CCTV ಚೆಕ್ ಮಾಡಿದಾಗ ಆ ವಿಷಯ ನಮಗೆ ಗೊತ್ತಾಯ್ತು; ನಟ ದಿಲೀಪ್ ರಾಜ್ ಪತ್ನಿ ಭಾವುಕ
ತಿಂಗಳ ಹಿಂದೆ ಕನ್ನಡ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನರಾಗಿದ್ದರು. ಕೇವಲ 47ರ ವಯಸ್ಸಿನಲ್ಲಿ ಅವರ ಅಗಲಿಕೆ ಚಿತ್ರರಂಗಕ್ಕೆ, ಅಭಿಮಾನಿಗಳಿಗೆ ಆಘಾತ ತಂದಿತ್ತು. ನಿನ್ನೆ(ಜೂನ್ 5) ಕರ್ನಾಟಕ ಟೆಲಿವಿಷನ್ ಪ್ರೊಡ್ಯೂಸರ್ ಅಸೋಸಿಯೇಷನ್ ವತಿಯಿಂದ ದಿಲೀಪ್ ರಾಜ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಸಾಕಷ್ಟು ಕಲಾವಿದರು, ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.
ಎಲ್ಲರೂ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸ್ವತಃ ದಿಲೀಪ್ ರಾಜ್ ಕರ್ನಾಟಕ ಟೆಲಿವಿಷನ್ ಪ್ರೊಡ್ಯೂಸರ್ ಅಸೋಸಿಯೇಷನ್ ಹುಟ್ಟು ಹಾಕಿದ್ದರು. ಅಸೋಸಿಯೇಷನ್ ಅಧ್ಯಕ್ಷ ಅರವಿಂದ್, ಕಾರ್ಯದರ್ಶಿ ಬಾಲಾಜಿ, ಉಪಾಧ್ಯಕ್ಷ ಜೆ.ಕೆ.ಸುನೀಲ್, ಜಂಟಿ ಕಾರ್ಯದರ್ಶಿ ಆರೂರು ಜಗದೀಶ್ ಸೇರಿದಂತೆ ಹಲವರು ಹಾಜರಿದ್ದರು. ಶ್ರೀವಿದ್ಯಾ ಮಾತನಾಡಿ ಪತಿಯನ್ನು ನೆನಪಿಸಿಕೊಂಡು ಭಾವುಕರಾದರು.

"ಅವನನ್ನು ಬಿಟ್ಟು ಇರೋಕೆ ನನಗೆ ಗೊತ್ತಿಲ್ಲ. ಇಡೀ ದಿನ ಹೇಗೆ ಕಳೆಯಬೇಕು ಎಂದು ಒಟ್ಟಿಗೆ ಕೂತು ಪ್ಲ್ಯಾನ್ ಮಾಡ್ತಿದ್ವಿ. ಆದ್ರೆ ಈಗ ಹಗಲು, ರಾತ್ರಿನೇ ಗೊತ್ತಾಗ್ತಿಲ್ಲ. ನಮ್ಮ ಮದುವೆಯಾದಾಗ ನನಗೆ 21 ವರ್ಷ, ಅವನಿಗೆ 23 ವರ್ಷ ವಯಸ್ಸು. ಅವತ್ತಿಂದ ಜೊತೆಯಲ್ಲೇ ಬೆಳೆದ್ವಿ, ಜೊತೆಯಲ್ಲೇ ಇದ್ವಿ. ಸಾಕಷ್ಟು ಏಳುಬೀಳು ಕಂಡಿದ್ದೀವಿ. ಇವತ್ತು ಅವನು ಸತ್ತು ಬದುಕಿದ್ದಾನೆ, ನಾನು ಬದುಕಿ ಸುತ್ತು ಹೋಗಿದ್ದೀನಿ ಎನ್ನಿಸ್ತಿದೆ. ಅವನಿಗೆ ಯಾವುದೇ ಈಗೋ ಇರ್ಲಿಲ್ಲ. ಎಲ್ಲದ್ದಕ್ಕೂ ನನ್ನ ಮುಂದೆ ತಳ್ಳಿ ಈ ಹಂತಕ್ಕೆ ತಂದಿದ್ದ, ಅವನಿಲ್ಲದ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶ್ರೀವಿದ್ಯಾ ವೇದಿಕೆಯಲ್ಲಿ ಕಣ್ಣೀರಾಗಿದ್ದರು.
