ಒಂದು ಕಪ್ ಮೊಸರಿಗಾಗಿ 'ಬಿಗ್' ಮನೆಯಲ್ಲಿ ನಡೆದಿದೆ ಮಹಾಯುದ್ಧ.!
ಒಂದು ಲೋಟ ಹಾಲಿಗಾಗಿ 'ಬಿಗ್ ಬಾಸ್' ಮನೆಯಲ್ಲಿ ಕೋಲಾಹಲವೇ ನಡೆದು ಹೋಯ್ತು. ಒಂದು ಪ್ಯಾಕೆಟ್ ಬಿಸ್ಕತ್ತು ಮತ್ತು ಐಸ್ ಕ್ರೀಮ್ ಗಾಗಿ ದೊಡ್ಡ ಸಮರ ಆಗ್ಹೋಯ್ತು. ಇದೀಗ ಒಂದು ಕಪ್ ಮೊಸರಿಗಾಗಿ ಮಹಾಯುದ್ಧ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಮೊಸರು ಸಾರು ಮಾಡಲು ಕೃಷಿ ಮೊಸರನ್ನ ಎತ್ತಿಟ್ಟಿದ್ದರಂತೆ. ಸಮೀರಾಚಾರ್ಯ ಅವಲಕ್ಕಿ ಜೊತೆ ಸ್ವಲ್ಪ ಮೊಸರನ್ನ ಮಿಕ್ಸ್ ಮಾಡಿಕೊಂಡು ತಿಂದಿದ್ದಾರೆ. ಈ ವಿಚಾರ ಸದ್ಯ 'ಬಿಗ್ ಬಾಸ್' ಮನೆಯಲ್ಲಿ ಮಹಾಯುದ್ಧಕ್ಕೆ ಕಾರಣವಾಗಿದೆ.
'ಬಿಗ್ ಬಾಸ್' ಮನೆಯಲ್ಲಿ ಎರಡು ಒಲೆ ಉರಿಯುತ್ತಿರುವುದರಿಂದ, ''ರೇಷನ್ ಸರಿಯಾಗಿ ಭಾಗ ಮಾಡಲು ಸಾಧ್ಯವಾಗುತ್ತಿಲ್ಲ. ತರಕಾರಿ, ಅಕ್ಕಿ, ಬೇಳೆ.. ಈವೆಲ್ಲವೂ ಸಮೀರಾಚಾರ್ಯ ಅವರಿಗೆ ಜಾಸ್ತಿ ಹೋಗುತ್ತಿದೆ. ಅವರು ಮೂರು ಹೊತ್ತು ಊಟ ಮಾಡುತ್ತಾರೆ'' ಎಂಬುದು ಕೃಷಿ, ಸಂಯುಕ್ತ ಹಾಗೂ ಅನುಪಮಾ ವಾದ.

''ಮೂರು ಹೊತ್ತು ಊಟ ಮಾಡುವುದಿಲ್ಲ. ದಿನದಲ್ಲಿ ಒಂದು ಅಥವಾ ಎರಡು ಹೊತ್ತು ಊಟ ಮಾಡುತ್ತೇನೆ'' ಅಂತಾರೆ ಸಮೀರಾಚಾರ್ಯ.
ತರಕಾರಿ ಭಾಗ ಮಾಡುವ ಬಗ್ಗೆ ಹೆಚ್ಚು ಲೆಕ್ಕಾಚಾರ ಶುರು ಆದ್ಮೇಲೆ, ''ಎರಡು ಒಲೆ ಉರಿಯುವುದು ಬೇಡ, ಇನ್ಮೇಲೆ ಇಲ್ಲೇ ತಿನ್ನುವೆ. ನನ್ನ ಭಾಗದ ತಿಂಡಿ-ಊಟವನ್ನ ಎತ್ತಿಟ್ಟಿರಿ. ಹಸಿವಾದ ಮೇಲೆ ತಿನ್ನುವೆ'' ಎಂದರು ಸಮೀರಾಚಾರ್ಯ. ಇದೂ ಕೂಡ 'ಅತಿಥಿ' ಆಗಿ ಬಂದಿರುವ ಸಂಯುಕ್ತಗೆ ಸಮಸ್ಯೆ ಅಂತೆ.!
ಹಸಿವಾದಾಗ ಊಟ ಮಾಡುತ್ತೇನೆ ಎಂದು ಸಮೀರಾಚಾರ್ಯ ಹೇಳಿದ್ರಿಂದ, ''ಅವರು ಉಪವಾಸ ಮಾಡಲು ಶುರು ಮಾಡಿ, ತಮಗೆ ಅಡುಗೆ ಮಾಡಲು ಬಿಟ್ಟಿಲ್ಲ ಅಂತ ಕಾರಣ ಕೊಟ್ಟು ಸಿಂಪತಿ ಗಿಟ್ಟಿಸಿಕೊಳ್ಳುವ ಪ್ಲಾನ್ ಮಾಡಿದ್ದಾರೆ'' ಎಂದೆಲ್ಲ ಸಂಯುಕ್ತ ಕೂಗಾಡಿದರು.
ಮುಂಚೆ, ಇಡೀ ವಾರಕ್ಕೆ ರೇಷನ್ ನ ಭಾಗ ಮಾಡಿ ಸಮೀರಾಚಾರ್ಯಗೆ ಕೊಟ್ಟು, ಅದು ಮುನಿಸಿಗೆ ಕಾರಣ ಆದ್ಮೇಲೆ, ''ನಾನು ಎಷ್ಟು ದಿನ ಅಡುಗೆ ಮನೆಯಲ್ಲಿ ಇರ್ತೀನೋ, ಅಷ್ಟು ದಿನ ರೇಷನ್ ಬಗ್ಗೆ ಅಡ್ಜಸ್ಟ್ ಮಾಡಿ ಕೊಡುತ್ತೇನೆ'' ಎಂದಿದ್ದ ಅನುಪಮಾ ಗೌಡ ಈಗ ಉಲ್ಟಾ ಹೊಡೆದಿದ್ದಾರೆ.
ಒಟ್ನಲ್ಲಿ, ಊಟದ ವಿಚಾರಕ್ಕೆ ಪದೇ ಪದೇ ಜಗಳ ಆಡುತ್ತಿರುವ ಸ್ಪರ್ಧಿಗಳ ಬಗ್ಗೆ ವೀಕ್ಷಕರಿಗೆ ತಲೆ ಬಿಸಿ ಆಗಿರುವುದಂತೂ ಸತ್ಯ.


Click it and Unblock the Notifications











