ಎರಡು ವಾರ: 'ಬಿಗ್ ಬಾಸ್' ಮನೆಯೊಳಗೆ ಏನ್ ನಡೀತಿದೆ.? ವೀಕ್ಷಕರಿಗೆ ಅರ್ಥ ಆಗ್ತಿಲ್ಲ.!
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದಲ್ಲಿ ಅದಾಗಲೇ ಎರಡು ವಾರಗಳು ಮುಗಿದಿವೆ. ಮೊದಲ ವಾರ ಎಲ್ಲಾ ಕ್ಯಾಮರಾಗಳ ಫೋಕಸ್ ಹಿರಿಯ ಪತ್ರಕರ್ತ ರವಿ ಬೆಳಗೆರೆ ಮೇಲೆ ಇದ್ದರೆ, ಎರಡನೇ ವಾರ ಒಂದು ಆಪಲ್ ಮತ್ತು ಅದರ ಸುತ್ತ ನಡೆದ ಗಲಾಟೆಗಳನ್ನೇ ಹೈಲೈಟ್ ಮಾಡಲಾಗಿದೆ.
ಅಸಲಿಗೆ, ಈ ಎರಡು ವಾರಗಳಲ್ಲಿ 'ಬಿಗ್ ಬಾಸ್' ಮನೆಯಲ್ಲಿ ಏನೇನು ನಡೆಯಿತು ಅನ್ನೋದೇ ವೀಕ್ಷಕರಿಗೆ ಸರಿಯಾಗಿ ಅರ್ಥ ಆಗಿಲ್ಲ. ಸ್ಪರ್ಧಿಗಳು ಆಡುವ ಖಾಲಿ ಪೋಲಿ ಮಾತುಗಳೇ ಸಂಚಿಕೆಗಳಲ್ಲಿ ಪ್ರಸಾರ ಆಗುತ್ತಿದೆ. ಅದು ಬಿಟ್ಟರೆ, ಟಾಸ್ಕ್ ಗಳ ಮೇಲೆ 'ಬಿಗ್ ಬಾಸ್' ಎಡಿಟಿಂಗ್ ಟೀಮ್ ಗಮನ ಹರಿಸುತ್ತಿಲ್ಲ.
ಅಷ್ಟಕ್ಕೂ, ಈ ಎರಡು ವಾರಗಳಲ್ಲಿ ಸ್ಪರ್ಧಿಗಳಿಗೆ 'ಬಿಗ್ ಬಾಸ್' ಕೊಟ್ಟಿದ್ದ ಟಾಸ್ಕ್ ಗಳು ಯಾವುವು ಅನ್ನೋದೇ ವೀಕ್ಷಕರಲ್ಲಿ ರಿಜಿಸ್ಟರ್ ಆಗಿಲ್ಲ. ಯಾವುದು ಲಕ್ಷುರಿ ಬಜೆಟ್ ಟಾಸ್ಕ್, ಯಾವುದು ವಿಶೇಷ ಚಟುವಟಿಕೆ ಎಂಬುದೂ ನೋಡುಗರಿಗೆ ತಿಳಿದು ಬರ್ತಿಲ್ಲ. ಹೀಗಾಗಿ, ಯಾವಾಗ್ಯಾವಾಗ ಏನೇನ್ ಆಗ್ತಿದೆ ಅನ್ನೋದೇ ಯಾರಿಗೂ ಗೊತ್ತಾಗುತ್ತಿಲ್ಲ. ಮುಂದೆ ಓದಿರಿ...