ಟೆಲಿವಿಷನ್ ಪ್ರೊಡ್ಯೂಸರ್ ಅಸೋಸಿಯೇಷನ್ ಅವರು ಪ್ರತಿದಿನ ಫೋನ್ ಮಾಡಿ ನನ್ನ ಬಗ್ಗೆ ಕಾಳಜಿಯಿಂದ ಮಾತನಾಡ್ತಿದ್ದಾರೆ ಎಂದು ಶ್ರೀವಿದ್ಯಾ ಸಂತಸ ವ್ಯಕ್ತಪಡಿಸಿದ್ದಾರೆ. ಒಂದು ವಿಷಯ ಹೇಳಬೇಕು. ವ್ಯಾಸ್ ಸರ್ ಹಾಗೂ ನಾವು ಮನೆಯಲ್ಲಿ ಬಹಳ ಕರೋಕೆ ಮಾಡ್ತಿದ್ವಿ.. ಹಾಡು ಅಂದ್ರೆ ಅವನಿಗೆ ಬಹಳ ಇಷ್ಟ. ಯಾರು ಬರ್ತಿ ಬಿಡ್ಲಿ, ಒಂದು ಕರೋಕೆ ಬಾಕ್ಸ್ ಇದೆ. ಇತ್ತೀಚೆಗೆ ಮನೆಯ ಸಿಸಿಟಿವಿ ಫುಟೇಜ್ ತೆಗಿಸಿದೆ. ಅದರಲ್ಲಿ ನೋಡಿದ್ರೆ, ದಿಲೀಪ್ ಹೆಚ್ಚು ಕರೋಕೆ ಬಾಕ್ಸ್ ಅನ್ನು ಮನೆಯ ಮೇಲಿಂದ ಕೆಳಗಿನ ರೂಮಿಗೆ ತರೋದು, ಮತ್ತೆ ಮೇಲಿನ ರೂಮ್ಗೆ ತಗೊಂಡು ಹೋಗೋದು ಮಾಡಿದ್ದಾನೆ. ಅವನಿಗೆ ಗಾಯಕನಾಗುವ ಕನಸು ಇತ್ತು. ಯಾವುದಾದರೂ ವಾದ್ಯ ನಡುಸುವುದು ಕಲಿಯುವ ಆಸೆಯಿತ್ತು. ಮುಂದಿನ ಜನ್ಮದಲ್ಲಿ ಅದನ್ನು ಮಾಡ್ತಾನೆ ಅನ್ಸತ್ತೆ. ದಿಲೀಪ್ ಐ ಲವ್ ಯು. ನಿನ್ನ ಬಿಟ್ಟು ಬದುಕುವುದು ಹೇಗೆ ಗೊತ್ತಿಲ್ಲ ಎಂದು ಭಾವುಕರಾಗಿದ್ದಾರೆ.
ಹಿರಿಯ ನಟಿ ಉಮಾಶ್ರೀ, ವಿನಯ ಪ್ರದಾಸ್ ಸೇರಿ ಸಾಕಷ್ಟು ನಟ, ನಟಿಯರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕು ಎಂದು ಉಮಾಶ್ರೀ ಕಿವಿಮಾತು ಹೇಳಿದರು. ಪ್ರತಿದಿನ ಪ್ರತಿಕ್ಷಣ ಶ್ರೀವಿದ್ಯಾ ತಮ್ಮ ಪತಿ ದಿಲೀಪ್ ರಾಜ್ ನೆನಪಿನಲ್ಲಿ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇದ್ದಾರೆ. ದೇವರ ಮೇಲೆ ಬೇಸರ ವ್ಯಕ್ತಪಡಿಸುತ್ತಲೇ ಇದ್ದಾರೆ.
ಪತಿ ದಿಲೀಪ್ ರಾಜ್ ಜೊತೆಗಿನ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಲೇ ಇದ್ದಾರೆ. "ನ್ಯಾಯ ಬದುಕು, ಅನ್ಯಾಯದ ಸಾವು, ಯಾರಿಗೆ ಬೇಕು ಈ ತರದ ಬಾಳು?" ಎಂದು ಇತ್ತೀಚೆಗೆ ಶ್ರೀವಿದ್ಯಾ ಪೋಸ್ಟ್ ಮಾಡಿದ್ದಾರೆ. ಜೀವನದಲ್ಲಿ ಯಾವಾಗಲೂ ಒಳ್ಳೆಯವರಾಗಿಬೇಕು ಅಂತಾರೆ. ಒಳ್ಳೆಯವರನ್ನೇ ದೇವರು ಬೇಗ ಕರೆದುಕೊಳ್ತಾನೆ ಅಂತಾರೆ. ಹಾಗಾದರೆ ಇದು ಯಾವ ನ್ಯಾಯ ಎಂದು ಮತ್ತೊಂದು ಪೋಸ್ಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದರು.


Click it and Unblock the Notifications