Bigg Boss: ಮನದಾಳದ ಮಾತುಗಳಿಗೆ ಕಿವಿಯಾದ ಬಿಗ್ ಬಾಸ್: ನೋವು ಹೊರಹಾಕಿ ಕಣ್ಣೀರಾದ ಸ್ಪರ್ಧಿಗಳು..!
ಬಿಗ್ ಬಾಸ್ ಸೀಸನ್ 10 ಈಗ 9 ವಾರಗಳನ್ನು ಮುಗಿಸಿ 10ನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಯುದ್ಧದ ವಾತಾವರಣ ಸೃಷ್ಟಿಯಾಗಿತ್ತು. ಟಾಸ್ಕ್ಗೋಸ್ಕರ ಪರಸ್ಪರ ನಿಂದನೆ ವೈಯಕ್ತಿಕ ದ್ವೇಷ ಕಂಡು ಬಂದಿತ್ತು. ಕಿಚ್ಚ ಸುದೀಪ್ ವಾರಾಂತ್ಯದ ಪಂಚಾಯಿತಿಯಲ್ಲಿ ಎಲ್ಲವನ್ನ ತಿಳಿಯಾಗಿಸಿದ್ದು ಎಲ್ಲರ ಮನಸ್ಸಿನಲ್ಲಿದ್ದ ಭಾವನೆಯನ್ನು ಹೊಡೆದು ಓಡಿಸಿದ್ದಾರೆ. ಎಲ್ಲರ ಮುಖದಲ್ಲೂ ಕೂಡ ನಗುವನ್ನು ತರಿಸಿದ್ದಾರೆ.
ಈಗ ಬಿಗ್ ಬಾಸ್, ಮನೆಯಲ್ಲಿರುವ ಸದಸ್ಯರ ಮಾತುಗಳಿಗೆ ಕಿವಿಯಾಗಲು ತೀರ್ಮಾನ ಮಾಡಿದ್ದು ಅವರ ಮನಸ್ಸಿನಲ್ಲಿರುವ ಮಾತನ್ನು ಕೇಳಲು ಸಜ್ಜಾಗಿದೆ. ಈ ಹಿಂದೆ ಸ್ಪರ್ಧಿಗಳ ಮನೆಯವರು ಕಳಿಸಿದ್ದ ಪತ್ರವನ್ನು ನೀಡಲು ಟಾಸ್ಕ್ ನೀಡಿತ್ತು. ಆದರೆ ಈಗ ಯಾವುದೇ ಟಾಸ್ಕ್ ನೀಡದೇ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ತಮ್ಮ ಮನದ ಮಾತುಗಳನ್ನ ಬಿಗ್ ಬಾಸ್ ಬಳಿ ಹೇಳಿಕೊಳ್ಳಬಹುದಾಗಿದೆ. ಬಿಗ್ ಬಾಸ್ ಮನೆಯಲ್ಲಿರುವ 12 ಸ್ಪರ್ಧಿಗಳು ಸಹ ಕನ್ಫೆಷನ್ ರೂಮಿಗೆ ಹೋಗಿ ಬಿಗ್ ಬಾಸ್ ಬಳಿ ಮಾತನಾಡಿದ್ದಾರೆ.

ಎಲ್ಲರೂ ಮಾತನಾಡುತ್ತಾ ಕಣ್ಣೀರಾಗಿದ್ದಾರೆ. ಕಲರ್ಸ್ ಕನ್ನಡ ಬಿಟ್ಟಿರುವ ಪ್ರೋಮೋದಲ್ಲಿ ಕಾರ್ತಿಕ್, ಸಂಗೀತಾ, ತನಿಷಾ ಹಾಗೂ ವರ್ತೂರು ಸಂತೋಷ್ ಮಾತ್ರ ತಮ್ಮ ಮನದಲ್ಲಿರುವ ವಿಷಯ ಹೇಳಿಕೊಂಡಿದ್ದಾರೆ. ಉಳಿದವರು ಏನು ಹೇಳಿದ್ದಾರೆ ಎಂಬುವುದನ್ನು ತೋರಿಸದೇ ಕುತೂಹಲ ಕೆರಳಿಸುವಂತೆ ಮಾಡಲಾಗಿದೆ.
