'ಬಿಗ್ ಬಾಸ್' ಮನೆಯಲ್ಲಿ ಹೀಗೆ ಆಗಿರೋದು ಬಹುಶಃ ಇದೇ ಮೊದಲು.!
ಕನ್ನಡದಲ್ಲಿ ಇಲ್ಲಿಯವರೆಗೂ ಆರು ಆವೃತ್ತಿಗಳ 'ಬಿಗ್ ಬಾಸ್' ಕಾರ್ಯಕ್ರಮ ಪ್ರಸಾರ ಆಗಿದೆ. ಈ ಆರು ಆವೃತ್ತಿಗಳಲ್ಲಿ ತರಹೇವಾರಿ ಟಾಸ್ಕ್ ಗಳು, ಭಿನ್ನ-ವಿಭಿನ್ನ ಚಟುವಟಿಕೆಗಳು, ಜೋರು ಜೋರು ಗಲಾಟೆಗಳು ನಡೆದಿವೆ. ಆದರೆ, ಯಾವುದೂ ಕ್ಯಾಮರಾ ಹಾಳಾಗುವ ಮಟ್ಟಕ್ಕೆ ಹೋಗಿರಲಿಲ್ಲ.
ಮೊನ್ನೆ ಮೊನ್ನೆ ನಡೆದ 'ಮಾಡು ಇಲ್ಲವೇ ಬಿಡು' ಟಾಸ್ಕ್ ನಲ್ಲಿ ಒಂದು ಕ್ಯಾಮರಾ ಸಂಪೂರ್ಣವಾಗಿ ಹಾಳಾದ ಘಟನೆ ನಡೆದಿದೆ. 'ಮಾಡು ಇಲ್ಲವೇ ಬಿಡು' ಚಟುವಟಿಕೆಯ ಅನುಸಾರ, ಸ್ಪರ್ಧಿಗಳು ತ್ರಿಕೋನ ಆಕಾರದ ಮೇಲೆ ಹಗ್ಗ ಹಿಡಿದು ನಿಲ್ಲಬೇಕಿತ್ತು. ಹಾಗೆ ನಿಂತವರ ಏಕಾಗ್ರತೆಗೆ ಭಂಗ ತರಲು ಔಟ್ ಆದ ಸದಸ್ಯರು ನೀರು ಎರಚಬೇಕಿತ್ತು.
ನೀರು ಎರಚುವ ಸಂದರ್ಭದಲ್ಲಿ ಕ್ಯಾಮರಾಗೆ ಹಾನಿ ಉಂಟಾಗಿದೆ. ಪರಿಣಾಮ ಗಾರ್ಡನ್ ಏರಿಯಾದಲ್ಲಿ ಇರಿಸಲಾದ ಕ್ಯಾಮರಾ ಸಂಪೂರ್ಣವಾಗಿ ಹಾಳಾಗಿದೆ.

ಹಾಳಾದ ಕ್ಯಾಮರಾದ ಫೋಟೋಗೆ ಹಾರ ಹಾಕಿದನ್ನು ನೋಡಿ ಜೈಜಗದೀಶ್, ರಾಜು ತಾಳಿಕೋಟೆ, ಕುರಿ ಪ್ರತಾಪ್ ಮತ್ತು ಪ್ರಿಯಾಂಕಾ ಕ್ಷಮೆ ಕೇಳಿದರು. ''ನಾವು ತಪ್ಪು ಮಾಡಿದ್ದೇವೆ. ದಯವಿಟ್ಟು ಕ್ಷಮೆ ಇರಲಿ'' ಎಂದು ರಾಜು ತಾಳಿಕೋಟೆ ಕೈಮುಗಿದರು.
ಇದೇ ಸಮಯದಲ್ಲಿ ''ನಮ್ಮಿಂದ ತಪ್ಪಾಗಿದೆ. ನಮ್ಮನ್ನು ಕ್ಷಮಿಸಿ. ಆದರೆ, ನಾವು ಮಾತ್ರ ಅಲ್ಲ.. ಎಲ್ಲರೂ ತಪ್ಪು ಮಾಡಿದ್ದಾರೆ. ಕ್ಷಮೆ ಕೇಳುವುದಕ್ಕೆ ಮಾತ್ರ ಯಾರೂ ಬರ್ತಿಲ್ಲ'' ಅಂತ ಜೈಜಗದೀಶ್ ಅಸಮಾಧಾನಗೊಂಡರು.
''ಕ್ಯಾಮರಾ ಇದೆ ನೀರು ಹಾಕಬೇಡಿ'' ಅಂತ ಪದೇ ಪದೇ ಹೇಳಿದರೂ, ರಾಜು ತಾಳಿಕೋಟೆ ಕೇಳಲಿಲ್ಲ. ''ಎರಡು ಕೋಟಿ ಕೊಡುವವನು ನಾನು'' ಅಂತ ರಾಜು ತಾಳಿಕೋಟೆ ಹೇಳಿದರು ಅನ್ನೋದು ಕೆಲವರ ಆರೋಪ. ಯಾರಿಂದ ಪ್ರಮಾದ ಆಯ್ತೋ, ಗೊತ್ತಿಲ್ಲ. ಒಟ್ನಲ್ಲಿ ಕ್ಯಾಮರಾ ಮಾತ್ರ ಡ್ಯಾಮೇಜ್ ಆಗಿರುವುದು ಸತ್ಯ.
ಹಾಗ್ನೋಡಿದ್ರೆ, 'ಬಿಗ್ ಬಾಸ್' ಮನೆಗೆ ಕ್ಯಾಮರಾಗಳೇ ಆಧಾರ. ಸ್ಪರ್ಧಿಗಳ ಪ್ರತಿಯೊಂದು ನಡೆಯನ್ನೂ ಸೆರೆಹಿಡಿಯಲು ಮೂಲೆ ಮೂಲೆಯಲ್ಲೂ ಕ್ಯಾಮರಾ ಇರಿಸಲಾಗಿದೆ. ಇಲ್ಲಿಯವರೆಗೂ ಏನೇ ಆದರೂ ಯಾರೂ ಕ್ಯಾಮರಾ ತಂಟೆಗೆ ಹೋಗಿರಲಿಲ್ಲ. ಆದ್ರೆ, ಈ ಬಾರಿ ಕ್ಯಾಮರಾ ಡ್ಯಾಮೇಜ್ ಆಗುವ ಮಟ್ಟಕ್ಕೆ ಟಾಸ್ಕ್ ನಡೆದಿದೆ. ಬಿಗ್ ಬಾಸ್ ಕನ್ನಡ ಹಿಸ್ಟ್ರಿಯಲ್ಲಿ ಕ್ಯಾಮರಾ ಫೋಟೋಗೆ ಹಾರ ಬಿದ್ದಿರೋದು ಇದೇ ಮೊದಲು.


Click it and Unblock the Notifications











