ಬಿಬಿಕೆ ಒಟಿಟಿ ವೇದಿಕೆಯಿಂದ ಕಾಣೆಯಾದ 'ಟಾಪ್ 4' ಎಲ್ಲಿದ್ದಾರೆ?
ಬಿಗ್ಬಾಸ್ ಒಟಿಟಿ ಮುಗಿದಿದೆ, ಬಹುತೇಕ ವೀಕ್ಷಕರು ಊಹಿಸಿದಂತೆ ರಾಕೇಶ್ ಅಡಿಗ, ಸಾನ್ಯಾ ಐಯ್ಯರ್, ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ ವಿಜೇತರೆಂದು ಘೋಷಿಸಲ್ಪಟ್ಟು ಬಿಗ್ಬಾಸ್ ಸೀಸನ್ 9ರ ಟಿವಿ ಆವೃತ್ತಿಗೆ ಆಯ್ಕೆಯಾಗಿದ್ದಾರೆ.
ಕೊನೆವರೆಗೂ ಮನೆಯಲ್ಲಿದ್ದು ಬಿಗ್ಬಾಸ್ ಟಿವಿ ಆವೃತ್ತಿಗೆ ಆಯ್ಕೆಯಾಗದೆ ನಿರಾಶರಾಗಿ ಹೊರಗೆ ಬಂದ ಸೋಮಣ್ಣ ಮಾಚಿಮಾಡ, ಸೋನು ಗೌಡ, ಜಯಶ್ರೀ ಅವರುಗಳು ಸಂದರ್ಶನಗಳ ಮೇಲೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಮನೆಯೊಳಗಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆದರೆ ಬಿಗ್ಬಾಸ್ ಟಿವಿ ಆವೃತ್ತಿಗೆ ಆಯ್ಕೆಯಾದ ಆ ನಾಲ್ವರು ಮಾತ್ರ ಕಾಣೆಯಾಗಿದ್ದಾರೆ. ಅವರುಗಳ ಮನೆಯವರಿಗೂ ಅವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. "ಬಟ್ಟೆಗಳನ್ನು ಬಿಗ್ಬಾಸ್ ಮನೆಯಿಂದ ಕಳುಹಿಸಿಕೊಟ್ಟಿದ್ದಾರೆ. ಅದರ ಆಚೆಗೆ ನಮಗೆ ಏನೂ ಮಾಹಿತಿ ಇಲ್ಲ,'' ಎನ್ನುತ್ತಾರೆ ಸ್ಪರ್ಧಿಗಳ ಕುಟುಂಬಸ್ಥರು.
ಹಾಗಿದ್ದರೆ ಬಿಗ್ಬಾಸ್ ಸೀಸನ್ 9ಕ್ಕೆ ಕಾಲಿಡಲಿರುವ 'ಟಾಪ್ 4' ಈಗ ಎಲ್ಲಿದ್ದಾರೆ. ಏನು ಮಾಡ್ತಿದ್ದಾರೆ? ಇಲ್ಲಿದೆ ಎಕ್ಸ್ಕ್ಲೂಸಿವ್ ಮಾಹಿತಿ.
ಸೆಪ್ಟೆಂಬರ್ 17ರಂದು ನಡೆದ ಬಿಗ್ಬಾಸ್ ಒಟಿಟಿ ಫಿನಾಲೆಯಲ್ಲಿ, ರೂಪೇಶ್, ಸಾನ್ಯಾ ಐಯ್ಯರ್, ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಅವರುಗಳನ್ನು ಬಿಗ್ಬಾಸ್ ಟಿವಿ ಆವೃತ್ತಿಗೆ ಆಯ್ಕೆಯಾದ ಸ್ಪರ್ಧಿಗಳೆಂದು ಘೋಷಿಸಲಾಯ್ತಯ. ಆದರೆ ಫಿನಾಲೆ ಬಳಿಕ ಅವರನ್ನುಮನೆಗೆ ಕಳಿಸಲಾಗಿಲ್ಲ. ಹಾಗೆಂದು ಅವರು ಬಿಗ್ಬಾಸ್ ಮನೆಯಲ್ಲೂ ಇಲ್ಲ. ಬಿಗ್ ಬಾಸ್ ಮನೆಗೆ ಹೊಸ ಸಂಚಿಕೆಗೆ ತಯಾರಾಗುತ್ತಿದೆ. ಓಟಿಟಿ ಮೂಲಕ ಆಯ್ಕೆಯಾದ ನಾಲ್ವರನ್ನು ಬೆಂಗಳೂರಿನ ಹೊರವಲಯದ 'ತೋಟದ ಮನೆ'ಯೊಂದರಲ್ಲಿ ಉಳಿಸಲಾಗಿದೆ ಎಂಬುದು ಲಭ್ಯವಾಗಿರುವ ಮಾಹಿತಿ.

