Bigg Boss Kannada 9 : ಯಾರ ಕೈಗೆ ಯಾರ 'ಬ್ಯಾಂಡು'? ಯಾರ ಕೈಗಳು ಉಳಿದವು ಖಾಲಿ?
ಬಿಗ್ಬಾಸ್ ಸೀಸನ್ 9 ಆರಂಭವಾದ ದಿನ ಸುದೀಪ್, ಸ್ಪರ್ಧಿಗಳನ್ನು ಮನೆಯ ಒಳಗೆ ಕಳಿಸುವಾಗಲೆ ಅವರಿಗೆ ಟಾಸ್ಕ್ ಒಂದನ್ನು ಕೊಟ್ಟಿದ್ದರು.
ಪ್ರತಿಯೊಬ್ಬ ಸ್ಪರ್ಧಿಗಳ ಕೈಗೂ ಒಂದೊಂದು ಬ್ಯಾಂಡ್ ಅನ್ನು ನೀಡಿದ್ದರು. ಆ ಬ್ಯಾಂಡ್ಗಳ ಮೇಲೆ ವ್ಯಕ್ತಿಯ ವ್ಯಕ್ತಿತ್ವದ ಗುರುತು ಸಾರುವ ಹೆಸರುಗಳಿದ್ದವು. 'ವಿಧೂಷಕ', 'ಕಿಲಾಡಿ', 'ಚಾಣಕ್ಯ', 'ತ್ಯಾಗರಾಜ' ಹೀಗೆ ಒಟ್ಟು ಹದಿನೆಂಟು ಬಾಂಡ್ಗಳನ್ನು ಹದಿನೆಂಟು ಸ್ಪರ್ಧಿಗಳಿಗೆ ಸುದೀಪ್ ನೀಡಿದ್ದರು.
ಆ ಬ್ಯಾಂಡ್ಗಳನ್ನು ಆಟಗಾರರು ಅವರ ಬಳಿಯೇ ಇಟ್ಟುಕೊಂಡಿದ್ದರು. ಆ ಬ್ಯಾಂಡ್ ಮೇಲಿನ ಬಿರುದು ಯಾರಿಗೆ ಒಪ್ಪಿಗೆ ಆಗುತ್ತದೆಯೋ ಅವರಿಗೆ ನೀಡಬೇಕು ಎಂದು ಮೊದಲೇ ಸುದೀಪ್ ನಿಯಮವನ್ನು ಹೇಳಿದ್ದರು. ಅಂತೆಯೇ ಇಂದು ಬಿಗ್ಬಾಸ್ ಸೂಚನೆ ಮೇರೆಗೆ ಮನೆಯ ಎಲ್ಲ ಸದಸ್ಯರು ಆ ಬ್ಯಾಂಡ್ಗಳನ್ನು ಮನೆಯ ಸದಸ್ಯರು ಇತರ ಸದಸ್ಯರುಗಳ ಕೈಗೆ ಕಟ್ಟಿದರು. ಕೆಲವರಿಗೆ ಹೆಚ್ಚು ಬ್ಯಾಂಡ್ಗಳು ಬಂದರೆ ಕೆಲವರಿಗೆ ಯಾವ ಬ್ಯಾಂಡ್ ಸಹ ಸಿಗಲಿಲ್ಲ.

ಅರುಣ್ ಸಾಗರ್ಗೆ ಮೂರು ಬಿರುದು
ಅರುಣ್ ಸಾಗರ್ ಹಾಗೂ ಪ್ರಶಾಂತ್ ಸಂಬರ್ಗಿಗೆ ಹೆಚ್ಚು ಬ್ಯಾಂಡ್ ದೊರಕಿತು. ಮೊದಲಿಗೆ ಅನುಪಮಾ 'ವಿಧೂಷಕ' ಬಿರುದಿನ ಬ್ಯಾಂಡ್ ಅನ್ನು ಅರುಣ್ ಸಾಗರ್ಗೆ ನೀಡಿದರು. ಬಳಿಕ ದರ್ಶ್ ಬಳಿ ಇದ್ದ 'ನಾಯಕ' ಹೆಸರಿನ ಬ್ಯಾಂಡ್ ಅನ್ನು ಅರುಣ್ ಸಾಗರ್ಗೆ ನೀಡಿದರು. ಅವರು ಮಾತನಾಡಿದ ಮೇಲೆ ಇನ್ಯಾರಿಗೂ ಮಾತನಾಡಲು ಅವಕಾಶವಿಲ್ಲದೆ ಅವರು ತಮ್ಮ ವಿಷಯ ಮಂಡಿಸುತ್ತಾರೆ ಹಾಗಾಗಿ ಅವರು ನಾಯಕರು ಎಂದರು. ಬಳಿಕ ಪ್ರಶಾಂತ್ ಸಂಬರ್ಗಿ, ಅರುಣ್ ಸಾಗರ್ಗೆ ಗೆಳೆಯ ಎಂಬ ಬಿರುದಿನ ಬ್ಯಾಂಡ್ ಕಟ್ಟಿ. ತಮ್ಮಿಬ್ಬರ ಗೆಳೆತನವನ್ನು ಮೆಲುಕು ಹಾಕಿದರು.

