'ಬಿಗ್ ಬಾಸ್ 2' ಸುವರ್ಣ ಪಾಲು; ಸುದೀಪ್ ನಿರೂಪಣೆ
ಕನ್ನಡ ಕಿರುತೆರೆ ಲೋಕದಲ್ಲಿ ಬಿಗ್ ಶೋ ಎನ್ನಿಸಿಕೊಂಡ 'ಬಿಗ್ ಬಾಸ್ ಸೀಸನ್ 2'ಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಜೂನ್ ತಿಂಗಳಿಂದ ಕನ್ನಡ ಬಿಗ್ ಬಾಸ್ ಮೂಡಿಬರಲಿದೆ. ಒಂದೇ ಒಂದು ವ್ಯತ್ಯಾಸ ಎಂದರೆ ಈ ಬಾರಿ ಈಟಿವಿ ಕನ್ನಡ ಬದಲಾಗಿ ಸುವರ್ಣ ವಾಹಿನಿಯಲ್ಲಿ ಮೂಡಿಬರುತ್ತಿರುವುದು.
ಈ ಬಗ್ಗೆ ಸ್ವತಃ ಸುದೀಪ್ ಟ್ವೀಟಿಸಿದ್ದು, "ಜೂನ್ ನಿಂದ ಬಿಗ್ ಬಾಸ್ ಶುರುವಾಗಲಿದೆ...ಸ್ಪರ್ಧಿಗಳು ಯಾರು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ನನಗೂ ಇದೆ...ಈ ಹಿಂದಿನ ಸ್ಪರ್ಧಿಗಳು ಹಾಗೂ ಟೀಂ ಈ ಬಾರಿ ಮಿಸ್ ಆಗಿದ್ದೇನೆ" ಎಂದಿದ್ದಾರೆ. ['ಬಿಗ್ ಬಾಸ್ ಸೀಸನ್ 2' ಸ್ಪರ್ಧಿಗಳು ಇವರೇನಾ ಸ್ವಾಮಿ?]
ಹೊಸ ಸ್ಪರ್ಧಿಗಳು, ಹೊಸ ಚಾನಲ್, ಹೊಸ ತಂಡ...ನಿಜಕ್ಕೂ ಈ ಬಾರಿ ಏನೆಲ್ಲಾ ವಿಶೇಷಗಳಿರುತ್ತವೆ ಎಂಬ ಬಗ್ಗೆ ಕಿರುತೆರೆ ವೀಕ್ಷಕರಲ್ಲಿ ತಡೆದುಕೊಳ್ಳಲಾರದಷ್ಟು ಕುತೂಹಲವಿದೆ. ಈ ಬಾರಿ ಯಾರೆಲ್ಲಾ ಹೊಸ ಮುಖಗಳಿರುತ್ತಾರೋ, ಏನೆಲ್ಲಾ ಸ್ಪರ್ಧೆಗಳಿರುತ್ತವೋ ಎಂಬ ಕಾತುರ ಕುತೂಹಲಗಳು ಮನೆಮಾಡಿವೆ.

ಟಿಆರ್ ಪಿ ಸಮರಕ್ಕೆ ನಾಂದಿ ಹಾಡಿದ ಶೋ
ಬಿಗ್ ಬಾಸ್ ಸೀಸನ್ 1 ಶೋ ಈಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಆಗ ಸುವರ್ಣ ವಾಹಿನಿಯಲ್ಲಿ ಕನ್ನಡದ ಕೋಟ್ಯಾಧಿಪತಿ ಮೂಡಿಬರುತ್ತಿತ್ತು. ಈ ಎರಡೂ ವಾಹಿನಿಗಳ ನಡುವೆ ಟಿಆರ್ ಪಿ ಸಮರವೇ ನಡೆಯಿತು.

ಈಗ ಬಿಗ್ ಬಾಸ್ 2 ಸುವರ್ಣ ಪಾಲು
ಈಗ ಬಿಗ್ ಬಾಸ್ 2 ಸುವರ್ಣ ಪಾಲಾಗಿದ್ದು ಇನ್ನು ಟಿಆರ್ ಪಿ ಸಮರದಲ್ಲಿ ಪ್ರತಿಸ್ಪರ್ಧಿಯೇ ಇಲ್ಲದಂತಾಗಿದೆ. ಆದರೆ ಈ ಬಾರಿ ವೀಕ್ಷಕರು ಎಷ್ಟರ ಮಟ್ಟಿಗೆ ಬಿಗ್ ಬಾಸ್ ಕಾರ್ಯಕ್ರಮವನ್ನು ಒಪ್ಪುತ್ತಾರೆ ಎಂಬ ಅನುಮಾನವೂ ಇದೆ.

ಸುದೀಪ್ ಅವರ ನಿರೂಪಣೆ ಶೋಗೆ ಹೊಸ ಮೆರುಗು
ವಾರದಲ್ಲಿ ಎರಡು ದಿನ ಸುದೀಪ್ ಅವರ ನಿರೂಪಣೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸ ಮೆರುಗು ನೀಡುತ್ತಿತ್ತು. ಈ ಬಾರಿಯೂ ಅದೇ ನಿರೀಕ್ಷೆಗಳಿವೆ.

ಮೊದಲ ಸೀಸನ್ ಬಳಿಕ ಸಾಕಪ್ಪಾ ಸಾಕು ಎಂದಿದ್ದರು
ಬಿಗ್ ಬಾಸ್ ಮೊದಲ ಸೀಸನ್ ಬಳಿಕ ಸಾಕಪ್ಪಾ ಸಾಕು ಎಂದಿದ್ದರು ಸುದೀಪ್. ಅವರು 'ಸೀಸನ್ 2' ಗೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಇತ್ತು.

