ಅವಕಾಶ ಬೇಕಂದ್ರೆ ಅಡ್ಜಸ್ಟ್ ಮಾಡ್ಕೊಳ್ಳಿ ಅಂತಾರೆ ; 7ನೇ ಕ್ಲಾಸ್ನಲ್ಲೇ ಕಹಿ ಅನುಭವ - ಬಿಗ್ ಬಾಸ್ ಸ್ಫರ್ಧಿ ಭಾವುಕ
ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ದಿನನಿತ್ಯ ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ ಮತ್ತು ಲೈಂಗಿಕ ಹಿಂಸೆ ಅನುಭವಿಸಿದ್ದಾರೆ. ಇನ್ನೂ ಅನುಭವಿಸುತ್ತಲೇ ಇದ್ದಾರೆ.
ಕೆಲವರು ಮುಂದೆ ಬಂದು ತಮ್ಮ ಮೇಲಾದ ದೌರ್ಜನ್ಯದ ವಿರುದ್ದ ಹೋರಾಡುತ್ತಾರೆ, ಇನ್ನು ಕೆಲವರು ವ್ಯವಸ್ಥೆಯ ವಿರುದ್ದ ಹೋರಾಡಲು ಆ ಕ್ಷಣಕ್ಕೆ ಸಾಧ್ಯವಾಗದೇ ಸುಮ್ಮನಾಗುತ್ತಾರೆ. ಕೇವಲ ಸಾಮಾನ್ಯ ಜನ ಮಾತ್ರವಲ್ಲ. ಈ ಕಾ*ಮುಕರ ಕೈಗೆ ಸಿಕ್ಕಿ ಚಿತ್ರರಂಗದಲ್ಲಿರುವ ಹಲವಾರು ನಾಯಕಿಯರು, ಮಹಿಳೆಯರು ಕೂಡ ನರಳಿದ್ದಾರೆ. ಸಮಯ ಸಂದರ್ಭ ಬಂದಾಗ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಉದಾಹರಣೆಗೆ ಶ್ರೀ ಸತ್ಯ.

ಹೌದು, ಶ್ರೀ ಸತ್ಯ.. ತೆಲುಗು ಚೆಲುವೆ. ನೇನು ಶೈಲಜಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಶ್ರೀ ಸತ್ಯ ಆ ನಂತರ ಕಿರುತೆರೆಯತ್ತ ಮುಖ ಮಾಡಿದರು. ''ಮುದ್ದ ಮಂದಾರಂ'' .. ''ನಿನ್ನೇ ಪೆಳ್ಳಾಡತಾ''.. ''ಅತ್ತಾರಿಂಟ್ಲೋ ಅಕ್ಕ ಚೆಲ್ಲೆಳ್ಳು'' .. ''ತ್ರಿನಯನಿ''.. ಇವರ ಕೆಲ ಜನಪ್ರಿಯ ಧಾರಾವಾಹಿಗಳು. ತೆಲುಗಿನ ''ಬಿಗ್ ಬಾಸ್'' ಆರನೇ ಸೀಸನ್ನಲ್ಲಿ ಕೂಡ ಭಾಗವಹಿಸಿದ್ದ ಶ್ರೀ ಸತ್ಯ ಮನೆಯಲ್ಲಿ 103 ದಿನ ಇದ್ದರು. ಕೊನೆಯ ಹಂತದಲ್ಲಿ ಎಡವಿದರು.
ಇಂಥಾ ಶ್ರೀಸತ್ಯ ಸದ್ಯ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದಾರೆ. ಪಾತ್ರಕ್ಕಾಗಿ ಪಲ್ಲಂಗ ಸಂಸ್ಕೃತಿ ಚಿತ್ರರಂಗದಲ್ಲಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಕುರಿತು ಜಬರ್ದಸ್ತ್ ವರ್ಷಾ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಶ್ರೀಸತ್ಯ ಚಿತ್ರರಂಗದಲ್ಲಿ ಬೇರೆ ಹುಡುಗಿಯರಿಗೆ ಎದುರಾಗುವ ಸಮಸ್ಯೆ ನಾನು ಕೂಡ ಎದುರಿಸಿದ್ದೇನೆ ಎಂದು ಹೇಳಿದ್ದಾರೆ.
ನನಗೆ ಈಗಲೂ ಕೂಡ ಅಂತಹ ಫೋನ್ ಕರೆಗಳು ಬರುತ್ತವೆ, ಆದರೆ ಅವರು ನೇರವಾಗಿ ಆ ವಿಷಯವನ್ನು ಕೇಳುವುದಿಲ್ಲ. ಬದಲಿಗೆ ಪರೋಕ್ಷವಾಗಿ ಮಾತನಾಡಲು ಮುಂದಾಗುತ್ತಾರೆ ಎಂದು ಹೇಳಿರುವ ಶ್ರೀ ಸತ್ಯ ಆಡಿಷನ್ ಆದ ನಂತರ, ಫೋಟೊಶೂಟ್ ಮಾಡಿಸಿದ ನಂತರವೂ ನನ್ನನ್ನು ಚಿತ್ರದಿಂದ ಕಿತ್ತೆಸೆದ ಉದಾಹರಣೆಗಳಿವೆ ಎಂದು ಹೇಳಿದ್ದಾರೆ. ಗೆಲುವಿಗಾಗಿ ನಾನು ನನ್ನ ವ್ಯಕ್ತಿತ್ವವನ್ನು ಮಾರಿಕೊಳ್ಳಲಾರೆ ಎಂದಿದ್ದಾರೆ.
ಇನ್ನು ಅವಕಾಶಕ್ಕಾಗಿ ಅಲೆಯುತ್ತಿದ್ದ ದಿನಗಳು ಕೂಡ ಸುಲಭವಾಗಿರಲಿಲ್ಲ ಎಂದು ಹೇಳಿರುವ ಶ್ರೀ ಸತ್ಯ ಹಲವರು ದಾರಿ ತಪ್ಪಿಸುವ ಪ್ರಯತ್ನ ಮಾಡಿದರು, ಅನುಚಿತ ಸಲಹೆ ನೀಡಿದರು, ಫೋನ್ ಮೂಲಕ ಕೂಡ ಕಿರುಕುಳ ನೀಡಿದರು ಎಂದು ಹೇಳಿದ್ಧಾರೆ. ಶೂಟಿಂಗ್ ಮಾಡುವಾಗ ಕೂಡ ತುಂಬಾನೇ ಅಮಾನವೀಯವಾಗಿ ನನ್ನ ಜೊತೆ ನಡೆದುಕೊಂಡಿದ್ಧಾರೆ ಎಂದು ಕೂಡ ಹೇಳಿದ್ಧಾರೆ.

