ಬಿಗ್ ಬಾಸ್ ಗೆದ್ದ ಕುರಿಗಾಹಿ ಹನುಮಂತನಿಗೆ ಕಿತ್ತೂರು ಉತ್ಸವದಲ್ಲಿ ಅವಮಾನ? ಹಳ್ಳಿ ಹೈದ ಮಾಡಿದ ತಪ್ಪೇನು? ವಿಡಿಯೋ ವೈರಲ್
ಹನುಮಂತ ಅಂದರೆ ಆಕರ್ಷಣೆ. ಚಿಲ್ಲೂರ ಬಡ್ನಿ ತಾಂಡಾದ ಈ ವ್ಯಕ್ತಿಯ ಬಗ್ಗೆ ಅನೇಕರಿಗೆ ಆಸಕ್ತಿ. ಕುರಿ ಕಾಯುತ್ತಿದ್ದ ಹುಡುಗನೊಬ್ಬ ಇಷ್ಟೊಂದು ಹೆಸರು ಮಾಡುತ್ತಿದ್ದಾನಲ್ಲ ? ಎನ್ನುವ ಕುತೂಹಲ. ಇದೆಲ್ಲದಕ್ಕೆ ಕೈಗನ್ನಡಿಯೇ ಕಳೆದ ಬಾರಿಯ ''ಬಿಗ್ ಬಾಸ್'' ಕಾರ್ಯಕ್ರಮ. ಕಳೆಗುಂದಿದ್ದ ಕಳೆದ ಬಾರಿಯ ''ಬಿಗ್ ಬಾಸ್'' ಕಾರ್ಯಕ್ರಮದ ಕಳೆ ಹೆಚ್ಚಿಸಿದ ಹನುಮಂತ, ದಾಖಲೆ ಮತಗಳನ್ನು ಪಡೆಯುವ ಮೂಲಕ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದರು.
50 ಲಕ್ಷ ಹಣ ಗೆದ್ದರು. ಹೊಸ ಇತಿಹಾಸ ಬರೆದರು. ಹಾಗಂಥ ''ಬಿಗ್ ಬಾಸ್''ವರೆಗಿನ ಹನುಮಂತುನ ಪ್ರಯಾಣ ಸುಲಭದ್ದಾಗಿರಲಿಲ್ಲ. ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆಯುತ್ತಾ ಸ್ನೇಹಿತರ ಒತ್ತಾಯಕ್ಕೆ ಮಣಿದು ''ಬಿಗ್ ಬಾಸ್'' ಮುನ್ನ ಜೀ ಕನ್ನಡ ವಾಹಿನಿಯ ''ಸರಿಗಮಪ'' ಕಾರ್ಯಕ್ರಮಕ್ಕೆ ಬಂದಿದ್ದ ಹನುಮಂತ ಆಡಿಷನ್ ನೀಡಿದರು. ತಮ್ಮ ಹಾಡುಗಾರಿಕೆಯಿಂದ ಕರುನಾಡಿನ ಹೃದಯವನ್ನು ಗೆದ್ದರು.

