ಬಿಗ್ ಬಾಸ್ ಮನೆಯಲ್ಲಿ 14 ಲಕ್ಷ ಗೆದ್ದ ಅದೃಷ್ಟಶಾಲಿ ಇವರೇ ನೋಡಿ..!
ಬಿಗ್ ಬಾಸ್ ಸದ್ಯ ಎಲ್ಲೆಡೆ ಆರಂಭವಾಗಿದೆ. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಹನ್ನೊಂದನೇ ಆವೃತ್ತಿ ಶುರುವಾಗಿದೆ. ಮೊದಲ ವಾರ ಕೂಡ ಪೂರ್ಣವಾಗಿದೆ. ಇನ್ನೊಂದು ಕಡೆ ಸಲ್ಮಾನ್ ಖಾನ್ ಕೂಡ ನಿನ್ನೆ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಿದ್ದಾರೆ. ಹಿಂದಿಯಲ್ಲಿ ತಮ್ಮ ಬಿಗ್ ಬಾಸ್ ಮನೆಗೆ ಹೊಸ ಅತಿಥಿಗಳನ್ನೂ ಬರ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಕಾಲಿವುಡ್ನಲ್ಲಿ ಈ ಬಾರಿ ಕಮಲ್ ಹಾಸನ್ಗೆ ಕೊಕ್ ನೀಡಿರುವ ಬಿಗ್ ಬಾಸ್ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಅವರನ್ನು ಕರೆತಂದು ನಿರೂಪಕನ ಸ್ಥಾನದಲ್ಲಿ ಕೂರಿಸಿದೆ. ಇದರ ನಡುವೆ ಮರಾಠಿಯಲ್ಲಿ ಆರಂಭವಾಗಿದ್ದ ಬಿಗ್ ಬಾಸ್ ನಿನ್ನೆ ಮುಕ್ತಾಯವಾಗಿದೆ. ಬಿಗ್ ಬಾಸ್ ಕಿರೀಟ ಸೂರಜ್ ಚವ್ಹಾಣ್ ಮುಡಿಗೇರಿದೆ.
ಹೌದು, ಸೋಶಿಯಲ್ ಮೀಡಿಯಾ ಇನ್ಪ್ಲುಯೆನ್ಸರ್ ಆಗಿ ಗುರುತಿಸಿಕೊಂಡಿರುವ ಸೂರಜ್ ಚವ್ಹಾಣ್, ಮುಸುಂಡಿ, ರಾಜಾ ರಾಣಿ ಸೇರಿ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಥಾ ಸೂರಜ್ ಚವ್ಹಾಣ್ ಬಿಗ್ ಬಾಸ್ ಮರಾಠಿಯ ಐದನೇ ಸೀಸನ್ನ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಇಂಡಿಯನ್ ಐಡಲ್ನಿಂದ ಪ್ರಸಿದ್ಧಿಯನ್ನು ಪಡೆದ ಗಾಯಕ ಅಭಿಜಿತ್ ಸಾವಂತ್ ಅವರನ್ನು ಹಿಂದಿಕ್ಕಿ ಟ್ರೋಫಿ ಎತ್ತಿ ಹಿಡಿದ ಸೂರಜ್ ಚವ್ಹಾಣ್ 14 ಲಕ್ಷವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರ ಜೊತೆ ಹತ್ತು ಲಕ್ಷ ರೂಪಾಯಿಯ ಚಿನ್ನಾಭರಣದ ವೋಚರ್ ಮತ್ತು ಎಲೆಕ್ಟ್ರಿಕ್ ಬೈಕ್ ಕೂಡ ಸೂರಜ್ ಚವ್ಹಾಣ್ ಗೆದ್ದಿದ್ದಾರೆ. ಇನ್ನೂ ಈ ಬಾರಿ ಬಿಗ್ ಬಾಸ್ ಗೆಲ್ಲುವ ಸ್ಫರ್ಧಿಯೆಂದೇ ಬಿಂಬಿತರಾದ ನಿಕ್ಕಿ ತಾಂಬೋಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ. ಧನಂಜಯ್ ನಾಲ್ಕು ಮತ್ತು ಅಂಕಿತಾ ಐದನೇ ಸ್ಥಾನವನ್ನು ಪಡೆದಿದ್ದಾರೆ.

