BBK10: "ಹೌದು ನಾನು ಕೆಲವು ತಪ್ಪುಗಳನ್ನು ಮಾಡಿದ್ದೀನಿ.. ಅದನ್ನ ಹೇಳೋದಕ್ಕೆ ಯಾವ್ದೆ ಮುಜುಗರ ಇಲ್ಲ": ಡ್ರೋನ್ ಪ್ರತಾಪ್
ಮತ್ತೊಂದು ವೀಕೆಂಡ್ ಬಂದಿದೆ. ಬಿಗ್ಬಾಸ್ ಮನೆಯಲ್ಲಿ ಈ 'ವಾರದ ಕತೆ ಕಿಚ್ಚನ ಜೊತೆ' ವೀಕ್ಷಕರು ಕಾಯುತ್ತಿದ್ದಾರೆ. ಈಗಾಗಲೇ ವೀಕೆಂಡ್ ಶೋಗಳ ಪ್ರೋಮೊಗಳು ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ವಾರ ಡ್ರೋನ್ ಪ್ರತಾಪ್ಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. ಅದರ ಪ್ರೋಮೊ ಸಹ ಹೊರ ಬಿದ್ದಿದೆ.
ಈ ವಾರ ಡ್ರೋನ್ ಪ್ರತಾಪ್ ಗಂಧದ ಗುಡಿ ತಂಡದ ಕ್ಯಾಪ್ಟನ್ ಆಗಿದ್ದರು. ಪ್ರತಾಪ್ ಇಡೀ ತಂಡವನ್ನ ಒಗ್ಗೂಡಿಸಿದ ರೀತಿ, ನಾಮಿನೇಷನ್ ಅಸ್ತ್ರವನ್ನ ಬಳಸಿದ ಸಂಗತಿ, ಉಸ್ತುವಾರಿ ವೇಳೆ ಡ್ರೋನ್ ಪ್ರತಾಪ್ ನ್ಯಾಯಯುತವಾಗಿ ಆಡಿದ್ದು ಎಲ್ಲರಿಗೂ ಇಷ್ಟವಾಗಿತ್ತು. ಇದೇ ಕಾರಣಕ್ಕೆ ಪ್ರತಾಪ್ಗೆ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಸಹ ಸಿಕ್ಕಿದೆ.

ತಮಗೆ ಸಿಕ್ಕ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಅನ್ನು "ಅಪ್ಪ, ಅಮ್ಮ, ತಂಗಿ, ತಾತನಿಗೆ ಡೆಡಿಕೇಟ್ ಮಾಡ್ತೀನಿ. ಸುದೀಪ್ ಸರ್ಗೆ ಬಿಗ್ ಥ್ಯಾಂಕ್ಸ್. ನನ್ನಲ್ಲಿ ಅವರು ಹೊಸ ಚೈತನ್ಯ ತಂದರು. ಮುಂದೆ ಚೆನ್ನಾಗಿ ಟಾಸ್ಕ್ನಲ್ಲಿ ಆಡ್ತೀನಿ" ಎಂದು ಹೇಳಿದ್ದರು.
ವೀಕೆಂಡ್ನಲ್ಲಿ ಕಿಚ್ಚ "ಇಡೀ ತಂಡ ನಿಮ್ಮ ವಿರುದ್ಧ ನಿಂತಿದ್ದಾಗ ಪ್ರಾಮಾಣಿಕವಾಗಿ ನಡೆದುಕೊಂಡಿದ್ದಕ್ಕೆ ಈ ವಾರದ ಕಿಚ್ಚನ ಚಪ್ಪಾಳೆ ಪ್ರತಾಪ್ ಅವ್ರೇ ನಿಮಗೆ" ಎಂದು ಘೋಷಿಸಿದ್ದಾರೆ. ಎದ್ದು ನಿಂತು ನಮಸ್ಕಾರ ಮಾಡಿ ಡ್ರೋನ್ ಪ್ರತಾಪ್ ಮಾತನಾಡಿದ್ದಾರೆ.
"ಸರ್, ಬಿಗ್ ಮೊಮೆಂಟ್. ಹೊರಗಡೆ ಆದ್ರೆ ಎರಡೂ ಕಡೆ ಏನು ತಪ್ಪಾಗುತ್ತದೆ ಎನ್ನುವುದು ಕಾಣ್ಸಲ್ಲ ಸರ್, ಹೌದು ನಾನು ಕೆಲವು ತಪ್ಪುಗಳನ್ನು ಮಾಡಿದ್ದೀನಿ. ಅದನ್ನು ನಾನು ಹೇಳುವುದಕ್ಕೆ ಯಾವುದೇ ಮುಜಗರ ಇಲ್ಲ. ನನ್ನ ಕಳ್ಳ ಅಂದವ್ರು, ಸುಳ್ಳ ಅಂದವ್ರು ನನ್ನ ಬಗ್ಗೆ ಹೀಯಾಳಿಸಿದವರು, ಈಗ ನೆನಪಸಿಕೊಂಡರೆ ಮನಸ್ಸು ಬಹಳ ಹಗುರ ಅನ್ನಿಸ್ತಿದೆ" ಎಂದಿದ್ದಾರೆ.
