ನಾಲ್ಕು ವರ್ಷದ ಪ್ರೀತಿಯ ಮೇಲೆ ಮದುವೆಯ ಮುದ್ರೆ ಒತ್ತಲು ರೆಡಿಯಾದ ಖ್ಯಾತ ಬಿಗ್ ಬಾಸ್ ಜೋಡಿ
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ ಕಾಯುವ ತಂತ್ರ ಈಗಿನದು.
ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ.. ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು. ಉದಾಹರಣೆಗೆ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಅವರ ಲವ್ ಸ್ಟೋರಿಯನ್ನೇ ತೆಗೆದುಕೊಳ್ಳಿ.

ಹೌದು, ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್.. ಹಿಂದಿ ಕಿರುತೆರೆಯ ಖ್ಯಾತ ಸ್ಟಾರ್ಸ್ ''ಕಿತನಿ ಮೊಹಬ್ಬತ್ ಹೈ' ' ಧಾರಾವಾಹಿಯ ಮೂಲಕ 2009ರಲ್ಲಿ ಕಿರುತೆರೆಯನ್ನು ಪ್ರವೇಶ ಮಾಡಿದ ಕರಣ್ ಕುಂದ್ರಾ ಆ ನಂತರ ''ಯೇ ಕಹಾನ್ ಆ ಗಯೇ ಹಮ್''..''ದಿಲ್ ಹೀ ತೋ ಹೈ''.. ''ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ''.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದರು. ''MTV ರೋಡೀಸ್''..''ಲವ್ ಸ್ಕೂಲ್''..''ಟೆಂಪ್ಟೇಶನ್ ಐಲ್ಯಾಂಡ್ ಇಂಡಿಯಾ''.. ಅಂತಹ ಶೋಗಳಿಗೆ ನಿರೂಪಕನಾಗಿ ಕೆಲಸ ಮಾಡಿದರು.
ಇನ್ನು ತೇಜಸ್ವಿ ಪ್ರಕಾಶ್ ಅವರಿಗೆ ''ಸ್ವರಾಗಿಣಿ'' ಬೇಕಿದ್ದ ಬ್ರೇಕ್ ನೀಡಿತು. ''ಪೆಹ್ರೆದಾರ್ ಪಿಯಾ ಕಿ''..''ರಿಶ್ತಾ ಲಿಖೇಂಗೆ ಹಮ್ ನಯಾ''.. ಧಾರಾವಾಹಿಯಲ್ಲಿ ಕಾಣಿಸಿಕೊಂಡ ತೇಜಸ್ವಿ ಪ್ರಕಾಶ್ ಅವರ ಬದುಕನ್ನು ''ನಾಗಿನ್ 6'' ಧಾರಾವಾಹಿ ಸಂಪೂರ್ಣ ಬದಲಿಸಿತು. ''ಖತ್ರೋನ್ ಕೆ ಖಿಲಾಡಿ 10'' ರಲ್ಲಿ ಕೂಡ ಕಾಣಿಸಿಕೊಂಡಿದ್ದರು ತೇಜಸ್ವಿ ಪ್ರಕಾಶ್.
ಇಂಥಾ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ 2021ರಲ್ಲಿ ''ಬಿಗ್ ಬಾಸ್'' ಮನೆಗೆ ಹೋಗಿದ್ದರು. ಇದೇ ಸಮಯದಲ್ಲಿ ಇಬ್ಬರು ನಡುವೆ ಪ್ರೇಮಾಂಕುರವಾಗಿತ್ತು.''ಬಿಗ್ ಬಾಸ್''ನ ಈ 15ನೇ ಸೀಸನ್ನಲ್ಲಿ ತೇಜಸ್ವಿ ಪ್ರಕಾಶ್ ಟ್ರೋಫಿ ಮುಡಿಗೇರಿಸಿಕೊಂಡರೆ ಕರಣ್ ಕುಂದ್ರಾ ರನ್ನರ್ ಅಪ್ ಆಗಿ ಹೊರ ಹೊಮ್ಮಿದರು.