ಲಕ್ಷುರಿ ಬಜೆಟ್ ಟಾಸ್ಕ್ ಯಾವುದು.?
ಮೊದಲ ವಾರದ ಲಕ್ಷುರಿ ಬಜೆಟ್ ಟಾಸ್ಕ್ ಯಾವುದು.? ಎರಡನೇ ವಾರದ ಲಕ್ಷುರಿ ಬಜೆಟ್ ಟಾಸ್ಕ್ ಯಾವುದು.? ಆ ಟಾಸ್ಕ್ ಗಳಿಂದ ಸ್ಪರ್ಧಿಗಳಿಗೆಲ್ಲ 'ಬಿಗ್ ಬಾಸ್' ಕಲಿಸಿದ ನೀತಿ ಪಾಠ ಏನು.? ಎಂಬಿತ್ಯಾದಿ ಪ್ರಶ್ನೆಗಳಿಗೆ ವೀಕ್ಷಕರಲ್ಲಂತೂ ಉತ್ತರ ಇಲ್ಲ. ಯಾಕಂದ್ರೆ, ವೀಕ್ಷಕರಲ್ಲಿ ಈ ಬಗ್ಗೆ ಕ್ಲಾರಿಟಿಯೇ ಇಲ್ಲ.

ಯಾವಾಗ ಶುರು ಆಯ್ತು.?
ಮೊದಲ ವಾರ 'ಗುಣಚೀಲ' ಟಾಸ್ಕ್ ಯಾವಾಗ ಶುರು ಆಯ್ತು, ಯಾವಾಗ ಕಂಪ್ಲೀಟ್ ಆಯ್ತು ಅಂತಲೇ ಗೊತ್ತಾಗಿಲ್ಲ. ಇನ್ನೂ ಎರಡನೇ ವಾರ ಎಲ್ಲರ ಬಾಯಲ್ಲೂ 'ಕಪ್ಪು ಚುಕ್ಕೆ' ಇದೆ. ಆದರೆ, 'ಕಪ್ಪು ಚುಕ್ಕೆ' ಲಕ್ಷುರಿ ಬಜೆಟ್ ಟಾಸ್ಕ್ ಹೌದೋ, ಅಲ್ವೋ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ.

ಯಾರು ಕಪ್ಪು ಚುಕ್ಕೆ.?
ವಾರವೇ ಮುಗಿದು ಹೋಯ್ತು. ಆದರೆ ಕಪ್ಪು ಚುಕ್ಕೆ ಯಾರು ಎಂಬುದನ್ನು ಸ್ಪರ್ಧಿಗಳು ಕಂಡು ಹಿಡಿಯಲಿಲ್ಲ. ಸ್ಪರ್ಧಿಗಳು ಹೋಗಲಿ.. ವೀಕ್ಷಕರಿಗೂ ಕಪ್ಪು ಚುಕ್ಕೆ ಯಾರು ಅಂತ ತಿಳಿದಿಲ್ಲ. ಇದಕ್ಕೆ ನೇರ ಹೊಣೆ 'ಬಿಗ್ ಬಾಸ್' ಸಂಕಲನಕಾರರು.

ಆಪಲ್ ಮಾರಿದ್ದು ಯಾಕೆ.?
ಇದಕ್ಕಿದ್ದಂತೆ ಭೂಮಿ ಶೆಟ್ಟಿ ಆಪಲ್ ಮಾರಲು ಶುರು ಮಾಡಿದರು. ಹೀಗ್ಯಾಕೆ ಅಂತ ತಿಳಿದುಕೊಳ್ಳಲು ಕ್ಯಾಪ್ಟನ್ ರಶ್ಮಿ ಬೆಸ್ಟ್ ಪರ್ಫಾಮೆನ್ಸ್ ಯಾರು ಎಂಬುದನ್ನ ಡಿಕ್ಲೇರ್ ಮಾಡುವವರೆಗೂ ವೀಕ್ಷಕರು ಕಾಯಬೇಕಿತ್ತು. ಅಲ್ಲಿಯವರೆಗೂ ಆಪಲ್ ಮಾರಾಟ ಹಿಂದಿನ ಸತ್ಯ ಅರ್ಥವೇ ಆಗಲಿಲ್ಲ.

