'ಕಿನ್ನರಿ' ಭೂಮಿ ಶೆಟ್ಟಿ ಏಕಾಗ್ರತೆಗೆ ಚಪ್ಪಾಳೆ ಹೊಡೆಯಲೇಬೇಕು.!
Recommended Video
ಸಿಲ್ಲಿ ಸಿಲ್ಲಿ ವಿಚಾರಗಳಿಗೆ ಭೂಮಿ ಶೆಟ್ಟಿ ಕೋಪ ಮಾಡಿಕೊಳ್ಳಬಹುದು. ಆಗಾಗ ಗೊಳೋ ಎಂದು ಕಣ್ಣೀರು ಹಾಕಬಹುದು. ಆದರೆ ಟಾಸ್ಕ್ ಅಂತ ಬಂದಾಗ ಮಾತ್ರ ಭೂಮಿ ಶೆಟ್ಟಿ ಎಲ್ಲರನ್ನೂ ಮೀರಿಸುತ್ತಾರೆ. ಈಗಾಗಲೇ 'ಸೇಬು ಬೇಕಾ...' ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ಕೊಟ್ಟು ಭೂಮಿ ಶೆಟ್ಟಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ಇದೀಗ 'ಮಾಡು ಇಲ್ಲವೇ ಬಿಡು' ಚಟುವಟಿಕೆಯಲ್ಲಿ ಕೊನೆಯವರಗೂ ಏಕಾಗ್ರತೆ ಕಳೆದುಕೊಳ್ಳದೇ ಅದ್ಭುತ ಪ್ರದರ್ಶನ ನೀಡಿದ್ದಾರೆ.
'ಬಿಗ್ ಬಾಸ್' ಈ ವಾರ 'ರಣರಂಗ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ ನೀಡಿರುವುದು ನಿಮಗೆಲ್ಲಾ ಗೊತ್ತೇ ಇದೆ. ಈಗಾಗಲೇ ಮುಗಿದಿರುವ ಐದು ಸವಾಲುಗಳಲ್ಲಿ ಸಮಬಲದ ಹೋರಾಟ ನಡೆಸುತ್ತಿರುವ ಎರಡೂ ತಂಡಗಳಿಗೆ ನಿರ್ಣಾಯಕವಾಗಿದ್ದು ಆರನೇ ಸವಾಲು. ಅದೇ 'ಮಾಡು ಇಲ್ಲವೇ ಬಿಡು'. ಇದರ ಅನುಸಾರ ಹಗ್ಗವನ್ನು ಹಿಡಿದುಕೊಂಡು ತ್ರಿಕೋನ ಆಕಾರದ ಪೆಟ್ಟಿಗೆ ಮೇಲೆ ಎರಡೂ ತಂಡಗಳ ತಲಾ ಆರು ಸದಸ್ಯರು ನಿಲ್ಲಬೇಕಿತ್ತು. ಹೆಚ್ಚು ಕಾಲ ಪೆಟ್ಟಿಗೆ ಮೇಲೆ ನಿಲ್ಲುವ ಸದಸ್ಯ, ತಮ್ಮ ತಂಡವನ್ನ ಗೆಲ್ಲಿಸುತ್ತಾನೆ. ಗೆದ್ದ ತಂಡ ಲಕ್ಷುರಿ ಬಜೆಟ್ ಮೇಲೆ ಹಕ್ಕು ಸಾಧಿಸುತ್ತದೆ.
25ನೇ ದಿನ ಸಂಜೆ 6.15ಕ್ಕೆ ಈ ಟಾಸ್ಕ್ ಪ್ರಾರಂಭವಾಯಿತು. ಮಧ್ಯರಾತ್ರಿ 12.20 ಆಗುವಷ್ಟರಲ್ಲಿ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಮಾತ್ರ ಒಂಟಿ ಕಾಲ ಮೇಲೆ ನಿಂತಿದ್ದರು. ಮಧ್ಯರಾತ್ರಿ 2.35 ಆದರೂ ಇಬ್ಬರೂ ಬಿಟ್ಟುಕೊಡಲಿಲ್ಲ. ಒಟ್ಟಾರೆಯಾಗಿ ಎಂಟುವರೆ ಗಂಟೆ ನಡೆದ ಟಾಸ್ಕ್ ನಲ್ಲಿ ನಿರ್ಣಾಯಕವಾದ 20 ಪಾಯಿಂಟ್ ಗಳಿಗಾಗಿ, ಇಬ್ಬರೂ 3.30 ಗಂಟೆಗಳ ಕಾಲ ಒಂದೇ ಕಾಲಲ್ಲಿ ನಿಂತಿದ್ದರು. ಕೊನೆಗೆ ದೀಪಿಕಾ ದಾಸ್ ಬಿಟ್ಟು ಕೊಟ್ಟರು.

ಕೊನೆಯವರೆಗೂ ಏಕಾಗ್ರತೆ ಕಳೆದುಕೊಳ್ಳದೆ, ಹೆಚ್ಚು ಕಾಲ ಒಂದೇ ಕಾಲಲ್ಲಿ ನಿಂತಿದ್ದ ಭೂಮಿ ಶೆಟ್ಟಿ ಪರ್ಫಾಮೆನ್ಸ್ ಗೆ ಸಲಾಂ ಹೊಡೆಯಲೇಬೇಕು. ದೀಪಿಕಾ ದಾಸ್ ಕೂಡ ಏನು ಕಮ್ಮಿ ಇಲ್ಲ. ಅವರ ಏಕಾಗ್ರತೆಗೂ ಹ್ಯಾಟ್ಸ್ ಆಫ್ ಹೇಳಬೇಕು.
ಕರಾವಳಿ ಕುವರಿ ಭೂಮಿ ಶೆಟ್ಟಿ ಶ್ರಮದಿಂದ ಈ ವಾರದ ಲಕ್ಷುರಿ ಬಜೆಟ್ 'ಸಿಡಿಲು' ತಂಡದ ಪಾಲಾಗಿದೆ. ಇದನ್ನ ಪರಿಗಣಿಸಿ ಭೂಮಿ ಶೆಟ್ಟಿಗೆ ಈ ವಾರ ಕಿಚ್ಚ ಸುದೀಪ್ 'ಮೆಚ್ಚುಗೆಯ ಚಪ್ಪಾಳೆ' ತಟ್ಟಿದರೂ ಅಚ್ಚರಿ ಇಲ್ಲ.


Click it and Unblock the Notifications











