Bigg Boss Kannada Season 9 Day 1: ಬಿಗ್ಬಾಸ್ ಮನೆಯಲ್ಲಿ ಮೊದಲ ದಿನ ನಡೆದಿದ್ದೇನು?
ಬಿಗ್ಬಾಸ್ ಸೀಸನ್ 9 ರ ಮೊದಲ ದಿನವೇ ಭರ್ಜರಿ ಜಗಳ, ತುಸು ತಮಾಷೆ, ತುಸು ಬಾಂಧವ್ಯ, ಅನುಮಾನ, ಆಟ ಎಲ್ಲವೂ ನೋಡಲು ದೊರಕಿತು.
ದಿನ ಆರಂಭವಾಗಿ ಎಲ್ಲರೂ ಬೆಳಿಗ್ಗಿನ ಉಪಹಾರ ಸೇವಿಸುತ್ತಿರಬೇಕಾದರೆ ಪ್ರಶಾಂತ್ ಸಂಬರ್ಗಿ ಹಾಗೂ ಆರ್ಯವರ್ಧನ್ ನಡುವೆ ಸಣ್ಣ ಕಿಡಿಯೊಂದು ಹೊತ್ತಿಕೊಳ್ಳುತ್ತದೆ. ಆರ್ಯವರ್ಧನ್, ತಾವು ಈ ವರೆಗೆ ಹತ್ತು ಲಕ್ಷ ಜನರಿಗೆ ಭವಿಷ್ಯ ಹೇಳಿದ್ದಾಗಿ ಹೇಳಿಕೊಂಡಾಗ ಅದನ್ನು ತಪ್ಪೆನ್ನುವ ಪ್ರಶಾಂತ್ ಸಂಬರ್ಗಿ ಅದು ಸಾಧ್ಯವೇ ಇಲ್ಲವೆಂದು ವಾದಿಸುತ್ತಾರೆ ಹಾಗೂ ನಿಮಗೆ 5000 ಎಕರೆ ಜಮೀನು ಇರುವುದು ಸುಳ್ಳೆನ್ನುತ್ತಾರೆ. ಅದಕ್ಕೆ ಆರ್ಯವರ್ಧನ್, ಸಂಖ್ಯೆ ತಪ್ಪಾಗಿ ಹೇಳಿರುವುದನ್ನು ಒಟಿಟಿಯಲ್ಲಿಯೇ ನಾನು ಒಪ್ಪಿಕೊಂಡಿದ್ದೇನೆ ಎಂದು ಸ್ಪಷ್ಟನೆ ನೀಡುತ್ತಾರೆ.
ಆದರೆ ನಟ ದರ್ಶ್ ಚಂದಪ್ಪ, ಪ್ರಶಾಂತ್ ಸಂಬರ್ಗಿಯ ವ್ಯಕ್ತಿತ್ವ ತಮಗೆ ಇಷ್ಟವಿಲ್ಲವೆಂದು, ಅವರು ಬೆನ್ನಿಗೆ ಚೂರಿ ಹಾಕುವ ವ್ಯಕ್ತಿತ್ವದವರೆಂದು ಹೇಳುತ್ತಾರೆ. ಬಿಗ್ಬಾಸ್ ಮನೆಯಲ್ಲಿ ಎಲ್ಲರೊಟ್ಟಿಗೆ ಚೆನ್ನಾಗಿದ್ದು, ಹೊರಗೆ ಹೋದ ಬಳಿಕ ಮಾಧ್ಯಮಗಳ ಮುಂದೆ ಬಿಗ್ಬಾಸ್ನಲ್ಲಿದ್ದ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅವಾಚ್ಯವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ ಎನ್ನುತ್ತಾರೆ. ನಿಮ್ಮದು ಬೆನ್ನಿಗೆ ಚೂರಿ ಹಾಕುವ ವ್ಯಕ್ತಿತ್ವ ಎನ್ನುವ ದರ್ಶ್, ಒಂದು ಹಂತದಲ್ಲಿಯಂತೂ ಏಕವನಚದಲ್ಲೇ ಪ್ರಶಾಂತ್ ಅನ್ನು ಸಂಭೋಧಿಸುತ್ತಾರೆ.