ದಿಢೀರ್ ಜಗಳ.!
ಜೈಜಗದೀಶ್ ಬಾಯಲ್ಲಿ ಬಂದ ಕೆಟ್ಟ ಬೈಗುಳಗಳು, ನಾಮಿನೇಶನ್ ಗೂ ಮುನ್ನ ಸುಜಾತ ಕೂಗಾಟ, ರಾತ್ರಿ ಒಂದು ಆಪಲ್ ತಿನ್ನಲು ಚೈತ್ರ ಕೋಟೂರುಗೆ ಚಂದನ್ ಆಚಾರ್ ಪರ್ಮಿಶನ್ ಕೊಟ್ಟ ಸಂದರ್ಭ... ಇದ್ಯಾವುದನ್ನಾದರೂ ಟಿವಿಯಲ್ಲಿ ಪ್ರಸಾರ ಆಗುವ ಒಂದುವರೆ ಗಂಟೆಯ ಸಂಚಿಕೆಯಲ್ಲಿ ನೀವು ನೋಡಿದ್ದೀರಾ.? 'ಬಿಗ್ ಬಾಸ್' ಮನೆಯೊಳಗೆ ದಿಢೀರ್ ಅಂತ ಜಗಳ ಶುರುವಾದರೆ ವೀಕ್ಷಕರು ತಲೆ ಕೆರೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಖಾಲಿ ಪಲಾವ್.!
ಟಿವಿಯಲ್ಲಿ ಪ್ರಸಾರ ಆಗುವ 'ಬಿಗ್ ಬಾಸ್' ಸಂಚಿಕೆಗಳಲ್ಲಿ ಮನರಂಜನೆ ನೀಡದ ಖಾಲಿ ಮಾತುಗಳು, ಬೋರಿಂಗ್ ಹರಟೆಗಳೇ ಹೆಚ್ಚಾಗಿವೆ. ಟಾಸ್ಕ್ ಗಳನ್ನಂತೂ ವೀಕ್ಷಕರು ದುರ್ಬೀನ್ ಹಾಕಿ ಹುಡುಕಿಕೊಂಡು ನೋಡಬೇಕು. ಹಿಂದಿನ ಸೀಸನ್ ಗಳಲ್ಲೆಲ್ಲ ಟಾಸ್ಕ್ ಗಳು.. ಅದರಲ್ಲಿ ಸ್ಪರ್ಧಿಗಳು ನಡೆದುಕೊಳ್ಳುವ ರೀತಿ ಬಗ್ಗೆ ಚರ್ಚೆ ಆಗುತ್ತಿತ್ತು. ಆದ್ರೀಗ ಟಾಸ್ಕ್ ಗಳೇ ಸೈಡ್ ಲೈನ್ ಆಗಿವೆ.

ಒಂದೇ ತರಹ.!
ಕಳೆದ 'ಬಿಗ್ ಬಾಸ್' ಆವೃತ್ತಿಗಳಲ್ಲೂ ಆಹಾರ, ಅಡುಗೆ ವಿಚಾರಕ್ಕೆ ಜಾಸ್ತಿ ಜಗಳ ನಡೆದಿವೆ. ಈ ಬಾರಿಯೂ ಅದೇ ರಿಪೀಟ್ ಆಗುತ್ತಿದೆ. ಟಾಸ್ಕ್ ಗಳಲ್ಲಿ ಮನರಂಜನೆ ತರಿಸಲು ಆಗದೆ ಸ್ಪರ್ಧಿಗಳಿಗೆ ಕೊಡುವ ರೇಷನ್ ಕಮ್ಮಿ ಮಾಡಿ ಒತ್ತಾಯ ಪೂರ್ವಕವಾಗಿ ಗಲಾಟೆ ಸನ್ನಿವೇಶ ಸೃಷ್ಟಿಸಲಾಗ್ತಿದ್ಯಾ.? ಈ ಪ್ರಶ್ನೆಗೆ 'ಬಿಗ್ ಬಾಸ್' ಉತ್ತರ ಕೊಡಬೇಕು.