ಹೀಗೆ ''ಬಿಗ್ ಬಾಸ್'' ಮನೆಯಿಂದ ಹೊರ ಬಂದ ಇಬ್ಬರು ಗ್ರಹಸ್ಥಾಶ್ರಮಕ್ಕೆ ಕಾಲಿಡಲು ಮುಂದಾಗಿದ್ದರು. ಆದರೆ.. ತೇಜಸ್ವಿ ಅವರ ತಾಯಿ ಜೊತೆಯಲ್ಲಿ ಇಬ್ಬರು ಇನ್ನೂ ಕೆಲ ದಿನ ಕಾಲ ಕಳೆಯುವಂತೆ ಸಲಹೆ ನೀಡಿದರು. ಪರಸ್ಪರ ಅರ್ಥಮಾಡಿಕೊಳ್ಳಲು ಸಮಯಾವಕಾಶ ತೆಗೆದುಕೊಳ್ಳಿ ಎಂದು ಹೇಳಿದರು. ಒಂದು ವರ್ಷ ಜೊತೆಯಲ್ಲಿ ಓಡಾಡಿ ಆಮೇಲೆ ಮದುವೆ ಬಗ್ಗೆ ಯೋಚನೆ ಮಾಡೋಣ ಎಂದು ಹೇಳಿದರು.

ತೇಜಸ್ವಿ ಪ್ರಕಾಶ್ ಅವರ ತಾಯಿಯ ಈ ಸಲಹೆಯ ಮೇರೆಗೆ ಕಳೆದ 4 ವರ್ಷಗಳಿಂದ ಪ್ರೇಮದ ಅಮಲನ್ನೇರಿಸಿಕೊಂಡು ಓಡಾಡುತ್ತಿರುವ ಕರಣ್ ಕುಂದ್ರಾ ಮತ್ತು ತೇಜಸ್ವಿ ಪ್ರಕಾಶ್ ಸದ್ಯ ತಮ್ಮ ಪ್ರೇಮ ಕಥೆ ಮೇಲೆ ಮದುವೆಯ ಅಧಿಕೃತ ಮುದ್ರೆ ಒತ್ತಲು ಸಿದ್ದರಾದಂತಿದೆ. ಇದಕ್ಕೆ ಕೈಗನ್ನಡಿ ಎಂಬಂತೆ ರಿಯಾಲಿಟಿ ಶೋ ಮೂಲಕ ಎಲ್ಲರೆದುರು ತೇಜಸ್ವಿ ಪ್ರಕಾಶ್ಗೆ ಕರಣ್ ಕುಂದ್ರಾ ಪ್ರಪೋಸ್ ಮಾಡಿದ್ದಾರೆ. ಡೈಮಂಡ್ ರಿಂಗ್ ತೋಡಿಸಿದ್ದಾರೆ.
ಹೌದು, ಅಸಲಿಗೆ ನೆಟ್ಫ್ಲಿಕ್ಸ್ನಲ್ಲಿ ''ದೇಸಿ ಬ್ಲಿಂಗ್'' ಎಂಬ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಕರಣ್ ಮತ್ತು ತೇಜಸ್ವಿ ಜೊತೆ ರಿಜ್ವಾನ್ ಸಾಜನ್, ಸತೀಶ್ ಸಾನ್ಪಾಲ್, ಅಡೆಲ್ ಸಾಜನ್, ಸನಾ ಸಾಜನ್, ತಬಿಂದಾ ಸಾನ್ಪಾಲ್, ಪಮೆಲಾ ಸೆರೆನಾ, ದ್ಯುತಿ ಪರುಕ್, ಐರಿನಾ ಕಿನಾಖ್, ಅಲಿಝೇ ಮಿರ್ಜಾ, ಲೈಲಿ ಮಿರ್ಜಾ ಮತ್ತು ಜಾನ್ವಿ ಗೌರ್ ಹೀಗೆ ಹಲವರು ಈ ಕಾರ್ಯಕ್ರಮದ ಭಾಗವಾಗಿದ್ದಾರೆ.
ಇದೇ ಕಾರ್ಯಕ್ರಮದ ವೇದಿಕೆಯನ್ನು ಉಪಯೋಗ ಮಾಡಿಕೊಂಡು ಕರಣ್ ಕುಂದ್ರಾ ಸದ್ಯ ತೇಜಸ್ವಿ ಪ್ರಕಾಶ್ಗೆ ಪ್ರಪೋಸ್ ಮಾಡಿದ್ಧಾರೆ. ಈ ಮೂಲಕ ತೇಜಸ್ವಿಯನ್ನು ಅಚ್ಚರಿಗೆ ದೂಡಿದ್ದಾರೆ. ತೇಜಸ್ವಿಯ ಆನಂದ ಭಾಷ್ಪಕ್ಕೆ ಕಾರಣವಾಗಿದ್ದಾರೆ.