ಇನ್ನೂ ಬಿಗ್ ಬಾಸ್ನ ಗ್ರ್ಯಾಂಡ್ ಫಿನಾಲೆಗೆ ರಂಗು ತುಂಬಲು ಬಾಲಿವುಡ್ನ ಬ್ಯೂಟಿ ಆಲಿಯಾ ಭಟ್, ವೇದಾಂಗ್ ರೈನಾ ಮತ್ತು ನಿರ್ದೇಶಕ ವಾಸನ್ ಬಾಲಾ ಅತಿಥಿಗಳಾಗಿ ಆಗಮಿಸಿದ್ದು ಕಾರ್ಯಕ್ರಮದ ವಿಶೇಷತೆಯಲ್ಲೊಂದು.
ಇನ್ನೂ ಬಿಗ್ ಬಾಸ್ನ ಐದನೇ ಸೀಸನ್ನ ಯಶಸ್ವಿಯಾಗಿ ಮುಗಿಸಿದ ಸುದೀಪ್ ಅವರ ಆಪ್ತ ಸ್ನೇಹಿತ ರಿತೇಶ್ ದೇಶಮುಖ್, ಈ ಬಾರಿ ಬಿಗ್ ಬಾಸ್ ನಲ್ಲಿ ಹಲವರು ತಿರುವುಗಳಿದ್ದವು. ಸ್ಫರ್ಧಿಗಳ ಸಂಘರ್ಷ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದವು. ಇದಕ್ಕೆ ಕೈಗನ್ನಡಿ ಎನ್ನುವಂತೆ ಈ ಬಾರಿ ಮರಾಠಿ ಬಿಗ್ ಬಾಸ್ ಟಿಆರ್ಪಿಯಲ್ಲಿ ದಾಖಲೆ ಬರೆದಿದೆ ಎಂದು ಹೇಳಿದ್ದಾರೆ. ಸಲ್ಮಾನ್ ಖಾನ್ ಅವರೇ ನನಗೆ ಈ ಕಾರ್ಯಕ್ರಮ ನಡೆಸಿಕೊಡಲು ಪ್ರೇರಣೆ ಎಂದು ಹೇಳಿದ್ದಾರೆ. ತಮ್ಮ ವೃತ್ತಿ ಬದುಕಿನಲ್ಲಿ ಬೆನ್ನೆಲುಬಾದ ಹಂತ ಹಂತಕ್ಕೂ ಪ್ರೋತ್ಸಾಹವನ್ನು ನೀಡುತ್ತಾ ಬಂದ ಪತ್ನಿ ಜೆನಿಲಿಯಾಗೆ ಧನ್ಯವಾದವನ್ನು ಹೇಳಿದ್ದಾರೆ. ಗೆಲ್ಲುವ ಎಲ್ಲ ಅರ್ಹತೆ ಹೊಂದಿದ್ದ ಸೂರಜ್ ಚವ್ಹಾಣ್ಗೆ ಬಿಗ್ ಬಾಸ್ ಪ್ರಶಸ್ತಿ ಒಲಿದಿದ್ದು ಖುಷಿ ನೀಡಿದೆ ಎಂದು ಕೂಡ ರಿತೇಶ್ ಹೇಳಿದ್ದಾರೆ.
ಬಿಗ್ ಬಾಸ್ ಟ್ರೋಫಿ ಪಡೆದ ನಂತರ ತಮ್ಮ ಮನದ ಮಾತು ಹಂಚಿಕೊಂಡ ಸೂರಜ್ ಚವ್ಹಾಣ್, ತಮ್ಮ ಕನಸಿನ ಅರಮನೆಯನ್ನು ಕಟ್ಟಲು ಈ ಹಣ ಉಪಯೋಗಿಸುವುದಾಗಿ ಹೇಳಿದ್ದಾರೆ. ಬಿಗ್ ಬಾಸ್ ಮಾದರಿಯಲ್ಲಿಯೇ ಮನೆ ಕಟ್ಟುವ ಆಲೋಚನೆ ಇದೆ ಎಂದು ಹೇಳಿದ್ದಾರೆ. ಇನ್ನೂ.. ಬಿಗ್ ಬಾಸ್ ಪ್ರಶಸ್ತಿಯನ್ನು ಪಡೆದ ನಂತರ ಸೂರಜ್ ಚವ್ಹಾಣ್ ಅದೃಷ್ಟ ಬದಲಾಗಿದ್ದು, ಮರಾಠಿ ನಿರ್ದೇಶಕ ಕೇಧಾರ್ ಶಿಂಧೆ ಸೂರಜ್ ಚವ್ಹಾಣ್ಗೆ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ಘೋಷಣೆ ಮಾಡಿದ್ದಾರೆ. ಸದ್ಯಕ್ಕೆ ಸೂರಜ್ ಚವ್ಹಾಣ್ಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ.


Click it and Unblock the Notifications