ವಾರಕ್ಕೊಂದು ಸೆಂಟಿಮೆಂಟ್
ಮೊದಲ ವಾರ ಅಪ್ಪ-ಅಮ್ಮನ ಬಗ್ಗೆ ಮಾತು.. ಎರಡನೇ ವಾರ ಕ್ಷಮೆ ಕೇಳುವುದು.. ಈ ಎರಡರಲ್ಲಿ ಸ್ಪರ್ಧಿಗಳ ಕಣ್ಣೀರ ಕೋಡಿ ಹರಿಯಿತು. ವಾರಕ್ಕೊಂದು ಸೆಂಟಿಮೆಂಟ್ ಹೈಲೈಟ್ ಆಗುತ್ತಿದೆ ಹೊರತು ಇನ್ಯಾವ ಮನರಂಜನೆಯೂ ಸಿಗುತ್ತಿಲ್ಲ. ಕಾಮಿಡಿ ಅಂತೂ ಇಲ್ಲವೇ ಇಲ್ಲ.

ವೆಲ್ ಎಡಿಟೆಡ್ ಶೋ
'ಬಿಗ್ ಬಾಸ್' ಶೋ ಸ್ಕ್ರಿಪ್ಟೆಡ್ ಅಲ್ಲ... ವೆಲ್ ಎಡಿಟೆಡ್ ಶೋ ಅಂತ ಹಲವು ಸ್ಪರ್ಧಿಗಳು ಹೇಳಿದ್ದಾರೆ. ಯಾವುದೇ ಸಿನಿಮಾ ಆಗಲಿ, ಸೀರಿಯಲ್ ಆಗಲಿ, ರಿಯಾಲಿಟಿ ಶೋ ಆಗಲಿ.. ವೀಕ್ಷಕರನ್ನ ಹಿಡಿದು ಕೂರಿಸಬೇಕು ಅಂದ್ರೆ ಸಂಕಲನ ಬಹಳ ಮುಖ್ಯ. ಕತ್ರಿ ಕೆಲಸ ಸರಿಯಾಗಿ ಆಗಿಲ್ಲ ಅಂದ್ರೆ ಎಲ್ಲವೂ ಸಪ್ಪೆ. ಇನ್ನಾದರೂ ಟಾಸ್ಕ್ ಗಳ ಬಗ್ಗೆ... ಸಂಕಲನದ ಬಗ್ಗೆ 'ಬಿಗ್ ಬಾಸ್' ಸೀರಿಯಸ್ ಆದರೆ.. ಟಿ.ಆರ್.ಪಿ ಅವರಿಗೇ.!

ನೀವೇನಂತೀರಿ.?
ವೂಟ್ ನಲ್ಲಿ 'ಬಿಗ್ ಬಾಸ್' ನೋಡಿಲ್ಲ ಅಂದ್ರೆ ನೀವು ಬಿಗ್ ಬಾಸೇ ನೋಡಿಲ್ಲ ಎಂಬ ಪ್ರೋಮೋ ಕೂಡ ಆಗಾಗ ಪ್ರಸಾರ ಆಗುತ್ತೆ. ವೂಟ್ ನಲ್ಲಿ ವೀಕ್ಷಕರು 'ಬಿಗ್ ಬಾಸ್' ನೋಡಬೇಕು ಅಂದ್ರೆ ಟಿವಿಯಲ್ಲಿ ಪ್ರಸಾರ ಆಗುವ ಸಂಚಿಕೆಗಳು ಆಕರ್ಷಕವಾಗಿರಬೇಕು ಅಲ್ವೇ.?! ಇದರ ಬಗ್ಗೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನು ನಮಗೂ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.
ಚಿತ್ರಕೃಪೆ: ಕಲರ್ಸ್ ಕನ್ನಡ/ವೂಟ್


Click it and Unblock the Notifications











