ಬಿಗ್ಬಾಸ್ ಕನ್ನಡ ಶೋಗೆ ಸ್ಪರ್ಧಿಗಳ ಆಯ್ಕೆ ಹೇಗಿರುತ್ತೆ? ಯಾರು ಕರೆ ಮಾಡ್ತಾರೆ? ಆಮೇಲೆ ಏನೆಲ್ಲಾ ಆಗುತ್ತೆ?
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್. ಕನ್ನಡದಲ್ಲಿ ಈಗಾಗಲೇ 11 ಸೀಸನ್ ಮುಗಿದು 12ನೇ ಸೀಸನ್ ವೀಕ್ಷಕರನ್ನು ರಂಜಿಸ್ತಿದೆ. ಈಗಾಗಲೇ ನೂರಾರು ಸ್ಪರ್ಧಿಗಳು ಮನೆ ಒಳಗೆ ಹೋಗಿ ಬಂದಿದ್ದಾರೆ. ದೊಡ್ಮನೆ ಒಳಗೆ ಹೋಗಬೇಕು ಎನ್ನುವುದು ಸಾಕಷ್ಟು ಜನ ಆಸೆ. ಅದಕ್ಕಾಗಿ ನಾನಾ ರೀತಿಯ ಕಸರತ್ತು ಮಾಡುತ್ತಿರುತ್ತಾರೆ.
ಬಿಗ್ಬಾಸ್ ಮನೆಗೆ ಸ್ಪರ್ಧಿಯಾಗಿ ಹೋದರೆ ನೇಮು ಫೇಮು ಸಿಗುತ್ತದೆ. ಅದೃಷ್ಟ ಚೆನ್ನಾಗಿದ್ದರೆ 50 ಲಕ್ಷ ರೂ. ಬಹುಮಾನ ಗೆಲ್ಲಬಹುದು. ಈ ಹಿಂದೆ ಕಾಮನ್ ಮ್ಯಾನ್ ಕೂಡ ದೊಡ್ಡಮನೆ ಒಳಗೆ ಹೋಗಿದ್ದು ಗೆದ್ದಿದ್ದು ಇದೆ. ನಾನಾ ಕ್ಷೇತ್ರಗಳಿಂದ 15ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಬಿಗ್ಬಾಸ್ ಮನೆ ಒಳಗೆ ಹೋಗಲು ಆಯ್ಕೆ ಮಾಡಲಾಗುತ್ತದೆ. ನಾನಾ ರೀತಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ಬಹಳ ಜನಪ್ರಿಯರಾಗಿರುವ ಸೆಲೆಬ್ರೆಟಿಗಳು, ಕಿರುತೆರೆ ನಟ, ನಟಿಯರು, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ವಿವಾದಾತ್ಮಕ ವ್ಯಕ್ತಿಗಳು ದೊಡ್ಮನೆ ಆಟಕ್ಕೆ ಹೋಗುತ್ತಿರುತ್ತಾರೆ. ಕೆಲವರು ನೇರವಾಗಿಯೇ ಬಿಗ್ಬಾಸ್ ಅವಕಾಶ ತಿರಸ್ಕರಿಸುತ್ತಾರೆ. ಪ್ರತಿ ಬಾರಿ ಹೊಸ ಸೀಸನ್ ಶುರುವಾದಾಗಲೂ ಯಾರೆಲ್ಲಾ ಮನೆ ಒಳಗೆ ಹೋಗುತ್ತಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಇರುತ್ತದೆ. ಗ್ರ್ಯಾಂಡ್ ಓಪನಿಂಗ್ ವೇದಿಕೆಯಲ್ಲೇ ಅದು ಬಹಿರಂಗವಾಗುವ ಸಾಧ್ಯತೆ ಜಾಸ್ತಿ ಇರುತ್ತದೆ.
ಬಿಗ್ಬಾಸ್ ಶೋಗೆ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂದು ಸೀಸನ್ 12ರಿಂದ ಎಲಿಮಿನೇಟ್ ಆಗಿರುವ ಅಮಿತ್ ಹೇಳಿದ್ದಾರೆ. 'ಏನ್ರೀ ಸಮಾಚಾರ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಮೊದಲು ಯಾರು ಕರೆ ಮಾಡುತ್ತಾರೆ? ಬಿಗ್ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗುವ ಬಗ್ಗ ಚರ್ಚಿಸುತ್ತಾರೆ? ಆಮೇಲೆ ಏನೆಲ್ಲಾ ಆಗುತ್ತದೆ ಎಂದು ವಿವರಿಸಿದ್ದಾರೆ.

