Bigg Boss: ತನ್ನ ತಾಯಿಯ ಬಗ್ಗೆ ಹೃದಯ ಹಿಂಡುವ ವಿಷಯ ಹಂಚಿಕೊಂಡ ರೂಪೇಶ್
ತಾಯಿಯೆಂದರೆ ಎಲ್ಲರಿಗೂ ಪ್ರೀತಿ, ಅಕ್ಕರೆ, ಗೌರವ, ಆದರೆ ತಾನು ತಾಯಿಯನ್ನು ದ್ವೇಷಿಸಿದ್ದ ಹೃದಯಕಲಕುವ ಸಂಗತಿಯನ್ನು ಬಿಗ್ಬಾಸ್ ಸೀಸನ್ 9 ರ ಸ್ಪರ್ಧಿ ರೂಪೇಶ್ ಶೆಟ್ಟಿ ಹಂಚಿಕೊಂಡಿದ್ದಾರೆ.
ಸದಾ ಹಾಡುತ್ತಾ, ನಗುತ್ತಾ, ಎಲ್ಲರ ಮೇಲೆ ಹಾಡು ಕಟ್ಟುತ್ತಾ, ಕುಣಿಯುತ್ತಾ ಇರುವ ರೂಪೇಶ್ ಎದೆಯಲ್ಲಿ ಎಷ್ಟು ದೊಡ್ಡ ನೋವಿನ ಅಗ್ನಿಪರ್ವತ ಇಟ್ಟುಕೊಂಡಿದ್ದಾನೆಂದು ಆಶ್ಚರ್ಯವಾಗುವ ರೀತಿ ಇದೆ ರೂಪೇಶ್ ಇಂದು ಹಂಚಿಕೊಂಡ ನೆನಪು.
ಎಲ್ಲವೂ ಪ್ರಾರಂಭವಾಗಿದ್ದು ರಾಕೇಶ್ ಅಡಿಗನಿಂದ. ರಾಕೇಶ್ ಹಾಗೂ ಇನ್ನಿತರರು ಸೇರಿಕೊಂಡು ಹಾಡು ಹಾಡಲು ಪ್ರಾರಂಭಿಸಿದರು. ಜುಂಬಾ..ಜುಂಬಾ ಎಂದೇನೋ ಇದ್ದ ಹಾಡು ಕೊನೆಗೆ 'ಅವ್ವಾ.. ಅವ್ವಾ' ಎಂದು ಬದಲಾಯಿತು. ಎಲ್ಲರೂ ಭಾವುಕರಾಗ ತೊಡಗಿದರು. ವಿನೋದ್ ಗೊಬ್ರಬಾಲ ತನ್ನ ತಾಯಿ ತನ್ನ ಬಗ್ಗೆ ತೋರುವ ಕಾಳಜಿಯ ಬಗ್ಗೆ ಭಾವುಕರಾಗಿ ಮಾತನಾಡಿದರು. ಇದು ಎಲ್ಲರನ್ನೂ ಇನ್ನಷ್ಟು ಭಾವುಕರನ್ನಾಗಿಸಿತು.

ತನ್ನ ಅಮ್ಮನ ಕತೆ ಹೇಳಿದ ರೂಪೇಶ್ ಶೆಟ್ಟಿ
ನಂತರ ರೂಪೇಶ್ ಹಾಗೂ ಕಾವ್ಯಶ್ರೀ ಮೇಕಪ್ ರೂಮ್ ಬಳಿ ಕುಳಿತುಕೊಂಡು ಇದೇ ವಿಷಯ ಮಾತನಾಡುತ್ತಿದ್ದರು. ರೂಪೇಶ್ ತಮ್ಮ ತಾಯಿಯ ಕತೆ ಹೇಳಲು ಪ್ರಾರಂಭಿಸಿದರು. ರೂಪೇಶ್ ಅಮ್ಮನಿಗೆ ಮಾನಸಿಕ ಸಮಸ್ಯೆ ಇತ್ತು. ಒಮ್ಮೆ ಜಗಳವಾಗಿತ್ತು, ಅವರ ಕಾಟ ತಾಳಲಾಗುತ್ತಿರಲಿಲ್ಲ ಯಾರಿಗೂ, ಅಂದೊಂದು ದಿನ ಅಮ್ಮನನ್ನು ನಾನು ಪ್ರೀತಿಯಿಂದ ಮಾತನಾಡಿಸಿದೆ, ಅಮ್ಮನೂ ಪ್ರೀತಿಯಿಂದ ಮಾತನಾಡಿದರು, ಅವರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಆ ಕೋಣೆಯ ಬಾಗಿಲು ಹಾಕಿಬಿಟ್ಟೆ, ಅಮ್ಮ ಅಂದು ಜೋರಾಗಿ ಕಿರುಚಿಬಿಟ್ಟರು, ಮಗ ನಿನ್ನನ್ನು ನಂಬಿದೆ ನೀನೆ ಹೀಗೆ ಮಾಡಿಬಿಟ್ಟೆ ಎಂದು ಜೋರಾಗಿ ಅತ್ತರು ಎಂದು ಹೇಳುತ್ತಾ ರೂಪೇಶ್ ಸಹ ಅತ್ತು ಬಿಟ್ಟರು.

