Bigg Boss Kannada Season 09: ನಗುವಿಗೆ ಬ್ರೇಕ್, ಶುರುವಾಯ್ತು ಅಸಲಿ ಆಟ
ಬಿಗ್ಬಾಸ್ ಸೀಸನ್ 09ರ ಆರನೇ ದಿನ ಈ ಮೊದಲಿನ ದಿನಗಳಿಗಿಂತಲೂ ತುಸು ಭಿನ್ನವಾಗಿತ್ತು. ಮನೆಯಲ್ಲಿ ಇಷ್ಟು ದಿನ ನಗು, ಹಾಡು ಕುಣಿತಕ್ಕೆ ಬ್ರೇಕ್ ಸಿಕ್ಕು ಇಂದು ಪರಸ್ಪರರ ವಿಶ್ಲೇಷಣೆಗೆ ಇಳಿದಿದ್ದರು ಮನೆ ಮಂದಿ.
ಆರನೇ ದಿನದ ಬೆಳಿಗ್ಗೆ ಹತ್ತು ಗಂಟೆ ವೇಳೆಗೆ ಬಿಗ್ಬಾಸ್, ಮನೆಯ ಕ್ಯಾಪ್ಟೆನ್ಸಿ ಟಾಸ್ಕ್ ಕುರಿತಾಗಿ ಕೆಲವು ಸೂಚನೆಗಳನ್ನು ನೀಡಿದರು. ದಿವ್ಯಾ ಉರುಡುಗ-ಐಶ್ವರ್ಯಾ ಪಿಸೆ ಹಾಗೂ ದೀಪಿಕಾ-ಅಮೂಲ್ಯ ಜೋಡಿಯ ಅಂಕಗಳು ಸಮಾನವಾಗಿದ್ದಿದ್ದರಿಂದ ಇಬ್ಬರಲ್ಲಿ ಯಾರು ಕ್ಯಾಪ್ಟೆನ್ಸಿ ಟಾಸ್ಕ್ ಆಡಬೇಕೆಂದು ನೀವೇ ಚರ್ಚಿಸಿ ನಿರ್ಧರಿಸಿ ಎಂದರು.
ಅದರಂತೆ ದೀಪಿಕಾ-ಅಮೂಲ್ಯ ಅವರುಗಳು ಟಾಸ್ಕ್ ನಲ್ಲಿ ಭಾಗವಹಿಸುವ ಅವಕಾಶವನ್ನು ದಿವ್ಯಾ ಹಾಗೂ ಐಶ್ವರ್ಯಾಗೆ ಬಿಟ್ಟುಕೊಟ್ಟರು. ಆದರೆ ಆ ನಂತರ ಇದು ಜೋಡಿಯಾಗಿರುವ ದೀಪಿಕಾ ಹಾಗೂ ಅಮೂಲ್ಯ ನಡುವೆ ಸಣ್ಣ ವಾಗ್ವಾದಕ್ಕೆ ಕಾರಣವಾಯಿತು.

