ಬಿಗ್ ಬಾಸ್ ಮನೆಯಿಂದ ನೀತೂ ಹೊರಕ್ಕೆ..ಆದರೆ
ಸುವರ್ಣ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ಸ್ಪರ್ಧಿ ನಟಿ ನೀತೂ ಶೆಟ್ಟಿ ಅವರು ಮನೆಯಿಂದ ಹೊರ ನಡೆದಿದ್ದಾರೆ. ಆದರೆ, ನೀತೂ ಎಲಿಮಿನೇಟ್ ಆಗಿಲ್ಲ. ಅರೇ ಇದು ಹೇಗೆ ಸಾಧ್ಯ? ಎಂದು ಪ್ರೇಕ್ಷಕರು ಬಾಯಿಯ ಮೇಲೆ ಬೆರಳಿಡುವಂತೆ ಮಾಡುವಲ್ಲಿ ಬಿಗ್ ಬಾಸ್ ಯಶಸ್ವಿಯಾಗಿದ್ದಾರೆ. ಜತೆಗೆ ಈ ವಾರ ಮತ್ತೊಬ್ಬ ಸ್ಪರ್ಧಿ ವೈಲ್ಡ್ ಕಾರ್ಡ್ ಪ್ರವೇಶ ಪಡೆಯಲಿದ್ದಾರೆ.
ಐದನೇ ವಾರ ಮನೆಯಿಂದ ಹೊರಬಿದ್ದ ಐದನೇ ಸ್ಪರ್ಧಿಯಾಗಿ ನೀತು ಎಲ್ಲರಿಗೂ 'ಬೈ' ಹೇಳಿ ಹೋಗಿದ್ದೇನೋ ನಿಜ. ಆದರೆ, ಮನೆಯಿಂದ ನಿರೂಪಕ ಕಿಚ್ಚ ಸುದೀಪ್ ಇರುವೆಡೆಗೆ ನೀತೂ ಅವರನ್ನು ಕಳುಹಿಸದೆ ರಹಸ್ಯ ಕೋಣೆಯಲ್ಲಿ ಅವರನ್ನು ಇರಿಸಲಾಗಿದೆ.
'ಕಿಚ್ಚಿನ ಕಥೆ ಕಿಚ್ಚನ ಜತೆ' ಎಪಿಸೋಡು ಪ್ರೇಕ್ಷಕರಿಗೆ ಸಕತ್ ಮಜಾ ನೀಡಿದೆ. ಭಾರಿ ಕುತೂಹಲ ಕೆರಳಿಸಿದ ಈ ವಾರದ ನಾಮಿನೇಷನ್ ಪ್ರಕ್ರಿಯೆ ಹಾಗೂ ಎಲಿಮಿನೇಷ್ ಪ್ರತಿ ವಾರದಂತೆ ನಡೆದಿದೆ. ಅದರೆ, ನೀತೂ ಹೊರಕ್ಕೆ ಹೋದ ರಹಸ್ಯ ಮಾತ್ರ ಸ್ಪರ್ಧಿಗಳಿಗೆ ತಿಳಿಯದಾಗಿದೆ. ರಹಸ್ಯ ಕೋಣೆಯಲ್ಲಿ ಕುಳಿತ ನೀತೂ ಮನೆಯಲ್ಲಿ ತನ್ನ ಬಗ್ಗೆ ಯಾರು ಯಾರು ಏನೇನು ಅಭಿಪ್ರಾಯ ಹೊಂದಿದ್ದಾರೆ ಎಂಬುದನ್ನು ಕಣ್ಣಾರೆ ಕಾಣಲಿದ್ದಾರೆ. ಅದರೆ, ಪ್ರತಿಕ್ರಿಯಿಸಲು ಸಾಧ್ಯವಿಲ್ಲ. [ಬಿಗ್ ಬಾಸ್ ಶೋಗೆ ಉಮಾಶ್ರೀ, ಕಲಾ ಸಾಮ್ರಾಟ್]
'ಪೂಜಾರಿ' ಖ್ಯಾತಿ ಜೋಡಿಯನ್ನು ಬಿಗ್ ಬಾಸ್ ಬೇರ್ಪಡಿಸಿದ್ದಾರೆ. ನೀತೂ ಅವರ ಅಗಲಿಕೆಯಿಂದ ಕಣ್ಣೀರಿಟ್ಟ ಆದಿ ಇನ್ಮುಂದೆ ಮನೆ ಮಂದಿ ಜತೆ ಹೇಗೆ ನಡೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ. ಮಠ ಗುರುಪ್ರಸಾದ್ ಅವರ ಆಗಮನ ಮನೆಗೆ ಕಾಗೆ ಹೊಕ್ಕಂತೆ ಆಗಿದೆ ಎಂದು ಸಂತೋಷ್ ನೇರವಾಗಿ ತಮ್ಮ ಭವಿಷ್ಯವಾಣಿಯನ್ನು ಸಾಬೀತು ಮಾಡಿದ್ದಾರೆ. ಹಿಂದಿ ಬಿಗ್ ಬಾಸ್ ಸ್ಕ್ರಿಪ್ಟ್ ಮತ್ತೆ ರಿಪೀಟ್ ಏಕೆ? ಎಂಬೆಲ್ಲಾ ವಿಚಾರಗಳನ್ನು ಮುಂದೆ ಓದಿ...

