ಆಡಿದ ಮಾತನ್ನ ಈಡೇರಿಸಿದ ಶಿವಣ್ಣ: 'ಬಿಗ್ ಬಾಸ್' ಸ್ಪರ್ಧಿಗಳಿಗೆ ಭರ್ಜರಿ ಬಾಡೂಟ.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೊದಲ ವಾರಾಂತ್ಯಕ್ಕೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ನಿರ್ದೇಶಕ ಪ್ರೇಮ್ 'ಬಿಗ್ ಬಾಸ್' ಮನೆಯೊಳಗೆ ಅತಿಥಿಗಳಾಗಿ ಎಂಟ್ರಿಕೊಟ್ಟಿದ್ದರು.
'ದಿ ವಿಲನ್' ಚಿತ್ರದ ಪ್ರಚಾರ ನಿಮಿತ್ತ ಶಿವಣ್ಣ ಹಾಗೂ ಪ್ರೇಮ್ 'ಬಿಗ್ ಬಾಸ್' ಮನೆಗೆ ಬಂದಿದ್ದರು. ಜೊತೆಗೆ, ಸ್ಪರ್ಧಿಗಳಿಗೆ 'ದಿ ವಿಲನ್' ಟಾಸ್ಕ್ ಕೂಡ ಕೊಟ್ಟಿದ್ದರು. ಟಾಸ್ಕ್ ನಲ್ಲಿ ವಿಜೇತರಾದ ಆಂಡ್ರ್ಯೂಗೆ ಶಿವಣ್ಣ ಕಡೆಯಿಂದ 'ಸುರಕ್ಷ ಕವಚ' ಲಭಿಸಿತು.
ಇಷ್ಟೆಲ್ಲ ಮುಗಿದ ಮೇಲೆ ಎಲ್ಲಾ ಸ್ಪರ್ಧಿಗಳು ಶಿವರಾಜ್ ಕುಮಾರ್ ಮುಂದೆ 'ಊಟ'ದ ಬೇಡಿಕೆ ಇಟ್ಟರು. ಕೆಲ ಸ್ಪರ್ಧಿಗಳು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ''ನನಗೆ ಚಿಕನ್ ಬೇಕು'', ''ನಾನು ಮಟನ್ ತಿನ್ನಬೇಕು'', ''ನನಗೆ ಜೋಳದ ರೊಟ್ಟಿ ಕಳುಹಿಸಿಕೊಡಿ'' ಅಂತ ಶಿವಣ್ಣನ ಬಳಿ ಕೇಳಿಕೊಂಡರು.
ಯಾವುದಕ್ಕೂ 'ಇಲ್ಲ' ಎನ್ನದ ಶಿವರಾಜ್ ಕುಮಾರ್, ''ನಾನು 'ಬಿಗ್ ಬಾಸ್' ಬಳಿ ಮನವಿ ಮಾಡುತ್ತೇನೆ. ಮುಂದಿನ ವಾರದ ಹೊತ್ತಿಗೆ ನನ್ನ ಕಡೆಯಿಂದ ನಿಮಗೆಲ್ಲ ಊಟ ದೊರೆಯಲಿದೆ'' ಅಂತ ಹೇಳಿ ಸ್ಪರ್ಧಿಗಳ ಬೇಡಿಕೆಗೆ 'ತಥಾಸ್ತು' ಎಂದರು.

ಇತ್ತ ಶಿವಣ್ಣ ಮಾತು ಕೊಟ್ಟಿದ್ದರಿಂದ, 'ಬಿಗ್ ಬಾಸ್' ಕೂಡ ಅನುಮತಿ ಕೊಡಲೇಬೇಕಾಗಿ ಬಂತು. ಆಡಿದ ಮಾತಿನಂತೆ ಎರಡನೇ ವಾರಾಂತ್ಯಕ್ಕೆ ಎಲ್ಲಾ ಸ್ಪರ್ಧಿಗಳಿಗೆ ಶಿವಣ್ಣ ಬಾಡೂಟ ಕಳುಹಿಸಿಕೊಟ್ಟರು. ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಎಲ್ಲರೂ ಥ್ಯಾಂಕ್ಸ್ ಹೇಳಿದರು.
ಶಿವಣ್ಣ ಕಳುಹಿಸಿದ ಬಾಡೂಟದ ಸವಿಯನ್ನ ಎಲ್ಲರೂ ಸವಿಯುತ್ತಿದ್ದರೆ, ಆಂಡ್ರ್ಯೂ ಮಾತ್ರ ಎಲ್ಲರ ತಟ್ಟೆಯನ್ನೇ ನೋಡುತ್ತಿದ್ದರು. ಕಾರಣ, 'ಬಿಗ್ ಬಾಸ್' ಆಂಡ್ರ್ಯೂಗೆ ಕೊಟ್ಟಿದ್ದ ಶಿಕ್ಷೆ.! ಕದ್ದು ಚಾಕಲೇಟ್ ತಿಂದಿದ್ದ ಆಂಡ್ರ್ಯೂಗೆ ಶಿವಣ್ಣ ಕಳುಹಿಸಿದ್ದ ಊಟ ಸವಿಯುವ ಅವಕಾಶವನ್ನ 'ಬಿಗ್ ಬಾಸ್' ನೀಡಲಿಲ್ಲ.
ಅಂತೂ ಶಿವಣ್ಣನ ಕೃಪೆಯಿಂದ ಎರಡನೇ ವಾರವೇ ಭರ್ಜರಿ ಬಾಡೂಟ ಸವಿದು ಸ್ಪರ್ಧಿಗಳೆಲ್ಲಾ ಖುಷಿಯಾದರು.


Click it and Unblock the Notifications











