Amulya Bharadwaj: ವರ್ಷದ 365 ದಿನವೂ ಬಿಸಿಬೇಳೆ ಬಾತ್ ತಿನ್ನಲು ಬಯಸುತ್ತಾರಂತೆ ಈ ನಟಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬೃಂದಾವನ' ಹೊಸ ಧಾರಾವಾಹಿ ಶುರುವಾಗಿದೆ. ಕನ್ನಡದ ಕಿರುತೆರೆ ಲೋಕದಲ್ಲಿ ರಾಮ್ ಜಿ ಹಲವಾರು ಪ್ರಯೋಗಗಳನ್ನ ಮಾಡುತ್ತಲೇ ಜನರ ಮನಸ್ಸನ್ನು ಗೆದ್ದವರು. ಇವರ ನಿರ್ದೇಶನದ ಧಾರಾವಾಹಿಗಳೆಲ್ಲವೂ ಸಹ ಸಕ್ಸಸ್ ಕಂಡು ಇವರಿಗೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿದೆ. ಇದೀಗ 'ಬೃಂದಾವನ' ಧಾರಾವಾಹಿಯೂ ಜನರ ಮನಸ್ಸನ್ನು ಗೆದ್ದಿದೆ.
'ಪುಟ್ಟಗೌರಿ ಮದುವೆ', 'ರಂಗನಾಯಕಿ', 'ನಾಗಿಣಿ-2', 'ಗೀತಾ', 'ರಾಣಿ', 'ಮಂಗಳಗೌರಿ ಮದುವೆ' ಈ ಎಲ್ಲಾ ಧಾರಾವಾಹಿಗಳನ್ನು ಸಹ ಕೆ.ಎಸ್.ರಾಮ್ ಜಿ ನಿರ್ದೇಶನ ಮಾಡಿದ್ದಾರೆ.

ರಾಮ್ ಜೀ ನಿರ್ದೇಶನದ 'ಬೃಂದಾವನ' ಧಾರಾವಾಹಿ ಈಗಾಗಲೇ ಎಲ್ಲರ ಮನಸ್ಸನ್ನು ಗೆದ್ದಿದೆ. ಈ ಧಾರಾವಾಹಿ 36 ಮಂದಿ ಇರುವ ಕೂಡು ಕುಟುಂಬಕ್ಕೆ ಈಗ ಹೊಸ ಅತಿಥಿಯ ಆಗಮನವಾಗಲಿದೆ.
36 ಮಂದಿಯ ಧಾರಾವಾಹಿ
ಅಜ್ಜಿ ಮೊಮ್ಮಗನ ಮದುವೆ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಹಳ್ಳಿಯ ಹುಡುಗಿಯನ್ನು ಹುಡುಕಿ ಓಕೆ ಕೂಡ ಮಾಡಿದ್ದಾರೆ. ಆದರೆ, ಮೊಮ್ಮಗ ಮೆಚ್ಚಿಕೊಂಡ ಮೇಲೆಯೇ ಮದುವೆಯನ್ನು ಫಿಕ್ಸ್ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ. ಇನ್ನು ಬೃಂದಾವನ ಧಾರಾವಾಹಿಯಲ್ಲಿ ವಿಶ್ವನಾಥ್ ಹಾವೇರಿ ನಾಯಕ ಆಕಾಶ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲತಃ ಧಾರವಾಢದವರಾದ ವಿಶ್ವನಾಥ್ ಅವರು ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಾಯಕ ಹಾಗೂ ನಾಯಕಿ
ಹಿಂದೂಸ್ತಾನಿ ಸಂಗೀತವನ್ನು ಕಲಿತಿದ್ದು, ಗಾಯಕ ಕೂಡ ಹೌದು. ಬಿಗ್ ಬಾಸ್, ಹಾಡು ಕರ್ನಾಟಕ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾದಲ್ಲೂ ನಟಿಸಿದ್ದಾರೆ. ಇನ್ನು ಚಿತ್ಕಳಾ ಬಿರಾದಾರ, ಸುಂದರ್, ವೀಣಾ, ಗುರುರಾಜ್, ವಿಶ್ವನಾಥ್ ರವೀಂದ್ರ ಹೀಗೆ ಹಲವು ನಟರು, ನಟಿಸಿದ್ದಾರೆ. ನಾಯಕಿ ಪುಷ್ಪಾ ಪಾತ್ರದಲ್ಲಿ ನಟಿ ಅಮೂಲ್ಯ ಭಾರದ್ವಾಜ್ ನಟಿಸಿದ್ದಾರೆ. ಅಮೂಲ್ಯರನ್ನು ನೋಡಿದ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ. ನಾಯಕಿ ಎಂದರೆ ಹೀಗಿರಬೇಕು ಎಂದು ಹೊಗಳಿದ್ದಾರೆ. ಅಮೂಲ್ಯ ನಟನೆಯೂ ಕೂಡ ಎಲ್ಲರೂ ಮೆಚ್ಚುವಂತಿದೆ.
ಅಮೂಲ್ಯ ವೈಯಕ್ತಿಕ ಬದುಕು
ಅಮೂಲ್ಯ ಬಹಳ ಫೂಡೀ ಅಂತೆ. ಯಾವಾಗಲೂ ರುಚಿ ರುಚಿಯಾದ ತಿನಿಸು ತಿನ್ನಲು ಬಯಸುತ್ತಾರಂತೆ. ವರ್ಷ ಪೂರ್ತಿ ಬಿಸಿಬೇಳೆ ಬಾತ್ ಕೊಟ್ಟರೂ ತಿನ್ನುವ ಅಮೂಲ್ಯ ಪಕ್ಕಾ ವೆಜಿಟೇರಿಯನ್ ಎಂದು ಹೇಳಿಕೊಂಡಿದ್ದಾರೆ. ಇನ್ನು ನಟನೆ ಮಾಡುವುದು ಅವರ ತಾಯಿಯ ಆಸೆಯಾಗಿದ್ದು, ಮೂಲತಃ ಮೈಸೂರಿನವರು. ಓದಿ ಬೆಳೆದಿದ್ದೆಲ್ಲಾ ಮೈಸೂರು, ಈಗ ನಟನೆಯ ಕಾರಣಕ್ಕೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನು ನಟಿ ಅಮೂಲ್ಯ ಭಾರದ್ವಾಜ್ ಬೇರೆ ಯಾರೂ ಅಲ್ಲ. ಇದೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬಂದಿದ್ದ ಧಾರಾವಾಹಿಯಲ್ಲಿ ನಟಿಸಿ ಜನರ ಮನ ಗೆದ್ದಿದ್ದರು. ಹೌದು, ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಕಳೆದ ವರ್ಷ ಎಲ್ಲರಿಗೂ ಇಷ್ಟವಾಗಿದ್ದ ಧಾರಾವಾಹಿ ಎಂದರೆ, ಅದು 'ದಾಸ ಪುರಂದರ'. ಈ ಧಾರಾವಾಹಿಯಲ್ಲಿ ದಾಸರು ಶ್ರೀನಿವಾಸರ ಹೆಂಡತಿಯಾಗಿ ನಟಿಸಿದ್ದ ಸರಸ್ವತಿ ಪಾತ್ರದವರೇ ಅಮೂಲ್ಯ ಭಾರದ್ವಾಜ್. ಪುಟ್ಟ ಹುಡುಗಿಯಾದರೂ ವಯಸ್ಸು ಮೀರಿದ ಪಾತ್ರ ಮಾಡಿ ಎಲ್ಲರಿಗೂ ಖುಷಿ ಕೊಟ್ಟಿದ್ದರು.
50ಕ್ಕೂ ಹೆಚ್ಚು ಆಡಿಷನ್ ನೀಡಿದ್ದರು
'ದಾಸ ಪುರಂದರ' ಧಾರಾವಾಹಿಯಲ್ಲಿ ನಟಿಸಲು ಅಮೂಲ್ಯ ಒಂದು ವರ್ಷಗಳ ಕಾಲ ನಟನೆಕಲಿತಿದ್ದರು ಕೂಡ. ಇದಕ್ಕೂ ಮುನ್ನ 'ಶಾಂತಂ ಪಾಪಂ' ಸಿರೀಸ್ ನಲ್ಲೂ ನಟಿಸಿದ್ದರು. ಸುಮಾರು 50ಕ್ಕೂ ಹೆಚ್ಚು ಆಡಿಷನ್ ಕೊಟ್ಟು, ರಿಜೆಕ್ಟ್ ಆಗಿದ್ದರು. ಈ ಪಾತ್ರಕ್ಕೆ ನೀವು ಒಪ್ಪಲ್ಲ, ನೀವಿನ್ನು ಚಿಕ್ಕವರು ಎಂಬ ಕಾರಣಗಳಿಂದ ನಟನೆಯ ಅವಕಾಶ ಸಿಗದಿದ್ದಾಗ ಅಮೂಲ್ಯ ಬೇಸರ ಮಾಡಿಕೊಳ್ಳದೇ, ಮತ್ತೆ ಮತ್ತೆ ಮತ್ತೆ ಆಡಿಷನ್ ಕೊಡುತ್ತಲೇ ಇದ್ದರು. ಪಟ್ಟ ಪ್ರಯತ್ನಕ್ಕೆ ಫಲವೆಂಬಂತೆ 'ದಾಸ ಪುರಂದರ'ದಲ್ಲಿ ನಟಿಸಿ ಮನೆ ಮಾತಾದರು. ಈ ಧಾರಾವಾಹಿಯಲ್ಲಿ ನಟಿಸುತ್ತಿರುವಾಗ ಸಿನಿಮಾ ಹಾಗೂ ಇತರೆ ಧಾರಾವಾಹಿಗಳಿಗೆ ಆಫರ್ ಸಿಕ್ಕರೂ ಕೂಡ ಒಲ್ಲೆ ಎಂದಿದ್ದರು. 'ದಾಸ ಪುರಂದರ' ಮುಗಿದ ಬಳಿಕ ಈಗ 'ಬೃಂದಾವನ' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











