BBK 9 : ಊಟದ ವಿಚಾರಕ್ಕೆ ಸಿಡಿದೆದ್ದ ಗುರೂಜಿ: ಆರ್ಯವರ್ಧನ್ ಕೋಪಕ್ಕೆ ಕಾರಣವೇನು..?
ಬಿಗ್ ಬಾಸ್ ಕನ್ನಡ ಸೀಸನ್ 9ರ ಎರಡನೇ ವಾರ ಆರಂಭವಾಗಿದ್ದು, ಮೊದಲ ವಾರದಲ್ಲಿದ್ದ ಖುಷಿ ನಗು, ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಸಿಟ್ಟು, ಮನಸ್ತಾಪ, ಕೋಪ, ಜಗಳಗಳೆ ಹೆಚ್ಚಾಗುತ್ತಿದೆ. ದಸರಾ ಹಬ್ಬದ ವಾತಾವರಣದ ನಡುವೆಯೆ ಬಿಗ್ ಬಾಸ್ ಮನೆಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನ ಒಬ್ಬರಲ್ಲ ಒಬ್ಬರು ಜಗಳವಾಡಿ ಕಣ್ಣೀರಿಡುತ್ತಿದ್ದು, ಉಳಿದ ಸದಸ್ಯರು ಅವರನ್ನು ಸಮಾಧಾನ ಮಾಡುವುದರಲ್ಲೇ ಸಮಯ ಕಳೆಯುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 9ರ 11ನೇ ದಿನವೂ ಸ್ಫರ್ಧಿಗಳಲ್ಲಿ ಮನಸ್ತಾಪ ಉಂಟಾಗಿದ್ದು, ಈವರೆಗೂ ಸಮಾಧಾನದಿಂದಿದ್ದ ಆರ್ಯವರ್ಧನ್ ಗುರೂಜಿ ಮನೆಯ ಸದಸ್ಯರ ಮೇಲೆ ಗರಂ ಆಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9ರ 11ನೇ ದಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಆರ್ಯವರ್ಧನ್ ಗುರೂಜಿ ಮೊದಲಿಗೆ ನನಗೆ ಹೊಟ್ಟೆ ಹಸಿಯುತ್ತಿದೆ, ಅನ್ನ ತಂದು ಕೊಡಿ ಊಟ ಮಾಡುತ್ತೇನೆ ಎಂದು ನೇಹಾ ಗೌಡ, ಕಾವ್ಯಾಶ್ರಿ, ದರ್ಶ್ ಹಾಗೂ ರೂಪೇಶ್ ರಾಜಣ್ಣ ಅವರ ಬಳಿ ಹೇಳಿದ್ದಾರೆ.

ರಾಕೇಶ್ ವಿರುದ್ಧ ಆರ್ಯವರ್ಧನ್ ಸಿಡಿಮಿಡಿ
ಊಟದ ವಿಚಾರಕ್ಕೆ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ನ ಇತರ ಸ್ಫರ್ಧಿಗಳ ವಿರುದ್ಧ ಗರಂ ಆಗಿದ್ದು, ಊಟ ಮಾಡಿ ಎಂದು ಕರೆಯಲು ಬಂದ ಅನುಪಮ ಗೌಡ ಹಾಗೂ ರಾಕೇಶ್ ಅಡಿಗ ಮೇಲೆ ಕಿರುಚಾಡಿದ್ದಾರೆ. ರಾಕೇಶ್ ಅಡಿಗ ಸಮಾಧಾನದಲ್ಲೇ ನಾನು ಸ್ನಾನ ಮುಗಿಸಿ ಬರುತ್ತೇನೆ, ಆರಾಮಾಗಿ ಒಟ್ಟಿಗೆ ಊಟ ತಿನ್ನೋಣ ಎಂದಿದ್ದಾರೆ. ಈ ವೇಳೆ ಮತ್ತೆ ಮಾತಿಗಿಳಿದ ಆರ್ಯವರ್ಧನ್ ಗುರೂಜಿ ಒಬ್ಬರಿಗೂ ಅನ್ನ ಹಾಕುವ ಯೋಗ್ಯತೆ ಇಲ್ಲ, ಮಾತನಾಡೋಕೆ ಬರುತ್ತಾರೆ ಎಂದು ಕೂಗಾಡಿದ್ದಾರೆ.
ಆವರೆಗೂ ಆರ್ಯವರ್ಧನ್ ಗುರೂಜಿ ಅವರನ್ನು ಸಮಾಧಾನ ಮಾಡುತ್ತಿದ್ದ ರಾಕೇಶ್ ಅಡಿಗ, ಇಲ್ಲಿ ಯಾರು ಮನೆಯಿಂದ ತಂದು ಊಟ ಹಾಕುತ್ತಿಲ್ಲ. ಯೋಗ್ಯತೆ ಬಗ್ಗೆ ಎಲ್ಲಾ ಮಾತನಾಡಬೇಡಿ ಎಂದು ಎದುರುವಾದಿಸಿದ್ದಾರೆ. ಆರ್ಯವರ್ಧನ್ ಗುರೂಜಿ ಅವರ ವರ್ತನೆ ಕಂಡು ಬಿಗ್ ಬಾಸ್ ಮನೆಯ ಇತರ ಸ್ಫರ್ಧಿಗಳು ನಿಬ್ಬೆರಗಾಗಿದ್ದಾರೆ.

