಸಾ.. ಸುನಿಲ್ ರಾವ್.. ಮೋಕ್ಷಿತಾ ಪೈ.. ರೀಲ್ಸ್ ರೇಷ್ಮಾ.. ಹೀಗೆ ಒಂದಿಷ್ಟು ಹೆಸರುಗಳು ಅಂತೆ-ಕಂತೆ ಸಂತೆಯಲ್ಲಿ ಕೇಳಿ ಬರುತ್ತಿವೆ.


Click it and Unblock the Notifications











