BBK 9 : ಬಿಗ್ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿ ಹೊರಬೀಳಲು ಕಾರಣಗಳೇನು?
ಬಿಗ್ಬಾಸ್ ಕನ್ನಡ ಸೀಸನ್ 09, ಫಿನಾಲೆಗೆ ನಿಧಾನಕ್ಕೆ ಹತ್ತಿರವಾಗುತ್ತಿದೆ. ವಾರಗಳು ಕಳೆದಂತೆ ಮನೆಯ ಸದಸ್ಯರ ಸಂಖ್ಯೆ ಕಡಿಮೆಯಾಗುತ್ತಿದೆ.
ಒಳ್ಳೆಯ ಸ್ಪರ್ಧಿಗಳೇ ಈಗ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಒಳ್ಳೆಯ ಸ್ಪರ್ಧಿಗಳ ನಡುವೆ ಕಠಿಣ ಸ್ಪರ್ಧೆ, ಪ್ರತಿಸ್ಪರ್ಧೆ ನಡೆಯುತ್ತಿದೆ. ಹಾಗಾಗಿ ಪ್ರತಿವಾರವೂ ಗಟ್ಟಿ ಸ್ಪರ್ಧಿಗಳೇ ಹೊರಗೆ ಹೋಗುತ್ತಿದ್ದಾರೆ.
ಇದೀಗ ಬಿಗ್ಬಾಸ್ ಕನ್ನಡ ಸೀಸನ್ 9 ರ ಹನ್ನೊಂದು ವಾರಗಳು ಮುಗಿದಿವೆ. ಹನ್ನೊಂದನೇ ವಾರ ಬಿಗ್ಬಾಸ್ ಮನೆಯಿಂದ ಗಟ್ಟಿ ಸ್ಪರ್ಧಿಯೊಬ್ಬರು ಹೊರಗೆ ಹೋಗಿದ್ದಾರೆ ಅವರೇ ಪ್ರಶಾಂತ್ ಸಂಬರ್ಗಿ.
ಬಿಗ್ಬಾಸ್ ಕನ್ನಡ ಸೀಸನ್ 09 ರಲ್ಲಿ ಒಂಬತ್ತು ಮಂದಿ ನವೀನರು ಹಾಗೂ ಒಂಬತ್ತು ಮಂದಿ ಪ್ರವೀಣರು ಈ ಬಾರಿ ಭಾಗವಹಿಸಿದ್ದರು. ಅದರಲ್ಲಿ ಇನ್ನು ಒಂಬತ್ತು ಮಂದಿಯಷ್ಟೆ ಮನೆಯ ಒಳಗೆ ಉಳಿದಿದ್ದಾರೆ.
ಪ್ರಶಾಂತ್ ಸಂಬರ್ಗಿ ಇಷ್ಟು ಬೇಗ ಮನೆಯಿಂದ ಹೊರಗೆ ಬರುತ್ತಾರೆ ಎಂದುಕೊಂಡಿರಲಿಲ್ಲ ವೀಕ್ಷಕರು. ಈ ಬಾರಿ ಆರ್ಯವರ್ಧನ್ ಅಥವಾ ಒಬ್ಬ ಮಹಿಳಾ ಸ್ಪರ್ಧಿ ಹೊರಗೆ ಹೋಗ್ತಾರೆ ಎನ್ನಲಾಗಿತ್ತು. ಆದರೆ ಆಶ್ಚರ್ಯಕರ ರೀತಿಯಲ್ಲಿ ಪ್ರಶಾಂತ್ ಸಂಬರ್ಗಿ ಹೊರಗೆ ಹೋಗಿದ್ದಾರೆ.

ಮನೆಯಿಂದ ಹೊರಹೋದ ಪ್ರಶಾಂತ್ ಸಂಬರ್ಗಿ
ಪ್ರಶಾಂತ್ ಸಂಬರ್ಗಿ ಇತರೆ ಸ್ಪರ್ಧಿಗಳಿಗೆ ತುಸು ಕಿರಿ-ಕಿರಿಯಾಗಿದ್ದರೂ ಸಹ ಟಾಸ್ಕ್ಗಳಲ್ಲಿ ಬಹಳ ಚೆನ್ನಾಗಿ ಆಡುತ್ತಿದ್ದರು. ಸ್ಪರ್ಧಿಗಳಿಗೆ ಪರಸ್ಪರ ತಂದಿಡುವ ಕೆಲಸ ಮಾಡುತ್ತಾ, ಜಗಳಗಳನ್ನು ಮಾಡುತ್ತಾ, ಗೇಮ್ಗಳನ್ನು ಆಡುವಾಗ ಮಸಲತ್ತುಗಳನ್ನು ಮಾಡುತ್ತಾ ಒಟ್ಟಾರೆಯಾಗಿ ಬಹಳ ಸಕ್ರಿಯವಾಗಿ ಟಾಸ್ಕ್ಗಳಲ್ಲಿ ಭಾಗವಹಿಸುತ್ತಿದ್ದರು. ಹಾಗಿದ್ದರೂ ಸಹ ಪ್ರಶಾಂತ್ ಸಂಬರ್ಗಿ ಬಿಗ್ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ರಶಾಂತ್ರ ಭಾಗವಹಿಸುವಿಕೆ ಕಡಿಮೆಯಾಗಿತ್ತು. ಅಲ್ಲದೆ ರೂಪೇಶ್ ರಾಜಣ್ಣ ಹಾಗೂ ಇತರರೊಟ್ಟಿಗೆ ಪ್ರಶಾಂತ್ ಅವರು ಸುಖಾಸುಮ್ಮನೆ ಕರಿಕ್ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರೇಕ್ಷಕರಿಗೆ ಅನಿಸಿರಲೂಬಹುದು.