ವರ್ತೂರು ಸಂತೋಷ್ ಬೇಸರ
ವರ್ತೂರು ಸಂತೋಷ್ ಬಿಗ್ ಬಾಸ್ ಬಳಿ ಬಂದು ನನ್ನಿಂದಲೇ ಪ್ರತಾಪ್ ಅವರ ಕಣ್ಣು ಹೋಗಿದೆ. ಇದಕ್ಕಾಗಿ ನನಗೆ ಬಹಳ ಬೇಸರವಾಗಿದೆ ಎಂದು ನೋವನ್ನು ತೋಡಿಕೊಂಡಿದ್ದಾರೆ. ಪ್ರತಾಪ್ ಚಿಕಿತ್ಸೆ ಮುಗಿಸಿಕೊಂಡು ಮನೆಗೆ ಬಂದಾಗಿನಿಂದಲೂ ಕೂಡ ವರ್ತೂರು ಸಂತೋಷ್ ಬೇಸರದಿಂದ ಇದ್ದಾರೆ. ನನ್ನಿಂದಲೇ ಈ ರೀತಿ ಪ್ರತಾಪ್ಗೆ ಆಯಿತು ಎಂಬ ಗಿಲ್ಟ್ ವರ್ತೂರು ತುಂಬಾನೇ ಕಾಡುತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಜೊತೆಯೂ ಚರ್ಚೆ ಮಾಡಿದ್ದರು. ನನ್ನಿಂದಲೇ ಪ್ರತಾಪ್ ಕಣ್ಣು ಈ ರೀತಿ ಆಗಿದೆ, ಆದಷ್ಟು ಬೇಗ ಪ್ರತಾಪ್ ಗುಣಮುಖವಾದರೆ ಸಾಕು ಎಂದಿದ್ದರು. ಈಗ ಮತ್ತೊಮ್ಮೆ ಬಿಗ್ ಬಾಸ್ ಬಳಿ ಪ್ರತಾಪ್ ಕನ್ನಡಕ ಹಾಕಿಕೊಂಡು ಇರುವುದನ್ನು ನೋಡಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಬಳಿ ಕಾರ್ತಿಕ್ ಕೇಳಿಕೊಂಡಿದ್ದೇನು?
ಕಾರ್ತಿಕ್ ತಮ್ಮ ತಂಗಿಗೆ ಡೆಲಿವರಿ ಆಗಿದೆಯಾ? ಎಂಬ ಮಾತನ್ನು ಬಿಗ್ ಬಾಸ್ ಬಳಿ ಕೇಳಿಕೊಂಡಿದ್ದಾರೆ. ಕಾರ್ತಿಕ್ಗೆ ಕಿಚ್ಚ ಸುದೀಪ್ ಒಂದು ಸರ್ಪ್ರೈಸ್ ನೀಡಿದ್ದರು. ಅದು ಯಾವುದು ಅಂದ್ರೆ ಅವರ ತಂಗಿಯ ಸೀಮಂತದ ಫೋಟೋವನ್ನು ಬಿಗ್ ಬಾಸ್ ಮನೆಗೆ ಕಳುಹಿಸಿದ್ದರು. ಇದೇ ವೇಳೆ ಕಾರ್ತಿಕ್ ತಂಗಿಯನ್ನು ನೆನೆದು ಭಾವುಕರಾಗಿದ್ದರು. ಈ ಒಂದು ವಿಶೇಷ ಸಂದರ್ಭದಲ್ಲಿ ನಾನು ತಂಗಿಯ ಜೊತೆಗೆ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದರು. ಈಗ ಮತ್ತೊಮ್ಮೆ ಬಿಗ್ ಬಾಸ್ ಬಳಿ ನನ್ನ ತಂಗಿಗೆ ಡೆಲಿವರಿ ಆಗಿದೆಯಾ? ಎಂದು ಕೇಳಿದ್ದಾರೆ.