ಬಳಿಕ ಬಿಗ್ಬಾಸ್ ಟಾಸ್ಕ್ ಒಂದನ್ನು ನೀಡಿ, ಹಿರಿಯರು, ಮೊದಲ ಬಾರಿಗೆ ಬಿಗ್ಬಾಸ್ ಮನೆಗೆ ಬಂದಿರುವ ನವೀನರನ್ನು ತಮ್ಮ ಜೊತೆಗಾರರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎನ್ನುತ್ತಾರೆ. ನವೀನರು, ಪ್ರವೀಣರು ತಮ್ಮನ್ನು ಯಾವ ಕಾರಣಕ್ಕೆ ತಮ್ಮೊಂದಿಗೆ ತಂಡವನ್ನಾಗಿ ಸೇರಿಸಿಕೊಳ್ಳಬೇಕು ಎಂದು ಕಾರಣ ನೀಡಿ ಬಳಿಕ ಅವರೊಟ್ಟಿಗೆ ಸೇರಬೇಕು ಎನ್ನುತ್ತಾರೆ.

ಅಂತೆಯೇ ಎಲ್ಲರೂ ಮಾತನಾಡಿದ ಬಳಿಕ ಅರುಣ್ ಸಾಗರ್ ನವಾಜ್ ಅನ್ನು, ದೀಪಿಕಾ-ಅಮೂಲ್ಯಾ ಅನ್ನು, ದಿವ್ಯಾ-ಐಶ್ವರ್ಯಾ ಅನ್ನು, ಪ್ರಶಾಂತ್-ವಿನೋದ್ ಅನ್ನು, ರೂಪೇಶ್ ಶೆಟ್ಟಿ-ಕಾವ್ಯಾ ಅನ್ನು, ಸಾನ್ಯಾ-ಮಯೂರಿಯನ್ನು, ಆರ್ಯವರ್ಧನ್-ದರ್ಶ್ ಅನ್ನು, ಅನುಪಮಾ-ನೇಹಾ ಅನ್ನು ಕೊನೆಗೆ ರೂಪೇಶ್ ರಾಜಣ್ಣ ಮಾತ್ರವೇ ಉಳಿದ ಕಾರಣ ಅವರನ್ನು ರಾಕೇಶ್ ಆಯ್ಕೆ ಮಾಡಿಕೊಳ್ಳುತ್ತಾರೆ.
ಆ ನಂತರ ಆಟವೊಂದನ್ನು ಆಡಲು ಬಿಗ್ಬಾಸ್ ಹೇಳುತ್ತಾರೆ. ತಂಡದ ಇಬ್ಬರೂ ಸೇರಿ ಗಾಜಿನ ಗ್ಲಾಸುಗಳನ್ನು ಜೋಡಿಸುವ ಆಸಕ್ತಿಕರ ಆಟವನ್ನು ಎರಡೂ ತಂಡದವರು ಆಡುತ್ತಾರೆ. ಆ ಆಟದಲ್ಲಿ ಎಲ್ಲರನ್ನೂ ಸೋಲಿಸಿ ಪ್ರಶಾಂತ್ ಸಂಬರ್ಗಿ ಹಾಗೂ ವಿನೋದ್ ತಂಡ ಗೆಲ್ಲುತ್ತದೆ.
ನಾಮಿನೇಶನ್ ಸಹ ಇದೇ ದಿನ ನಡೆದಿದ್ದು, ಎಲ್ಲರೂ ಜೋಡಿಗಳಲ್ಲಿ ಕನ್ಫೆಶನ್ ರೂಮ್ಗೆ ತೆರಳಿ ತಮ್ಮ ಪ್ರಕಾರ ಮನೆಯಿಂದ ಹೊರಗೆ ಹೋಗಬೇಕಿರುವ ಎರಡು ಜೋಡಿಯ ಹೆಸರು ಹೇಳುವಂತೆ ಸೂಚಿಸಲಾಗುತ್ತದೆ. ಅಂತೆಯೇ ಎಲ್ಲರೂ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಕೊನೆಗೆ ಬಿಗ್ಬಾಸ್ ಘೋಷಿಸಿದಂತೆ, ಆರ್ಯವರ್ಧನ್, ದರ್ಶ್ ಚಂದಪ್ಪ, ದಿವ್ಯಾ ಉರುಡುಗ, ಐಶ್ವರ್ಯಾ ಪಿಸ್ಸೆ, ಪ್ರಶಾಂತ್ ಸಂಬರ್ಗಿ, ವಿನೋದ್ ಗೊಬ್ರ, ಅರುಣ್ ಸಾಗರ್, ನವಾಜ್, ಸಾನ್ಯಾ ಐಯ್ಯರ್, ಮಯೂರಿ, ರೂಪೇಶ್ ಶೆಟ್ಟಿ, ಕಾವ್ಯಶ್ರೀ ಅವರುಗಳು ಈ ವಾರ ಮನೆಯಿಂದ ಹೊರಗೆ ಹೋಗಲು ನಾಮಿನೇಟ್ ಆಗಿದ್ದಾರೆ.


Click it and Unblock the Notifications