ಕನ್ನಡಪರ ಸಂಘಟನೆ ಬಗ್ಗೆ ತುಚ್ಛವಾದ ಮಾತಾಡಿದ್ದ ಪ್ರಶಾಂತ್
ರೂಪೇಶ್ ರಾಜಣ್ಣ ಅವರೊಟ್ಟಿಗೆ ಮಾತನಾಡುತ್ತಾ ಕನ್ನಡಪರ ಸಂಘಟನೆಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ ಬಳಿಕ ಬಿಗ್ಬಾಸ್, ಪ್ರಶಾಂತ್ಗೆ ಗಂಭೀರ ಎಚ್ಚರಿಕೆ ನೀಡಿದ್ದರು. ಪ್ರಶಾಂತ್ ಸಹ ಈ ಬಗ್ಗೆ ಬಿಗ್ಬಾಸ್ ಬಳಿ ಕಣ್ಣೀರು ಹಾಕುತ್ತಾ ಕ್ಷಮೆ ಕೇಳಿದ್ದರು. ಈ ಘಟನೆ ಬಳಿಕ ಪ್ರಶಾಂತ್ ಮನೆಯಲ್ಲಿ ತುಸು ಜಾಗೃತೆಯಿಂದ ಮಾತನಾಡಲು ವರ್ತಿಸಲು ಆರಂಭಿಸಿದರು. ಇದರಿಂದಾಗಿ ಅವರು ತಾವು ತಾವಾಗಿ ಆಟಗಳಲ್ಲಿ, ಮನೆಯ ಇತರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಾಗಲಿಲ್ಲ. ಇದೂ ಸಹ ಅವರ ಒಟ್ಟಾರೆ ಪ್ರದರ್ಶನದ ಮೇಲೆ ಪರಿಣಾಮ ಬೀರಿರಬಹುದು.

ಚೆನ್ನಾಗಿ ಆಡುತ್ತಿರುವ ಇತರೆ ಸ್ಪರ್ಧಿಗಳು
ಆರಂಭದಲ್ಲಿ ಅಷ್ಟೇನೂ ಸಕ್ರಿಯರಾಗಿರದ ರೂಪೇಶ್ ರಾಜಣ್ಣ ಈಗೀಗ ಹೆಚ್ಚು ಸಕ್ರಿಯರಾಗಿದ್ದು ಚೆನ್ನಾಗಿ ಆಟಗಳನ್ನು ಆಡುತ್ತಿದ್ದಾರೆ ಮನೊರಂಜನೆಯನ್ನೂ ಒದಗಿಸುತ್ತಿದ್ದಾರೆ. ಅವರು ಮಾತ್ರವೇ ಅಲ್ಲದೆ ಇನ್ನೂ ಕೆಲವು ಸ್ಪರ್ಧಿಗಳು ಬಿಗ್ಬಾಸ್ ಮನೆಯಲ್ಲಿ ಒಳ್ಳೆಯ ಮನೊರಂಜನೆ ನೀಡುತ್ತಿದ್ದಾರೆ. ಹೀಗಿರುವಾಗ ಕೇವಲ ಜಗಳ ಮಾಡಿಕೊಂಡಿರುವ ಪ್ರಶಾಂತ್ ಸಂಬರ್ಗಿಯ ಅಗತ್ಯತೆ ಇಲ್ಲ ಎಂದು ಜನರಿಗೆ ಹಾಗೂ ಬಿಗ್ಬಾಸ್ ಅನಿಸಿರುವ ಸಾಧ್ಯತೆಯೂ ಇದೆ.

ಮನೆಯಲ್ಲಿ ಉಳಿದವರ್ಯಾರು?
ಒಟ್ಟಾರೆಯಾಗಿ ಬಿಗ್ಬಾಸ್ ಮನೆಯಿಂದ ಪ್ರಶಾಂತ್ ಸಂಬರ್ಗಿ ಹೊರಗೆ ಬಂದಿದ್ದಾರೆ. ಇನ್ನು ಒಂಬತ್ತು ಮಂದಿಯಷ್ಟೆ ಬಿಗ್ಬಾಸ್ ಮನೆಯಲ್ಲಿ ಉಳಿದಿದ್ದಾರೆ. ಅದರಲ್ಲಿ ಐದು ಮಂದಿ ನವೀನರು, ನಾಲ್ಕು ಮಂದಿ ಪ್ರವೀಣರು ಇದ್ದಾರೆ. ರೂಪೇಶ್ ರಾಜಣ್ಣ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಅಮೂಲ್ಯಾ, ಆರ್ಯವರ್ಧನ್, ದಿವ್ಯಾ ಉರುಡುಗ, ವೈಲ್ಡ್ ಕಾರ್ಡ್ ಎಂಟ್ರಿಯಾಗಿರುವ ದೀಪಿಕಾ, ಅನುಪಮಾ, ಅರುಣ್ ಸಾಗರ್ ಅವರುಗಳು ಮನೆಯಲ್ಲಿ ಉಳಿದಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಫಿನಾಲೆ ಬರಲಿದ್ದು ಈ ಬಾರಿ ಬಿಗ್ಬಾಸ್ ಚಾಂಪಿಯನ್ ಯಾರಾಗಲಿದ್ದಾರೆ ಕಾದು ನೋಡಬೇಕಿದೆ.


Click it and Unblock the Notifications











