'ನನ್ನ ನೋವು ಯಾವ ಕಲಾವಿದರಿಗೂ ಬೇಡ' - ಬುಲೆಟ್ ಪ್ರಕಾಶ್
Recommended Video

ಕನ್ನಡ ಚಿತ್ರರಂಗದ ಹಾಸ್ಯ ಕಲಾವಿದರ ಪೈಕಿ ತಮ್ಮದೆ ವಿಶಿಷ್ಟ ಶೈಲಿಯ ಮೂಲಕ ಗಮನ ಸೆಳೆದ ಕಲಾವಿದ ಬುಲೆಟ್ ಪ್ರಕಾಶ್. ಅದರಲ್ಲಿಯೂ ಸಾಧು ಕೋಕಿಲ ಮತ್ತು ಬುಲೆಟ್ ಪ್ರಕಾಶ್ ಇಬ್ಬರ ಕಾಂಬಿನೇಶನ್ ತರ್ಲೆಗೆ ನಗದವರೆ ಇಲ್ಲ.
ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಬುಲೆಟ್ ಒಮ್ಮೆ ತಮ್ಮ ಮನದ ನೋವನ್ನು ಹಂಚಿಕೊಂಡಿದ್ದರು. ಈಗ ಮತ್ತೆ ಬುಲೆಟ್ ತಮ್ಮ ದುಃಖವನ್ನು ಹೇಳಿಕೊಂಡಿದ್ದಾರೆ. ಕಿರುತೆರೆಯ 'ಮಜಾ ಭಾರತ' ಕಾರ್ಯಕ್ರಮಕ್ಕೆ ಆಗಮಿಸಿದ್ದ ಬುಲೆಟ್ ಮತ್ತೆ ಸಾವಿನ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ..

ಮಜಾ ಭಾರತದಲ್ಲಿ ಬುಲೆಟ್ ಪ್ರಕಾಶ್
ಕಲರ್ಸ್ ಸೂಪರ್ ವಾಹಿನಿಯ ಹಾಸ್ಯ ಕಾರ್ಯಕ್ರಮ 'ಮಜಾ ಭಾರತ'ಕ್ಕೆ ಇತ್ತೀಚಿಗಷ್ಟೆ ನಟ ಬುಲೆಟ್ ಪ್ರಕಾಶ್ ಆಗಮಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಅವರು ಇದ್ದಕ್ಕಿದ್ದ ಹಾಗೆ ಭಾವುಕರಾದರು. ತಾವು ಎದುರಿಸುತ್ತಿರುವ ಕಷ್ಟಗಳನ್ನು ನೆನೆದು ಕಣ್ಣೀರು ಹಾಕಿದರು. ತಮ್ಮ ಪರಿಸ್ಥಿತಿ ಯಾರಿಗೂ ಬೇಡ ಎಂದರು.

ಕಲಾವಿದನಿಗೆ ಸಾವಿಲ್ಲ
''ಕಲೆ ಯಾರ ಅಪ್ಪನ ಮನೆ ಸ್ವತ್ತು ಅಲ್ಲ. ಅದು ಯಾವ ಕಾರಣಕ್ಕೂ ಒಳಗೆ ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಹಾಗೆ ಇಟ್ಟುಕೊಂಡರೂ, ಕಲೆ ಸ್ಟೋಟವಾಗಿ ಹೊರಗೆ ಬರುತ್ತದೆ. ಕಲೆ ಸತ್ಯ. ಕಲೆ ಇರುವುದು ಎಷ್ಟು ಸತ್ಯವೋ ಕಲೆ ಇರುವ ವ್ಯಕ್ತಿಗಳು ಕೂಡ ಅಷ್ಟೇ ಸತ್ಯ. ಕಲಾವಿದನಿಗೆ ಸಾವಿಲ್ಲ.'' - ಬುಲೆಟ್ ಪ್ರಕಾಶ್, ಹಾಸ್ಯ ನಟ

ಸಾಯುವವರೆಗೆ ಮೇಕಪ್ ಹಾಕುತ್ತೇನೆ
''ದೇವರು ಇಲ್ಲಿಯವರೆಗೆ ಕರೆದುಕೊಂಡು ಬಂದಿದ್ದಾನೆ ಎಂದರೆ ಅದು ನಾನು ನಂಬಿರುವ ಮೇಕಪ್ ಕಾರಣಕ್ಕಾಗಿ. ನಾನು ನನ್ನ ಉಸಿರು ಇರುವವರೆಗೂ ಮೇಕಪ್ ಹಾಕುತ್ತೇನೆ. ನನ್ನ ಸಾವು ನೋಡಬೇಕು ಅಂದರೆ, ಅವು ಮೇಕಪ್ ನಲ್ಲಿಯೇ ಇರುತ್ತದೆ. ನಾನು ಮೇಕಪ್ ಬಿಟ್ಟು ಹೋಗುವುದಿಲ್ಲ. ಮೇಕಪ್ ನನ್ನ ಜೀವ, ಜೀವನ, ಜೀವಾಳ ಎಲ್ಲವೂ.'' ಬುಲೆಟ್ ಪ್ರಕಾಶ್, ಹಾಸ್ಯ ನಟ.

ನನ್ನ ನೋವು ಯಾರಿಗೂ ಬೇಡ
''ಕಲಾ ಸರಸ್ವತಿ ತನ್ನ ಒಡಲಿನಲ್ಲಿ ನಮ್ಮನ್ನು ಹಾಕಿಕೊಂಡಿದ್ದಾಳೆ. ಜೀವನದಲ್ಲಿ ಎಲ್ಲರಿಗೂ ಹಿಂದು, ಮುಂದು ಆಗುತ್ತದೆ. ಆದರೆ, ನನಗೆ ಆಗಿರುವ ನೋವು ಬೇರೆ ಯಾವ ಕಲಾವಿದರಿಗೂ ಬೇಡ'' ಎಂದ ಬುಲೆಟ್ ಮಾತು ನಿಲ್ಲಿಸಿದರು. ಆದರೆ, ಅವರ ಕಣ್ಣೀರು ಅವರ ನೋವಿನ ಕಥೆ ಹೇಳುತ್ತಿತ್ತು.

ಜೂನಿಯರ್ ದರ್ಶನ್ ಬಗ್ಗೆ ಮೆಚ್ಚುಗೆ
'ಮಜಾ ಭಾರತ' ಕಾರ್ಯಕ್ರಮದಲ್ಲಿ ಇರುವ ಜೂನಿಯರ್ ದರ್ಶನ್ ಅವಿನಾಶ್ ರನ್ನು ನೋಡಿ ಬುಲೆಟ್ ಪ್ರಕಾಶ್ ಖುಷಿಯಾದರು. 'ನೀನೂ ದರ್ಶನ್ ರೀತಿ ಬೆಳಿ ಎಂದು ಶುಭ ಹಾರೈಸಿದರು. ಬುಲೆಟ್ ಪ್ರಕಾಶ್ ಅವರಿಗೆ ಸರ್ ಪ್ರೈಸ್ ನೀಡುವ ಪ್ಲಾನ್ ಮಾಡಿ ಮಜಾ ಭಾರತ ಟೀಮ್ ಅವಿನಾಶ್ ರನ್ನು ಕರೆಸಿತ್ತು.


Click it and Unblock the Notifications











