'ಬಿಗ್ ಬಾಸ್' ಸ್ಪರ್ಧಿಯಾಗಲು ಕನ್ನಡದ ಮಿಸ್ಟರ್ ಬೀನ್ ಹರಸಾಹಸ.!
ಅಕ್ಟೋಬರ್ 15 ರಿಂದ 'ಬಿಗ್ ಬಾಸ್ ಕನ್ನಡ 5' ಶುರು ಎಂಬುದೀಗ ಅಧಿಕೃತ. 'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮ ಆರಂಭ ಆಗಲು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿರುವುದರಿಂದ, ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಯಲ್ಲಿ 'ಬಿಗ್ ಬಾಸ್' ಹಾಗೂ ಕಲರ್ಸ್ ವಾಹಿನಿ ತಂಡ ತೊಡಗಿದೆ.
ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಹೋಗಲೇಬೇಕು ಎಂದು ಪಣ ತೊಟ್ಟಿದ್ದಾರೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಯುವ ಕಲಾವಿದ ಮಂಜುನಾಥ ರೇಳೆಕರ.
'ಕನ್ನಡದ ಮಿಸ್ಟರ್ ಬೀನ್' ಎಂದೇ ಹೆಸರಾಗಿರುವ ಮಂಜುನಾಥ ರೇಳೆಕರ 'ಬಿಗ್ ಬಾಸ್ ಕನ್ನಡ 5' ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದಾರೆ. ಇದಕ್ಕಾಗಿ ಒಂದು ಸಾಹಸಕ್ಕೆ ಕೂಡ ಕೈಹಾಕಿದ್ದಾರೆ. ಮುಂದೆ ಓದಿರಿ...

650 ಕಿ.ಮಿ ಸೈಕಲ್ ಸವಾರಿ
ಹೇಗಾದರೂ ಮಾಡಿ ಈ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಸ್ಪರ್ಧಿಸಬೇಕೆಂದು ಟೊಂಕ ಕಟ್ಟಿ ನಿಂತಿರುವ ಮಂಜುನಾಥ ರೇಳೆಕರ ಮೂಡಲಗಿಯಿಂದ ಸೈಕಲ್ ಮೂಲಕ ಸುಮಾರು 650 ಕಿ.ಮಿ ದೂರ ಇರುವ ಬೆಂಗಳೂರಿಗೆ ಬಂದು, 'ಬಿಗ್ ಬಾಸ್' ತಂಡ ಹಾಗೂ ಕಿಚ್ಚ ಸುದೀಪ್ ರವರನ್ನ ಭೇಟಿ ಮಾಡಲಿದ್ದಾರೆ.

ಈಗಾಗಲೇ ಸುದೀಪ್ ಗೆ ಪತ್ರ ಬರೆದಿದ್ದಾರೆ
ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಮಂಜುನಾಥ ರೇಳೆಕರ ಈ ಬಾರಿಯ 'ಬಿಗ್ ಬಾಸ್' ಸ್ಪರ್ಧಿಯಾಗಲು ಈಗಾಗಲೇ ಕಿಚ್ಚ ಸುದೀಪ್ ಹಾಗೂ ಕಲರ್ಸ್ ಕನ್ನಡ ಬಿಸಿನೆಸ್ ಹೆಡ್ ಹಾಗೂ 'ಬಿಗ್ ಬಾಸ್' ಡೈರೆಕ್ಟರ್ ಪರಮೇಶ್ವರ್ ಗುಂಡ್ಕಲ್ ರವರಿಗೆ ಪತ್ರ ಬರೆದಿದ್ದಾರೆ.

ಎಷ್ಟು ಬೆಂಬಲ ಸಿಗಬಹುದು.?
ತನ್ನ ಬೆಂಬಲವಾಗಿ ಎಷ್ಟು ಜನ ಇದ್ದಾರೆಂದು ತಿಳಿಸಲು ಕಾನ್ವೆಂಟ್, ಕನ್ನಡ ಶಾಲೆ, ಹೈಸ್ಕೂಲ್ ವಿದ್ಯಾರ್ಥಿಗಳು ಅಷ್ಟೇ ಅಲ್ಲದೇ ಪಿ.ಯು.ಸಿ, ಡಿಪ್ಲೊಮಾ, ಡಿಗ್ರಿ ಕಾಲೇಜಿನ ವಿದ್ಯಾರ್ಥಿಗಳಿಂದ ಪತ್ರಗಳನ್ನು ಬರೆಯಿಸಿ 'ಬಿಗ್ ಬಾಸ್' ಆಯ್ಕೆ ಸಮಿತಿಗೆ ತಲುಪಿಸಿದ್ದಾರೆ.

ಪ್ರಯತ್ನಕ್ಕೆ ಫಲ ಇದೆ.!
ಇಷ್ಟೆಲ್ಲ ಮಾಡಿದರೂ, ಬಿಗ್ ಬಾಸ್ ಕಡೆಯಿಂದ ಇಲ್ಲಿಯವರೆಗೂ ಉತ್ತರ ಬಂದಿಲ್ಲ. ಆದರೂ, ಅವರ ಪ್ರಯತ್ನ ಮುಂದುವರೆದಿದ್ದು ಈಗ ಮೂಡಲಗಿಯಿಂದ ಸೈಕಲ್ ಸವಾರಿ ಆರಂಭಿಸಿದ್ದಾರೆ. ''ಪ್ರಯತ್ನಕ್ಕೆ ಫಲ ಇದೆ ನನ್ನ ಜೊತೆ ದೇವರಿದ್ದಾನೆ'' ಎನ್ನುತ್ತಾ ಮಂಜುನಾಥ ರವರ ಸೈಕಲ್ ಸವಾರಿ ಶುರುವಾಗಿದೆ.

ಮಂಜುನಾಥ ರೇಳೆಕರ ಹಿನ್ನಲೆ...
ಬೆಳಗಾವಿ ಜಿಲ್ಲೆಯ ಮೂಡಲಗಿ ಗ್ರಾಮ ಮಂಜುನಾಥ ರೆಳೆಕರ ಜೀವನಕ್ಕಾಗಿ ಟೈಲರಿಂಗ್ ಉದ್ಯೋಗ ಮಾಡುತ್ತಿದ್ದಾರೆ. ಹಾಸ್ಯ ಕಲಾವಿದರಾಗಿ ವೃತ್ತಿ ಬದುಕು ಕಂಡುಕೊಳ್ಳುವ ಕನಸನ್ನು ಅವರದ್ದು. ಮಿಸ್ಟರ್ ಬೀನ್ ಕಲೆಯನ್ನ ಕರಗತ ಮಾಡಿಕೊಂಡಿರುವ ಮಂಜುನಾಥ ತಮ್ಮ ಹಾಸ್ಯ ನಟನೆಯ ವಿಡಿಯೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗುವ ಅವಕಾಶ ಸಿಕ್ಕಲ್ಲಿ, ಜನರಿಗೆ ಮನರಂಜನೆ ನೀಡುತ್ತೇನೆ ಎನ್ನುತ್ತಾರೆ ಮಂಜುನಾಥ್.


Click it and Unblock the Notifications











