'ಬಿಗ್ ಬಾಸ್ ಕನ್ನಡ-7': ಮೊದಲ ವಾರವೇ ಔಟ್ ಆದ ಗುರುಲಿಂಗ ಸ್ವಾಮೀಜಿ
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮದ ಮೊದಲ ವಾರ ಗುರುಲಿಂಗ ಸ್ವಾಮೀಜಿ ಔಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಬಹುತೇಕ ಸೈಲೆಂಟ್ ಆಗಿದ್ದ ಗುರುಲಿಂಗ ಸ್ವಾಮೀಜಿ ಮಡಿ-ಮೈಲಿಗೆ ಬಗ್ಗೆ ಹೆಚ್ಚು ಗಮನ ಕೊಟ್ಟರು ಅನ್ನೋದು ಬಿಟ್ಟರೆ ಯಾವುದೇ ವಿವಾದಕ್ಕೆ, ಜಗಳಕ್ಕೆ ಸಾಕ್ಷಿ ಆಗಲಿಲ್ಲ.
ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಗುರುಲಿಂಗ ಸ್ವಾಮೀಜಿಗೆ ಅದ್ಯಾಕೋ ವೀಕ್ಷಕರಿಂದ ಬೆಂಬಲ ವ್ಯಕ್ತವಾಗಿಲ್ಲ. 'ಬಿಗ್ ಬಾಸ್' ಕಡೆಯಿಂದ ಬರುವ ಹಣವನ್ನು ನೆರೆ ಪರಿಹಾರಕ್ಕೆ ನೀಡುವುದಾಗಿ ಗುರುಲಿಂಗ ಸ್ವಾಮೀಜಿ ಘೋಷಿಸಿದ್ದರು. ಆದರೆ ಒಂದೇ ವಾರಕ್ಕೆ ಗುರುಲಿಂಗ ಸ್ವಾಮೀಜಿ ಹೊರಬಂದಿರುವುದು ಬೇಸರದ ಸಂಗತಿ.

ಗುರುಲಿಂಗ ಸ್ವಾಮೀಜಿ ಪ್ರಸ್ತುತ ಅಗಡಿ ಅಕ್ಕಿ ಮಠದ ಪೀಠಾಧಿಪತಿ. ಇಲ್ಲಿಯವರೆಗೂ 'ಬಿಗ್ ಬಾಸ್' ಶೋ ನೋಡದ ಸ್ವಾಮೀಜಿ, ಒಂದೊಳ್ಳೆ ಉದ್ದೇಶ ಇಟ್ಟುಕೊಂಡು 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದರು. ಆದರೆ ಮೊದಲ ವಾರಕ್ಕೆ ಅವರ ಜರ್ನಿ ಮುಕ್ತಾಯಗೊಂಡಿದೆ.
ಅಂದ್ಹಾಗೆ, ಮೊದಲ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಆರು ಮಂದಿ ನಾಮಿನೇಟ್ ಆಗಿದ್ದರು. ಗುರುಲಿಂಗ ಸ್ವಾಮೀಜಿ ಜೊತೆಗೆ ಚೈತ್ರ ವಾಸುದೇವನ್, ಚೈತ್ರ ಕೊಟ್ಟೂರ್, ರಾಜು ತಾಳಿಕೋಟೆ, ಕುರಿ ಪ್ರತಾಪ್ ಮತ್ತು ರವಿ ಬೆಳಗೆರೆ ಡೇಂಜರ್ ಝೋನ್ ನಲ್ಲಿದ್ದರು.
ಅನಾರೋಗ್ಯದ ಕಾರಣ ವೈದ್ಯರ ಸಲಹೆ ಮೇರೆಗೆ ರವಿ ಬೆಳಗೆರೆ ಯವರನ್ನ ಆಟದಲ್ಲಿ ಮುಂದುವರೆಸದಿರಲು 'ಬಿಗ್ ಬಾಸ್' ನಿರ್ಧರಿಸಿದರು. ಹೀಗಾಗಿ ಸ್ಪರ್ಧಿಯಾಗಿದ್ದ ರವಿ ಬೆಳಗೆರೆ ಸ್ಥಾನ ಅತಿಥಿಯಾಗಿ ಬದಲಾಯಿತು. ಉಳಿದ ಐದು ಮಂದಿಯ ಪೈಕಿ ಗುರುಲಿಂಗ ಸ್ವಾಮೀಜಿ ಅವರಿಗೆ ಕಮ್ಮಿ ವೋಟ್ಸ್ ಬಂದ ಪರಿಣಾಮ ಎವಿಕ್ಟ್ ಮಾಡಲಾಗಿದೆ.
ಅತ್ತ ಗೆಸ್ಟ್ ಆಗಿದ್ದ ರವಿ ಬೆಳಗೆರೆ ಕೂಡ 'ಬಿಗ್ ಬಾಸ್' ಮನೆಯಿಂದ ಹೊರಬಂದಿದ್ದಾರೆ.


Click it and Unblock the Notifications