ಪ್ರಶಾಂತ್ ಸಂಬರ್ಗಿಗೂ ಮೂರು ಬಿರುದು
ಪ್ರಶಾಂತ್ ಸಂಬರ್ಗಿಗೂ ಮೂರು ಬಿರುದಿನ ಬ್ಯಾಂಡ್ ದೊರಕಿತು ಆದರೆ ಆ ಬಿರುದುಗಳಲ್ಲಿ ಎರಡು 'ಹೀರೋಯಿಕ್' ಬಿರುದುಗಳಾಗಿಲ್ಲವಷ್ಟೆ. ಕಿಲಾಡಿ ಬಿರುದನ್ನು ಅವರ ಜೊತೆಗಾರ ವಿನೋದ್ ಗೊಬ್ರಗಾಲ ಪ್ರಶಾಂತ್ಗೆ ನೀಡಿದರು. 'ಕಲಾವಿದ' ಬಿರುದನ್ನು ಸಾನ್ಯಾ ಐಯ್ಯರ್ ಪ್ರಶಾಂತ್ಗೆ ನೀಡಿದರು. ಆದರೆ ದೀಪಿಕಾ ದಾಸ್ ಮಾತ್ರ ಪ್ರಶಾಂತ್ ಸಂಬರ್ಗಿಯ ಧೈರ್ಯವನ್ನು ಮೆಚ್ಚಿ ಅವರಿಗೆ 'ಧೈರ್ಯವಂತ' ಬಿರುದು ನೀಡಿದರು.

ಆರ್ಯವರ್ಧನ್ಗೆ ಎರಡು ಬ್ಯಾಂಡ್
ಒಟಿಟಿ ಸೀಸನ್ನ 'ಹೀರೋ' ಆರ್ಯವರ್ಧನ್ ಅವರಿಗೆ ಎರಡು ಬಾಂಡ್ಗಳು ದೊರಕಿದವು. ಅರುಣ್ ಸಾಗರ್ ಅವರು ಆರ್ಯವರ್ಧನ್ ಒಬ್ಬ ನಂಬಿಕಸ್ತ, ಅವರಿದ್ದರೆ ಎಲ್ಲರಿಗೂ ಊಟ ಸಿಗುತ್ತದೆ, ಹಸಿವೆಯಲ್ಲಿರುವುದಿಲ್ಲ ಎಂಬ ನಂಬಿಕೆ ಹುಟ್ಟಿಸಿದ್ದಕ್ಕೆ ಬ್ಯಾಂಡ್ ನೀಡುತ್ತಿರುವುದಾಗಿ ಹೇಳಿದರು. ಬಳಿಕ ಚಾಣಕ್ಯ ಎಂಬ ಬ್ಯಾಂಡ್ ಅನ್ನು ರೂಪೇಶ್ ರಾಜಣ್ಣ, ಆರ್ಯವರ್ಧನ್ಗೆ ನೀಡಿದರು. ಅಡುಗೆ ಮನೆಯ ಚಾಣಕ್ಯ ಆರ್ಯವರ್ಧನ್ ಎಂದು ಹೊಗಳಿದರು.

ಯಾರಿಗೆ ಬ್ಯಾಂಡ್ ಸಿಗಲಿಲ್ಲ?
ರಾಕೇಶ್ ಅವರು 'ಚಿಂತಾಕ್ರಾಂತ' ಬ್ಯಾಂಡ್ ಅನ್ನು ಮಯೂರಿಗೆ ನೀಡಿದರು. ಮಯೂರಿಯವರು 'ಗೊಂಬೆ' ಬಿರುದನ್ನು ತಮ್ಮ ಅಳುವಿಗೆ ಕಾರಣವಾದ ನೇಹಾ ಗೌಡಗೆ ನೀಡಿದರು. ರೂಪೇಶ್ ಶೆಟ್ಟಿ, 'ತ್ಯಾಗರಾಜ' ಬಿರುದನ್ನು ರಾಕೇಶ್ ಅಡಿಗಗೆ ನೀಡಿದರು. ಆರ್ಯವರ್ಧನ್ ಅವರು 'ಪ್ರಶಾಂತ' ಬಿರುದನ್ನು ರೂಪೇಶ್ ಶೆಟ್ಟಿಗೆ ನೀಡಿದರು. ಕಾವ್ಯಾಶ್ರೀ ಅವರು 'ಕತೆಗಾರ' ಬಿರುದನ್ನು ರೂಪೇಶ್ ರಾಜಣ್ಣಗೆ ನೀಡಿದರು. ಐಶ್ವರ್ಯಾ ಅವರು 'ಟೀಚರ್' ಬಿರುದನ್ನು ದಿವ್ಯಾ ಉರುಡುಗಗೆ ನೀಡಿದರು. ನವಾಜ್ 'ಸುರಸುಂದರಿ' ಬ್ಯಾಂಡ್ ಅನ್ನು ಬೈಕರ್ ಐಶ್ವರ್ಯಾಗೆ ನೀಡಿದರು. 'ದಯಾಳು' ಬ್ಯಾಂಡ್ ಅನ್ನು ದಿವ್ಯಾ ಉರುಡುಗ ಕೊಟ್ಟಿದ್ದ ದರ್ಶ್ ಚಂದಪ್ಪಗೆ, ಅಮೂಲ್ಯ ಅವರು ತಮ್ಮ ಬ್ಯಾಂಡ್ ಅನ್ನು ನೇಹಾಗೆ ನೀಡಿದರು. ನೇಹಾ, 'ಸಾಹಸಿ' ಬಿರುದನ್ನು ಅಮೂಲ್ಯಾಗೆ ನೀಡಿದರು. ಇನ್ನು ಸಾನ್ಯಾ ಐಯ್ಯರ್, ವಿನೋದ್ ಗೊಬ್ರಗಾಲ ಹಾಗೂ ನವಾಜ್, ಕಾವ್ಯಾಶ್ರೀ, ಅನುಪಮಾ, ದೀಪಿಕಾ ದಾಸ್ಗೆ ಯಾವುದೇ ಬ್ಯಾಂಡ್ ಸಿಗಲಿಲ್ಲ.


Click it and Unblock the Notifications