ಕರಣ್ ಸಿದ್ಧಪಡಿಸಿದ್ದ ಅದ್ದೂರಿ ಅಲಂಕಾರ ಮತ್ತು ನೀರಿನ ಮೇಲೆ ಬೃಹತ್ ಅಕ್ಷರಗಳಲ್ಲಿ ಬರೆಯಲಾಗಿದ್ದ ''ವಿಲ್ ಯೂ ಮ್ಯಾರಿ ಮೀ'' ಎಂಬ ಬರಹವನ್ನು ಕಂಡು ತೇಜಸ್ವಿ ಭಾವುಕರಾಗಿದ್ದಾರೆ. ನನ್ನ ಕೈಗಳು ನಡುಗುತ್ತಿವೆ, ನನಗೆ ನಂಬಲು ಸಾಧ್ಯವಾಗುತ್ತಿಲ್ಲ' ಎಂದು ಕಣ್ಣೀರು ಹಾಕಿದ್ದಾರೆ.
ಮುಂದುವರೆದು ನಾವು ಭೇಟಿಯಾದಾಗ ಅನೇಕ ಚರ್ಚೆಗಳಾಗಿದ್ದವು. ''ಬಿಗ್ ಬಾಸ್'' ಮನೆಯಿಂದ ಹೊರಬಂದಾಗ ನಮ್ಮ ಸಂಬಂಧ ಎರಡು ವಾರವೂ ಉಳಿಯುವುದಿಲ್ಲ ಎಂದು ಹಲವರು ಹೇಳಿದ್ದರು ಎಂದು ಕರಣ್ ಕುಂದ್ರಾ ಹೇಳಿದ್ದು ಇಂದು ನಾಲ್ಕು ವರ್ಷ ಕಳೆದಿವೆ, ನಾವು ಎಲ್ಲವನ್ನೂ ಒಟ್ಟಾಗಿ ಎದುರಿಸಿದ್ದೇವೆ. ಪ್ರೀತಿ ಮತ್ತು ಬದ್ಧತೆಯ ಅರ್ಥವನ್ನು ನೀನು ನನಗೆ ಕಲಿಸಿಕೊಟ್ಟಿದ್ದೀಯಾ ಎಂದು ಭಾವುಕರಾಗಿ ಹೇಳಿದ್ದಾರೆ.
ಆ ನಂತರ ಮಂಡಿಯೂರಿ ವಜ್ರದ ಉಂಗುರವನ್ನು ನೀಡಿ ಪ್ರಪೋಸ್ ಮಾಡಿದ್ದಾರೆ. ಅಪೂರ್ಣ ಆದರೆ ನಮ್ಮದು ಪರಿಪೂರ್ಣವಾದ ಪ್ರೇಮಕಥೆ ಎಂಬ ಪದವನ್ನು ನೀನೇ ರೂಪಿಸಿದ್ದೆ, ನಿನ್ನೊಂದಿಗೆ ಕಳೆದ ಪ್ರತಿ ವರ್ಷವೂ ನನ್ನ ಪಾಲಿಗೆ ಪ್ರೀತಿಯ ಅರ್ಥವನ್ನೇ ಬದಲಿಸಿದೆ ಎಂದಿದ್ದಾರೆ.
ಕರಣ್ ಅವರ ಈ ಪ್ರೀತಿಯನ್ನು ಕಂಡು ತೇಜಸ್ವಿ ಪ್ರಕಾಶ್ ಅಪ್ಪಿಕೊಂಡು ಗಳಗಳನೆ ಕಣ್ಣೀರು ಹಾಕಿದ್ದಾರೆ. ಸದ್ಯ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ಮದುವೆಯ ದಿನಾಂಕವನ್ನೂ ಶೀಘ್ರದಲ್ಲಿಯೇ ಅನೌನ್ಸ್ ಮಾಡಿ, ಮತ್ತೆ ಅದಕ್ಕೆ ವರ್ಷಾನುವರ್ಷ ಕಾಯಿಸಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ನವಜೋಡಿಗೆ ಶುಭ ಕೋರುತ್ತಿದ್ದಾರೆ.


Click it and Unblock the Notifications