ಬಿಗ್ಬಾಸ್ ಟಿವಿ ಆವೃತ್ತಿ ಸೆಪ್ಟೆಂಬರ್ 24 ರಂದು ಆರಂಭವಾಗಲಿದ್ದು, ಅಲ್ಲಿಯವರೆಗೆ ಒಟಿಟಿ ಆವೃತ್ತಿಯ ವಿಜೇತರು ಹೊರಜಗತ್ತಿಗೆ ಕಾಣದಂತೆ ಬಿಗ್ಬಾಸ್ ಆಯೋಜಕರು ವ್ಯವಸ್ಥೆ ಮಾಡಿದ್ದಾರೆ. ಆದರೆ ಸ್ಪರ್ಧಿಗಳು ಇರುವ ಸ್ಥಳದ ಮಾಹಿತಿ ಸೋರಿಕೆಯಾಗಿದ್ದು, ಈ ನಾಲ್ವರು ಬಿಗ್ಬಾಸ್ ಸ್ಪರ್ಧಿಗಳು ಬೆಂಗಳೂರು ಹೊರವಲಯದ ಕನಕಪುರ ಮುಖ್ಯ ರಸ್ತೆ ಬಳಿಯಿರುವಖಾಸಗಿ ರೆಸಾರ್ಟ್ ಒಂದರಲ್ಲಿ ದಿನ ದೂಡುತ್ತಿದ್ದಾರೆ.
ನಿನ್ನೆ ಅಂದರೆ ಸೆಪ್ಟೆಂಬರ್ 20 ಸಾನ್ಯಾ ಐಯ್ಯರ್ ಹುಟ್ಟುಹಬ್ಬವಾಗಿದ್ದು, ತಾವಿದ್ದ ಸ್ಥಳಕ್ಕೆ ಕೇಕ್ ತರಿಸಿಕೊಂಡು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರಿರುವ ಸ್ಥಳ ಬೆಂಗಳೂರು-ಕನಕಪುರ ಮುಖ್ಯರಸ್ತೆಯ ಪಕ್ಕದ ಪೈಪ್ಲೈನ್ ರಸ್ತೆಯಲ್ಲಿದೆ. ಇಲ್ಲಿ ಕಾವೇರಿ ನೀರು ಯೋಜನೆಯ ಕಾಮಗಾರಿಯೂ ನಡೆಯುತ್ತಿರುವುದರಿಂದ ಸಾಮಾನ್ಯ ವಾಹನದಲ್ಲಿ ಸ್ಥಳ ತಲುಪುವುದು ಕಷ್ಟವಿದೆ. "ಮಿಲಿಟರಿ ಟ್ರಕ್ನಲ್ಲಿ ನಾಲ್ವರನ್ನು ಇಲ್ಲಿಗೆ ಕರೆತರಲಾಗಿದೆ. ಕಾರು, ಬೈಕ್ ಏನೂ ಕೂಡ ಹೋಗಲು ಸಾಧ್ಯವಿಲ್ಲ,'' ಎನ್ನುತ್ತವೆ ಮೂಲಗಳು. 'ಫಿಲ್ಮಿಬೀಟ್'ಗೆ ಸ್ಪರ್ಧಿಗಳನ್ನು ಕರೆದೊಯ್ದ ಟ್ರಕ್ ಹಾಗೂ ಜಾಗದ ಫೊಟೋಗಳು ಲಭ್ಯವಾಗಿವೆ.
ಈ ನಾಲ್ವರು ಸ್ಪರ್ಧಿಗಳನ್ನು ಹೊರ ಜಗತ್ತಿಗೆ ತೀರ ಮರೆಯಾಗಿಯೇನೂ ಇಟ್ಟಿಲ್ಲ. ನಾಲ್ವರನ್ನು ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಿಗ್ಬಾಸ್ ಆಯೋಜಕರು ಕರೆತಂದಿದ್ದರು. ಅನುಬಂಧ ಅವಾರ್ಡ್ಸ್ಕಾರ್ಯಕ್ರಮದ ವೇದಿಕೆ ಮೇಲೆ ಈ ನಾಲ್ವರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಅನುಬಂಧ ಅವಾರ್ಡ್ಸ್ನ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಶೀಘ್ರದಲ್ಲಿಯೇ ಕಾರ್ಯಕ್ರಮದ ಪ್ರಸಾರ ಟಿವಿಯಲ್ಲಿ ಆಗಲಿದೆ.
ಬಿಗ್ಬಾಸ್ ಒಟಿಟಿ ಸ್ಪರ್ಧಿಗಳು ವಾಸವಿದ್ದ ಅದೇ ಮನೆಯಲ್ಲಿ ಬಿಗ್ಬಾಸ್ ಟಿವಿ ಸ್ಪರ್ಧಿಗಳು ಇರಲಿದ್ದಾರೆ, ಆದರೆ ಆ ಮನೆಗೆ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದ್ದು, ರಿನೋವೇಶನ್ ಕಾರ್ಯ ಪ್ರಗತಿಯಲ್ಲಿದೆ.ಸೆಪ್ಟೆಂಬರ್ 24 ರಂದು ಬಿಗ್ಬಾಸ್ ಕನ್ನಡ ಸೀಸನ್ 9 ಆರಂಭವಾಗಲಿದ್ದು, ಅದರ ಹಿಂದಿನ ದಿನ ಅಂದರೆ ಸೆಪ್ಟೆಂಬರ್ 23 ರಂದು ಹೊಸ ಬಿಗ್ಬಾಸ್ ವೇದಿಕೆಗೆ ಆಗಮಿಸಿಉದ್ಘಾಟನಾ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ರಾಕೇಶ್ ಅಡಿಗ, ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ಗುರೂಜಿ.


Click it and Unblock the Notifications











