ಕಲ್ಭುರ್ಗಿಯಲ್ಲಿ ಕಾವ್ಯಾಗೆ ಅವಮಾನ, ಮೈಕ್ ಕಿತ್ಕೊಂಡ ವ್ಯಕ್ತಿ ; ಅವರೇ ಫೋಟೊ ಅಲ್ಲೇ ಬಿಸಾಡಿ ಹೋದರು ಎಂದ ಆಯೋಜಕರು
ಸೆಲೆಬ್ರಿಟಿ ಸ್ಟೇಟಸ್ ಅಪಾರವಾದ ಅಭಿಮಾನ ಮತ್ತು ಪ್ರೀತಿಯನ್ನೇನೋ ತಂದು ಕೊಡುತ್ತೆ. ಆದರೆ ಅದೇ ಸಮಯದಲ್ಲಿ ಪಬ್ಲಿಕ್ ಫಂಕ್ಷನ್ನಲ್ಲಿ ತೀವೃ ಸವಾಲೊಡ್ಡುತ್ತೆ. ಸಾರ್ವಜನಿಕ ಕಾರ್ಯಕ್ರಮದ ಮೂಲಕ ತಮ್ಮನ್ನು ಆರಾಧಿಸುವ ಅಭಿಮಾನಿಗಳ ಜೊತೆ ನೇರವಾಗಿ ಮುಖಾಮುಖಿಯಾಗುತ್ತಾರೆ. ಅವರ ಅಭಿಮಾನದ ಕೂಗು ಕೇಳಿ ರೋಮಾಂಚನಗೊಳ್ಳುತ್ತಾರೆ. ಅಭಿಮಾನಿಗಳ ಪ್ರೀತಿಯನ್ನು ಕಂಡು ಮೂಕ ವಿಸ್ಮಿತಗೊಳ್ಳುತ್ತಾರೆ. ಆದರೆ, ಇದೇ ಸಮಯದಲ್ಲಿ ಕೆಲ ಒಮ್ಮೆ ಮುಜುಗರಕ್ಕೀಡಾಗುತ್ತಾರೆ. ಅವಮಾನಕ್ಕೊಳಗಾಗುತ್ತಾರೆ. ಕಾವ್ಯ ಶೈವ ಅವರಿಗೆ ಸದ್ಯ ಇಂತಹದ್ದೇ ಒಂದು ಅನುಭವ ಆಗಿದೆ.
ಹೌದು, "ಬಿಗ್ ಬಾಸ್" ಮೂಲಕ ಕನ್ನಡಿಗರ ಹೃದಯ ಗೆದ್ದ ಕಾವ್ಯ ಶೈವಗೆ ಸದ್ಯ ತುಂಬಾನೇ ಡಿಮ್ಯಾಂಡ್ ಇದೆ. ಕಾರ್ಯಕ್ರಮ ಮುಗಿದು 6 ತಿಂಗಳಾಗುತ್ತಾ ಬಂದರೂ ಕೂಡ ಇವರ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಾವ್ಯ ಸಭೆ, ಸಮಾರಂಭ, ಜಾತ್ರೆಗಳು, ಕಾರ್ಯಕ್ರಮ ಉದ್ಘಾಟನೆಗಳು, ಬ್ರ್ಯಾಂಡ್ ಪ್ರೋಮೋಷನ್ ಎಂದೆಲ್ಲಾ ಬ್ಯುಸಿಯಾಗಿದ್ದಾರೆ. ಸದ್ಯ ಇಂತಹದ್ದೇ ಒಂದು ಕಾರ್ಯಕ್ರಮದಲ್ಲಿ ಕಾವ್ಯಾ ಶೈವ ಅವಮಾನಕ್ಕೀಡಾಗಿದ್ದಾರೆ.

ಅಸಲಿಗೆ ಕಾವ್ಯ ಶೈವ ಕಲ್ಬುರ್ಗಿಯ ಪಂಡಿತ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆಗಲೇ ಹೇಳಿದಂತೆ ಕಾವ್ಯಾ ಕ್ರೇಜ್ ಇನ್ನೂ ಹಾಗೇ ಇದೆ. ಹೀಗಾಗಿ ಸಹಜವಾಗಿ ಕಾವ್ಯ ಬರುತ್ತಿದ್ದಾರೆ ಎಂದು ಗೊತ್ತಾದ ಹಿನ್ನೆಲೆ ಹಲವರು ಕಾವ್ಯ ಅವರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಬಂದಿದ್ದರು.
ಎಲ್ಲವೂ ಸಾಂಗವಾಗಿಯೇ ನಡೆಯುತ್ತಿತ್ತು. ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಕಾವ್ಯಾ ಕೂಡ ಮಾತನಾಡಲು ಮುಂದಾದರು. ಅಭಿಮಾನಿಗಳ ಅತಿರೇಕದ ವರ್ತನೆ ಶುರುವಾಗಿದ್ದು ಇಲ್ಲಿಯೇ. ಕಾವ್ಯ ಜೊತೆ ಸೆಲ್ಫಿ ಕ್ಲಿಕಿಸಲು ಹಲವರು ಮುಗಿ ಬಿದ್ದರು. ವೇದಿಕೆಯನ್ನೇರಲು ಪ್ರಯತ್ನ ಮಾಡಿದರು. ಇದರಿಂದ ಕಾರ್ಯಕ್ರಮದ ಆಯೋಜಕರು ಕೆರಳಿದರು. ಅಭಿಮಾನಿಗಳ ಜೊತೆ ವಾಗ್ಯುದ್ದ ಕೂಡ ಮಾಡಿದರು.
