'ಹಳ್ಳಿಕಾರ್ ಒಡೆಯ' ಎಂಬ ಬಿರುದು ಕಂಟಕವಾಯ್ತಾ ವರ್ತೂರ್ ಸಂತೋಷ್ಗೆ?: ಹುಲಿ ಉಗುರು ಪ್ರಕರಣದ ಬಳಿಕ ಮತ್ತೊಂದು ವಿವಾದ
ಕನ್ನಡ ಬಿಗ್ ಬಾಸ್ ಸೀಸನ್ ಹತ್ತು ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಬಿಗ್ ಬಾಸ್ ಇತಿಹಾಸದಲ್ಲಿ ಮೊದಲ ಬಾರಿಗೆ ದೊಡ್ಮನೆಗೆ ಪೊಲೀಸರು ಹೋಗಿ ಸ್ಪರ್ಧಿಯನ್ನು ಬಂಧಿಸಿದ್ದರು. ಅದು ಬೇರಾರು ಅಲ್ಲ ಹಳ್ಳಿಕಾರ್ ಒಡೆಯ ಎಂದು ಹೆಸರು ಪಡೆದಿರುವ ವರ್ತೂರ್ ಸಂತೋಷ್. ಹುಲಿ ಉಗುರು ಧರಿಸಿದ್ದ ಆರೋಪದಲ್ಲಿ ಪ್ರಕರಣ ಎದುರಿಸುತ್ತಿರುವು ಅವರು, ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂದು ಬಿಗ್ ಬಾಸ್ ಮನೆಯಿಂದಲೇ ವರ್ತೂರ್ ಸಂತೋಷ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜಾಮೀನಿನ ಮೇಲೆ ಹೊರಬಂದು ಮತ್ತೆ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ. ಈಗ ಅವರ ಮೇಲೆ ಮಂಡ್ಯ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಮತ್ತೊಂದು ವಿವಾದ ಅವರನ್ನು ಸುತ್ತಿಕೊಂಡಿದೆ.

ಹಳ್ಳಿಕಾರ್ ಹಳ್ಳಿಕಾರ್ ಹೆಸರಿಗೆ ಅವಮಾನ ಮಾಡಿದ್ದಾರಾ ವರ್ತೂರು?
ಮಾಡ್ರನ್ ರೈತ ಎಂದು ಗುರುತಿಸಿಕೊಂಡಿರುವ ವರ್ತೂರು ಸಂತೋಷ್ ವರ್ಚಸ್ಸು ಹೆಚ್ಚಿಸಿಕೊಳ್ಳಲು ಹಳ್ಳಿಕಾರ್ ಹೆಸರು ಇಟ್ಟುಕೊಂಡು ಹಳ್ಳಿಕಾರ್ ಹೆಸರಿಗೆ ಅವಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಮಂಡ್ಯದಲ್ಲಿ ಹಳ್ಳಿಕಾರ್ ಗೋವು ಸಾಕಾಣಿಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳಿಕಾರ್ ತಳಿಯ ಉಳಿವಿಗೆ ರಾಜರ ಕಾಲದಿಂದಲೂ ಕೂಡ ಬೆಂಬಲ ಸಿಗುತ್ತಿದೆ. ಆದರೆ, ಕೆಲವು ವರ್ಷಗಳ ಹಿಂದೆ ತಾವೇ ಹಳ್ಳಿಕಾರ್ ತಳಿಯನ್ನು ರಕ್ಷಿಸುತ್ತೇನೆ ಎಂದು ತಮಗೆ ತಾವೇ 'ಹಳ್ಳಿಕಾರ್ ಒಡೆಯ' ಎಂದು ಬಿರುದು ಕೊಟ್ಟಿಕೊಂಡಿದ್ದಾರೆ ಎಂದು ಮಂಡ್ಯ ರೈತರು ಸೇರಿದಂತೆ ಹಲವರು ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದಲ್ಲಿ ಬೃಹತ್ ಹಳ್ಳಿಕಾರ್ ಚರ್ಚೆಗೋಷ್ಠಿ!
ಈ ವಿವಾದಕ್ಕೆ ಸಂಬಂಧಪಟ್ಟಂತೆ ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್ ನಲ್ಲಿ ಡಿಸೆಂಬರ್ 10 ರಂದು ಬೃಹತ್ ಹಳ್ಳಿಕಾರ್ ಚರ್ಚೆಗೋಷ್ಠಿ ನಡೆಸಲಾಗುತ್ತಿದೆ. ಇದರಲ್ಲಿ ಮಂಡ್ಯ, ತುಮಕೂರು, ರಾಮನಗರ, ಬೆಂಗಳೂರು ಸೇರಿ ಹಲವು ಜಿಲ್ಲೆಗಳ ರೈತರು ಭಾಗವಹಿಸಲಿದ್ದಾರೆ. ಚರ್ಚೆಗೆ ಬರುವಂತೆ ವರ್ತೂರ್ ಸಂತೋಷ್ಗೂ ಆಹ್ವಾನ ನೀಡಲಾಗಿದೆ.

ಹಳ್ಳಿಕಾರ್ ಹೆಸರಿಗೆ ಒಂದು ಇತಿಹಾಸವಿದೆ. ಆದರೆ, ತಾನೇ ಹಳ್ಳಿಕಾರ್ ಒಡೆಯ ಎಂದು ಹೇಳಿಕೊಳ್ಳುವುದು ಸರಿಯಲ್ಲ. ಅವರು ಹಳ್ಳಿಕಾರ್ ತಳಿ ಸಾಕಣೆ ಮಾಡುತ್ತಿದ್ದಾರೆ ಅಷ್ಟೇ. ಹಳ್ಳಿಕಾರ್ ಒಡೆಯ ಎನ್ನುವುದಕ್ಕೆ ಒಂದು ಮಹತ್ವ ಇದೆ. ಅಷ್ಟಕ್ಕೆ ಹಳ್ಳಿಕಾರ್ ಒಡೆಯ ಎಂದು ಬಿರುದು ಇಟ್ಟುಕೊಳ್ಳುವುದು ಸರಿಯೇ ಎಂದು ರೈತರು ಪ್ರಶ್ನೆ ಮಾಡುತ್ತಿದ್ದಾರೆ.
ವರ್ತೂರ್ ಸಂತೋಷ್ ಬಿಗ್ ಬಾಸ್ನಿಂದ ಬಂದು ಸ್ಪಷ್ಟನೆ ನೀಡಲಿ!
ಹಳ್ಳಿಕಾರ್ ಒಡೆಯ ಎಂದು ಬಿರುದು ಇಟ್ಟುಕೊಂಡಿರುವ ಬಗ್ಗೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಸ್ಪಷ್ಟನೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ದೊಡ್ಮನೆಯಿಂದ ಬಂದ ಕೂಡಲೇ ಹಳ್ಳಿಕಾರ್ ಒಡೆಯ ಎಂಬ ಬಿರುದು ಹೇಗೆ ಬಂತು ಎಂಬ ಬಗ್ಗೆ ಎಲ್ಲರಿಗೂ ಸ್ಪಷ್ಟನೆ ನೀಡಬೇಕು ಎಂದು ಒತ್ತಡ ಹಾಕಲಾಗಿದೆ.
ಇನ್ನು, ಬಿಗ್ ಬಾಸ್ನಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆಗಿದ್ದ ವರ್ತೂರ್ ಸಂತೋಷ್ಗೆ 'ವಾರದ ಕತೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಮುಖಭಂಗವಾಗಿದೆ. ಮೋಸದಿಂದ ಆಟವಾಡಿ ಕ್ಯಾಪ್ಟನ್ ಆಗಿದ್ದಾರೆ ಎಂದು ಗರಂ ಆದ ನಟ ಕಿಚ್ಚ ಸುದೀಪ್, ವರ್ತೂರ್ ಅವರನ್ನು ಕ್ಯಾಪ್ಟನ್ ಪಟ್ಟದಿಂದ ತೆಗೆದು, ಕ್ಯಾಪ್ಟನ್ ರೂಂಗೆ ಬೀಗ ಹಾಕಿಸಿದ್ದಾರೆ.


Click it and Unblock the Notifications