ಅಪ್ಪುಗೆ ಅಪ್ಪುಗೆಯಲ್ಲೇ ಕಣ್ಣೀರು ಕೋಡಿ ಹರಿಯಿತು
ಬಿಗ್ ಬಾಸ್ ಎಪಿಸೋಡುಗಳ ಇತಿಹಾಸದಲ್ಲೇ ಅತಿ ಬೆಚ್ಚನೆಯ ಬಿಗಿ ಅಪ್ಪುಗೆ ನೀಡಿದ ದಾಖಲೆ ಆದಿ ಲೋಕೇಶ್ ಹಾಗೂ ನೀತೂ ಶೆಟ್ಟಿ ಅವರಿಗೆ ಸಲ್ಲುತ್ತದೆ. ಈ ದೃಶ್ಯ ಎಲಿಮಿನೇಟ್ ಗೂ ಮುನ್ನ ನಡೆದಿದ್ದು, ಎಲಿಮಿನೇಟ್ ಆದಮೇಲೆ ಇನ್ನಷ್ಟು ಅಪ್ಪುಗೆ ಗೆಳತಿಗೆ ಗೆಳೆಯನಿಂದ ಸಿಕ್ಕಿದೆ.

ಈ ಬಾರಿ ನಾಮಿನೇಟ್ ಆದ ಸದಸ್ಯರು
ಈ ವಾರ ಬಿಗ್ ಬಾಸ್ ಮನೆಯಲ್ಲಿರುವ ಪ್ರಬಲ ಅಭ್ಯರ್ಥಿಗಳು ನಾಮಿನೇಟ್ ಆಗಿದ್ದಾರೆ. ಆದಿ ಲೋಕೇಶ್, ನೀತೂ ಶೆಟ್ಟಿ, ಅನುಪಮಾ, ಸಂತೋಷ್, ಸೃಜನ್ ಲೋಕೇಶ್, ಶ್ವೇತಾ ಚೆಂಗಪ್ಪ ಈ ಬಾರಿ ನಾಮಿನೇಟ್ ಆದ ಸದಸ್ಯರು.ಆದರೆ, ಯಾರೂ ಮನೆಯಿಂದ ಹೊರ ಬೀಳಲಿಲ್ಲ.

ಗುರು ಪ್ರಸಾದ್ ರಾತ್ರಿ ಇಡಿ ಕಥೆ ಹೇಳುವ ಶಿಕ್ಷೆ
ಬಿಗ್ ಬಾಸ್ ನೀಡಿದ ಅಧಿಕಾರ ಬಳಸಿ ನೀತೂ ಅವರು ಮನೆಯ ಒಳ್ಳೆ ಕಥೆಗಾರನೊಬ್ಬನನ್ನು ಆಯ್ಕೆ ಮಾಡಿದರು. ರಾತ್ರಿ ಇಡಿ ಕ್ಯಾಪ್ಟನ್ ಗೆ ಕಥೆ ಹೇಳುವ ಶಿಕ್ಷೆ ನೀಡಲಾಯಿತು. ಕ್ಯಾಪ್ಟನ್ ಮಲಗಲಿ, ಮನೆಯಲ್ಲಿರುವವರು ಮಲಗಲಿ, ಎಲ್ಲಾ ಲೈಟ್ ಆಫ್ ಆಗಲಿ ನೀವು ಕಥೆ ಹೇಳುತ್ತಲೆ ಇರಬೇಕು. ನೀವು ನಿದ್ರೆ ಮಾಡಿದರೆ ಅಲಾರಂ ಬಾರಿಸಿ ಎಲ್ಲರನ್ನು ಎಬ್ಬಿಸಲಾಗುವುದು ಎಂದು ಬಿಗ್ ಬಾಸ್ ಸೂಚಿಸಿದರು.