ಗೊಂದಲದ ಈ ವಾತಾವರಣದ ನಡುವೆ ದಿಕ್ಕು ತೋಚದೆ ಕಾವ್ಯಾ ನಿಂತಿದ್ದರು. ಇದೇ ಸಮಯದಲ್ಲಿ ಬಂದ ವ್ಯಕ್ತಿಯೊಬ್ಬರು ಕಾವ್ಯಾ ಶೈವ ಕೈಯಿಂದ ಮೈಕ್ ಕಿತ್ತುಕೊಂಡಿದ್ಧಾರೆ. ಇದರಿಂದ ಕಾವ್ಯಾ ಆಘಾತಕ್ಕೀಡಾದಂತೆ ಕಂಡು ಬಂದಿದ್ದು, ಕಾರ್ಯಕ್ರಮದಿಂದ ಕಾವ್ಯ ಕೂಡಲೇ ಹೊರ ನಡೆದರು ಎನ್ನುವ ಸುದ್ದಿ ಇದೆ. ಅಭಿಮಾನಿಗಳಿಗೆ ಕಾವ್ಯಾ ತಲೆ ತಗ್ಗಿಸಿ ಕ್ಷಮೆ ಕೇಳಿದ್ದನ್ನು ಕೂಡ ವಿಡಿಯೋದಲ್ಲಿ ನೋಡಬಹುದು. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಕಾರ್ಯಕ್ರಮದ ಆಯೋಜಕರ ವಿರುದ್ಧ ತೀವೃ ಆಕ್ರೋಶ ವ್ಯಕ್ತವಾಗುತ್ತಿದೆ.
ಆದರೆ, ಇದಕ್ಕೆ ಕಾರ್ಯಕ್ರಮದ ಆಯೋಜಕರು ಹೇಳುವುದೇ ಬೇರೆ. ಈ ಕುರಿತು ''ಪಬ್ಲಿಕ್ ಟಿವಿ''ಗೆ ಪ್ರತಿಕ್ರಿಯೆ ನೀಡಿರುವ ಕಾರ್ಯಕ್ರಮದ ಆಯೋಜಕ ಮತ್ತು ಹೈದರಾಬಾದ್ ಕರ್ನಾಟಕ ಯುವ ಕಲಾವಿದರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಗುರು ಬಂಡಿ, ನಮ್ಮಿಂದ ಕಾವ್ಯಾ ಅವರಿಗೆ ಯಾವುದೇ ಅವಮಾನ ಆಗಿಲ್ಲ ಎಂದು ಹೇಳಿದ್ದಾರೆ.

ಎರಡು ಗಂಟೆಯ ಕಾರ್ಯಕ್ರಮಕ್ಕಾಗಿ ಕಾವ್ಯಾ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ಅವರು ಕೇವಲ ಐದು ನಿಮಿಷದಲ್ಲೇ ಕಾರ್ಯಕ್ರಮ ಬಿಟ್ಟು ಹೋಗಲು ಮುಂದಾದರು ಎಂದು ಹೇಳಿರುವ ಗುರು ಬಂಡಿ, ಅಭಿಮಾನಿಗಳು ಕೊಟ್ಟ ಫೋಟೋಗಳನ್ನು ಕೂಡ ಅವರು ಅಲ್ಲೇ ಬಿಸಾಡಿ ಹೋಗಿದ್ದಾರೆ ಎಂದಿದ್ಧಾರೆ. ಅವರಿಗೆ ನೀಡಬೇಕಿದ್ದ ಸಂಪೂರ್ಣ ಹಣವನ್ನು ನಾವು ಕೊಟ್ಟಿದ್ದೇವೆ. ಕಾರ್ಯಕ್ರಮ ಆಯೋಜಕರ ಕಡೆಯಿಂದ ಯಾವ ತಪ್ಪು ಆಗಿಲ್ಲ ಎಂದು ಹೇಳಿರುವ ಗುರು ಬಂಡಿ ಕಾವ್ಯಾ ಅಭಿಮಾನಿಗಳ ಅತಿರೇಕದ ವರ್ತನೆಯೇ ಈ ರಾದ್ದಾಂತಕ್ಕೆ ಕಾರಣ ಎಂದು ಹೇಳಿದ್ಧಾರೆ.
ಒಟ್ನಲ್ಲಿ ಸದ್ಯ ಕಾವ್ಯ ಶೈವ ಅವರ ಈ ವಿಡಿಯೋ ವೈರಲ್ ಆಗಿದ್ದು, ಮಹಿಳಾ ಕಲಾವಿದರ ಸುರಕ್ಷತೆ ಮತ್ತು ಅವರ ಘನತೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಹಲವರು ಆಯೋಜಕರ ವೈಫಲ್ಯಕ್ಕೆ ಕಿಡಿಕಾರಿದ್ದಾರೆ. ಕಾವ್ಯಾ ಶೈವಾ ಈ ಕುರಿತು ಪ್ರತಿಕ್ರಿಯೆ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications