ದುಬೈನಲ್ಲಿ ಬೇರೊಬ್ಬಳ ಜೊತೆ ಪತಿಯ ಅನೈತಿಕ ಸಂಬಂಧ, ಮುರಿದು ಬಿತ್ತು ಬಿಗ್ ಬಾಸ್ ಸ್ಫರ್ಧಿಯ ದಾಂಪತ್ಯ..!
ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕಳೆದ ಎರಡು ಮೂರು ವರ್ಷಗಳಲ್ಲಿ ಅನೇಕ ತಾರೆಯರು ವಿಚ್ಛೇದನ ಪಡೆದಿದ್ದಾರೆ. ಈ ಸಾಲಿಗೆ ಈಗ ಸಂಯಕ್ತಾ ಷಣ್ಮುಗನ್ ಸೇರಿಕೊಂಡಿದ್ದಾರೆ.

ಹೌದು, ಸಂಯುಕ್ತಾ ಷಣ್ಮುಗನ್, ಕಾಲಿವುಡ್ನ ಕಿನ್ನರಿ. 2007ರಲ್ಲಿ ಮಿಸ್ ಚೆನ್ನೈ ಕಿರೀಟವನ್ನು ಮುಡಿಗೇರಿಸಿಕೊಂಡ ಚೆಲುವೆ.ತುಘ್ಲಕ್ ದರ್ಬಾರ್, ವಾರಿಸು, ಸೇರಿ ಹಲವು ಚಿತ್ರಗಳಲ್ಲಿ ಆ ನಂತರ ಕಾಣಿಸಿಕೊಂಡ ಸಂಯುಕ್ತಾ 2020ರಲ್ಲಿ ತಮಿಳಿನ ಬಿಗ್ ಬಾಸ್ ಸೀಸನ್ ನಾಲ್ಕರಲ್ಲಿ ಸ್ಫರ್ಧಿಯಾಗಿದ್ದರು. ಇಂಥಾ ಸಂಯುಕ್ತಾ ಷಣ್ಮುಗನಾಥನ್ ಈಗ ತಮ್ಮ ಪತಿ ಕಾರ್ತಿಕ್ ಶಂಕರ್ ಅವರಿಂದ ದೂರವಾಗಿದ್ದಾರೆ. ಫೋಟೊಶೂಟ್ ಮೂಲಕ ವಿಚ್ಛೇದನದ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಸಂಯುಕ್ತಾ, ಎಲ್ಲಾ ಪೇಪರ್ ಕೆಲಸಗಳನ್ನು ಮುಗಿಸಿದ್ದೇನೆ, ಹಿಂದೆಂದಿಗಿಂತಲೂ ನಾನು ಬಲಶಾಲಿಯಾಗಿದ್ದೇನೆ ಎಂದು ಹೇಳಿದ್ದಾರೆ. ಡಿವೋರ್ಸ್ ನಂತರ ನನ್ನ ಮುಖದ ಕಳೆ ಎಂದು ತಮ್ಮ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ, ಹಿಂಬಾಲಕರಿಗೆ ಶಾಕ್ ನೀಡಿದ್ದಾರೆ. ಅಚ್ಚರಿಗೆ ದೂಡಿದ್ದಾರೆ.
ಅಂದ್ಹಾಗೇ ಚಿತ್ರರಂಗದಲ್ಲಿ ಬ್ಯುಸಿ ಇದ್ದಾಗಲೇ ಸಂಯುಕ್ತಾ ತಮ್ಮ ಪೋಷಕರ ಒತ್ತಾಸೆಯಂತೆ ಕಾರ್ತಿಕ್ ಶಂಕರ್ ಎಂಬ ಉದ್ಯಮಿಯನ್ನು ಮದುವೆಯಾಗಿದ್ದರು. ಇವರಿಗೆ ರಾಯನ್ ಎಂಬ ಮಗ ಕೂಡ ಇದ್ದಾನೆ. ಗಂಡ-ಮನೆ-ಸಂಸಾರ ಎಂದು ಸಂಯುಕ್ತಾ ಖುಷಿಯಾಗಿಯೇ ಇದ್ದರು. ಆದರೆ, ಸಂಯುಕ್ತಾ ಬೆನ್ನ ಹಿಂದೆ ಮಾಡಬಾರದ್ದನ್ನೆಲ್ಲ ಕಾರ್ತಿಕ್ ಶಂಕರ್ ಮಾಡಲು ಶುರು ಮಾಡಿದ್ದರು. ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದರು.
ಸಂದರ್ಶನವೊಂದರಲ್ಲಿ ಈ ವಿಚಾರದ ಕುರಿತು ಮಾತನಾಡಿದ್ದ ಸಂಯುಕ್ತಾ ಕೊರೊನಾ ಲಾಕ್ ಡೌನ್ ಸಮಯದಲ್ಲಿ ನನ್ನ ಗಂಡನ ಅಕ್ರಮ ಸಂಬಂಧದ ವಿಚಾರ ನನಗೆ ಗೊತ್ತಾಯ್ತು, ನಾನು ಇಲ್ಲಿ ಲಾಕ್ ಡೌನ್ನಲ್ಲಿ ಮನೆಯಲ್ಲಿದ್ದಾಗ ನನ್ನ ಗಂಡ ದುಬೈನಲ್ಲಿ ನಾಲ್ಕು ವರ್ಷಗಳಿಂದ ಬೇರೆ ಒಬ್ಬಳ ಜೊತೆ ಸಂಸಾರ ಮಾಡುತ್ತಿದ್ದಾನೆ ಎನ್ನುವ ಕಹಿ ಸತ್ಯ ತಿಳಿಯಿತು ಎಂದು ಹೇಳಿದ್ದರು. ಆಗ ಲಾಕ್ಡೌನ್ ಆಗಿದ್ದರಿಂದ ನಾನು ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ, ನನ್ನಿಂದ ಆಗ ಏನೂ ಮಾಡಲು ಆಗಲಿಲ್ಲ ಎಂದು ಕಣ್ಣೀರು ಹಾಕಿದ್ದರು. ಪತಿ ನನಗೆ ಮೋಸ ಮಾಡಿದ್ದರಿಂದ ನನಗೆ ದಿಕ್ಕೇ ತೋಚದಂತಾಗಿತ್ತು ಎಂದು ಹೇಳಿದ್ದರು.
ಹೀಗೆ ತಮ್ಮ ಪತಿಯಿಂದ ಮೋಸಕ್ಕೊಳಗಾದ ಸಂಯುಕ್ತಾ ಸದ್ಯ ವೈವಾಹಿಕ ಜೀವನಕ್ಕೆ ಗುಡ್ ಬೈ ಹೇಳಲು ನಿರ್ಧಾರ ಮಾಡಿದ್ದಾರೆ. ಫೋಟೊಶೂಟ್ ಮೂಲಕ ವಿಚಾರವನ್ನು ತಿಳಿಸಿದ್ದಾರೆ. ಸದ್ಯ ಅನೇಕರು ಸಂಯುಕ್ತಾ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕ ಧೈರ್ಯ ತುಂಬುತ್ತಿದ್ದಾರೆ. ಮತ್ತೊಮ್ಮೆ ಹೊಸ ಬದುಕನ್ನು ಶುರು ಮಾಡಲು ಅಣಿಯಾದ ಸಂಯುಕ್ತಾಗೆ ಆಲ್ ದಿ ಬೆಸ್ಟ್ ಎಂದು ಕೂಡ ಇವರ ಅಭಿಮಾನಿಗಳು ಹೇಳುತ್ತಿದ್ದಾರೆ.


Click it and Unblock the Notifications