ರಹಸ್ಯ ಕೋಣೆಯಲ್ಲಿ ಕುಳಿತ ನೀತೂ ಕಂಬನಿ
ಐದನೇ ವಾರ ಯಾರೂ ಮನೆಯಿಂದ ಹೊರ ಬೀಳಲಿಲ್ಲ. ನೀತೂ ಅವರ ಹೆಸರನ್ನು ಸುದೀಪ್ ಕರೆದು ಮನೆಯಿಂದ ಹೊರ ಬನ್ನಿ ಎಂದರು. ವಾಡಿಕೆಯಂತೆ ಮನೆಯಿಂದ ನೀತೂ ಹೊರಬಿದ್ದರು. ಅದರೆ, ಅಲ್ಲಿಂದ ನೀತೂ ನೇರ ರಹಸ್ಯ ಕೋಣೆ ತಲುಪಿದ್ದಾರೆ. ಅಲ್ಲಿ ಕುಳಿತು, ದೀಪಿಕಾ ಅವರು ತಮ್ಮನ್ನು ನೆನೆದು ಕಣ್ಣೀರಿಡುವುದನ್ನು ನೋಡಿ ನೀತೂ ಕೂಡಾ ಕಣ್ಣೀರಿಟ್ಟಿದ್ದಾರೆ. ಆದಿ ಎಷ್ಟು ಲೀಟರ್ ನೀರು ಸುರಿಸಿದರೂ ಇನ್ನೂ ಗೊತ್ತಾಗಿಲ್ಲ. ಕಾದು ನೋಡಬೇಕಿದೆ.

ಹಿಂದಿಯಲ್ಲಿ ಇದೇ ರೀತಿ ಸೀನ್ ಇತ್ತು ಕಂಡ್ರಿ
ಬಿಗ್ ಬಾಸ್ 7 ರ ವಿವಾದಿತ ಸ್ಪರ್ಧಿಯಾಗಿದ್ದ ಅರ್ಮಾನ್ ಕೊಹ್ಲಿ ಹಾಗೂ ಅದಕ್ಕೂ ಮುಂಚೆ ಇಮಾಮ್ ಸಿದ್ದಿಕಿ ಅವರನ್ನು ರಹಸ್ಯ ಕೋಣೆಯಲ್ಲಿ ಬಿಟ್ಟು ಸ್ಪರ್ಧಿಗಳ ನೈಜ ಬಣ್ಣ ತಿಳಿಯುವಂತೆ ಮಾಡಲಾಗಿತ್ತು. ನಂತರ ಮನೆಗೆ ಪುನರ್ ಪ್ರವೇಶ ಪಡೆದ ಅರ್ಮಾನ್ ಇನ್ನಷ್ಟು ವ್ಯಗ್ರನಾಗಿ ವರ್ತಿಸಿದ್ದ. ಎಲ್ಲರೂ ಕೂಡಾ ತಮ್ಮ ಬಣ್ಣ ಬಯಲಾಗಿದ್ದಕ್ಕೆ ಬೆಚ್ಚಿದ್ದರು. ಈಗ ಇದೇ ತಂತ್ರವನ್ನು ಕನ್ನಡ ಬಿಗ್ ಬಾಸ್ ನಲ್ಲೂ ಪ್ರಯೋಗಿಸಲಾಗಿದೆ. ಇಲ್ಲಿ ನೀತೂ ಅವರು ಮುಖ್ಯವಾಗಿ ತಮ್ಮ ಪರ ಹಾಗೂ ವಿರೋಧಿಗಳನ್ನು ಗುರುತಿಸಲಿದ್ದಾರೆ.


Click it and Unblock the Notifications