ಎಲ್ಲಾ ಕಡೆ ನಾನೇ ಟಾರ್ಗೆಟ್ ಎಂದ ಸಂಗೀತಾ
ಇನ್ನು ಈ ಕಡೆ ಸಂಗೀತಾ ತಮಗೆ ಬಿಗ್ ಬಾಸ್ ಮನೆಯಲ್ಲಿ ಆದ ಘಟನೆಗೆ ತತ್ತರಿಸಿ ಹೋದಂತೆ ಕಾಣಿಸುತ್ತಿದೆ. ಇದೇ ವಿಚಾರವನ್ನು ಬಿಗ್ ಬಾಸ್ ಬಳಿಯಲ್ಲಿ ಹೇಳಿಕೊಂಡು ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡಿದ್ದಾರೆ. ನಾನು ಸ್ಕೂಲ್ನಲ್ಲಿ ಹಾಗೂ ಕಾಲೇಜಿನಲ್ಲಿ ಇರುವಾಗ ನನ್ನನ್ನು ಬಿಗ್ ಬಾಸ್ ಮನೆಯಲ್ಲಿ ಟ್ರೀಟ್ ಮಾಡಿದ ರೀತಿಯೇ ಟಾರ್ಗೆಟ್ ಮಾಡಿದ್ದರು. ಅದೇ ಸನ್ನಿವೇಶವನ್ನು ನಾನು ಬಿಗ್ ಬಾಸ್ ಮನೆಯಲ್ಲಿ ಈಗ ಎದರಿಸುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ.
ತನಿಷಾಗೆ ಕಾಡುತ್ತಿದೆಯಂತೆ ಒಂಟಿತನ
ಇತ್ತ ತನಿಷಾ ಹಾಗೂ ವರ್ತೂರು ಸಂತೋಷ್ ನಡುವೆ ಒಳ್ಳೆಯ ಬಾಂಧವ್ಯ ಶುರುವಾಗಿತ್ತು. ಆದರೆ ಈ ನಡುವೆ ವರ್ತೂರು ಸಂತೋಷ್ ಹಾಗೂ ತನಿಷಾ ಮಾತುಕತೆ ನಿಲ್ಲಿಸಿಯೇ ಬಿಟ್ಟಿದ್ದಾರೆ. ಇದರಿಂದಾಗಿ ತನಿಶಾಗೆ ಒಂಟಿತನ ಕಾಡುತ್ತಿರಬಹುದು, ಇದೇ ವಿಷಯ ಬಿಗ್ ಬಾಸ್ ಬಳಿ ಹೇಳಿಕೊಂಡಿದ್ದಾರೆ. ನನಗೆ ಇಲ್ಲಿ ಒಂಟಿತನ ಕಾಡುತ್ತಿದೆ. ನಾನು ಏನೇ ಮಾತನಾಡಿದರು ತಪ್ಪು, ನಾನು ಮಾತನಾಡಿದರೆ ಯಾರಿಗೂ ಇಲ್ಲಿ ಇಷ್ಟವಾಗುವುದಿಲ್ಲ ಎಂದು ಹೇಳಿ ಭಾವುಕರಾಗಿದ್ದಾರೆ. ಒಟ್ಟಾರೆ ತಮ್ಮ ಮನಸಿನ ಮಾತುಗಳನ್ನ ಬಿಗ್ ಬಾಸ್ ಬಳಿ ಸ್ಪರ್ಧಿಗಳು ಹೇಳಿಕೊಂಡು ಹಗುರಾಗಿದ್ದಾರೆ.


Click it and Unblock the Notifications