ನಾನು ಡ್ರೋನ್ ಸ್ಪೆಷಲಿಸ್ಟ್ ಎಂದು ಹೇಳಿಕೊಂಡು ಮೂರ್ನಾಲ್ಕು ವರ್ಷಗಳ ಹಿಂದೆ ಪ್ರತಾಪ್ ಭಾರೀ ಸುದ್ದಿ ಆಗಿದ್ದರು. ಇ-ತ್ಯಾಜ್ಯಗಳಿಂದ ನಾನು ನೂರಾರರು ಡ್ರೋನ್ಗಳನ್ನು ತಯಾರಿಸಿದ್ದೇನೆ. ಬಡ ಕುಟುಂಬದಿಂದ ಬೆಳೆದು ಮೇಲೆ ಬಂದಿದ್ದೇನೆ. ಡ್ರೋನ್ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿದ್ದೇನೆ. ಸಾಕಷ್ಟು ದೇಶಗಳಲ್ಲಿ ಕೆಲಸದ ಅವಕಾಶ ಇದ್ದರೂ ತಾಯಿಗೋಸ್ಕರ ದೇಶದಲ್ಲೇ ಉಳಿದುಕೊಂಡಿದ್ದೇನೆ ಎಂದೆಲ್ಲಾ ಹೇಳಿ ಪ್ರತಾಪ್ ಭಾರೀ ಪ್ರಚಾರ ಗಿಟ್ಟಿಸಿದ್ದರು. ಪ್ರತಾಪ್ ಭಾಷಣ ಕೇಳಿದವರು ಹುಬ್ಬೇರಿಸುತ್ತಿದ್ದರು.
ಈತ ಸೋಶಿಯಲ್ ಮೀಡಿಯಾದಲ್ಲಿ ಯುವ ವಿಜ್ಞಾನಿ ಎಂದೇ ಬಿಂಬಿತವಾಗಿದ್ದ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನೆಟ್ಕಲ್ ಗ್ರಾಮದ ಯುವಕ ಡ್ರೋನ್ಗಳ ಅನ್ವೇಷಣೆ, ಬಳಕೆಯಲ್ಲಿ ಸಾಕಷ್ಟು ಪರಿಣಿತಿ ಪಡೆದಿರುವುದಾಗಿ ಹೇಳಿಕೊಂಡಿದ್ದ. ಆದರೆ opindia ಎನ್ನುವ ಸುದ್ದಿವಿಶ್ಲೇಷಣಾ ವೆಬ್ಸೈಟ್ ನಡೆಸಿದ ತನಿಖಾ ವರದಿಯಲ್ಲಿ ಪ್ರತಾಪ್ ಹೇಳಿದ್ದೆಲ್ಲಾ ಸುಳ್ಳು ಎಂದು ಗೊತ್ತಾಗಿತ್ತು. ತಮ್ಮ ಮೇಲಿ ಆರೋಪಗಳಿಗೆ ಉತ್ತರಿಸಲು ಪ್ರತಾಪ್ ವಿಫಲರಾಗಿದ್ದರು.
ಇನ್ನು ನಟ ಜಗ್ಗೇಶ್ ಕೂಡ ಪ್ರತಾಪ್ ಬೆಂಬಲಕ್ಕೆ ನಿಂತಿದ್ದರು. ಆದರೆ ವಿಷಯ ತಿಳಿದು ಬೇಸರ ವ್ಯಕ್ತಪಡಿಸಿದ್ದರು. ಬರೀ ಕಟ್ಟು ಕತೆಗಳನ್ನು ಹೇಳಿ ಪ್ರತಾಪ್ ಎಲ್ಲರನ್ನು ನಂಬಿಸಿದ್ದಾನೆ ಎಂದು ಅಸಮಾಧಾನಗೊಂಡಿದ್ದರು. ಈ ರೀತಿ ಭಾರೀ ಸುದ್ದಿಯಾದ ಪ್ರತಾಪ್ ಬಿಗ್ಬಾಸ್ ಮನೆಗೆ ಹೋಗಬೇಕು ಎಂದು ಕಳೆದೆರಡು ವರ್ಷಗಳಿಂದ ಕೆಲವರು ಬಯಸಿದ್ದರು. ಈ ಸೀಸನ್ನಲ್ಲಿ ಪ್ರತಾಪ್ಗೆ ಬಿಗ್ಬಾಸ್ ಅವಕಾಶ ಅರಸಿ ಬಂದಿತ್ತು.
ಬಿಗ್ಬಾಸ್ ಕನ್ನಡ ಸೀನಸ್ 10 ಸದ್ಯ 5ನೇ ವಾರ ಪೂರೈಸಿ ಆರನೇ ವಾರಕ್ಕೆ ಕಾಲಿಡುತ್ತಿದೆ. ಪ್ರತಾಪ್ ಉತ್ತಮ ಪ್ರದರ್ಶನದಿಂದ ವೀಕ್ಷಕರ ಮನಗೆದ್ದಿದ್ದಾರೆ. ಪ್ರತಾಪ್ ಗೆಲ್ಲಬೇಕು, ತಮ್ಮ ತಪ್ಪು ತಿದ್ದಿಕೊಳ್ಳಲು ಅವಕಾಶ ಕೊಡಬೇಕು ಎಂದು ಕೆಲವರು ಬಯಸಿದ್ದಾರೆ.


Click it and Unblock the Notifications











