ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ, ಬ್ರಹ್ಮಗಂಟು ಗೀತಾ ಭಟ್ ಭಾವುಕ...!
ಇವತ್ತು ಇದ್ದಂಗೆ ನಾಳೆ ಇರಲ್ಲ. . ಈಗಿದ್ದಂಗೆ, ಇನ್ನೆರಡು ಸೆಕೆಂಡ್ ನಲ್ಲಿ ಇರಲ್ಲ. ಅಂಥಾ ಮಾಯಾಜಾಲ ಈ ಬದುಕು.ಇಂತಹ ಬದುಕಿನಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಸಮಸ್ಯೆ, ಬಾಧೆಗಳು. ಕೆಲವರು ಈ ಸಮಸ್ಯೆಗಳಿಂದ ಪಾರಾಗುತ್ತಾರೆ. ಇನ್ನು ಕೆಲವರು ಖಿನ್ನತೆಗೊಳಗಾಗುತ್ತಾರೆ. ಮತ್ತೂ ಕೆಲವರು ಸಮಸ್ಯೆಯನ್ನು ಎದುರಿಸಲಾಗದೇ ಆತ್ಮಹತ್ಯೆಗೆ ಶರಣಾಗುತ್ತಾರೆ. ಅವರ ಆಪ್ತ ವಲಯ ಮತ್ತು ಕುಟುಂಬವನ್ನು ದುಃಖದ ಮಡುವಿನಲ್ಲಿ ತಳ್ಳುತ್ತಾರೆ.
ಸದ್ಯ ಶೋಭಿತಾ ಅವರ ವಿಚಾರದಲ್ಲಿ ಕೂಡ ಇದೇ ಆಗಿದ್ದು ಬದುಕಿ ಬಾಳಬೇಕಿದ್ದ ಶೋಭಿತಾ ಅವರ ಅಕಾಲಿಕ ನಿಧನದಿಂದ ಕಿರುತೆರೆ ವಲಯ ಆಘಾತಕ್ಕೊಳಗಾಗಿದೆ. ಕಂಬನಿ ಮಿಡಿಯುತ್ತಲೇ ಶೋಭಿತಾ ಅವರ ಜೊತೆ ಕಳೆದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿದೆ. ಆ ಪೈಕಿ ಬ್ರಹ್ಮಗಂಟು ಧಾರಾವಾಹಿಯಲ್ಲಿ ಶೋಭಿತಾ ಜೊತೆ ಅಭಿನಯಿಸಿದ್ದ ಗೀತಾ ಭಟ್ ಶೋಭಿತಾ ಅವರ ಜೊತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಶೋಭಿತಾ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಾಗಿರಲಿಲ್ಲ ಎಂದಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಗೀತಾ ಭಟ್ ನಾನು ಅವರ ಜೊತೆ ಬ್ರಹ್ಮಗಂಟು ಧಾರಾವಾಹಿ ಮಾಡಬೇಕಾದರೆ, ಬೇರೆ ಯಾರೋ ಕಿರುತೆರೆ ಕಲಾವಿದರೊಬ್ಬರು ಸೂಸೈಡ್ ಮಾಡಿಕೊಂಡಿದ್ದರು. ಆಗ ಈ ಸುದ್ದಿ ಕೇಳಿ ಈ ತರಹದ ತಪ್ಪು ಹೆಜ್ಜೆ ಇಡುವುದು ತಪ್ಪು ಎಂದು ಶೋಭಿತಾ ಚರ್ಚೆ ಮಾಡಿದ್ದರು
ಆದರೆ ಈಗ ನೋಡಿದರೆ ಅವರ ಕುರಿತು ಈ ತರಹದ ಸುದ್ದಿ ಬಂದಿದೆ ಎಂದಿದ್ದಾರೆ. ನನಗೆ ಈಗಲೂ ಅವರ ಆತ್ಮಹತ್ಯೆಯ ಸುದ್ದಿ ನಂಬಲು ಸಾಧ್ಯವಾಗುತ್ತಿಲ್ಲ. ಶೋಭಿತಾ ಅವರದ್ದು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿತ್ವ ಅಲ್ಲ ಎಂದಿದ್ದಾರೆ. ಯಾರೋ ಸ್ಟೇಟಸ್ ಹಾಕಿಕೊಂಡಿದ್ದರು. ಅದನ್ನು ನೋಡಿ ನಾನು ಸುಳ್ಳಿ ಸುದ್ದಿ ಇರಬಹುದು ಅಂತ ಅಂದುಕೊಂಡೆ. ಆದರೆ ಮತ್ತೆ ಬೇರೆ ಟೀಮ್ಗೆ ಫೋನ್ ಮಾಡಿ ತಿಳಿದುಕೊಂಡೆ. ಇದು ನಿಜ ಅಂತ ಗೊತ್ತಾದ ಮೇಲೆ ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ಧಾರೆ.
ಮುಂದುವರೆದು ಮದುವೆಯಾದ ನಂತರ ನನ್ನ ಜೊತೆ ಶೋಭಿತಾ ಸಂಪರ್ಕದಲ್ಲಿರಲಿಲ್ಲ ಎಂದಿರುವ ಗೀತಾ ಭಟ್ ನಾನು ಅವರನ್ನು ಕಡೆಯದಾಗಿ ಅವರ ಮದುವೆ ಮುಂಚೆ ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ. ಅವರ ಕಷ್ಟ ಏನಿತ್ತು ಎನ್ನುವುದು ನನಗೆ ಗೊತ್ತಿಲ್ಲ ಆದರೆ ಹಾಗೊಂದು ವೇಳೆ ಇದ್ದಿದ್ದರೆ ಅವರು ಅವರ ಕಷ್ಟವನ್ನು ಯಾರ ಹತ್ತಿರವಾದರೂ ಹೇಳಿಕೊಳ್ಳಬೇಕಿತ್ತು ಎಂದಿದ್ಧಾರೆ. ಅವರ ಕುಟುಂಬಕ್ಕೆ ಅವರ ಸಾವಿನ ನೋವನ್ನು ಸಹಿಸಿಕೊಳ್ಳುವ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದು ಪ್ರಾರ್ಥನೆಯನ್ನು ಮಾಡಿದ್ಧಾರೆ.
ಇನ್ನು ನನಗೆ ಗೊತ್ತಿರುವಂತೆ ಅವರ ಕುಟುಂಬಕ್ಕೆ ಶೋಭಿತಾ ಅವರೇ ಆಧಾರಸ್ತಂಭವಾಗಿದ್ದರು, ಸೀರಿಯಲ್ ಮಾಡುವಾಗಲೇ ಅವರ ತಂದೆಯನ್ನು ಕಳೆದುಕೊಂಡಿದ್ದರು. ಶೋಭಿತಾ ಅವರಿಗೆ ತಂದೆ ಎಂದರೆ ಪಂಚ ಪ್ರಾಣ. ತಂದೆ ತಾಯಿ ಹಾಗೂ ಅಕ್ಕಂದಿರನ್ನು ಚೆನ್ನಾಗಿ ನೋಡಿಬೇಕು ಅಂತ ಆಚೆ ಪಟ್ಟಿದ್ದರು ಎಂದಿರುವ ಗೀತಾ ಭಟ್ ಶೋಭಿತಾ ತುಂಬಾ ಸ್ವಾಭಿಮಾನಿ ಕೂಡ ಆಗಿದ್ದರು ಎಂದಿದ್ದಾರೆ. ತುಂಬಾ ಸ್ಟ್ರಾಂಗ್ ಆಗಿದ್ದ ವ್ಯಕ್ತಿ ಈ ಹಂತಕ್ಕೆ ಕುಗ್ಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರೆ ನನಗೆ ನಿಜಕ್ಕೂ ನಂಬಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಶೋಭಿತಾ ಅವರನ್ನು ನೆನೆದು ಭಾವುಕರಾಗಿದ್ದಾರೆ. ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು ಎಂದು ಗೀತಾ ಭಾರತಿ ಭಟ್ ಬಿಕ್ಕಿದ್ದಾರೆ.


Click it and Unblock the Notifications