ಯಾರದೋ ಸಿಟ್ಟು ಊಟದ ಮೇಲೆ ತೀರಿಸ್ತಿದಾರಾ ಗುರೂಜಿ..?
ಇನ್ನು ಬಿಗ್ ಬಾಸ್ ಮನೆಯಲ್ಲಿ ಊಟದ ವಿಚಾರಕ್ಕೆ ಜಗಳ ಇದೇ ಮೊದಲ ಬಾರಿಯಲ್ಲ. ಪ್ರತಿ ಬಿಗ್ ಬಾಸ್ ಸೀಸನ್ನಲ್ಲೂ ಊಟದ ವಿಚಾರಕ್ಕೆ ಅಥವಾ ಅಡುಗೆ ಸಾಮಾನಿನ ವಿಚಾರಕ್ಕೆ ಒಂದಲ್ಲ ಒಂದು ಜಗಳ ನಡೆದಿದೆ. ಅದೇ ರೀತಿ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಕೂಡ ಊಟದ ವಿಚಾರಕ್ಕೆ ಜಗಳ ನಡೆದಿದೆ. ಆದರೆ ಆರ್ಯವರ್ಧನ್ ಗುರೂಜಿ ನಿಜವಾಗಿ ಊಟದ ವಿಚಾರಕ್ಕೆ ಸಿಟ್ಟಾಗಿದ್ದರೋ ಅಥವಾ ಬೇರೆ ಸಿಟ್ಟನ್ನು ಊಟದ ವಿಚಾರಕ್ಕೆ ತೆಗೆದು ಮನೆಯ ಸದಸ್ಯರ ಮೇಲೆ ಅಸಮಾಧಾನ ಹೊರಹಾಕಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

ಸ್ಫರ್ಧಿಗಳ ಮಾತಿನಿಂದ ಆರ್ಯವರ್ಧನ್ ಕೋಪ
ನಿನ್ನೆ(ಅಕ್ಟೋಬರ್ 3) ಬಿಗ್ ಬಾಸ್ ಕನ್ನಡ ಸೀಸನ್ 9ರ 10ನೇ ದಿನ ನಡೆದ ಘಟನೆ ಆರ್ಯವರ್ಧನ್ ಗುರೂಜಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ. 10ನೇ ದಿನ ಬಿಗ್ ಬಾಸ್ ಮನೆಯ ಸದಸ್ಯರನ್ನು ತಕ್ಕಡಿಯಲ್ಲಿ ಕೂರಿಸಿ ದುರ್ಗುಣಗಳನ್ನು ಹೇಳುವಂತೆ ಬಿಗ್ ಬಾಸ್ ಆದೇಶ ಹೊರಡಿಸಿದ್ದರು. ಅರುಣ್ ಸಾಗರ್, ಗುರೂಜಿ ಸೇರಿದಂತೆ ಅನೇಕರ ದುರ್ಗುಣಗಳ ಬಗ್ಗೆ ಮನೆಯ ಸದಸ್ಯರು ಮಾತನಾಡಿದರು. ಮನೆಯ ಸದಸ್ಯರ ಮಾತುಗಳನ್ನು ಕೆಲವರು ಕ್ರೀಡಾಸ್ಫೂರ್ತಿಯಿಂದ ತೆಗೆದುಕೊಂಡರೆ, ಇನ್ನೂ ಕೆಲವರು ಎದುರುವಾದಿಸಿದ್ದರು.

ಹಿಂದಿನ ದಿನದ ಕೋಪಕ್ಕೆ ಗುರೂಜಿ ರಂಪಾಟ
ಇನ್ನು ಆರ್ಯವರ್ಧನ್ ಗುರೂಜಿ ಹಾಗೂ ಅಮೂಲ್ಯ ಅತಿ ಹೆಚ್ಚು ದುರ್ಗುಣಗಳು ಸಿಕ್ಕಿದ್ದು, ಅವರಿಬ್ಬರ ತಕ್ಕಡಿ ಮೇಲೆ ಹೋಗಿದೆ. ಮನೆಯ ಸದಸ್ಯರು ತಮ್ಮ ಮೇಲಿಟ್ಟಿರುವ ಅಭಿಪ್ರಾಯಕ್ಕೆ ಆರ್ಯವರ್ಧನ್ ಗುರೂಜಿ ಅಸಮಾಧನಗೊಂಡಿದ್ದರು. ಅಲ್ಲದೇ ನಮಗೆ ಮನೆಯ ಸದಸ್ಯರು ನೀಡಿರುವ ದುರ್ಗಣಗಳೆಲ್ಲ ಸುಳ್ಳು ಎಂದು ವಾದಿಸಿದ್ದರು. ಅದೇ ಕೋಪವನ್ನು ಮುಂದಿನ ದಿನಕ್ಕೂ ಕೊಂಡೊಯ್ದು ಗುರೂಜಿ ಊಟದ ವಿಚಾರ ತೆಗೆದು ಎಲ್ಲರ ಮೇಲೂ ತಮ್ಮ ಅಸಮಾಧಾನ ಹೊರಹಾಕಿರಬಹುದಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.


Click it and Unblock the Notifications