"ಬಿಗ್ಬಾಸ್ ಶೋಗೆ ಆಯೋಜರು ತಾವಾಗಿಯೇ ಕರೆಯುತ್ತಾರೆ. ನಾವು ಅಪ್ಲೇ ಮಾಡುವುದಕ್ಕೆ ಆಗಲ್ಲ. ಪ್ರೊಡಕ್ಷನ್ ಹೌಸ್ ಕಡೆಯಿಂದ ನನಗೊಂದು ಕಾಲ್ ಬಂದಿತ್ತು. ಹುಡುಗ ಒಬ್ಬ ಫೋನ್ ಮಾಡಿ ನಿಮ್ಮನ್ನು ಮೂರ್ನಾಲ್ಕು ತಿಂಗಳಿನಿಂದ ಗಮನಿಸುತ್ತಿದ್ದೇನೆ. ನಿಮ್ಮಂತಹವರು ಮನೆ ಒಳಗೆ ಹೋದರೆ ಚೆನ್ನಾಗಿರುತ್ತದೆ. ನಿಮ್ಮ ಹೆಸರು ತೆಗೆದುಕೊಳ್ಳಬಹುದಾ? ಎಂದು 3 ತಿಂಗಳ ಹಿಂದೆಯೇ ಫೋನ್ ಮಾಡಿ ಕೇಳಿದ್ದರು" ಎಂದು ಅಮಿತ್ ನೆನಪಿಸಿಕೊಂಡಿದ್ದಾರೆ.
ನನಗೆ ಮೊದಲಿಗೆ ಬಿಗ್ಬಾಸ್ ಶೋಗೆ ಹೋಗುವ ಮನಸ್ಸು ಇರಲಿಲ್ಲ. ಆದರೂ ಒಂದು ಅವಕಾಶ ನೋಡೋಣ ಎಂದುಕೊಂಡಿದ್ದೆ ಎಂದು ಅಮಿತ್ ಹೇಳಿದ್ದಾರೆ. "ಬಳಿಕ ವೀಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಬಳಿಕ ಚಾನಲ್ ಕಡೆಯಿಂದ ಕರೆ ಬಂತು. ನಂತರ ಹೋಗಿ ಚಾನಲ್ ಹೆಡ್ ಸೇರಿದಂತೆ ಕೆಲವರನ್ನು ಭೇಟಿ ಮಾಡಿದ್ದೆ. ಆಗ ನನ್ನ ಜೀವನದ ಎಲ್ಲಾ ವಿಚಾರ ಹೊರೆಗೆ ತೆಗೆದ್ರು. ನನ್ನ ಜೀವನದಲ್ಲಿ ಏನು ನಡೆಯುತ್ತಿದೆ. ಬಾಲ್ಯದಿಂದ ಏನೆಲ್ಲಾ ಆಯ್ತು, ಏನಾದ್ರು ಟ್ರೋಮಾ ಇದ್ಯಾ ಎಲ್ಲಾ ಹೇಳಲು ಹೇಳಿದ್ರು. ಅದೇ ರೀತಿ ನಾನು ಉತ್ತರಿಸಿದ್ದೆ" ಎಂದಿದ್ದಾರೆ.
ಮುಖಕ್ಕೆ ಹೊಡೆದಂತೆ ಮಾತನಾಡುವ ನನ್ನ ವ್ಯಕ್ತಿತ್ವ ಅವರಿಗೆ ಇಷ್ಟವಾಯಿತು. ಶೋ ಆರಂಭಕ್ಕೆ ಒಂದು ತಿಂಗಳು ಮುನ್ನ ಕರೆ ಮಾಡಿ ಸಿದ್ಧತೆ ನಡೆಸಿಕೊಳ್ಳಲು ಹೇಳಿದ್ರು. ಬಟ್ಟೆ ಬರೆ ತಗೊಂಡು ಬರೋಕ್ಕೆ ತಿಳಿಸಿದ್ದರು. ಆದರೆ ಯಾರಿಗೂ ವಿಷಯ ಹೇಳದಂತೆ ಸೂಚಿಸಿದ್ದರು. ನನ್ನ ಆಪ್ತರಿಗೆ ಮಾತ್ರ ಹೇಳಿದ್ದೆ. ಎಲ್ಲರೂ ಚೆನ್ನಾಗಿ ಆಡಲು ಸಲಹೆ ಕೊಟ್ಟಿದ್ದರು. ನನ್ನ ಬಟ್ಟೆ, ಶೂಗಳು, ಆಕ್ಸಸರೀಸ್ ಎಲ್ಲಾ ಖರೀದಿಸಲು ಒಂದೂವರೆ ಲಕ್ಷದವರೆಗೆ ಖರ್ಚಾಗಿತ್ತು. ಆದರೆ ಒಂದೇ ವಾರಕ್ಕೆ ಎಲಿಮಿನೇಟ್ ಆಗಿ ಹೊರಬಂದಿದ್ದು ಬೇಸರವಾಯಿತು ಎಂದು ಅಮಿತ್ ವಿವರಿಸಿದ್ದಾರೆ.


Click it and Unblock the Notifications











