'ಬಿಗ್ ಬಾಸ್' ಮನೆಯಲ್ಲಿ ಗುಂಪುಗಾರಿಕೆ: ಯಾರ ವಿರುದ್ಧ ಯಾರ ಮಸಲತ್ತು.?
'ಬಿಗ್ ಬಾಸ್ ಕನ್ನಡ-7' ಕಾರ್ಯಕ್ರಮ ಶುರುವಾಗಿ ಮೂರು ವಾರಗಳು ಉರುಳಿವೆ ಅಷ್ಟೇ. ಅಷ್ಟು ಬೇಗ 'ದೊಡ್ಮನೆ'ಯೊಳಗೆ ಗುಂಪುಗಾರಿಕೆ ಆರಂಭವಾಗಿದೆ. 'ಕಮ್ಫರ್ಟ್ ಝೋನ್'ನಿಂದ ಪ್ರಾರಂಭವಾಗಿದ್ದು, ಇದೀಗ ಗ್ರೂಪಿಸಂ ಆಗಿ ಮಾರ್ಪಾಟಾಗಿದೆ.
ವಾಸುಕಿ ವೈಭವ್, ಶೈನ್ ಶೆಟ್ಟಿ, ಚಂದನಾ ಮತ್ತು ಕಿಶನ್ ಒಂದು ಗುಂಪಾಗಿದ್ದರೆ, ಪ್ರಿಯಾಂಕಾ, ಕುರಿ ಪ್ರತಾಪ್, ರಾಜು ತಾಳಿಕೋಟೆ ಮತ್ತು ಭೂಮಿ ಶೆಟ್ಟಿ ಇನ್ನೊಂದು ಗುಂಪು.
ವಯಸ್ಸಿನಲ್ಲಿ ಹಿರಿಯವರಾದ ಜೈಜಗದೀಶ್ ಮತ್ತು ಸುಜಾತ ಆದಷ್ಟು ಜೊತೆಯಾಗೇ ಇರ್ತಾರೆ. ಇವರೆಲ್ಲರ ನಡುವೆ ಚೈತ್ರ ಕೋಟೂರು, ದೀಪಿಕಾ ದಾಸ್ ಮತ್ತು ಚಂದನ್ ಆಚಾರ್ ಬಹುತೇಕ ಒಂಟಿ. ಹರೀಶ್ ರಾಜ್ ಮಾತ್ರ ಯಾವುದೇ ಗುಂಪಿನಲ್ಲಿ ಗುರುತಿಸಿಕೊಳ್ಳದೆ, ಎಲ್ಲರ ಜೊತೆಗೂ ಜಾಲಿ ಮೂಡ್ನಲ್ಲಿರ್ತಾರೆ. ಈಗಷ್ಟೇ ಎಂಟ್ರಿಕೊಟ್ಟಿರುವ ಪೃಥ್ವಿ ಸದ್ಯಕೆ ಏಕಾಂಗಿ.

'ಬಿಗ್ ಬಾಸ್' ಮನೆಯಲ್ಲಿನ ಗುಂಪುಗಾರಿಕೆ ಎದ್ದು ಕಂಡಿದ್ದು ನಾಮಿನೇಷನ್ ಪ್ರಕ್ರಿಯೆಯಲ್ಲಿ. ಅತ್ತ ಪ್ರಿಯಾಂಕಾ-ಕುರಿ ಪ್ರತಾಪ್ ಗ್ಯಾಂಗ್ ಶೈನ್ ಶೆಟ್ಟಿಯನ್ನ ಟಾರ್ಗೆಟ್ ಮಾಡಿದರೆ, ಇತ್ತ ರಾಜು ತಾಳಿಕೋಟೆ ಮೇಲೆ ವಾಸುಕಿ-ಶೈನ್ ಗ್ಯಾಂಗ್ ಕಣ್ಣಿಟ್ಟರು.
ಯಾವ ಗುಂಪಿಗೂ ಸಲ್ಲದ ಚೈತ್ರ ಕೋಟೂರು ಮತ್ತು ಚಂದನ್ ಆಚಾರ್ ಮಗದೊಂದು ಬಾರಿಗೆ ಡೇಂಜರ್ ಝೋನ್ ಹಳ್ಳಕ್ಕೆ ಬಿದ್ದರು.
ಚಂದನ್ ಆಚಾರ್ ನ ತಮ್ಮ ಗುಂಪಿಗೆ ಸೆಳೆಯಲು ರಾಜು ತಾಳಿಕೋಟೆ ಪ್ರಯತ್ನ ಪಟ್ಟಿದ್ದು, ಕ್ಯಾಮರಾದಲ್ಲಿ ಸೆರೆಯಾಗಿದೆ. ಗುಂಪಿಗೆ ಸೇರಿ ಚಂದನ್ ಆಚಾರ್ ಸೇಫ್ ಗೇಮ್ ಆಡ್ತಾರೋ, ಇಲ್ಲ.. ಒಂಟಿಯಾಗಿ ಎಲ್ಲರಿಗೂ ಬಿಸಿ ಮುಟ್ಟಿಸುತ್ತಾರೋ, ನೋಡಬೇಕು.


Click it and Unblock the Notifications











