BBK 9 : ಐದನೇ ದಿನ ಬಿಗ್ಬಾಸ್ ಮನೆಯಲ್ಲಿ ನಡೆದಿದ್ದೇನು?
ಬಿಗ್ಬಾಸ್ ಕನ್ನಡ ಸೀಸನ್ 9 ರ ಐದನೇ ದಿನ ಭಾವನೆಗಳದ್ದೇ ಮೇಲಾಟ. ಮನೆಯ ಸದಸ್ಯರೆಲ್ಲ ಯಾವುದೇ ಟಾಸ್ಕ್ನ ಕಾರಣಕ್ಕಲ್ಲದೆ ಸ್ವಾಭಾವಿಕವಾಗಿಯೇ ಭಾವುಕರಾಗಿಬಿಟ್ಟರು.
ದಿನದ ಆರಂಭ ತಮಾಷೆಯಾಗಿ ಹಾಡು ಹಾಡುತ್ತಾ, ಕುಣಿಯುತ್ತಾ ಒಬ್ಬರಿಗೊಬ್ಬರು ಕಾಲೆಳೆದುಕೊಳ್ಳುತ್ತಾ ಆಯಿತು. ನವಾಜ್, ಬೈಕರ್ ಐಶ್ವರ್ಯಾ ಪಿಸ್ಸೆಗೆ ಪ್ರಪೋಸ್ ಮಾಡಿದ್ದು ಸಹ ಮಜವಾಗಿತ್ತು.
ಅದರಲ್ಲಿಯೂ ಕಾವ್ಯಶ್ರೀ, ರಾಕೇಶ್ ಅಡಿಗಗಿಂತಲೂ, ರೂಪೇಶ್ ಜೊತೆಗಿರುವುದು ಆರಾಮ. ರಾಕೇಶ್ ಆಗಾಗ ಸ್ಮೋಕ್ ರೂಮ್ಗೆ ಹೋಗುತ್ತಾನೆ. ಆಗೆಲ್ಲ ಅವನು ಸ್ಮೋಕ್ ರೂಮ್ನಿಂದ ಹೊರಗೆ ಬರುವವರೆಗೆ ನಾನು ಅಲ್ಲಿಯೇ ಕಾದು ಕೂರಬೇಕಿರುತ್ತಿತ್ತು, ಅದಕ್ಕೆ ರಾಕೇಶ್ ಬದಲು ರೂಪೇಶ್ ಸಿಕ್ಕಿದ್ದೆ ಒಳ್ಳೆಯದಾಯಿತು ಎಂದರು.

ಮತ್ತೊಂದು ಟಾಸ್ಕ್ ಗೆದ್ದ ಪ್ರಶಾಂತ್
ಮಧ್ಯಾಹ್ನದ ವೇಳೆಗೆ ಐದನೇ ದಿನದ ಟಾಸ್ಕ್ ಆರಂಭವಾಯಿತು. ಮೊದಲ ಟಾಸ್ಕ್ ದೈಹಿಕ ಶ್ರಮ ಬೇಡುವ ಟಾಸ್ಕ್ ಆಡಿಸಲಾಯಿತು. ಅದರಲ್ಲಿ ರೂಪೇಶ್-ರಾಕೇಶ್ ಜೋಡಿ ಹಾಗೂ ಪ್ರಶಾಂತ್ ಸಂಬರ್ಗಿ-ವಿನೋದ್ ಜೋಡಿ ಸ್ಪರ್ಧಿಸಿತು. ಸುತ್ತಿಗೆಯಿಂದ ಇಟ್ಟಿಗೆಗಳನ್ನು ಒಡೆಯುವ ಟಾಸ್ಕ್ ಅದಾಗಿತ್ತು. ಇಬ್ಬರ ನಡುವೆ ಪ್ರಬಲ ಪೈಪೋಟಿ ಇತ್ತು ಆದರೆ ಪ್ರಶಾಂತ್ ಸಂಬರ್ಗಿ ಜೋಡಿ ಅದನ್ನು ಗೆದ್ದಿತು. ಯಾರು ಗೆಲ್ಲುತ್ತಾರೆಂದು ಊಹಿಸಬೇಕಿದ್ದ ಅರುಣ್ ಹಾಗೂ ನವಾಜ್ ಜೋಡಿ ತಪ್ಪು ಊಹೆ ಮಾಡಿತ್ತಾದ್ದರಿಂದ ಅವರಿಗೆ ಅಂಕ ದೊರೆಯಲಿಲ್ಲ. ಆದರೆ ಅರುಣ್ ಅವರು ಬಿಗ್ಬಾಸ್ ಮಾತನಾಡುವಾಗ ತಮಾಷೆ ಮಾಡುತ್ತಿದ್ದಿದ್ದು ಸಾನ್ಯಾ, ರೂಪೇಶ್ ಶೆಟ್ಟಿ ಹಾಗೂ ಇತರರಿಗೆ ಕಿರಿ-ಕಿರಿ ಉಂಟು ಮಾಡಿತು.