ತಮ್ಮದೇ ಆದಂತಹ ಛಾಪು ಮೂಡಿಸಿದ್ದ ಸುದೀಪ್
ಈಗ ಸ್ವತಃ ಅವರೇ ಬಿಗ್ ಬಾಸ್ 2 ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಬಿಗ್ ಬಾಸ್ ನಿರೂಪಣೆಯಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ್ದರು. ಸ್ಪರ್ಧಿಗಳೊಂದಿಗೆ ತಮಾಷೆ, ಅವರು ತಪ್ಪು ಮಾಡಿದಾಗ ತಿದ್ದಿ, ಎಚ್ಚರಿಸುವ ಚಾಕಚಕ್ಯತೆ ಎಲ್ಲವೂ ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿತ್ತು.

ಮೊದಲ ಆವೃತ್ತಿಯಲ್ಲಿದ್ದ ಸ್ಪರ್ಧಿಗಳು
ಮೊದಲ ಆವೃತ್ತಿಯಲ್ಲಿ ವಿಜಯ್ ರಾಘವೇಂದ್ರ, ಅರುಣ್ ಸಾಗರ್, ನಿಖಿತಾ ತುಕ್ರಲ್, ನರೇಂದ್ರ ಬಾಬು ಶರ್ಮ, ಚಂದ್ರಿಕಾ, ಅನುಶ್ರೀ, ಶ್ವೇತಾ ಪಂಡಿತ್, ಸಂಜನಾ, ತಿಲಕ್ ಶೇಖರ್, ವಿನಾಯಕ ಜೋಶಿ, ಜಯಲಕ್ಷ್ಮಿ, ಅಪರ್ಣಾ, ಋಷಿಕುಮಾರ ಸ್ವಾಮೀಜಿ, ರಿಷಿಕಾ ಸಿಂಗ್ ಇದ್ದರು. ಅಂತಿವಾಗಿ ವಿಜಯ ಮಾಲೆ ವಿಜಯ್ ರಾಘವೇಂದ್ರ ಅವರ ಕೊರಳಿಗೆ ಬಿದ್ದಿದ್ದನ್ನು ವೀಕ್ಷಕರು ಇನ್ನೂ ಮರೆತಿಲ್ಲ.

ಈ ಬಾರಿ ಸೀಸನ್ 2ನಲ್ಲಿ ಯಾರಿರುತ್ತಾರೆ?
ಈ ಬಾರಿ ಸೀಸನ್ 2ನಲ್ಲಿ ಯಾರು ಇರಲಿದ್ದಾರೆ ಎಂಬ ಬಗ್ಗೆ ಊಹಾಪೋಹಗಳು ಶುರುವಾಗಿವೆ. ಗಾಸಿಪ್ ಸುದ್ದಿ ಪ್ರಕಾರ, ಮಠ ಗುರುಪ್ರಸಾದ್, ನವೀನ್ ಕೃಷ್ಣ, ಪೂಜಾಗಾಂಧಿ, ಅನು ಪ್ರಭಾಕರ್, ಪ್ರಿಯಾ ಹಾಸನ್, ಋಷಿಕುಮಾರ ಸ್ವಾಮಿ, ಸಿಹಿಕಹಿ ಚಂದ್ರು ಹೆಸರುಗಳು ಕೇಳಿಬಂದಿವೆ.

'ಬ್ರಹ್ಮಾಂಡ' ಗುರೂಜಿ ಇಲ್ಲದಿದ್ದರೆ ಕಷ್ಟ
ಕಳೆದ ಬಾರಿ ಬ್ರಹ್ಮಾಂಡ ಖ್ಯಾತಿಯ ನರೇಂದ್ರ ಬಾಬು ಶರ್ಮ ಅವರು ಬಹಳ ಮನರಂಜನೆ ನೀಡಿದ್ದರು. ಆದರೆ ಅವರು ಅಲ್ಲಿಂದ ಬಂದ ಮೇಲೆ 'ಬಿಗ್ ಬಾಸ್'ನನ್ನು ಮುಂಡಾಮೋಚೋ ಕಾರ್ಯಕ್ರಮ ಎಂದಿದ್ದರು.

ಈ ಬಾರಿಯೂ ಅರುಣ್ ಸಾಗರ್ ಇರುತ್ತಾರಾ?
ಸ್ವಲ್ಪದರಲ್ಲಿ ಬಿಗ್ ಬಾಸ್ ಸೀಸನ್ 1 ಕಪ್ ಕಳೆದುಕೊಂಡಿದ್ದ ಅರುಣ್ ಸಾಗರ್ ಸಹ ಸೀಸನ್ 2ನಲ್ಲಿರಲಿದ್ದಾರೆ ಎಂಬ ಸುದ್ದಿ ಇದೆ. ಆದರೆ ಯಾವುದೂ ಇನ್ನೂ ಕನ್ಫರ್ಮ್ ಆಗಿಲ್ಲ. ಸೀಸನ್ 2ನಲ್ಲಿರುವ ತಾರೆಗಳ ಪಟ್ಟಿ ನೋಡಿದರೆ ಯಾರೂ ಅಷ್ಟಾಗಿ ಬಿಜಿಯಾಗಿಲ್ಲ. ಬಹುಶಃ ಬಿಗ್ ಬಾಸ್ ಅವರಿಗೆ ಹೊಸ ದಾರಿ ತೋರಿಸಬಹುದೇನೋ.


Click it and Unblock the Notifications