ಯಾರು ಸಿಂಗಲ್ ಎಂದು ಕೇಳಿ ತಿಳಿದುಕೊಂಡ ರಾಕೇಶ್
ಆ ನಂತರ ಮನೆಯ ಸದಸ್ಯರಿಗೆ ಕಟ್ಟಲಾಗಿದ್ದ ಸೊಂಟದ ಪಟ್ಟಿಗಳನ್ನು ಕಳಚುವಂತೆ ಬಿಗ್ಬಾಸ್ ಆದೇಶಿಸಿದರು. ಎಲ್ಲರೂ ಖುಷಿ ವ್ಯಕ್ತಪಡಿಸಿ, ಬಿಗ್ಬಾಸ್ಗೆ ಧನ್ಯವಾದ ಹೇಳಿದರು. ಬಳಿಕ ಮನೆ ಸದಸ್ಯರ ನಡುವೆ ಸಣ್ಣ ಪುಟ್ಟ ಕಾನ್ವರ್ಸೇಶನ್ಗಳು ಸಾಮಾನ್ಯದಂತೆ ನಡೆಯುತ್ತಿದ್ದವು. ಈ ನಡುವೆ ರೂಪೇಶ್ ಹಾಗೂ ಸಾನ್ಯಾ ನಡುವೆ ನಡೆದ ಪರೋಕ್ಷ ಪ್ರೇಮ ಸಲ್ಲಾಪ ಗಮನ ಸೆಳೆಯಿತು. ಬಳಿಕ ಊಟಕ್ಕೆ ಕುಳಿತಿದ್ದಾಗ ರಾಕೇಶ್ ಅಡಿಗ ಮನೆಯಲ್ಲಿರುವ ಹುಡುಗಿಯರಲ್ಲಿ ಯಾರು ಸಿಂಗಲ್, ಯಾರು ಮಿಂಗಲ್ ಎಂದು ಕೇಳಿ ತಿಳಿದುಕೊಂಡರು. ಆದರೆ ಪಾಪ ಅವರಿಗೆ ಒಟಿಟಿ ಸೀಸನ್ನಂತೆ ಸ್ಪೂರ್ತಿ ಗೌಡ ಅಥವಾ ಸೋನು ಗೌಡ ರೀತಿ ಫ್ಲರ್ಟಿಂಗ್ ಅನ್ನು ಸ್ಪೋರ್ಟೀವ್ ಆಗಿ ತೆಗೆದುಕೊಳ್ಳುವವರು ಸಿಗುತ್ತಿಲ್ಲ ಎನಿಸುತ್ತದೆ.

ಜಗಳವಾಡಿದ ವಿನೋದ್-ಕಾವ್ಯಾಶ್ರೀ
ವಿನೋದ್ ಗೊಬ್ರಗಾಲ ಹಾಗೂ ಕಾವ್ಯಾಶ್ರೀ ನಡುವೆ ತಮಾಷೆಯಾಗಿ ಮಾತುಕತೆ ನಡೆಯುತ್ತಿತ್ತು, ಒಂದು ಹಂತದಲ್ಲಿ ಕಾವ್ಯಾಶ್ರೀ ತಮಾಷೆಯಾಗಿ ವಿನೋದ್ ಅನ್ನು ತಮ್ಮ ಎಂದರು. ಆದರೆ ಅದನ್ನು ವಿನೋದ್ ಒಪ್ಪಿಕೊಳ್ಳಲಿಲ್ಲ. ಬಳಿಕ ಮತ್ತೊಂದು ಇಂಥಹುದೇ ತಮಾಷೆಯ ಸನ್ನಿವೇಶದಲ್ಲಿ ಕಾವ್ಯಾಶ್ರೀ ನನ್ನ ವಯಸ್ಸು 45 ಎಂದರು, ಅದಕ್ಕೆ ವಿನೋದ್, ಆಂಟಿ ಜೊತೆ ಏನು ಮಾತನಾಡುತ್ತೀರ ಬಿಡಿ ಎಂದು ಅರುಣ್ ಸಾಗರ್ಗೆ ಹೇಳಿದರು. ಇದು ಕಾವ್ಯಾಗೆ ಸಿಟ್ಟು ತರಿಸಿತು. ವಿನೋದ್ ಬಳಿ ಬಂದು ನನ್ನೊಟ್ಟಿಗೆ ಮಾತನಾಡಬೇಡ ಎಂದರು. ರಾಕೇಶ್ ಹಾಗೂ ಅರುಣ್ ಸಾಗರ್ ಅವರುಗಳು ಇಬ್ಬರನ್ನೂ ಪ್ಯಾಚ್ ಅಪ್ ಮಾಡಲು ಯತ್ನಿಸಿದರಾದರೂ ಅದು ಸಫಲವಾಗಿಲ್ಲ.