ಮುಂದುವರೆದು ಬಾಲ್ಯದ ಕಹಿ ಅನುಭವ ಕೂಡ ಹಂಚಿಕೊಂಡಿರುವ ಶ್ರೀ ಸತ್ಯ ಆಗ ನಾನು 7ನೇ ತರಗತಿಯಲ್ಲಿದ್ದೆ, ರಸ್ತೆಯಲ್ಲಿ ನನ್ನ ಪಾಡಿಗೆ ನಾನು ನಡೆದುಕೊಂಡು ಹೋಗುತ್ತಿದ್ದೆ, ಆ ಸಮಯದಲ್ಲಿ ಒಬ್ಬ ವ್ಯಕ್ತಿ ಬಂದು ನನ್ನ ಸೊಂಟ ಚಿವುಟಿ ಹೋದ ಎಂದು ಹೇಳಿದ್ದಾರೆ. ನನ್ನ ಸುತ್ತ ಮುತ್ತ ತುಂಬಾ ಜನ ಇದ್ದರು, ಅವರೆಲ್ಲ ನೋಡುತ್ತಾ ನಿಂತರೆ ಹೊರತು ಯಾರು ಅವನನ್ನು ತಡೆಯಲಿಲ್ಲ, ಪ್ರಶ್ನಿಸಲಿಲ್ಲ ಎಂದು ಹೇಳಿದ್ದಾರೆ. ಹುಡುಗಿಯರ ಬಟ್ಟೆ ಕುರಿತು ನಡೆಯುವ ಚರ್ಚೆಯ ಕುರಿತು ಕೂಡ ಇದೇ ಸಮಯದಲ್ಲಿ ಕಿಡಿ ಕಾರಿದ್ದಾರೆ. ನೋಡುವ ದೃಷ್ಟಿಕೋನ ಸರಿ ಇಲ್ಲದಿದ್ದರೆ ಯಾವ ಬಟ್ಟೆ ಹಾಕಿದರು ಕೂಡ ಅಷ್ಟೇ ಎಂದಿದ್ಧಾರೆ.
ಸದ್ಯ ಶ್ರೀಸತ್ಯ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇನ್ನುಳಿದಂತೆ ಕಿರುತೆರೆಯಿಂದ ಮತ್ತೆ ಬೆಳ್ಳಿತೆರೆಯತ್ತ ಶ್ರೀ ಸತ್ಯ ಮುಖ ಮಾಡಿದ್ದು ಅವಕಾಶಗಳನ್ನು ಎದುರು ನೋಡುತ್ತಿದ್ದಾರೆ.


Click it and Unblock the Notifications











