'ಬಿಗ್ ಬಾಸ್'ದಿಂದ ನನ್ನ ಜೀವನವೇ ಹಾಳಾಯ್ತು, ನನ್ನ ಕಾಲ ಮೇಲೆ ನಾನೇ ಚಪ್ಪಡಿ ಕಲ್ಲು ಹಾಕೊಂಡೆ -ಪಶ್ಚಾತಾಪ ಪಟ್ಟ ನಟಿ
''ಬಿಗ್ ಬ್ರದರ್'' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು ''ಬಿಗ್ ಬಾಸ್''. ಒಂದೂವರೆ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮ 2006ರಲ್ಲಿ ಭಾರತದಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. ''ಸೋನಿ'' ಟಿವಿಯಲ್ಲಿ ಪ್ರಸಾರವಾದ ಮೊದಲ ''ಬಿಗ್ ಬಾಸ್'' ಸೀಸನ್ ಸುಮಾರು 86 ದಿನಗಳ ಕಾಲ ನಡೆದಿತ್ತು.
ಮೊದಲ ಪ್ರಯತ್ನದಲ್ಲಿಯೇ ಅಪಾರವಾದ ಯಶಸ್ಸನ್ನು ಕೂಡ ಈ ಕಾರ್ಯಕ್ರಮ ಪಡೆಯಿತು. ಅಲ್ಲಿಂದ ಇಲ್ಲಿಯವರೆಗೆ ಈ ''ಬಿಗ್ ಬಾಸ್'' ಲಂಗು ಲಗಾಮು ಇಲ್ಲದೇ ಸಾಗುತ್ತಲೇ ಇದೆ.

ಇನ್ನು.. ''ಬಿಗ್ ಬಾಸ್'' ಹಲವರ ಕನಸು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನಮ್ಮ ಜನ್ಮ ಪಾವನ ಎಂದುಕೊಂಡವರು ಹಲವಾರು ಜನ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದೇ ನಾನಾ ತರಹದ ಸರ್ಕಸನ್ನು ಕೂಡ ಮಾಡುತ್ತಾರೆ. ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಹಲವರ ಬದುಕು ಬದಲಿಸಿದೆ. ಇನ್ನು ಕೆಲವರ ಬದುಕನ್ನು ಬರ್ಬಾದ್ ಕೂಡ ಮಾಡಿದೆ. ತೇಜಸ್ವಿ ಮಡಿವಾಡ ಇದಕ್ಕೆ ಸದ್ಯದ ಉದಾಹರಣೆ.
ಹೌದು, ತೇಜಸ್ವಿ ಮಡಿವಾಡ, ಪಕ್ಕದ ಆಂಧ್ರದ ಚೆಲುವೆ. ತೆಲುಗು ''ಬಿಗ್ ಬಾಸ್''ನ ಎರಡನೇ ಸೀಸನ್ನಲ್ಲಿ ಕಾಣಿಸಿಕೊಂಡಿದ್ದ ತೇಜಸ್ವಿನಿ ಆ ನಂತರ ರಾಮ್ ಗೋಪಾಲ್ ವರ್ಮಾ ಅವರ ''ಐಸ್ಕ್ರೀಮ್'' ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಪಡ್ಡೆ ಹುಡುಗರ ಹೃದಯವನ್ನು ಗೆದ್ದಿದ್ದರು.

ಇಲ್ಲಿಂದಾಚೆ ''ಲವರ್ಸ್''.. ''ಸುಬ್ರಮಣ್ಯನ್ ಫಾರ್ ಸೇಲ್''.. ''ಅನುಕ್ಷಣಂ''.. ''ವಿಶ್ ಯು ಹ್ಯಾಪಿ ಬ್ರೇಕಪ್''.. ಹೀಗೆ ಒಂದಾದ ಮೇಲೊಂದು ಚಿತ್ರಗಳಲ್ಲಿ ಕಾಣಿಸಿಕೊಂಡ ತೇಜಸ್ವಿ ಮಡಿವಾಡ ಆ ನಂತರ ಮಹೇಶ್ ಬಾಬು ಅಭಿನಯದ ''ಶ್ರೀಮಂತಡು'' ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.
ಇಂಥಾ ತೇಜಸ್ವಿ ''ಬಿಗ್ ಬಾಸ್'' ಮನೆಗೆ ಹೋಗಿದ್ದು ನನ್ನ ಬದುಕಿನ ಬಹುದೊಡ್ಡ ತಪ್ಪು ನಿರ್ಧಾರ ಎಂದು ಹೇಳಿದ್ದಾರೆ. ಈ ಕುರಿತು ''iDream Kakinada'' ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ತೇಜಸ್ವಿ ''ಬಿಗ್ ಬಾಸ್'' ಕಾರ್ಯಕ್ರಮದಿಂದ ನನ್ನ ವೃತ್ತಿ ಬದುಕು ತಿರುವು ಪಡೆಯುತ್ತೆ, ಬದುಕು ಬದಲಾಗುತ್ತೆ ಎಂದು ನಾನು ಅಂದುಕೊಂಡಿದ್ದೇ ಆದರೆ ಆಗಿದ್ದೇ ಬೇರೆ ಎಂದು ಹೇಳಿದ್ದಾರೆ.