ಹೀಗೆ ಹಂತ ಹಂತವಾಗಿ ಮೇಲೆ ಬಂದ ಹನುಮಂತ ಅವರನ್ನು ''ಕಿತ್ತೂರು ಉತ್ಸವ''ದಲ್ಲಿ ಕರೆದು ಅವಮಾನ ಮಾಡಲಾಗಿದೆ ಎನ್ನುವ ಮಾತು ಸದ್ಯ ಬೆಳಗಾವಿ ಸುತ್ತ ಮುತ್ತ ಬಲವಾಗಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ವಿಡಿಯೋ ಕೂಡ ವೈರಲ್ ಆಗಿದ್ದು ಕಾರ್ಯಕ್ರಮದ ಆಯೋಜಕರ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಅಲೆ ಎದ್ದಿದೆ.
ಹೌದು, ರಾಣಿ ಚೆನ್ನಮ್ಮನ ಸ್ಮರಣೆಯ ಮಹೋತ್ಸವ ಕಿತ್ತೂರು ಉತ್ಸವ ಮಳೆಯ ನಡುವೆಯೂ ಕೂಡ ಈ ಬಾರಿ ಕಿತ್ತೂರಿನಲ್ಲಿ ನಡೆದಿದೆ. ಡೊಳ್ಳು ಕುಣಿತ, ಕರಡಿ ಮಜಲು, ಸಂಬಳ ವಾದನ, ಹಲಗೆ ವಾದನ, ಹೆಜ್ಜೆ ಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಈ ಉತ್ಸವದ ಮೆರಗು ಹೆಚ್ಚಿಸಿವೆ.
ಇದೇ ಕಾರ್ಯಕ್ರಮದಲ್ಲಿ ಹಾಡು ಹಾಡಲು ಹನುಮಂತು ಅವರನ್ನು ಕರೆಯಲಾಗಿತ್ತು. ಈ ಹಿನ್ನೆಲೆ ಹನುಮಂತ ಕೂಡ ಅತ್ಯುತ್ಸಾಹದಲ್ಲಿಯೇ ಹಾಡು ಹಾಡಲು ಹೋಗಿದ್ದರು. ಆದರೆ ಇದೇ ಸಮಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮತ್ತು ಎಸ್ಪಿ ಭೀಮಾಶಂಕರ್ ಗುಳೇದ್ ನಡುವೆ ಹನುಮಂತನ ''ಗಾನ ಬಜಾನ'' ವಿಚಾರಕ್ಕೆ ಸಂಬಂಧಿಸಿದಂತೆ ನಡುವೆ ಜಗಳ ನಡೆದಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.
ಸಮಯಾವಕಾಶ ಮೀರಿದರೂ ಕೂಡ ಎರಡನೇ ಬಾರಿ ಹನುಮಂತಗೆ ಹಾಡಲು ಅವಕಾಶ ನೀಡಿದ್ದಕ್ಕೆ ಕೋಫಗೊಂಡ ಭೀಮಾಶಂಕರ್ ಗುಳೇದ್, ವಿದ್ಯಾವತಿ ಭಜಂತ್ರಿ ಜೊತೆ ಕಿರಿಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದಕ್ಕೆ ಪೂರಕವಾಗಿ ವೈರಲ್ ಆದ ವಿಡಿಯೋದಲ್ಲಿ ಹಿಂದೆ ಹನುಮಂತ ಹಾಡುವಾಗ ಈ ಇಬ್ಬರು ಅಧಿಕಾರಿಗಳ ನಡುವೆ ಮಾತನ ಚಕಮಕಿ ನಡೆದಿದೆ.

ಭೀಮಾಶಂಕರ್ ಗುಳೇದ್ ಮತ್ತು ವಿದ್ಯಾವತಿ ಭಜಂತ್ರಿ ಅವರ ಈ ವಾಗ್ಯುದ್ದಕ್ಕೆ ಹನುಮಂತ ಅವರ ಚಿನ್ನದ ಕಂಠ ಕಾರಣನಾ..? ಎನ್ನುವುದು ಸದ್ಯಕ್ಕೆ ಗೊತ್ತಿಲ್ಲವಾದರೂ ಈ ಜಗಳ ನಡೆಯುವ ಸಮಯದಲ್ಲಿ ಹನುಮಂತ ಕೊನೆಯ ಹಾಡು ಎಂದು ಹೇಳುತ್ತಾರೆ. ಆ ನಂತರ ಹಾಡು ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾರೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರು ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಇನ್ನು ಭೀಮಾಶಂಕರ್ ಗುಳೇದ್ ಮತ್ತು ವಿದ್ಯಾವತಿ ಭಜಂತ್ರಿ ನಡುವೆ ನಡೆದ ಮಾತುಕಥೆ ಏನು ಎನ್ನುವುದು ಸ್ಪಷ್ಟ ಇಲ್ಲದಿದ್ದರೂ ಕೂಡ ಈ ಸಮಯದಲ್ಲಿ ಅಲ್ಲಿನ ಸ್ಥಳಿಯ ಶಾಸಕ ಬಾಬಾ ಸಾಹೇಬ್ ಪಾಟೀಲ್ ಕೂಡ ಇದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಸತ್ಯಾಸತ್ಯತೆಯನ್ನು ಖುದ್ದು ಹನುಮಂತು ಅವರೇ ಈಗ ಹೇಳಬೇಕಿದೆ. ವಿಡಿಯೋ ವೈರಲ್ ಆದ ಹಿನ್ನೆಲೆ ಆಕ್ರೋಶ ಸದ್ಯ ಭುಗಿಲೆದ್ದಿದೆ.


Click it and Unblock the Notifications