ಕ್ಯಾಪ್ಟನ್ ಆದ ವಿನೋದ್ ಗೊಬ್ರಗಾಲ
ಸಣ್ಣ ಹಲಗೆಯ ಮೇಲೆ ಚೆಂಡುಗಳನ್ನು ಇರಿಸಿಕೊಂಡು, ಸಣ್ಣ ಹಲಗೆಯ ಮೇಲೆ ನಡೆಯುತ್ತಾ ಆ ಚೆಂಡುಗಳನ್ನು ಬುಟ್ಟಿಯೊಳಗೆ ಹಾಕಬೇಕಾದ ಟಾಸ್ಕ್ ಇದಾಗಿತ್ತು. ಮೊದಲು ಪ್ರಾರಂಭ ಮಾಡಿದ ವಿನೋದ್ ಹಾಗೂ ಐಶ್ವರ್ಯಾ ಪಿಸೆ ಅವರುಗಳಲ್ಲಿ ವಿನೋದ್ ಸುಲಭವಾಗಿ ಆಟ ಮುಗಿಸಿದರು. ಐಶ್ವರ್ಯಾ ಆಟವನ್ನು ಆಡಲು ವಿಫಲರಾದರು. ಬಳಿಕ ಆಡಿದ ದಿವ್ಯಾ ಹಾಗೂ ಪ್ರಶಾಂತ್ ಅವರಲ್ಲಿ ದಿವ್ಯಾ ಗೆದ್ದರು. ಅಂತಿಮ ಹಣಾಹಣಿ ವಿನೋದ್ ಹಾಗೂ ದಿವ್ಯಾ ನಡುವೆ ನಡೆದು ದಿವ್ಯಾ ಸೋತು ವಿನೋದ್ ಗೆದ್ದು, ಮನೆಯ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಆದರು.

ಯಾರು ಅತ್ಯುತ್ತಮ? ಯಾರು ಕಳಪೆ?
ಬಳಿಕ ಆರನೇ ದಿನದ ಮುಖ್ಯ ಘಟ್ಟ, ಮನೆಯ ಮೊದಲ ಅತ್ಯುತ್ತಮ ಹಾಗೂ ಕಳಪೆಯನ್ನು ಆಯ್ಕೆ ಮಾಡುವ ಸರದಿ ಬಂತು. ಮನೆಯ ಬಹುತೇಕ ಸದಸ್ಯರು ಅರುಣ್ ಸಾಗರ್ ಅನ್ನು ಅತ್ಯುತ್ತಮ ಎಂದರು. ಕೆಲವರು ನವಾಜ್ಗೆ ಸಹ ಉತ್ತಮ ನೀಡಿದರು. ಕೆಲವರು ಅರುಣ್ ಸಾಗರ್ಗೂ ಕಳಪೆ ನೀಡಿದರು. ಹೆಚ್ಚು ಮಂದಿ ರೂಪೇಶ್ ರಾಜಣ್ಣಗೆ ಕಳಪೆ ನೀಡಿದರು. ಒಂದು ಹಂತದಲ್ಲಂತೂ ರೂಪೇಶ್ ರಾಜಣ್ಣ ಗೇಮ್ ಬಿಟ್ಟು ಹೊರಗೆ ಹೋಗಲು ಅಣಿಯಾದರು. ಒಟ್ಟಾರೆ ಅರುಣ್ ಸಾಗರ್ ಮನೆಯ ಅತ್ಯುತ್ತಮ ಹಾಗೂ ರೂಪೇಶ್ ರಾಜಣ್ಣ ಕಳಪೆಯಾಗಿ ಆಯ್ಕೆ ಆದರು. ಅರುಣ್ ಸಾಗರ್ಗೆ ಮೆಡಲ್ ದೊರಕಿದರೆ, ರೂಪೇಶ್ ಜೈಲು ಸೇರಬೇಕಾಯ್ತು. ಆದರೆ ಆ ನಂತರ ಯಾರು ಯಾಕೆ ಕಳಪೆ ಕೊಟ್ಟರು, ಅಂಥಹದ್ದು ಏನು ಮಾಡಿದೆವು ಇತರೆ ಚರ್ಚೆಗಳು ಆರಂಭವಾದವು. ಮನೆಯ ಮುಂದಿನ ದಿನಗಳು ಹೇಗಿರಲಿವೆ ನೋಡಬೇಕಿದೆ.


Click it and Unblock the Notifications