ಟಾಸ್ಕ್ ಗೆದ್ದ ದೀಪಿಕಾ-ಅಮೂಲ್ಯ
ಬಳಿಕ ನೆನಪಿನ ಶಕ್ತಿಗೆ ಸಂಬಂಧಿಸಿ ಟಾಸ್ಕ್ ಆಡಿಸಲಾಯ್ತು. ಅದರಲ್ಲಿ ಸಾನ್ಯಾ-ಮಯೂರಿ ಜೋಡಿಯು ದೀಪಿಕಾ-ಅಮೂಲ್ಯ ಜೋಡಿಯನ್ನು ಎದುರಿಸಿತು. ಅದರಲ್ಲಿ ಎರಡೂ ಜೋಡಿ ಸಮಾನ ಅಂಕ ಗಳಿಸಿತು. ಆದರೆ ದೀಪಿಕಾ-ಅಮೂಲ್ಯ ಜೋಡಿ ಬಿಲ್ಲೆಗಳನ್ನು ಹೆಚ್ಚು ವೇಗವಾಗಿ ಜೋಡಿಸಿದ್ದರಿಂದ ಆ ಜೋಡಿಯನ್ನು ವಿಜೇತರೆಂದು ಘೋಷಿಸಲಾಯ್ತು. ಯಾರು ಗೆಲ್ಲುತ್ತಾರೆಂದು ಊಹಿಸಲು ಕೂತಿದ್ದ ರೂಪೇಶ್-ಕಾವ್ಯಾಶ್ರೀ ಎರಡೂ ಜೋಡಿಗಳು ಐದು ಸುತ್ತು ಗೆಲ್ಲುತ್ತವೆಂದು ಊಹಿಸಿ ಒಂದು ಅಂಕ ತಮ್ಮ ಪಾಲು ಮಾಡಿಕೊಂಡಿತು.

ಅಮ್ಮನ ನೆನದು ಭಾವುಕರಾದ ವಿನೋದ್ ಗೊಬ್ರಗಾಲ
ಬಳಿಕ ಅರುಣ್ ಸಾಗರ್, ವಿನೋದ್ ಗೊಬ್ರಗಾಲ, ರಾಕೇಶ್, ರೂಪೇಶ್ ಶೆಟ್ಟಿ ಇನ್ನಿತರರೆಲ್ಲ ಹಾಡು ಹಾಡುತ್ತಿದ್ದರು. ಅವರೊಟ್ಟಿಗೆ ಮನೆಯ ಎಲ್ಲ ಸದಸ್ಯರೂ ಸೇರಿ ಹಾಡು ಹಾಡಲು ಪ್ರಾರಂಭಿಸಿದರು. ವಿನೋದ್ ಗೊಬ್ರಗಾಲ ಅವರು 'ಅವ್ವ ಅವ್ವ' ಎಂದು ಹಾಡಲು ಪ್ರಾರಂಭಿಸಿದರು. ಬಳಿಕ ಎಲ್ಲರೂ 'ಅವ್ವ-ಅವ್ವ' ಎಂದು ಹಾಡಲು ಪ್ರಾರಂಭಿಸಿದರು ಅದು ಎಲ್ಲರನ್ನೂ ಭಾವುಕಗೊಳಿಸಿಬಿಟ್ಟಿತು. ಇಂದು ಪ್ರಶಾಂತ್ ಸಂಬರ್ಗಿಯವರ ತಾಯಿಯ ಹುಟ್ಟುಹಬ್ಬವೂ ಸಹ. ಬಳಿಕ ವಿನೋದ್, ತಮ್ಮ ತಾಯಿ ತಮ್ಮ ಬಗ್ಗೆ ವಹಿಸುವ ಕಾಳಜಿಯ ಹೇಳುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು. ಇದನ್ನು ಕಂಡು ಮಯೂರಿ ಹಾಗೂ ಇತರರು ಸಹ ಕಣ್ಣೀರು ಹಾಕಿದರು.

ಮನಕಲಕುವ ವಿಷಯ ಹಂಚಿಕೊಂಡ ರೂಪೇಶ್
ಬಳಿಕ ಮೇಕಪ್ ರೂಮ್ ಬಳಿ ರೂಪೇಶ್ ಹಾಗೂ ಕಾವ್ಯಾಶ್ರೀ ಅದೇ ವಿಷಯ ಮಾತನಾಡುತ್ತಾ ಕುಳಿತಿದ್ದರು. ರೂಪೇಶ್ ತಮ್ಮ ತಾಯಿಯ ದುರಂತದ ಅಂತ್ಯದ ಬಗ್ಗೆ ಮಾತನಾಡಿ ಅತ್ತುಬಿಟ್ಟರು. ಅವರ ತಾಯಿಯ ಕತೆ ಕೇಳಿ ಕಾವ್ಯಶ್ರೀ ಸಹ ಅತ್ತು ಬಿಟ್ಟರು. ರೂಪೇಶ್, ಬಹಳ ಸಣ್ಣ ವಯಸ್ಸಿನಲ್ಲಿಯೇ ತಮ್ಮ ತಾಯಿಯನ್ನು ಕಳೆದುಕೊಂಡವರು. ಅವರ ತಾಯಿಯ ಮಾನಸಿಕ ಸ್ಥಿಮಿತ ಕಳೆದುಕೊಂಡು ಬಹಳ ಕಷ್ಟ ಅನುಭವಿಸಿದ್ದಾಗಿ ರೂಪೇಶ್ ಹೇಳಿಕೊಂಡರು. ಬಳಿಕ ಕಾವ್ಯಾಶ್ರೀ ಸಹ, ತನ್ನನ್ನು ಹಾಗೂ ತನ್ನ ಅಕ್ಕನನ್ನು ಹೆಣ್ಣು ಮಕ್ಕಳೆಂದು ತನ್ನ ತಂದೆ ಹೀಗಳೆಯುತ್ತಿದ್ದುದರ ಬಗ್ಗೆ ಮಾತನಾಡಿ ಕಣ್ಣೀರಾದರು. ಒಟ್ಟಾರೆ ಇಂದು ಮನೆಯಲ್ಲಿ ಆಟಗಳೆಲ್ಲ ಬದಿಗೆ ಸರಿದು ಭಾವನೆಗಳೇ ಮೇಲಾಟ ಆಡಿದವು.


Click it and Unblock the Notifications