''ಬಿಗ್ ಬಾಸ್'' ಮನೆಯಿಂದ ಬಂದ ನಂತರ, ನನ್ನ ವೃತ್ತಿ ಜೀವನಕ್ಕೆ ಹಿನ್ನೆಡೆಯಾಯ್ತು ಎಂದು ಹೇಳಿರುವ ತೇಜಸ್ವಿ ಮಡಿವಾಡ ಚಿತ್ರರಂಗದಲ್ಲಿ ನನಗೆ ಅವಕಾಶಗಳು ಮರಿಚೀಕೆಯಾದವು ಎಂದು ಹೇಳಿದ್ಧಾರೆ. ''ಬಿಗ್ ಬಾಸ್'' ನನ್ನ ಬದುಕಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು, ಅಲ್ಲಿ ಭಾಗವಹಿಸಿದ ಹಿನ್ನೆಲೆ ನನ್ನನ್ನು ಸಮಾಜ ಮತ್ತು ಚಿತ್ರರಂಗ ನೋಡುವ ದೃಷ್ಟಿಕೋನ ಬದಲಾಯ್ತು ಎಂದಿರುವ ತೇಜಸ್ವಿ ''ಬಿಗ್ ಬಾಸ್'' ಮನೆಯಲ್ಲಿ ನನ್ನ ನೋಡಿ ಅನೇಕರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದರು, ನನ್ನನ್ನೂ ತಪ್ಪಾಗಿ ಅರ್ಥೈಸಿಕೊಂಡರು, ಚಿತ್ರರಂಗ ಕೂಡ ನನ್ನಿಂದ ಅಂತರ ಕಾಪಾಡಿಕೊಳ್ಳಲು ಶುರು ಮಾಡಿತು ಎಂದು ಹೇಳಿದ್ದಾರೆ.
ಮುಂದುವರೆದು ಒಂದರ್ಥದಲ್ಲಿ ''ಬಿಗ್ ಬಾಸ್'' ನನ್ನ ಜೀವನವನ್ನೇ ಹಾಳು ಮಾಡಿತು ಎನ್ನಬಹುದು ಎಂದು ಹೇಳಿರುವ ತೇಜಸ್ವಿ ಮಡಿವಾಡ ಅಲ್ಲಿ ಹೋಗಿದ್ದು ನನ್ನ ಬದುಕಿನ ಬಹುದೊಡ್ಡ ತಪ್ಪು ನನ್ನ ಇಮೇಜ್ ಸಂಪೂರ್ಣ ಡ್ಯಾಮೇಜ್ ಆಯ್ತು ಎಂದು ಹೇಳಿದ್ದಾರೆ.
ಅಂದ್ಹಾಗೇ ತೇಜಸ್ವಿ ಮಡಿವಾಡ ಈ ಮಾತುಗಳನ್ನು ಕಳೆದ ವರ್ಷ ನವೆಂಬರ್ 16ರಂದು ಹೇಳಿದ್ದರು. ಈಗ ತೆಲುಗಿನಲ್ಲಿ ನಾಗಾರ್ಜುನ ಸಾರಥ್ಯದಲ್ಲಿ ಮತ್ತೆ ''ಬಿಗ್ ಬಾಸ್'' ಶುರುವಾದ ಹಿನ್ನೆಲೆ ''iDream Kakinada'' ಯೂಟ್ಯೂಬ್ ಚಾನೆಲ್ ಈ ಒಂದು ವರ್ಷದ ಹಿಂದಿನ ಸಂದರ್ಶನವನ್ನು ಮತ್ತೆ ತನ್ನ ಚಾನೆಲ್ನಲ್ಲಿ ರಿ ಅಪ್ಲೋಡ್ ಮಾಡಿದೆ. ಈ ಹಿನ್ನೆಲೆ ತೇಜಸ್ವಿ ಮಡಿವಾಡ ಅವರ ಸಂದರ್ಶನದ ಈ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.


Click it and Unblock the Notifications