ಅಮ್ಮನನ್ನು ಕಂಡರೆ ಆಗುತ್ತಿರಲಿಲ್ಲ: ರೂಪೇಶ್
''ಆಗೆಲ್ಲ ಅಮ್ಮನನ್ನು ಕಂಡರೆ ನನಗೆ ಆಗುತ್ತಿರಲಿಲ್ಲ. ಏಕೆಂದರೆ ನಮ್ಮದು ಸಣ್ಣ ಊರು ಎಲ್ಲರಿಗೂ ಗೊತ್ತು ಅವನ ಅಮ್ಮನಿಗೆ ಮಾನಸಿಕ ಸಮಸ್ಯೆ ಇದೆ ಎಂದು. ನನ್ನ ಮಾನ-ಮರ್ಯಾದೆ ಹೋಗುತ್ತಿದೆ ಎಂದೆಲ್ಲ ಅನ್ನಿಸುತ್ತಿತ್ತು. ನಾನು ಅಮ್ಮನನ್ನು ಬಹಳ ದ್ವೇಷಿಸುತ್ತಿದ್ದೆ ಆಗೆಲ್ಲ. ನನಗೆ ಆಗಿನ್ನೂ ಸಣ್ಣ ವಯಸ್ಸು ನಾನು ಒಂಬತ್ತನೇ ತರಗತಿಯಲ್ಲಿದ್ದೆ ಅಷ್ಟೆ. ಆದರೆ ಈಗ ಅನ್ನಿಸುತ್ತೆ ಅಮ್ಮ ಇರಬೇಕಿತ್ತು, ಅವರನ್ನು ನಾನು ಖುಷಿ ಪಡಿಸಬೇಕಿತ್ತು ಅನಿಸುತ್ತೆ. ಈಗೆಲ್ಲ ನಾನು ಏನಾದರೂ ಸಾಧನೆ ಮಾಡಿದರೆ ಹೇಳಿಕೊಳ್ಳಲು ಸಹ ಯಾರೂ ಇಲ್ಲ'' ಎಂದು ಮತ್ತೆ ಕಣ್ಣೀರಾದರು ರೂಪೇಶ್.

ಅಮ್ಮ ಹೋಗುವ ಹಿಂದಿನ ದಿನ....
''ಅಮ್ಮನಿಗೆ ಮಾನಸಿಕ ಸ್ಥಿಮಿತ ತಪ್ಪಿದಾಗ ಅವರನ್ನು ಅಜ್ಜನ ಮನೆಗೆ ಕಳಿಸುತ್ತಿದ್ದರು. ಅಮ್ಮನಿಗೆ ಹಾಗೆ ಆದಾಗೆಲ್ಲ ಅನ್ನಿಸುತ್ತಿತ್ತು ಅಮ್ಮ ಇನ್ನಿರುವುದಿಲ್ಲ ಎಂದು ಆರನೇ ಬಾರಿ ನಾನಂದುಕೊಂಡಂತೆ ಆಗಿಬಿಟ್ಟಿತು. ಪಾಪ ಅವರು, ನನ್ನ ತಾಯಿ ಸಾಯುವ ಹಿಂದಿನ ದಿನ ಜೋರಾಗಿ ಶಬ್ದ ಮಾಡಿ ಬಿದ್ದು ಬಿಟ್ಟರು, ದೆವ್ವ ಮೈಮೇಲೆ ಬಂತು ಎಂದುಕೊಂಡು ನಾನು ಓಡಿದೆ ಆದರೆ ಯಾರೂ ಎತ್ತಲಿಲ್ಲ. ಆಮೇಲೆ ಎಷ್ಟೋ ಹೊತ್ತಿನ ನಂತರ ಅವರೇ ಎದ್ದರು ಸರಿ ಹೋಯಿತು ಎಂದುಕೊಂಡೆವು ಆದರೆ ಅವರು ಹೋಗಿಯೇ ಬಿಟ್ಟರು'' ಎಂದು ಹೇಳಿ ಮತ್ತೆ ಕಣ್ಣೀರು ಹಾಕಿದರು ರೂಪೇಶ್.

''ಅಮ್ಮನ ಖಾಯಿಲೆ ನನಗೆ ಬಂದಿದೆ ಎಂದುಕೊಂಡಿದ್ದರು''
''ಅಮ್ಮ ತೀರಿಕೊಂಡ ದಿನ ಜನ ಒಬ್ಬೊಬ್ಬರಾಗಿ ಮನೆಗೆ ಬರುತ್ತಿದ್ದರು. ಅದು ನನಗೆ ಸಾಮಾನ್ಯ, ಜನ ಬರುವುದು ಅಮ್ಮನನ್ನು ನೋಡಿ ನಗುವುದು ಅಭ್ಯಾಸವಾಗಿತ್ತು. ಆದರೆ ಅಂದು ಹೆಚ್ಚು ಜನ ಬಂದಿದ್ದರು. ನನಗೆ ಯಾರೂ ಹೇಳಿರಲೂ ಇಲ್ಲ. ನನಗೆ ಅಳು ಸಹ ಬಂದಿರಲಿಲ್ಲ. ಮನಸ್ಸಿಗೆ ಹಿಂಸೆ ಆಗಿಬಿಟ್ಟಿತ್ತು. ಒಂದು ತಿಂಗಳು ನಾನು ಯಾರ ಬಳಿಯೂ ಮಾತನಾಡಿರಲಿಲ್ಲ. ಎಲ್ಲರಿಗೂ ನನ್ನ ಮೇಲೆ ಅನುಮಾನ ಬಂದಿತ್ತು. ಅಮ್ಮನ ಖಾಯಿಲೆ ಇವನಿಗೆ ವರ್ಗವಾಗಿದೆ ಎಂದುಕೊಂಡಿದ್ದರು'' ಎಂದು ತಮ್ಮ ನೋವು ಹೇಳಿಕೊಂಡರು ರೂಪೇಶ್.


Click it and Unblock the Notifications











